ಕನ್ನಡ ಚಿತ್ರರಂಗಕ್ಕೆ 'ಅರ್ಜುನ'ನ ರಂಗಪ್ರವೇಶ!

By Web DeskFirst Published Jul 16, 2019, 12:29 PM IST
Highlights

ಯಕ್ಷರಂಗದ ಅರ್ಜುನ ಚಿತ್ರರಂಗದ ಏಕಲವ್ಯ. ಚಿತ್ರರಂಗದ ಪ್ರವೇಶಕ್ಕೆ ತಳಹದಿಯಾಗಿದ್ದು ಯಕ್ಷಗಾನ. ತುಳುನಾಡಿಗೆ ಯಕ್ಷ ಕಿನ್ನರನಾಗಿ, 'ಅರೆಮರ್ಲರಿ'ಗೆ ಖಳನಾಯಕನಾಗಿ ಚಿರಪರಿಚಿತವಾಗಿರುವ ಹೆಸರು ಅರ್ಜುನ್ ಕಜೆ. 
 

ಇದೀಗ ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಳ್ಳುತ್ತಿರುವ ಯುವ ಪ್ರತಿಭೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನೇತ್ರಾವತಿ-ಕುಮಾರಧಾರ ಸಂಗಮ ಕ್ಷೇತ್ರ ಉಪ್ಪಿನಂಗಡಿಯ ನಿವಾಸಿಗಳಾದ ರಮೇಶ್ ಕಜೆ ಹಾಗೂ ಉಮಾ ಕಜೆ ದಂಪತಿಗಳ ಸುಪುತ್ರ ಅರ್ಜುನ್ ಕಜೆ. ಯಕ್ಷಗಾನದ ಹಿನ್ನಲೆ ಇರುವ ಕುಟುಂಬಕ್ಕೆ ಸೇರಿದ ಹುಟ್ಟು ಕಲಾವಿದ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದ ಅರ್ಜುನ್ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಪಿಯುಸಿ ಹಾಗೂ ಬೆಂಗಳೂರಿನ ರೇವಾ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. 

ವಿದ್ಯಾರ್ಥಿಯಾಗಿದ್ದಾಗ ಇವರ ಸಾಹಿತ್ಯದ 'ವೀಡಿಯೋ ಆಂಗ್', 'ಐ ಆ್ಯಮ್ ಆನ್ ಇಂಜಿನಿಯರ್' ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಬೆಂಗಳೂರಿನಲ್ಲಿ ಮೂರು ವರ್ಷಗಳ ಕಾಲ ಇಂಜಿನಿಯರ್‌ ಕೆಲಸ ನಿರ್ವಹಿಸಿದ್ದಾರೆ.  ಆಗಲೇ ಕನ್ನಡ ಚಿತ್ರ 'ಒಂದು ಮೊಟ್ಟೆಯ ಕಥೆ'ಯ ಪೋಷಕ ಪಾತ್ರವೊಂದರಲ್ಲಿ ನಟಿಸುವ ಅವಕಾಶ ಬಂದೊದಗಿತ್ತು. ಅರ್ಜುನ್ ನಟನಾ ಆಸಕ್ತಿಗೆ ಅಡಿಪಾಯವನ್ನಿತ್ತಿದ್ದು ಯಕ್ಷಗಾನ ಎಂದರೆ ತಪ್ಪಾಗಲಾರದು. ನಾಲ್ಕನೇ ತರಗತಿುಂದಲೇ ಸಕ್ರಿಯ ಯಕ್ಷಗಾನ ಕಲಾವಿದನಾಗಿರುವ ಇವರು, ಇದುವರೆಗೂ ಸುಮಾರು ಎರಡು ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಿದ್ದಾರೆ. 

ನಾಲ್ಕನೇ ತರಗತಿಯ ಪುಟ್ಟ ಹುಡುಗ ಅರ್ಜುನ್ ಪ್ರತಿಭೆಗೆ ಮಾರ್ಗದರ್ಶನ ಮಾಡಿದವರು ಗುರು ಪುತ್ತೂರು ಶ್ರೀಧರ್ ಭಂಡಾರಿ. ಅದೆಷ್ಟೇ ಬೆಳೆದರು ವರ್ಷಕ್ಕೆ ಕನಿಷ್ಟ ಒಂದು ಯಕ್ಷಗಾನ ಪ್ರದರ್ಶನವನ್ನು ನೀಡಿಯೇ ತೀರುತ್ತೇನೆ ಎನ್ನುವ ಇವರು ಪುಂಡು ವೇಷ, ಕಿರೀಟ ವೇಷ ಗಳಲ್ಲಿ ಮಿಂಚಿದ್ದಾರೆ. ಧಿಗಿಣ ತೆಗೆಯುವುದರಲ್ಲಿ ಎತ್ತಿದ ಕೈ. ಇಂದ್ರಜಿತು, ವರಾಹ, "ವೀರಭದ್ರ. ಕೌರವ, ಶಿಶುಪಾಲ ಮೊದಲಾದ ಪಾತ್ರಗಳಲ್ಲಿ ಪಳಗಿರುವ ಅರ್ಜುನ್ ಯಕ್ಷಗಾನವನ್ನು ಅದಮ್ಯವಾಗಿ ಪ್ರೀತಿಸುತ್ತಾರೆ. ಯಕ್ಷಗಾನ ಪದ್ಯಗಳನ್ನು ಹಾಡುವ ಹವ್ಯಾಸವೂ ಇದೆ. 

ತೆರೆಯ ಮೇಲೆ ಮಿಂಚುತ್ತಿರುವ ಅರ್ಜುನ್‌ಗೆ ತಾಂತ್ರಿಕ ಕೆಲಸದೆಡೆಗೂ ಆಸಕ್ತಿ. 'ಬರ್ಸ' ಹಾಗೂ 'ಚೇಸ್' ಚಿತ್ರದಲ್ಲಿ ಸಹ ನಿರ್ದೇಶಕರಾಗಿ ಕೆಲಸಮಾಡಿದ ಇವರು 'ಅರೆಮರ್ಲೆರು' ಚಿತ್ರದಲ್ಲಿ ಖಳ ನಾಯಕನಾಗಿ ಅಭಿನಯಿಸಿದ್ದಾರೆ. 'ಕರ್ಣೆ' ಚಿತ್ರದಲ್ಲಿ ಪೋಷಕ ನಟನಾಗಿ ಗಮನ ಸೆಳೆದಿರುವ ಅರ್ಜುನ್ ಕಜೆ 'ಏರಾ ಉಲ್ಲೇರ್‌ಗೆ' ಚಿತ್ರ ಹಾಗೂ 'ರಾಹುಕಾಲ-ಗುಳಿಗಕಾಲ' ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ರಾಜ್ಯಮಟ್ಟದ ಪತ್ರಿಕೆ, ಜೀವನ್ ರಾಂ ಸುಳ್ಯ ಅವರ ರಂಗಮನೆ ಪ್ರತಿಷ್ಠಾನ ಮೊದಲಾದ ಸಂಸ್ಥೆಗಳು ಗೌರವಿಸಿವೆ. ಅರ್ಜುನ್ ಓರ್ವ ಒಳ್ಳೆಯ ಚಿತ್ರಕಾರ ಕೂಡ ಹೌದು. ಸಾಹಿತ್ಯ ಪ್ರೇಮಿಯಾಗಿರುವ ಇವರಿಗೆ ಪುಸ್ತಕ ಓದುವುದು, ಹಾಡು ಕೇಳುವುದು ಅತ್ಯಂತ ನೆಚ್ಚಿನ ಹವ್ಯಾಸ. ಶಾಲಾ ಕಾಲೇಜಿನ ದಿನಗಳಲ್ಲಿ ಉತ್ತಮ ಹಾಡುಗಾರನಾಗಿ ಗುರುತಿಸಿಕೊಂಡ ಅರ್ಜುನ್‌ಗೆ  ಚಿತ್ರರಂಗದಲ್ಲಿ ಉತ್ತಮ ನಟನಾಗಿ ಗುರುತಿಸಿಕೊಳ್ಳುವ ಆಕಾಂಕ್ಷೆ ಇದೆ.

ಸೀಮಾ ಪೋನಡ್ಕ
ವೇಕಾನಂದ ಮಹಾ ವಿದ್ಯಾಲಯ, ಪುತ್ತೂರು.

click me!