ಎನ್‌ಇಪಿ ರದ್ದು ನಿರ್ಧಾರಕ್ಕೆ ತೀವ್ರ ವಿರೋಧ, ಸರ್ಕಾರ ಬದಲಾದಂತೆ ಶಿಕ್ಷಣ ಬದಲಾವಣೆ ಒಳ್ಳೆಯದಲ್ಲ

By Kannadaprabha NewsFirst Published Aug 23, 2023, 9:13 AM IST
Highlights

ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಕೈಬಿಟ್ಟು ರಾಜ್ಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ನಡೆಗೆ ಶಿಕ್ಷಣ ತಜ್ಞರು ಸೇರಿದಂತೆ ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಆ.23): ಮುಂದಿನ ಶೈಕ್ಷಣಿಕ ಸಾಲಿನಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಕೈಬಿಟ್ಟು ರಾಜ್ಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಕಾಂಗ್ರೆಸ್‌ ನಡೆಗೆ ಶಿಕ್ಷಣ ತಜ್ಞರು ಸೇರಿದಂತೆ ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಪೀಪಲ್ಸ್‌ ಫೋರಂ ಫಾರ್‌ ಕರ್ನಾಟಕ ಎಜುಕೇಶನ್‌ ಸಂಸ್ಥೆ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಜಾರಿಗಾಗಿ ಶಿಕ್ಷಣ ತಜ್ಞರ ಸಭೆಯಲ್ಲಿ ಹಲವು ಶಿಕ್ಷಣ ತಜ್ಞರು ಭಾಗಿಯಾಗಿದ್ದರು. ಈ ವೇಳೆ ಶಿಕ್ಷಣ ತಜ್ಞರು ಸರ್ಕಾರ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಮಾಜಿ ಕುಲಪತಿ ಪ್ರೊ.ಕರಿಸಿದ್ದಪ್ಪ ಮಾತನಾಡಿ, ಮಕ್ಕಳಿಗೆ ಕೌಶಲ್ಯ ಕಲಿಸಲು ಎನ್‌ಇಪಿ ಒತ್ತು ನೀಡುತ್ತದೆ. ದೇಶವು ಅಭಿವೃದ್ಧಿಯಾಗಬೇಕಾದರೆ ಎನ್‌ಇಪಿ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎಂದು ತಿಳಿಸಿದರು.

ಎನ್‌ಇಪಿ ರದ್ದು: ಡಿಕೆಶಿಗೆ 8 ಪ್ರಶ್ನೆ ಕೇಳಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌

ಮಾಜಿ ಕುಲಪತಿ ಪ್ರೊ.ತಿಮ್ಮೇಗೌಡ ಮಾತನಾಡಿ, ಸರ್ಕಾರಗಳು ಬದಲಾವಣೆಯಾಗುತ್ತಿದ್ದಂತೆ ಶಿಕ್ಷಣ ವ್ಯವಸ್ಥೆ ಬದಲಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಶಿಕ್ಷಣ ವ್ಯವಸ್ಥೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ವಿಶ್ವದ ಬದಲಾವಣೆಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಎನ್‌ಇಪಿಯಿಂದ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶವನ್ನು ಹೆಚ್ಚಿಸುತ್ತದೆ ಎಂದರು.

ರದ್ದುಗೊಳಿಸಿದರೆ ಜನಾಂದೋಲನ-ಬೊಮ್ಮಾಯಿ ಎಚ್ಚರಿಕೆ: ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ರದ್ದುಗೊಳಿಸಲು ಮುಂದಾದರೆ ಜನಾಂದೋಲನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಎನ್‌ಇಪಿ ವಿರೋಧ ಮಾಡುತ್ತಿರುವುದರಲ್ಲಿ ಆಶ್ಚರ್ಯ ಇಲ್ಲ. ಅವರು ವಿರೋಧಕ್ಕಾಗಿ ವಿರೋಧ ಮಾಡಿದ್ದಾರೆ. ಅಷ್ಟೊಂದು ಕುಲಪತಿಗಳನ್ನು ಕೂಡಿಸಿಕೊಂಡು ಯಾವುದೇ ಚರ್ಚೆ ಮಾಡದೇ ನಿರ್ಣಯ ಕೈಗೊಂಡಿದ್ದಾರೆ. ಅದನ್ನು ಕುಲಪತಿಗಳು ಪ್ರಶ್ನೆ ಮಾಡದೇ ಸುಮ್ಮನೇ ಎದ್ದು ಬಂದಿರುವುದು ದುರಂತ ಎಂದರು.

ಸ್ಟೇಟ್‌ ಬೋರ್ಡ್‌ನಿಂದ ನೀಟ್‌ಗೆ ಅರ್ಜಿ, ಕರ್ನಾಟಕಕ್ಕೆ 2ನೇ ಸ್ಥಾನ, ನೀಟ್‌ ವಿರೋಧಿಸಿ ಡಿಎಂಕೆ

ಶಿಕ್ಷಣ ವ್ಯವಸ್ಥೆಯನ್ನು ಕೇವಲ ಕರ್ನಾಟಕಕ್ಕೆ ಸೀಮಿತ ಮಾಡಬೇಕಾ? ಪ್ರಗತಿಪರರು ಎಂದು ಹೇಳಿ ರಾಜ್ಯವನ್ನು ಹಿಂದೆ ಕಳಿಸುವ ಕೆಲಸ ಮಾಡುತ್ತಿದ್ದೀರಿ. ನಿಮಗೆ ಜನರು ಅಭಿವೃದ್ಧಿ ಮಾಡಲು ಅಧಿಕಾರ ಕೊಟ್ಟಿದ್ದಾರೆ. ರಾಜ್ಯವನ್ನು ಹಿಂದೆ ಕಳುಹಿಸಲು ಅಲ್ಲ. ಅದಕ್ಕೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇಲ್ಲ. ಈ ದೇಶದಲ್ಲಿ ದೊಡ್ಡವರು ತಪ್ಪು ಮಾಡಿದಾಗ ಜನರು ದೊಡ್ಡ ಹೋರಾಟಗಳ ಮೂಲಕ ಬದಲಾವಣೆ ತಂದಿದ್ದಾರೆ. ನೀವು ಅಧಿಕಾರ ಸಿಕ್ಕಿದೆ ಅಂತ ಈ ರೀತಿ ಮಾಡಿದರೆ ಜನ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.

ಈ ಶಿಕ್ಷಣ ನೀತಿ ಸರಿ ಇಲ್ಲ ಅಂತ ಹೇಳುತ್ತಿದ್ದಾರೆ. ಎನ್‌ಇಪಿ ರದ್ದು ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್‌ ಘೋಷಣೆ ಮಾಡುತ್ತಾರೆ. ಎನ್‌ಇಪಿ ರದ್ದು ಮಾಡುವುದಾದರೆ, ಪರಮೇಶ್ವರ್‌, ಎಂ.ಬಿ.ಪಾಟೀಲ್‌ ಒಪ್ಪುತ್ತಾರಾ? ಎನ್‌ಇಪಿ ಅಂದರೆ ನಾಗಪುರ ಶಿಕ್ಷಣ ನೀತಿ ಅಂತಾರೆ. ಎಸ್‌ಇಪಿ ಅಂದರೆ ಸೋನಿಯಾಗಾಂಧಿ ಎಜುಕೇಶನ್‌ ಪಾಲಿಸಿನಾ? ಸೋನಿಯಾ ಗಾಂಧಿ ಅಂದರೆ ಇಟಲಿ. ಇಟಲಿ ಅಂದರೆ ಯೂರೋಪ್‌ ಎಜುಕೇಶನ್‌ ಅಂದರೆ ಮೆಕಾಲೆ ಶಿಕ್ಷಣ ನೀತಿ ಜಾರಿಗೆ ತರುತ್ತೀರಾ ಎಂದು ಪ್ರಶ್ನಿಸಿದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿಗಳು, ಮಾಜಿ ಶಿಕ್ಷಣ ಸಚಿವರಾದ ಡಾ ಸಿ.ಎನ್‌.ಅಶ್ವತ್ಥ ನಾರಾಯಣ, ಎನ್‌.ಮಹೇಶ್‌ ತಮ್ಮ ಅಭಿಪ್ರಾಯ ಮಂಡಿಸಿದರು.

ನಿಮ್ಮ ಕೈಯಲ್ಲಿ ಅಧಿಕಾರ ಇದೆ ಅಂತ ಬದಲಾವಣೆ ಮಾಡುವ ಪ್ರಯತ್ನ ಮಾಡಬಹುದು. ಆದರೆ, ಇದರ ವಿರುದ್ಧ ಜನಾಂದೋಲ ನಡೆಯಲಿದೆ. ನಮ್ಮ ವಿದ್ಯಾರ್ಥಿಗಳಿಗೆ ಇದರ ಅರಿವಾದರೆ, ದೊಡ್ಡ ಹೋರಾಟ ಮಾಡುತ್ತಾರೆ.

-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

ಪೀಪಲ್ಸ್‌ ಫೋರಂ ಫಾರ್‌ ಕರ್ನಾಟಕ ಎಜುಕೇಶನ್‌ ಸಂಸ್ಥೆ ಸೋಮವಾರ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಏರ್ಪಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಜಾರಿಗಾಗಿ ಶಿಕ್ಷಣ ತಜ್ಞರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ಬಿ.ಸಿ.ನಾಗೇಶ್‌ ಭಾಗವಹಿಸಿದ್ದರು.

click me!