‘ಕಿರಿಕ್ ಪಾರ್ಟಿ’ಯಿಂದ ಪಾಠ ಕಲಿತ ರಕ್ಷಿತ್!

By Web DeskFirst Published Jun 7, 2019, 9:46 AM IST
Highlights

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ತುಂಬಾ ದಿನಗಳ ನಂತರ ಮಾತನಾಡಿದ್ದಾರೆ. ಸಿನಿಮಾ, ವೈಯಕ್ತಿಕ ಜೀವನ, ಮುಂದಿನ ಹೆಜ್ಜೆಗಳು, ಜತೆಗಿದ್ದವರ ಕತೆಗಳು, ಹಿಂದಿನ ಕಷ್ಟಗಳನ್ನು ಹಂಚಿಕೊಂಡಿದ್ದಾರೆ. ಇದು ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಬಿಡುಗಡೆಯ ಸಂಭ್ರಮದ ಮಾತುಗಳೂ ಹೌದು.

ಕಳೆದ ಮೂರು ವರ್ಷಗಳಿಂದ ಅವನೇ ಶ್ರೀಮನ್ನಾರಾಯಣ ಜಪದಲ್ಲೇ ಕಳೆಯುತ್ತಿದ್ದೀರಲ್ಲ?

ನಗೆ ಸಿನಿಮಾ ಬಿಟ್ಟು ಬೇರೆ ಗೊತ್ತಿಲ್ಲ. ಗೊತ್ತಿರುವ ಕೆಲಸವನ್ನು ಆದಷ್ಟು ಶುದ್ಧವಾಗಿ ಪರ್‌ಫೆಕ್ಟ್ ಆಗಿ ಮಾಡಬೇಕು ಎಂಬುದು ನನ್ನ ಹಠ. ಅಲ್ಲದೆ ಈ ಸಿನಿಮಾದ ಸ್ಕೇಲ್ ತುಂಬಾ ದೊಡ್ಡದು. ಬಜೆಟ್, ಕತೆ, ತಾರಾಗಣ ದೊಡ್ಡದು. ಈ ಎಲ್ಲವೂ ತೆರೆ ಮೇಲೆ ನೋಡುಗನಿಗೆ ನಿಟಾಗಿ ಕಾಣಬೇಕು. ಅದಕ್ಕೆ ಶ್ರಮ ಮುಖ್ಯ. ಇದಕ್ಕೆ ಟೈಮ್ ತೆಗೆದುಕೊಂಡೆ. ಕತೆ ಬರೆಯುವುದಕ್ಕೆ ಒಂದು ವರ್ಷ ಸಮಯ ತೆಗೆದುಕೊಂಡ್ವಿ. ಮತ್ತೆ ಶೂಟಿಂಗ್ ಶುರುವಾಯಿತು. ಹೋಗ್ತಾ ಹೋಗ್ತಾ ನಮ್ಮ ನಿರೀಕ್ಷೆಯ ಗಡಿ ದಾಟಿತು. ಬೇರೆ ಕಡೆ ಗಮನ ಕೊಡಕ್ಕೆ ಆಗಲಿಲ್ಲ. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ.

ಸಿನಿಮಾ ಆರಂಭದಲ್ಲೇ ಬಹುಭಾಷೆಯ ಬಿಗ್ ಬಜೆಟ್ ಸಿನಿಮಾ ಎನ್ನುವ ಯೋಚನೆಯಲ್ಲಿ ಶುರು ಮಾಡಿದ್ದಾ?

ಇಲ್ಲ. ಕತೆ ಮಾಡಿಕೊಂಡು ಸಿನಿಮಾ ಸೆಟ್‌ಗೆ ಹೋದಾಗ 40 ರಿಂದ 50 ದಿನದಲ್ಲಿ ಶೂಟಿಂಗ್ ಮುಗಿಸಬಹುದಾದ ಸಿನಿಮಾ ಎನ್ನುವ ಲೆಕ್ಕಾಚಾರ ಇತ್ತು. ಆದರೆ, ನಾವು ಮಾಡಿಕೊಂಡಿದ್ದ ಕತೆಯ ವ್ಯಾಪ್ತಿ ದೊಡ್ಡದಿತ್ತು. ಕನ್ನಡದ ಜತೆಗೆ ಬೇರೆ ಭಾಷಿಕರಿಗೂ ತಟ್ಟುವ ಅಂಶಗಳು ಇಲ್ಲಿದ್ದವು. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲೂ ರೂಪಿಸುವುದಕ್ಕೆ ಪ್ಲಾನ್ ಮಾಡಿದ್ವಿ. ಬೇರೆ ಭಾಷೆಗಳಿಗೂ ಹೋಗುತ್ತಿದ್ದೇವೆ ಎಂದಾಗ ಮೇಕಿಂಗ್ ಸ್ಟೈಲ್ ಬದಲಾಯಿತು. 50 ದಿನಗಳ ಶೂಟಿಂಗ್ ಶೆಡ್ಯೂಲ್ 200 ದಿನಕ್ಕೆ ಬಂತು. ಹೀಗೆ ನಿರ್ಮಾಣ ಹಂತದಲ್ಲಿ ಬಹುಭಾಷೆಯ ಸಿನಿಮಾ ಆಗಿ ಜನ್ಮ ಪಡೆಯಿತು.

ನನ್ನ ಮುಂದಿನ ನಿರ್ದೇಶನದ ಸಿನಿಮಾ ‘ಪುಣ್ಯಕೋಟಿ’. ಇದರ ಕತೆ, ಚಿತ್ರಕತೆ ಬರೆದು ಮುಗಿಸಿದ್ದೇನೆ. ಈಗ ಸಂಭಾಷಣೆ ಬರೆಯುತ್ತಿದ್ದೇನೆ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿರುವ ನನ್ನ ಕನಸಿನ ಸಿನಿಮಾ ಇದು.- ರಕ್ಷಿತ್ ಶೆಟ್ಟಿ, ನಟ

ಮಲ್ಟಿಲ್ಯಾಂಗ್ವೇಜ್‌ನಲ್ಲಿ ಸಿನಿಮಾ ಮಾಡೋದು ಈಗಿನ ಟ್ರೆಂಡ್. ಆ ಸಾಲಿನಲ್ಲಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ನೋಡಬಹುದು?

ನಾವು ಟ್ರೆಂಡ್ ಹಿಂಬಾಲಿಸಿಕೊಂಡು ಹೋಗಿಲ್ಲ. ಇದು ಟ್ರೆಂಡ್ ಅನ್ನುವುದಕ್ಕಿಂತ ಇದು ಫ್ಯೂಚರ್. ಭಾರತೀಯ ಸಿನಿಮಾದ ಭವಿಷ್ಯದ ಹೆಜ್ಜೆಗಳು ಅನ್ನಬಹುದು. ಕನ್ನಡದ ಕತೆಗಳು, ಕನ್ನಡದ ಸಿನಿಮಾಗಳು ಕನ್ನಡೇತರರನ್ನು ತಲುಪುತ್ತಾ ಅವು ಭಾರತೀಯ ಸಿನಿಮಾ ಕತೆಗಳಾಗುತ್ತಿವೆ ಎಂಬುದನ್ನು ಹೇಳುವ ಪ್ರಯತ್ನ. ಅದೇ ರೀತಿ ಬೇರೆ ಭಾಷಿಗರೂ ಸಹ ಅವರ ಗಡಿ ದಾಟಿದ್ದಾರೆ. ಮುಂದೆ ಆಯಾ ಭಾಷೆಯ ಸಿನಿಮಾ ಎನ್ನುವ ಜಾಗದಲ್ಲಿ ಭಾರತೀಯ ಸಿನಿಮಾ ಎನ್ನುತ್ತಾರೆ. ಸದ್ಯಕ್ಕೆ ನಾವು ಕನ್ನಡದವರು ಸೌಥ್ ಇಂಡಿಯಾಗೆ ಅನ್ವಯಿಸುವ ಸಿನಿಮಾಗಳನ್ನು ಮಾಡುವ ಶಕ್ತಿ ಇದೆ. ಅದನ್ನೇ ನಾನು ಟಾರ್ಗೆಟ್ ಮಾಡಿರೋದು. ಆ ನಿಟ್ಟಿನಲ್ಲೇ ‘ಅವನೇ ಶ್ರೀಮನ್ನಾರಾಯಣ’ ಮೂಡಿ ಬಂದಿದೆ.

ರಕ್ಷಿತ್ ಶೆಟ್ಟಿ ಅವರ ಸಿನಿಮಾ ಬೇರೆ ಭಾಷೆಗೂ ಹೇಗೆ ಕನೆಕ್ಟ್ ಆಗುತ್ತದೆ?

ಚಿತ್ರ ನೋಡಿದಾಗ ಗೊತ್ತಾಗುತ್ತದೆ. ಆದರೆ, ಚಿತ್ರದಲ್ಲಿ ನಾಯಕನ ಪಾತ್ರ ಯಾರಿಗೆ ಬೇಕಾದರೂ ಕನೆಕ್ಟ್ ಆಗುತ್ತದೆ. ಸಿಕ್ಕಾಪಟ್ಟೆ ಎಂಟರ್‌ಟೈನ್ ಮಾಡುವ ಪೊಲೀಸ್ ಆತ. ಇಡೀ ಸಿನಿಮಾ ಪೂರ್ತಿ ನಾನು ಪೊಲೀಸ್ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತೇನೆ. ರಾಕ್ಷಸರ ನಡುವೆ ಒಬ್ಬ ಕಾಮಿಡಿಯಾಗಿ ಕಾಣುವ ಪೊಲೀಸ್, ಆತ ಏನೇ ಮಾಡಿದರೂ ಕೇರ್ ಮಾಡಲ್ಲ. ಕೊನೆಗೆ ಅಂಥ ಕಾಮಿಡಿ ಪೊಲೀಸ್ ಏನು ಮಾಡುತ್ತಾನೆ ಎಂಬುದು ಕತೆ. ಆ ತಿರುವು ಎಲ್ಲ ಪ್ರೇಕ್ಷಕರು ಇಷ್ಟವಾಗುತ್ತದೆ. ನಿರ್ದೇಶಕ ಸಚಿನ್, ವಿಷ್ಯುವಲ್ ಟ್ರೀಟ್‌ಮೆಂಟ್ ಸೂಪರ್ ಆಗಿದೆ.

ಸೋಷಿಯಲ್ ಮೀಡಿಯಾಗೆ ರಕ್ಷಿತ್ ಶೆಟ್ಟಿ ಕಮ್ ಬ್ಯಾಕ್; ಮೊದಲ ಮೆಸೇಜ್ ಏನ್ ನೋಡಿ!

ಈ ಚಿತ್ರಕ್ಕೆ ನೀವು ಏನೆಲ್ಲ ತಯಾರಿ ಮಾಡಿಕೊಂಡಿದ್ರಿ?

ನಾವು ತಯಾರಿ ಮಾಡಿಕೊಂಡು ಹೋಗಿದ್ವಿ ಎನ್ನುವುದಕ್ಕಿಂತ ಈ ಸಿನಿಮಾನೇ ನಮಗೆ ತುಂಬಾ ಕಲಿಸಿದೆ ಅನ್ನಬಹುದು. ರೈಟಿಂಗ್‌ಗೆ ದೊಡ್ಡ ಸಿದ್ಧತೆ ಮಾಡಿಕೊಂಡಿದ್ದು ಬಿಟ್ಟರೆ ಮಿಕ್ಕ ಎಲ್ಲವೂ ನಮಗೆ ಹೊಸದು. ಶೇ.೮೦ ಭಾಗ ಸೆಟ್ಗಳಲ್ಲಿ ಮಾಡಿದ್ದೇವೆ. ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದ ತುಂಬಾ ರಗಡ್ ಜಾಗಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದ್ಧೂರಿ ಮೇಕಿಂಗ್, ದೊಡ್ಡ ತಂಡ, ನಾನು ಇಲ್ಲಿವರೆಗೂ ಮಾಡಿರುವ ಪಾತ್ರಗಳಿಗಿಂತಲೂ ಭಿನ್ನವಾಗಿ ಕಾಣುವ ಪಾತ್ರ... ಹೀಗೆ ಎಲ್ಲವನ್ನೂ ಈ ಸಿನಿಮಾ ಹೇಳಿಕೊಟ್ಟಿತು. 

ಇದೆಲ್ಲದರ ಆಚೆಗೂ ನಿಮ್ಮ ವೈಯಕ್ತಿಕ ಜೀವನ ಹೇಗಿದೆ?

ಸೂಪರ್ ಆಗಿದೆ. ಹೊರಗೆ ನನ್ನ ಜೀವನದ ಬಗ್ಗೆ ಏನೆಲ್ಲ ಮಾತುಗಳಿವೆಯೋ ನನಗೆ ಗೊತ್ತಿಲ್ಲ. ಮತ್ತೆ ಗೊತ್ತಿದ್ದರೂ ಆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಯಾಕೆಂದರೆ ಸಿನಿಮಾ ನನ್ನ ಜೀವನ. ಸಿನಿಮಾದಿಂದ ನನಗೆ ಖುಷಿ ಸಿಗುತ್ತಿದೆ ಎಂದರೆ ನನ್ನ ವೈಯಕ್ತಿಕ ಜೀವನವೂ ಚೆನ್ನಾಗಿದೆ ಎಂದರ್ಥ.

ನಾವು ಟ್ರೆಂಡ್ ಹಿಂಬಾಲಿಸಿಕೊಂಡು ಹೋಗಿಲ್ಲ. ಇದು ಟ್ರೆಂಡ್ ಅನ್ನುವುದಕ್ಕಿಂತ ಇದು ಫ್ಯೂಚರ್. ಭಾರತೀಯ ಸಿನಿಮಾದ ಭವಿಷ್ಯದ ಹೆಜ್ಜೆಗಳು ಅನ್ನಬಹುದು. ಕನ್ನಡದ ಕತೆಗಳು, ಕನ್ನಡದ ಸಿನಿಮಾಗಳು ಕನ್ನಡೇತರರನ್ನು ತಲುಪುತ್ತಾ ಅವು ಭಾರತೀಯ ಸಿನಿಮಾ ಕತೆಗಳಾಗುತ್ತಿವೆ ಎಂಬುದನ್ನು ಹೇಳುವ ಪ್ರಯತ್ನ. ಅದೇ ರೀತಿ ಬೇರೆ ಭಾಷಿಗರೂ ಸಹ ಅವರ ಗಡಿ ದಾಟಿದ್ದಾರೆ. 

 

ಕಿರಿಕ್ ಪಾರ್ಟಿಯಂತಹ ದೊಡ್ಡ ಯಶಸ್ಸು ಸಿಕ್ಕಿದ ಮೇಲೂ ನೀವು ನಿಮ್ಮ ತಂಡಕ್ಕೆ ಸೀಮಿತಗೊಂಡಿದ್ದು ಯಾಕೆ?

ನಿಜ, ಮನಸ್ಸು ಮಾಡಿದ್ದರೆ ನನಗೂ ಕೋಟಿ ಕೋಟಿ ಸಂಭಾವನೆ ಕೊಟ್ಟು ದೊಡ್ಡ ನಿರ್ಮಾಣ ಸಂಸ್ಥೆಗಳು, ಸ್ಟಾರ್ ನಿರ್ದೇಶಕರ ಸಿನಿಮಾಗಳಲ್ಲಿ ನಟಿಸಬಹುದಿತ್ತು. ಆದರೆ, ನನಗೆ ಆ ಶೈಲಿಯ ಸಿನಿಮಾಗಿಂತ ನನ್ನದು ಅಂತ ಅನಿಸುವ, ನನ್ನ ತಂಡದ ಶ್ರಮದ ಜಾಗ ಎನಿಸುವಂತೆ ನಾನು ಕೆಲಸ ಮಾಡಕ್ಕೆ ಇಷ್ಟ ಪಡುತ್ತೇನೆ. ನಾನು ಮಾಡಿಕೊಂಡ ಕತೆಗೆ ನ್ಯಾಯ ಸಲ್ಲಿಸುವ ಪ್ರತಿಭೆಗಳು ನಮಗೆ ಬೇಕು. ಅವರು ನಮ್ಮ ಜತೆಗೇ ಇದ್ದವರು ಆದರೆ ಎಷ್ಟು ಚೆನ್ನಾಗಿತ್ತೆ ಅಂದಾಗ ಸಚಿನ್, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ನೆನಪಾದರು. ಇವರ ಜತೆಗೆ ಬಂದ ಹತ್ತಾರು ಮಂದಿ ಶ್ರಮ ಹಾಕಿದರು. ನನ್ನ ಈ ತಂಡವೇ ಧೈರ್ಯ ತುಂಬಿತು. ಆದರೆ, ಹೊರಗಿನವರ ಜತೆ ಸಿನಿಮಾ ಮಾಡಿದಾಗ ಆ ಸಿನಿಮಾ ನನ್ನ ಕೈಯಲ್ಲಿ ಇರಲ್ಲ. ಅಲ್ಲಿ ನಾನು ಸಂಭಾವನೆ ಪಡೆದು ನಟಿಸುವ ಕಲಾವಿದ ಮಾತ್ರ ಆಗಿರುತ್ತೇನೆ.

ಮುಂದೆ ಹೀಗೆಯೇ ನಿಮ್ಮ ತಂಡದೊಂದಿಗೆ ಸಿನಿಮಾ ಮಾಡಿಕೊಂಡಿರುತ್ತೀರಿ?

ಮುಂದೆಯ ಕತೆಗಳನ್ನು ಈಗ ಹೇಳಲಾಗದು. ಆದರೆ, ಸದ್ಯಕ್ಕಂತೂ ನನ್ನ ಹಾಗೆ ಸಿನಿಮಾ ಮೋಹ, ಆಸಕ್ತಿ ಇಟ್ಟುಕೊಂಡಿರುವವರ ತಂಡ ನನ್ನೊಂದಿಗೆ ಇದೆ. ಹೀಗಾಗಿ ಇಲ್ಲೇ ಸಿನಿಮಾಗಳನ್ನ ಮಾಡಿಕೊಂಡಿರುತ್ತೇನೆ.

ನಿಮ್ಮ ತಂಡದ ಮುಂದಿನ ಸಿನಿಮಾಗಳು ಯಾವುವು? ಸುದೀಪ್ ಮತ್ತು ನಿಮ್ಮ ಕಾಂಬಿನೇಷನ್‌ನ ಸಿನಿಮಾ ಏನಾಯಿತು?

777 ಚಾರ್ಲಿ ಚಿತ್ರಕ್ಕೆ ಶೇ.40 ಭಾಗ ಚಿತ್ರೀಕರಣ ಮುಗಿಸಿದ್ದೇನೆ. ಮತ್ತೆ ಜೂನ್ 11ರಿಂದ ಶೂಟಿಂಗ್ ಶುರುವಾಗಲಿದೆ. ಇದರ ನಂತರ ‘ಪುಣ್ಯಕೋಟಿ’ ಸಿನಿಮಾ ಸೆಟ್ಟೇರಲಿದೆ. ಇದು ನನ್ನ ನಿರ್ದೇಶನದ ಸಿನಿಮಾ. ಈ ಚಿತ್ರದ ನಂತರ ಹೇಮಂತ್ ರಾವ್ ನಿರ್ದೇಶನದಲ್ಲಿ ‘ತೆನಾಲಿ’ ಸಿನಿಮಾ ಸೆಟ್ಟೇರಲಿದೆ. ‘ಅವನೇ ಶ್ರೀಮನ್ನಾರಾಯಣ’ ಸೇರಿದಂತೆ ನಾಲ್ಕು ಸಿನಿಮಾಗಳು ನನ್ನ ಮುಂದಿವೆ. ಇದರ ಜತೆಗೆ ‘ಉಳಿದವರು ಕಂಡಂತೆ’ ಚಿತ್ರದ ರಿಚ್ಚಿ ಕ್ಯಾರೆಕ್ಟರ್ ಇಟ್ಟುಕೊಂಡು ಸಿನಿಮಾ ಮಾಡುವ ಯೋಚನೆ ಇದೆ. ಇನ್ನೂ ಸುದೀಪ್ ಅವರ ಜತೆ ಮಾಡಬೇಕಿದ್ದ ಚಿತ್ರದ್ದು ಇನ್ನೂ ಏನೂ ಆಗಿಲ್ಲ. 

ಪಾಕೆಟಲ್ಲಿ ಫೋಟೋ ಇಟ್ಕೊಂಡು ಸಲ್ಮಾನ್‌ ಗಾಗಿ ಚಾನ್ಸ್ ಕೇಳ್ತಿದ್ರಂತೆ ಈ ನಟ!

ಕಿರಿಕ್ ಪಾರ್ಟಿ ಸಿನಿಮಾದ ಯಶಸ್ಸು ನಿಮಗೆ ಕಲಿಸಿದ ಪಾಠವೇನು? 

ಒಂದು ಸಿನಿಮಾ ಮಾಡಿ ಮುಗಿಸಿದ ಅದನ್ನು ಪ್ರೇಕ್ಷಕರ ಮುಂದಿಟ್ಟ ಮೇಲೆ ಮತ್ತೊಂದು ಸಿನಿಮಾ ರೂಪಿಸುವುದಕ್ಕೆ ಹೊರಡಬೇಕು. ಹೊಸ ಕತೆ ಬರೆಯಬೇಕು ಎಂಬುದು. ಯಾಕೆಂದರೆ ನಾನು ಕಿರಿಕ್ ಪಾರ್ಟಿ ಮುಗಿದ ಮೇಲೆ ನಾವು ಅದೇ ಯಶಸ್ಸಿನ ಗುಂಗಿನಲ್ಲೇ ಮುಳುಗಿದೆ. ಬೇರೆ ಕಡೆ ನೋಡಲಿಲ್ಲ. ಹೀಗಾಗಿ ಮೂರು ವರ್ಷವಾದರೂ ನನ್ನ ಸಿನಿಮಾ ಬರಲಿಲ್ಲ. ಮುಂದೆ ಇಷ್ಟೊಂದು ಗ್ಯಾಪ್ ತೆಗೆದುಕೊಳ್ಳಬಾರದು ಎಂಬುದನ್ನು ಅರಿತಿರುವೆ. 

 

 

 

click me!