’ಬ್ಯುಟಿಫುಲ್ ಮನಸು’ ಹುಡುಗಿಯ ಬ್ಯುಟಿಫುಲ್ ಮಾತುಗಳು

By Suvarna Web DeskFirst Published Feb 12, 2018, 1:27 PM IST
Highlights

ಬ್ಯೂಟಿಫುಲ್ ಮನಸುಗಳ ಹುಡುಗಿ. ಸದ್ದಿಲ್ಲದೆ  ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಾರೆ. ಸದ್ಯಕ್ಕೆ ಐದು ಚಿತ್ರಗಳಲ್ಲಿ ಮುಳುಗಿರುವ ಈ ಸ್ವಾತಿಕೊಂಡೆ ಜತೆ ಮಾತು.

ಬೆಂಗಳೂರು (ಫೆ.13): ಬ್ಯೂಟಿಫುಲ್ ಮನಸುಗಳ ಹುಡುಗಿ. ಸದ್ದಿಲ್ಲದೆ  ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಾರೆ. ಸದ್ಯಕ್ಕೆ ಐದು ಚಿತ್ರಗಳಲ್ಲಿ ಮುಳುಗಿರುವ ಈ ಸ್ವಾತಿಕೊಂಡೆ ಜತೆ ಮಾತು.

ನಿಮ್ಮ ಊರು, ಓದಿದ್ದು, ಚಿತ್ರರಂಗಕ್ಕೆ ಬರುವ ಮುನ್ನ...
ನನ್ನೂರು ತುಮಕೂರು. ಈಗ ಇರುವುದು ಬೆಂಗಳೂರು. ಓದಿದ್ದು ಡಿಪ್ಲೋಮೋ  ಆಟೋಮೋಬೈಲ್. ಆಗಿದ್ದು ಮಾಡೆಲ್. ಸಾಕಷ್ಟು ರ‌್ಯಾಂಪ್ ಶೋಗಳನ್ನು ಮಾಡಿದ್ದೇನೆ. ಸೌಥ್ ಪ್ರಿನ್ಸ್‌ಸಸ್, ರಾಯಲ್ ಸಿಟಿ ಪ್ರಿನ್ಸಸ್, ಕೇರಳ ಪ್ರಿನ್ಸ್‌ಸೆಸ್
ಸೇರಿದಂತೆ ಮಾಡೆಲಿಂಗ್ ಜಗತ್ತಿನಲ್ಲಿ ಹಲವು ಗೌರವಗಳಿಗೆ ಪಾತ್ರಳಾಗಿದ್ದೇನೆ. ಹೀಗಾಗಿ ಓದಿನ ನಂತರ ಮಾಡೆಲಿಂಗ್‌ನಲ್ಲೇ ಹೆಚ್ಚು ತೊಡಗಿಸಿಕೊಂಡಿದ್ದೆ.
 

ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ಮಾಡೆಲಿಂಗ್‌ನಲ್ಲಿ ಇದ್ದವರಿಗೆ ಸಾಮಾನ್ಯವಾಗಿ ಸಿನಿಮಾಗಳ ಬಗ್ಗೆ ಆಸಕ್ತಿ ಇದ್ದೇ  ಇರುತ್ತದೆ. ನನಗೂ ಹಾಗೆ ಇತ್ತು. ಎಲ್ಲಿಯಾದರೂ ಸಿನಿಮಾ ಆಡಿಷನ್ ನಡೆಯುತ್ತಿದೆ. ಅಂದರೆ ಅಲ್ಲಿಗೆ ಹೋಗಿ ಬರುತ್ತಿದ್ದೆ. ಒಮ್ಮೆ ಆಡಿಷನ್ ಕೊಟ್ಟು ಅಲ್ಲಿ ಆಯ್ಕೆ ಆದರೂ  ನಾನು ಹೋಗಲಿಲ್ಲ. ಆ ಮೇಲೆ ‘ಬ್ಯೂಟಿಫುಲ್ ಮನಸುಗಳು’ ಚಿತ್ರಕ್ಕಾಗಿ ಆಡಿಷನ್  ಕೊಟ್ಟ ಮೇಲೆ ಅವರು ಸೆಲೆಕ್ಟ್ ಮಾಡಿಕೊಂಡು ಕತೆ, ನನ್ನ ಪಾತ್ರದ ಬಗ್ಗೆ ಹೇಳಿದರು. ನಾನು ಒಪ್ಪಿಕೊಂಡೆ. ಎರಡನೇ ಆಡಿಷನ್‌ಗೆ ನಾನು ಚಿತ್ರರಂಗಕ್ಕೆ ಬಂದೆ.
 ಬ್ಯೂಟಿಫುಲ್ ಮನಸುಗಳು ಚಿತ್ರದ ನಂತರ....
ಈ ಚಿತ್ರದಲ್ಲಿ ನಾನು ನಾಯಕಿ ಅಲ್ಲ. ಪೊಲೀಸ್ ಅಧಿಕಾರಿ ಮಗಳ ಪಾತ್ರ ಮಾಡಿದ್ದೆ.  ಅದೇ ಚಿತ್ರದ ನಾಯಕ ನೀನಾಸಂ ಸತೀಶ್ ಅವರಿಂದ ಕಿಡ್ನಾಪ್‌ಗೆ ಒಳಗಾಗುವ  ಪಾತ್ರ. ನನ್ನ ಈ ಪಾತ್ರದ ಮೂಲಕವೇ ಚಿತ್ರಕ್ಕೆ ತಿರುವು ಸಿಗುತ್ತದೆ. ಹೀಗಾಗಿ ಈ  ಚಿತ್ರದಿಂದ ನನ್ನ ಹೆಸರು ಚಿತ್ರರಂಗದಲ್ಲಿ ಕೇಳುವಂತಾಯಿತು. ನನ್ನ ಪಾತ್ರಕ್ಕೂ ಮಹತ್ವ  ಸಿಕ್ಕಿತು. ಇದಾದ ಮೇಲೆ ‘ಕಟ್ಟು ಕತೆ’. ಈ ಚಿತ್ರದ ನಂತರ ಮತ್ತೊಮ್ಮೆ ಜಯತೀರ್ಥ  ಅವರ ನಿರ್ದೇಶನದ ‘ವೆನಿಲ್ಲಾ’ ಚಿತ್ರಕ್ಕೆ ನಾಯಕಿ ಆಗಿದೆ. ಮುಂದೆ ‘ಕಮರೊಟ್ಟು  ಚೆಕ್‌ಪೋಸ್ಟ್’ ಚಿತ್ರಕ್ಕೆ ನಾಯಕಿ ಆಗುವಂತೆ ಮಾಡಿತು. ಇದರ ಜತೆಗೆ ‘ಭರಣಿ’  ಎನ್ನುವ ಮತ್ತೊಂದು ಸಿನಿಮಾ ಒಪ್ಪಿಕೊಂಡಿರುವೆ.
 

ಅಂದರೆ ನಿಮಗೆ ಜಯತೀರ್ಥ ಅವರ ಸಿನಿಮಾಗಳು ಕೆರಿಯರ್ ಕಟ್ಟಿಕೊಟ್ಟಿದೆಯಲ್ಲ?
ಹೌದು. ಯಾಕೆಂದರೆ ನನ್ನಲ್ಲಿನ ಪ್ರತಿಭೆ ಗುರುತಿಸಿದ್ದು ಅವರದ್ದೇ ನಿರ್ದೇಶನದ  ಸಿನಿಮಾ. ಮುಂದೆ ನನ್ನ ನಾಯಕಿಯಾಗಿ ಕಮರ್ಷಿಯಲ್ಲಾಗಿ ಮತ್ತೊಮ್ಮೆ ಚಿತ್ರರಂಗಕ್ಕೆ  ಪರಿಚಯಿಸಿದ್ದು ಅವರದ್ದೇ ನಿರ್ದೇಶನದ ಸಿನಿಮಾ. 

ಸರಿ, ನೀವು ನಟಿಸಿರುವ ಮತ್ತು ನಟಿಸಲಿರುವ ಚಿತ್ರಗಳ ಕುರಿತು ಹೇಳುವುದಾದರೆ?
ವೆನಿಲ್ಲಾ ಚಿತ್ರದಲ್ಲಿ ನನ್ನದು ಪರಿಸರ ವಿಧ್ಯಾರ್ಥಿ ಪಾತ್ರ. ತುಂಬಾ ಥ್ರಿಲ್ಲಿಂಗ್ ಆಗಿರುವ  ಕತೆ ಮತ್ತು ಪಾತ್ರ ಇಲ್ಲಿದೆ. ಪ್ರವೀಣ್ ರಾಜ್ ನಿರ್ದೇಶನದ ‘ಕಟ್ಟು ಕತೆ’ ಚಿತ್ರದಲ್ಲಿ ಡ್ಯಾಷಿಂಗ್ ಡೇರ್ ಪಾತ್ರ. ಈ ಹಿಂದೆ ‘ಮಾಮು ಟೀ ಅಂಗಡಿ’ ಚಿತ್ರ ನಿರ್ದೇಶಿಸಿದ್ದ ಪರಮೇಶ್  ಅವರ ‘ಕಮರೊಟ್ಟು ಚೆಕ್‌ಪೋಸ್ಟ್’ ಚಿತ್ರದಲ್ಲಿ  ಗೃಹಿಣಿಯಾಗಿ ನಟಿಸಿದ್ದೇನೆ. ಇನ್ನೂ ‘ಭರಣಿ’ ಚಿತ್ರ ಇದೇ ತಿಂಗಳು ಕೊನೆಯಿಂದ ಶುರುವಾಗಲಿದೆ. ಇದನ್ನು ನಿರ್ಮಿಸುತ್ತಿರುವುದು ‘ನಾಗರಹಾವು’ ಚಿತ್ರದ ನಿರ್ಮಾಪಕ ಸಾಹಿದ್ ಖುರೇಷಿ ಅವರು. ಚನಾನಿ ರಾಜ್ ಇದರ ನಿರ್ದೇಶಕರು.

ನಿಮಗೆ ಸಿಗುತ್ತಿರುವ ಅವಕಾಶಗಳು ನೋಡಿದರೆ  ಹೊಸಬರಿಗೆ ಈಗ ಒಳ್ಳೆಯ ಕಾಲ ಅಂತೀರಿ?
ಹಾಗೇನು ಇಲ್ಲ. ನಾವು ಹೇಗೆ ಬರುತ್ತೇವೆ, ಯಾವ ರೀತಿಯ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ, ನಮಗೆ ಕೊಟ್ಟ  ಪಾತ್ರಕ್ಕೆ ನಾವು ಎಷ್ಟರ ಮಟ್ಟಿಗೆ ಜೀವ ತುಂಬುತ್ತೇವೆ ಎನ್ನುವುದರ ಮೇಲೆ ಅವಕಾಶಗಳು ನಿಂತಿವೆ. ನಾನು ಅದನ್ನೇ ಯೋಚನೆ
ಮಾಡಿಕೊಂಡೇ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತ ಬಂದೆ. ನನ್ನ ಪ್ರಕಾರ ಒಳ್ಳೆಯ ಕತೆ, ಮತ್ತು ಒಳ್ಳೆಯ ಡೈರೆಕ್ಟರ್ ಇದ್ದರೆ ಎಂಥ ಕಲಾವಿದರೂ ಗಟ್ಟಿಯಾಗಿ  ನೆಲೆಯೂರುತ್ತಾರೆ.

ಸಂದರ್ಶನ: ಆರ್.ಕೇಶವಮೂರ್ತಿ 

click me!