ಅಲ್ಪಸಂಖ್ಯಾತ ವೈದ್ಯ ವಿದ್ಯಾರ್ಥಿಗಳ ಸಾಲ ಮೊತ್ತ ಏರಿಕೆ?

By Kannadaprabha NewsFirst Published Aug 23, 2023, 1:30 AM IST
Highlights

ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಬಯಸಿದರೆ ಅವರಿಗೆ 20 ಲಕ್ಷ ರು. ಶಿಕ್ಷಣ ಸಾಲ ನೀಡಲಾಗುತ್ತಿದೆ. ಇದೀಗ ಎನ್‌ಎಂಡಿಸಿ ನೆರವಿನೊಂದಿಗೆ ಹತ್ತು ಲಕ್ಷ ರು. ಹೆಚ್ಚುವರಿಯಾಗಿ ಒಟ್ಟು 30 ಲಕ್ಷ ರು. ಸಾಲಸೌಲಭ್ಯ ಒದಗಿಸುವ ಬಗ್ಗೆ ಸಹ ಚಿಂತನೆ ನಡೆಸಲಾಗಿದೆ: ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಖಾನ್‌ 

ಬೆಂಗಳೂರು(ಆ.23):  ರಾಜ್ಯದಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುವ ಅಲ್ಪಸಂಖ್ಯಾತ ಸಮುದಾಯದ ಮೆರಿಟ್‌ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಸಾಲದ ಪ್ರಮಾಣವನ್ನು ಮೂರು ಲಕ್ಷ ರು.ಗಳಿಂದ ಐದು ಲಕ್ಷ ರು.ಗೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ) ವತಿಯಿಂದ ಸರ್ಕಾರಿ ಕೋಟಾ ಅಡಿ ಸೀಟು ಪಡೆಯುವ ಮೆರಿಟ್‌ ವಿದ್ಯಾರ್ಥಿಗಳಿಗೆ ಮೂರು ಲಕ್ಷ ರು. ಸಾಲ ನೀಡಲಾಗುತ್ತಿದ್ದು, ಈ ಮೊತ್ತ ಹೆಚ್ಚಿಸುವಂತೆ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಈ ಮೊತ್ತವನ್ನು ಐದು ಲಕ್ಷ ರು.ಗಳಿಗೆ ಹೆಚ್ಚಿಸುವ ಚಿಂತನೆ ನಡೆಸಲಾಗಿದೆ. ಮೊತ್ತ ಹೆಚ್ಚಳದಿಂದ ಬಡ ಕುಟುಂಬಗಳ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದರು.

ವಿದ್ಯಾರ್ಥಿಗಳು ಹೇಗೆ ಓದಬೇಕು ಅಂದ್ರೆ ರಿಸಲ್ಟ್ ದಿನ ಇಡೀ ಕರ್ನಾಟಕವೇ ನಿಮ್ಮ ಬಗ್ಗೆ ಓದಬೇಕು: ಪ್ರದೀಪ್‌ ಈಶ್ವರ್‌

ಅದೇ ರೀತಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಪದವಿ ಅಥವಾ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಬಯಸಿದರೆ ಅವರಿಗೆ 20 ಲಕ್ಷ ರು. ಶಿಕ್ಷಣ ಸಾಲ ನೀಡಲಾಗುತ್ತಿದೆ. ಇದೀಗ ಎನ್‌ಎಂಡಿಸಿ ನೆರವಿನೊಂದಿಗೆ ಹತ್ತು ಲಕ್ಷ ರು. ಹೆಚ್ಚುವರಿಯಾಗಿ ಒಟ್ಟು 30 ಲಕ್ಷ ರು. ಸಾಲಸೌಲಭ್ಯ ಒದಗಿಸುವ ಬಗ್ಗೆ ಸಹ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಇದೇ ವೇಳೆ ಹಜ್‌ ಯಾತ್ರೆ ಸಂದರ್ಭದಲ್ಲಿ ಕಾರ್ಯ ನಿರ್ವಹಣೆ ಮಾಡಿದ ವಿವಿಧ ಸಮಿತಿ ಹಾಗೂ ತಂಡಗಳ 750 ಸ್ವಯಂ ಸೇವಕರು ಮತ್ತು ಅಧಿಕಾರಿಗಳಿಗೆ ನೆನಪಿನ ಕಾಣಿಕ ನೀಡಿ ಸನ್ಮಾನಿಸಿದ ಅವರು ಹಜ್‌ ಯಾತ್ರೆ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದ 50 ಮಂದಿ ಮಹಿಳೆಯರು ಹಾಗೂ ಅವರ ಅವಲಂಬಿತರು ಸೇರಿ 100 ಮಂದಿಗೆ ವೈಯಕ್ತಿಕ ವೆಚ್ಚದಲ್ಲಿ ಉಮ್ರಾ ಯಾತ್ರೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಎನ್‌ಇಪಿ ರದ್ದು: ಸೋನಿಯಾ ಎಜ್ಯುಕೇಶನ್ ಪಾಲಿಸಿ ತರಲು ಹೊರಟಿರುವ ಸರ್ಕಾರ -ಬಿಸಿ ನಾಗೇಶ್ ವಾಗ್ದಾಳಿ

100 ಮಂದಿಗೆ ಉ ಯಾತ್ರೆ:

2018ರಲ್ಲಿ 1200 ಸ್ವಯಂ ಸೇವಕರನ್ನು ಉಮ್ರಾ ಯಾತ್ರೆಗೆ ಕಳುಹಿಸುವುದಾಗಿ ನೀಡಿದ್ದ ಭರವಸೆಯಂತೆ ಈವರೆಗೆ 900 ಮಂದಿ ಈಗಾಗಲೇ ಉಮ್ರಾಗೆ ಹೋಗಿ ಬಂದಿದ್ದಾರೆ. ಉಳಿದವರನ್ನು ಈ ವರ್ಷ ಕಳಿಸಲಾಗುವುದು. ಪವಿತ್ರವಾಗಿರುವ ಹಜ್‌ ಹಾಗೂ ಉಮ್ರಾ ಯಾತ್ರೆಗೆ ಹೋಗಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ ನನ್ನ ಶಕ್ತಿ ಇರುವವರೆಗೆ ಈ ಸೇವೆ ಮಾಡುತ್ತೇನೆ ಎಂದರು.

ಪೌರಾಡಳಿತ ಮತ್ತು ಹಜ್‌ ಖಾತೆ ಸಚಿವ ರಹೀಮ್‌ ಖಾನ್‌ ಮಾತನಾಡಿ, ಜಮೀರ್‌ ಅಹಮದ್‌ಖಾನ್‌ ಅವರು ಸ್ವಯಂ ಸೇವಕರನ್ನು ಗೌರವಿಸುತ್ತಿರುವುದು ಉತ್ತಮ ಕೆಲಸ. ಅವರು ಬಡ ಸಮುದಾಯದವರ ಪರ ಸದಾ ನಿಲ್ಲುವ ನಾಯಕ ಎಂದು ಶ್ಲಾಘಿಸಿದರು.

click me!