ಮೀಟೂ ವಿವಾದದ ನಂತರ ಒಂದೇ ಚಿತ್ರದಲ್ಲಿ ಶ್ರುತಿ, ಸರ್ಜಾ!

By Kannadaprabha NewsFirst Published Jan 29, 2019, 9:04 AM IST
Highlights

ಮೀಟೂ ವಿಚಾರದಲ್ಲಿ ಸದ್ದು ಮಾಡಿದ ಇಬ್ಬರು ನಟಿಯರು ಒಂದೇ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿಯರಾದ ಶ್ರುತಿ ಹರಿಹರನ್‌, ಸಂಗೀತಾ ಭಟ್‌ ಅಭಿನಯದ ಈ ಚಿತ್ರಕ್ಕೆ ನಾಯಕ ಚಿರಂಜೀವಿ ಸರ್ಜಾ. ಇದೇ ಸರ್ಜಾ ಕುಟುಂಬದ ಅರ್ಜುನ್‌ ಸರ್ಜಾ ಹಾಗೂ ಶ್ರುತಿ ಹರಿಹರನ್‌ ನಡುವೆ ಮೀಟೂ ವಿಚಾರ ಜೋರಾಗಿ ಚರ್ಚೆಗೆ ಗ್ರಾಸವಾಗಿ ಕೊನೆಗೆ ಕೋರ್ಟ್‌ಗೆ ಹೋಗಿದ್ದು ಗೊತ್ತಿರುವ ವಿಚಾರ. ಸದ್ಯ ಈ ಮೂವರ ಕಾಂಬಿನೇಷನ್‌ ಚಿತ್ರದ ಹೆಸರು ‘ಆದ್ಯ’. ಕೆ ಎಂ ಚೈತನ್ಯ ನಿರ್ದೇಶನದ ಚಿತ್ರವಿದು.

ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣ ಮುಗಿದಿದೆ. ಪಕ್ಕಾ ಥ್ರಿಲ್ಲರ್‌ ಹಾಗೂ ಸಸ್ಪೆನ್ಸ್‌ ಸಿನಿಮಾ. ತೆಲುಗಿನಲ್ಲಿ ‘ಗೂಢಚಾರಿ’ ಚಿತ್ರವನ್ನು ನಿರ್ಮಿಸಿರುವ ಪ್ರತಿಷ್ಠಿತ ಪೀಪಲ್ಸ್‌ ಮೀಡಿಯಾ ಫ್ಯಾಕ್ಟ್ರಿ ಬ್ಯಾನರ್‌ನಲ್ಲಿ ‘ಆದ್ಯ’ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

ಇಲ್ಲಿ ಚಿರಂಜೀವಿ ಸರ್ಜಾ ನಾಯಕನಾದರೆ, ಸಂಗೀತಾ ಭಟ್‌ ನಾಯಕಿ. ಶ್ರುತಿ ಹರಿಹರನ್‌ ಅವರು ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಎಲ್ಲಾ ಪಾತ್ರಧಾರಿಗಳ ಚಿತ್ರೀಕರಣ ಮುಗಿದಿದೆ. ಡಬ್ಬಿಂಗ್‌ ಕೆಲಸ ಕೂಡ ನಡೆಯುತ್ತಿದೆ. ಆದರೆ, ಚಿರಂಜೀವಿ ಸರ್ಜಾ ಅವರ ದೃಶ್ಯಗಳ ಶೂಟಿಂಗ್‌ ನಡೆಯಬೇಕಿದೆ. ಇಲ್ಲಿ ಶ್ರುತಿ ಹಾಗೂ ಚಿರು ಜೋಡಿಯಾಗಿ ಕಾಣಿಸಿಕೊಂಡಿಲ್ಲ. ಮಾಚ್‌ರ್‍ ತಿಂಗಳ ಹೊತ್ತಿಗೆ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ’ ಎನ್ನುತ್ತಾರೆ ನಿರ್ದೇಶಕ ಕೆ ಎಂ ಚೈತನ್ಯ. ರವಿಶಂಕರ್‌, ಶಶಾಂಕ್‌ ಪುರುಷೋತ್ತಮ್‌ ಮುಂತಾದವರು ನಟಿಸಿದ್ದಾರೆ.

ಶೃತಿ ಹರಿಹರನ್-ಸರ್ಜಾ ಮತ್ತೆ ಸಿನಿಮಾದಲ್ಲಿ

ಚಿರು ಕೈಯಲ್ಲಿ ಮತ್ತೊಂದು ಚಿತ್ರ

ಈ ನಡುವೆ ನಟ ಚಿರಂಜೀವಿ ಸರ್ಜಾ ಮತ್ತೊಂದು ಚಿತ್ರಕ್ಕೆ ಬುಕ್‌ ಆಗಿದ್ದಾರೆ. ಈಗಾಗಲೇ ಸದ್ದಿಲ್ಲದೆ ಮೂರು ಚಿತ್ರಗಳಲ್ಲಿ ನಟಿಸುತ್ತಿರುವ ಚಿರು, ಹೊಸ ಅನಿಲ್‌ ಮಂಡ್ಯ ನಿರ್ದೇಶಿಸಲಿರುವ ಚಿತ್ರಕ್ಕೂ ನಾಯಕನಾಗಿದ್ದಾರೆ. ‘ರಾಜಕುಮಾರ’ ಹಾಗೂ ‘ಮಿಸ್ಟರ್‌ ಆಂಡ್‌ ಮಿಸಸ್‌ ರಾಮಾಚಾರಿ’ ಚಿತ್ರಗಳಿಗೆ ಕೋ ಡೈರೆಕ್ಟರ್‌ ಆಗಿ ಕೆಲಸ ಮಾಡಿದವರು. ಇದು ಮೊದಲ ಸ್ವತಂತ್ರ ನಿರ್ದೇಶನದ ಚಿತ್ರ. ಇನ್ನೂ ಚಿತ್ರಕ್ಕೆ ಹೆಸರಿಟ್ಟಿಲ್ಲ. ಈ ಚಿತ್ರವನ್ನು ನಿರ್ಮಿಸುತ್ತಿರುವುದು ವೈಷ್ಣವಿ ಮನು ಫಿಲಮ್ಸ್‌ ಬ್ಯಾನರ್‌ನಲ್ಲಿ ವೆಂಕಟೇಶ್‌. ಇವರೊಂದಿಗೆ ಕಿಶೋರ್‌ ಎಂಬುವರು ನಿರ್ಮಾಣಕ್ಕೆ ಸಾಥ್‌ ನೀಡುತ್ತಿದ್ದಾರೆ.

ಚಿರಂಜೀವಿ ಸರ್ಜಾ ಅವರು ನಿರ್ದೇಶಕ ವಿಜಯ್‌ ಕಿರಣ್‌ ಅವರ ‘ಸಿಂಗ’ ಚಿತ್ರದ ಹಾಡು ಮತ್ತು ಫೈಟ್‌ ದೃಶ್ಯಗಳ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಚಿತ್ರವನ್ನು ಉದಯ್‌ ಮೆಹ್ತಾ ನಿರ್ಮಿಸುತ್ತಿದ್ದಾರೆ. ಇದರ ಜತೆಗೆ ರಾಮ್‌ನಾರಾಯಣ್‌ ಅವರ ‘ರಾಜಾಮಾರ್ತಾಂಡ’ ಚಿತ್ರಕ್ಕೂ ಶೂಟಿಂಗ್‌ ಬಾಕಿ ಇದೆ.

click me!