
ವಿಷ್ಣು ಮಂಚು ಅವರ 'ರಾಮಾಯಣ': ರಾಮನಾಗಿ ಸೂರ್ಯ, ಸೀತೆಯಾಗಿ ಆಲಿಯಾ, ರಾವಣನಾಗಿ ಮೋಹನ್ ಬಾಬು!
ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಮಹಾಕಾವ್ಯ 'ರಾಮಾಯಣ'ವನ್ನು ತೆರೆಯ ಮೇಲೆ ತರುವ ಪ್ರಯತ್ನಗಳು ಮತ್ತೆ ಚುರುಕುಗೊಂಡಿವೆ. ಬಾಲಿವುಡ್ನಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರು ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅವರನ್ನು ಹಾಕಿಕೊಂಡು ರಾಮಾಯಣ ಸಿನಿಮಾ ಮಾಡುತ್ತಿರುವಾಗಲೇ, ಇದೀಗ ಟಾಲಿವುಡ್ನ ಖ್ಯಾತ ನಟ ಮತ್ತು ನಿರ್ಮಾಪಕ ವಿಷ್ಣು ಮಂಚು ಅವರು ತಮ್ಮದೇ ಆದ ರಾಮಾಯಣ ಆಧಾರಿತ ಚಿತ್ರದ ಯೋಜನೆಯನ್ನು ಬಹಿರಂಗಪಡಿಸಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಕನಸಿನ ಪಾತ್ರವರ್ಗದ ಬಗ್ಗೆಯೂ ಅವರು ಮಾಹಿತಿ ಹಂಚಿಕೊಂಡಿದ್ದು, ಇದು ಇಡೀ ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮತ್ತು ಸಂಚಲನವನ್ನು ಸೃಷ್ಟಿಸಿದೆ. ಗಂಡ ಬಾಲಿವುಡ್ ರಾಮ, ಹೆಂಡ್ತಿ ಟಾಲಿವುಡ್ ಸೀತೆ; ಉತ್ತರ-ದಕ್ಷಿಣ ಉಲ್ಟಾಪಲ್ಟಾ ಆಗೋಯ್ತಲ್ಲಾ..! ಹೌದು, ಇದು ಅಚ್ಚರಿ ಎನ್ನಿಸಿದರೂ ಸತ್ಯ ಸಂಗತಿ!
ವಿಷ್ಣು ಮಂಚು ಅವರ ಕನಸಿನ ಪಾತ್ರವರ್ಗ:
ವಿಷ್ಣು ಮಂಚು ಅವರ ರಾಮಾಯಣದಲ್ಲಿ ಶ್ರೀರಾಮನ ಪಾತ್ರಕ್ಕೆ ಅವರು ತಮಿಳಿನ ಸೂಪರ್ಸ್ಟಾರ್ ನಟ ಸೂರ್ಯ ಅವರನ್ನು ಆಯ್ಕೆ ಮಾಡಲು ಬಯಸಿದ್ದಾರೆ. ತಮ್ಮ ನಟನೆಯ ಮೂಲಕವೇ ಪ್ರೇಕ್ಷಕರ ಮನಗೆದ್ದಿರುವ ಸೂರ್ಯ, ರಾಮನ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು ಎಂಬುದು ಅವರ ನಂಬಿಕೆ. ಇನ್ನು, ಸೀತಾಮಾತೆಯ ಪಾತ್ರಕ್ಕಾಗಿ ಬಾಲಿವುಡ್ನ ಪ್ರತಿಭಾವಂತೆ ಮತ್ತು ಜನಪ್ರಿಯ ನಟಿ ಆಲಿಯಾ ಭಟ್ ಅವರನ್ನು ವಿಷ್ಣು ಮಂಚು ತಮ್ಮ ಮೊದಲ ಆಯ್ಕೆಯಾಗಿಸಿಕೊಂಡಿದ್ದಾರೆ.
ಈ ಚಿತ್ರದ ಅತ್ಯಂತ ಪ್ರಮುಖ ಮತ್ತು ಸವಾಲಿನ ಪಾತ್ರವಾದ ರಾವಣನ ಪಾತ್ರಕ್ಕೆ, ವಿಷ್ಣು ಮಂಚು ಅವರು ತಮ್ಮ ತಂದೆ ಹಾಗೂ ತೆಲುಗು ಚಿತ್ರರಂಗದ ದಂತಕಥೆ, 'ಕಲೆಕ್ಷನ್ ಕಿಂಗ್' ಎಂದೇ ಖ್ಯಾತರಾದ ಮೋಹನ್ ಬಾಬು ಅವರನ್ನೇ ಆಯ್ಕೆ ಮಾಡಲು ಇಚ್ಛಿಸಿದ್ದಾರೆ. ಮೋಹನ್ ಬಾಬು ಅವರ ಗಂಭೀರ ವ್ಯಕ್ತಿತ್ವ, ಧ್ವನಿ ಮತ್ತು ನಟನಾ ಕೌಶಲ್ಯವು ರಾವಣನ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ ಎಂಬುದು ಅವರ ಅಭಿಪ್ರಾಯ.
ಸ್ಕ್ರಿಪ್ಟ್ ಸಿದ್ಧ, ಯೋಜನೆ ದೊಡ್ಡದು:
ಈ ಬಗ್ಗೆ ಮಾತನಾಡಿರುವ ವಿಷ್ಣು ಮಂಚು, "ನನ್ನ ಬಳಿ ರಾಮಾಯಣದ ಸ್ಕ್ರಿಪ್ಟ್ ಸಂಪೂರ್ಣವಾಗಿ ಸಿದ್ಧವಾಗಿದೆ. ಇದು ನನ್ನ ಬಹುದೊಡ್ಡ ಕನಸಿನ ಯೋಜನೆ. ಸೂರ್ಯ, ಆಲಿಯಾ ಮತ್ತು ನನ್ನ ತಂದೆಯವರು ನನ್ನ ಕನಸಿನ ಪಾತ್ರವರ್ಗ. ಆದರೆ, ಇದು ಅಂತಿಮವಲ್ಲ. ನಟರ ಕಾಲ್ಶೀಟ್ ಲಭ್ಯತೆ, ಅವರಿಗೆ ಕಥೆ ಇಷ್ಟವಾಗುವುದು ಮತ್ತು ಇತರ ಹಲವು ಅಂಶಗಳ ಮೇಲೆ ಪಾತ್ರವರ್ಗದ ಆಯ್ಕೆ ನಿಂತಿದೆ," ಎಂದು ಸ್ಪಷ್ಟಪಡಿಸಿದ್ದಾರೆ.
ಸಿನಿಮಾ ರಂಗದಲ್ಲಿ 'ರಾಮಾಯಣ'ಗಳ ಪೈಪೋಟಿ:
ವಿಷ್ಣು ಮಂಚು ಅವರ ಈ ಘೋಷಣೆಯು ಚಿತ್ರರಂಗದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಒಂದೆಡೆ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಕನ್ನಡದ 'ರಾಕಿಂಗ್ ಸ್ಟಾರ್' ಯಶ್ ಅವರು ರಾವಣನಾಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ವಿಷ್ಣು ಮಂಚು ಅವರ ಮತ್ತೊಂದು 'ರಾಮಾಯಣ' ಯೋಜನೆ ಮುನ್ನೆಲೆಗೆ ಬಂದಿರುವುದರಿಂದ, ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ ಎರಡು ಬೃಹತ್ ರಾಮಾಯಣಗಳ ನಡುವೆ ಪೈಪೋಟಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ.
ಒಟ್ಟಿನಲ್ಲಿ, ಭಾರತೀಯ ಪ್ರೇಕ್ಷಕರು ಒಂದೇ ಮಹಾಕಾವ್ಯದ ಎರಡು ವಿಭಿನ್ನ ಮತ್ತು ಬೃಹತ್ ಆವೃತ್ತಿಗಳನ್ನು ನೋಡುವ ಅವಕಾಶ ಪಡೆಯಲಿದ್ದಾರೆ. ವಿಷ್ಣು ಮಂಚು ಅವರ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಅವರ ಕನಸಿನ ಪಾತ್ರವರ್ಗವೇ ಅಂತಿಮವಾಗುವುದೇ ಅಥವಾ ಬದಲಾವಣೆಗಳಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.