ಮದರಸಾಗಳ ಶಿಕ್ಷಣ ವ್ಯವಸ್ಥೆ ಪರಿಶೀಲನೆ: BC Nagesh

By Suvarna NewsFirst Published Aug 25, 2022, 2:20 PM IST
Highlights

 ಧಾರ್ಮಿಕ ಶಿಕ್ಷಣ ಜತೆ ಗಣಿತ, ವಿಜ್ಞಾನ ಪಾಠ ಇದೆಯೇ ಇಲ್ಲವೇ? ಪರಿಶೀಲಿಸಲು ಅಧಿಕಾರಿಗಳಿಗೆ ಶಿಕ್ಷಣ ಸಚಿವ ನಾಗೇಶ್‌ ಸೂಚನೆ. 

 ಬೆಂಗಳೂರು (ಆ.25): ರಾಜ್ಯದ ಒಂದಷ್ಟು ಮದರಸಾಗಳಿಗೆ ಭೇಟಿ ನೀಡಿ ಅಲ್ಲಿನ ಮಕ್ಕಳಿಗೆ ‘ಶಿಕ್ಷಣ ಹಕ್ಕು ಕಾಯ್ದೆ’ ಅನುಸಾರ ಔಪಚಾರಿಕ ಶಿಕ್ಷಣ ದೊರೆಯುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ತಮ್ಮ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಗರದ ಸರ್ವ ಶಿಕ್ಷಣ ಅಭಿಯಾನ ಕಚೇರಿಯಲ್ಲಿ ಬುಧವಾರ ತಮ್ಮ ಇಲಾಖಾ ಅಧಿಕಾರಿಗಳೊಂದಿಗೆ ‘ಮದರಸಾಗಳಲ್ಲಿ ಔಪಚಾರಿಕ ಶಿಕ್ಷಣ’ದ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆದ ಬಳಿಕ ವಿಜ್ಞಾನ ಮತ್ತು ಗಣಿತ ಕುರಿತು ಔಪಚಾರಿಕ ಶಿಕ್ಷಣ ಪಡೆಯಲು ಹತ್ತಿರದ ಶಾಲೆಗಳಿಗೆ ವಿದ್ಯಾರ್ಥಿಗಳು ಹಾಜರಾಗಬೇಕು ಎಂಬ ನಿಯಮವಿದೆ. ಆದರೆ, ಮದರಸಾದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು, ಯಾವ ಪ್ರಮಾಣದಲ್ಲಿ ಔಪಚಾರಿಕ ಶಿಕ್ಷಣ ಪಡೆಯುತ್ತಿದ್ದಾರೆಂಬ ಸ್ಪಷ್ಟಮತ್ತು ನಿಖರ ಮಾಹಿತಿ ಲಭ್ಯವಿಲ್ಲ. ಆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿರುವ ಮದರಸಾಗಳಲ್ಲಿನ ಶಿಕ್ಷಣದ ಸ್ವರೂಪ ತಿಳಿಯುವ ಅಗತ್ಯವಿದೆ ಎಂದರು. ಈ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದೇನೆ. ಅನುದಾನಿತ, ಅನುದಾನರಹಿತ ಹಾಗೂ ಖಾಸಗಿ ಮದರಸಾಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಸಿಗಬೇಕಾಗ ಶಿಕ್ಷಣ ಸಿಗುತ್ತಿದೆಯೇ? ಇಲ್ಲವಾದರೆ ಯಾವ ರೀತಿಯ ಶಿಕ್ಷಣ ನೀಡಲಾಗುತ್ತಿದೆ ಎಂಬ ಕುರಿತು ಮದರಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪರಿಶೀಲನೆ ಬಳಿಕ ಸಭೆ:  ನಾನು ರಾಜ್ಯದ ವಿವಿಧೆಡೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಮದರಸಾಗಳಲ್ಲಿ ಮಕ್ಕಳಿಗೆ ಔಪಚಾರಿಕ ಶಿಕ್ಷಣ ಸಿಗುತ್ತಿಲ್ಲ. ಪ್ರಮುಖವಾಗಿ ಗಣಿತ ಮತ್ತು ವಿಜ್ಞಾನದಂತಹ ಬೋಧನೆ ದೊರೆಯುವಂತೆ ಮಾಡಬೇಕೆಂದು ಪೋಷಕರೂ ಒತ್ತಾಯಿಸಿದ್ದರು. ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆಗೆಂದು ಮದರಸಾಗಳಿಗೆ ತೆರಳಿದಾಗ ಸಹಕರಿಸುವುದಿಲ್ಲ ಎಂಬ ದೂರುಗಳು ಕೂಡ ಇಲಾಖೆಗೆ ಬಂದಿವೆ. ಹೀಗಾಗಿ, ಕೆಲವು ಮದರಸಾಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಥಿತಿಗತಿ ಬಗ್ಗೆ ಮಾಹಿತಿ ತೆಗೆದುಕೊಂಡ ನಂತರ ಶಿಕ್ಷಣ ತಜ್ಞರು, ಮದರಸಾ ನಡೆಸುತ್ತಿರುವವರ ಜೊತೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Latest Videos

ಸಭೆಯಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶ ಆರ್‌.ರಾಮಚಂದ್ರನ್‌ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಉತ್ತರ ಪ್ರದೇಶ ಮಾದರಿ ಇಲ್ಲ
ಮದರಸಾಗಳಲ್ಲಿ ಮಕ್ಕಳಿಗೆ ಔಪಚಾರಿಕ ಶಿಕ್ಷಣ ದೊರಕಿಸಿಕೊಡುವಂತೆ ಮುಸ್ಲಿಂ ಸಮುದಾಯದ ಪೋಷಕರಿಂದ ಒತ್ತಾಯ ಬಂದಿದೆ. ಈ ಹಿನ್ನೆಲೆಯಲ್ಲಿ ಮದರಸಾಗಳಲ್ಲಿ ಶಿಕ್ಷಣ ವ್ಯವಸ್ಥೆ ನಿರ್ವಹಣೆಗೆ ಪ್ರತ್ಯೇಕ ಮಂಡಳಿ ರಚಿಸುವ ಬಗ್ಗೆ ಚಿಂತನೆ ಇದೆ. ಆದರೆ, ಇದನ್ನು ಉತ್ತರ ಪ್ರದೇಶ ಅಥವಾ ಮತ್ಯಾವುದೇ ರಾಜ್ಯದ ಮಾದರಿಯನ್ನು ಅನುಸರಿಸಿ ಮಾಡುವುದಿಲ್ಲ. ಮೊದಲು ಮದರಸಾ ಶಿಕ್ಷಣ ವ್ಯವಸ್ಥೆ ಏನಿದೆ ಎಂದು ಪರಿಶೀಲಿಸಿ ವರದಿ ಪಡೆಯುತ್ತೇವೆ. ನಂತರ ಮುಂದೇನು ಮಾಡಬೇಕೆಂದು ನಿರ್ಧರಿಸಲಾಗುವುದು.

- ಬಿ.ಸಿ.ನಾಗೇಶ್‌, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ

ಮದರಸಾ ನಿಷೇಧಿಸಿ ಎಂದ ಮುತಾಲಿಕ್‌: ಮದರಸಾಗಳಲ್ಲಿಯೇ ಕಟ್ಟರ್‌ ಮುಸ್ಲಿಂವಾದಿಗಳು ಹಾಗೂ ಭಯೋತ್ಪಾದಕರು ತಯಾರಾಗುತ್ತಿದ್ದು, ಸರ್ಕಾರ ಮದರಸಾಗಳಿಗೆ ಪ್ರೋತ್ಸಾಹ ಕೊಡದೆ ಅವುಗಳನ್ನು ನಿಷೇಧಿಸಬೇಕು. ಮದರಸಾ ಮೂಲಕ ಭಯೋತ್ಪಾದನಾ ಚಟುವಟಿಕೆಗಳಾಗಿರುವ ಬಗ್ಗೆ ಕೇಂದ್ರ ಸರ್ಕಾರದ ಬಳಿ ಆಧಾರಗಳಿವೆ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಹೇಳಿದ್ದಾರೆ.

ಮದರಸಾಗಳಿಗೆ ಮೂಗುದಾರ ತೊಡಿಸಲು ಸರ್ಕಾರದಿಂದ ಸಿದ್ಧತೆ!

ಮದರಸಾಗಳ ನಿರ್ವಹಣೆಗೆ ಸರ್ಕಾರ ರಚನೆ ಮಾಡಿರುವ ಮಂಡಳಿ ವಿಚಾರವಾಗಿ  ಮಾತನಾಡಿರುವ ಅವರು, ನಾನು ಮದರಸಾಗಳ ಮೊದಲ ವಿರೋಧಿ. ಅವುಗಳನ್ನು ನಿಷೇಧಿಸಬೇಕು ಎನ್ನುವಾಗ ಸರ್ಕಾರ ಯಾವುದೇ ಕಾರಣಕ್ಕೂ ಅವುಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡಬಾರದು ಎಂದರು.

ಮದರಸಾಗಳ ಪಠ್ಯ ಬದಲಾವಣೆಗೆ ಸಿದ್ಧತೆ, ಈ ಬಗ್ಗೆ ಬಿಸಿ ನಾಗೇಶ್ ಹೇಳಿದ್ದಿಷ್ಟು

ನೋಂದಣಿಯಾಗಿರುವ 966 ಮದರಸಾಗಳು ನಮ್ಮಲ್ಲಿವೆ. ನೋಂದಣಿ ಆಗದೇ ಇರುವವು ಎಷ್ಟಿವೆ ಎಂಬುದನ್ನು ಸರ್ಕಾರ ಸಮೀಕ್ಷೆ ಮಾಡಿ ಅವುಗಳನ್ನು ಬಂದ್‌ ಮಾಡಬೇಕು. ಜತೆಗೆ ಇರುವ ಮದರಸಾಗಳ ಮೇಲೆ ಸರ್ಕಾರ ಹಿಡಿತ ಸಾಧಿಸಬೇಕು. ಅಲ್ಲಿ ರಾಷ್ಟ್ರಗೀತೆ ಹಾಡಿಸಬೇಕು. ನಿರಂತರವಾಗಿ ಅಭ್ಯಾಸ ಮಾಡಲು ಪಠ್ಯಪುಸ್ತಕ ಅಳವಡಿಸಬೇಕು. ವಕ್ಫ್ಬೋರ್ಡ್‌ ಮೂಲಕ ಸರ್ಕಾರ ಮದರಸಾಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ ಮುತಾಲಿಕ್‌, ಮದರಸಾಗಳು ಯಾವುದೆ ಗಲಭೆಯಲ್ಲಿ ಭಾಗವಹಿಸಬಾರದು. ಅಲ್ಲಿ ಒಂದೇ ಮಾತರಂ ಹಾಡುವ ಜತೆಗೆ ರಾಷ್ಟ್ರೀಯ ಹಬ್ಬ ಆಚರಣೆ ನಡೆಯಬೇಕು. ಇಲ್ಲದೇ ಹೋದಲ್ಲಿ ತಾಲಿಬಾನ್‌, ಪಾಕಿಸ್ತಾನ ರೀತಿ ವರ್ತನೆ ಮಾಡುತ್ತಾರೆ ಎಂದರು.

click me!