ರಾಖಿ ಬಿಚ್ಚಿಸಿದ ಆರೋಪ; ಭವಿಷ್ಯದಲ್ಲಿ ತಪ್ಪಾಗದಂತೆ ನೋಡಿಕೊಳ್ಳುತ್ತೇವೆ - ಶಾಲಾ ಮುಖ್ಯಸ್ಥ ಭರವಸೆ

By Kannadaprabha NewsFirst Published Aug 19, 2022, 9:31 AM IST
Highlights
  • ರಾಖಿ ಬಿಚ್ಚಿಸಿದ ಲೊಯೋಲ ಶಾಲೆ ಎದುರು ಪಾಲಕರ ಪ್ರತಿಭಟನೆ
  • ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿದ ಖಾಸಗಿ ಶಾಲೆ: ಆರೋಪ
  • ಸ್ಥಳಕ್ಕೆ ದೌಡಾಯಿಸಿದ ಬಿಇಒ

ಮುಂಡಗೋಡ (ಆ.19) ಇಲ್ಲಿಯ ಲೊಯೋಲ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ಕೈಯಲ್ಲಿದ್ದ ರಾಖಿಯನ್ನು ತೆಗೆಸಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪಾಲಕರು ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ಗುರುವಾರ ಶಾಲೆಯ ಎದುರು ಪತಿಭಟನೆ ನಡೆಸಿದರು.

ಮಕ್ಕಳ‌ ಕೈಯಿಂದ ರಾಖಿ ಬಿಚ್ಚಿಸಿದ ಕಾನ್ವೆಂಟ್ ಶಾಲೆ: ಹಿಂದೂ ಸಂಘಟನೆಗಳ ಪ್ರತಿಭಟನೆ

ರಕ್ಷಾ ಬಂಧನ(Raksha bandhan) ನಿಮಿತ್ತ ಮಕ್ಕಳು ಕೈಗೆ ರಾಖಿ ಕಟ್ಟಿಕೊಂಡು ಶಾಲೆಗೆ ಹೋಗಿದ್ದರು. ಶಾಲೆ ಮುಖ್ಯಾಧ್ಯಾಪಕರು ಮಕ್ಕಳ ರಾಖಿಯನ್ನು ಒತ್ತಾಯಪೂರ್ವಕವಾಗಿ ಬಿಚ್ಚಿಸಿದ್ದಾರೆ ಎನ್ನಲಾಗಿದೆ. ಈ ವಿಷಯ ಪಾಲಕರ ಗಮನಕ್ಕೆ ಬರುತ್ತಿದ್ದಂತೆ ಆಕ್ರೋಶಗೊಂಡ ಪಾಲಕರು ಮತ್ತು ಹಿಂದೂಪರ ಸಂಘಟನೆ ಕಾರ್ಯಕರ್ತರು ಶಾಲೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ಮೂಲಕ ಶಾಲಾಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೈಗೆ ಕಟ್ಟಿಕೊಂಡ ರಾಖಿ ಹಾಗೂ ಕುತ್ತಿಗೆಯಲ್ಲಿ ಯಾವುದೇ ದಾರ ಕಟ್ಟಿಕೊಂಡು ಬಂದರೂ ಅದನ್ನು ತೆಗೆಸಿ ನಮ್ಮ ಭಾವನೆಗೆ ದಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಗುಡುಗಿದ ಪ್ರತಿಭಟನಾಕಾರರು, ಪ್ರತಿಭಟನೆಯನ್ನು ತೀವ್ರಗೊಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಸಮಜಾಷಿಸಿ ನೀಡಲು ಮುಂದಾದ ಶಾಲಾಡಳಿತ ಹಾಗೂ ಪಾಲಕರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಶಾಲಾಡಳಿತವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಯಿತು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಮುಂಡಗೋಡ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ, ಶಾಲಾಡಳಿತ ಮಂಡಳಿ ಹಾಗೂ ಪಾಲಕರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು. ಒಂದು ವೇಳೆ ಇಂತಹ ದೂರುಗಳು ಕೇಳಿ ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಶಾಲೆಯ ಮುಖ್ಯಸ್ಥರಿಗೆ ಎಚ್ಚರಿಸಿದರು.

ಭವಿಷ್ಯದಲ್ಲಿ ತಪ್ಪಾಗದಂತೆ ನೋಡಿಕೊಳ್ಳುತ್ತೇವೆ:

ಯಾವುದೇ ಧರ್ಮಕ್ಕೆ ಧಕ್ಕೆ ತರುವ ಉದ್ದೇಶ ನಮಗಿಲ್ಲ. ಏನಾದರೂ ತಪ್ಪಾಗಿದ್ದರೆ ನಮ್ಮ ಗಮನಕ್ಕೆ ತನ್ನಿ. ಇನ್ನು ಮುಂದೆ ಇಂತಹ ಯಾವುದೇ ತಪ್ಪು ನಡೆಯದಂತೆ ನೋಡಿಕೊಳ್ಳುವುದಾಗಿ ಶಾಲೆಯ ಮುಖ್ಯಸ್ಥ ಜಾನ್ಸನ್‌ ಪಿಂಟೋ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಕಾರವಾರ: ಮಕ್ಕಳ ಕೈಯಲ್ಲಿದ್ದ ರಾಖಿ ಬಿಚ್ಚಿಸಿದ ಖಾಸಗಿ ಶಾಲೆ, ಶಿಕ್ಷಣ ಸಂಸ್ಥೆಯ ವಿರುದ್ಧ ಪ್ರತಿಭಟನೆ

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆ ಸಂಚಾಲಕ ಪ್ರಕಾಶ ಬಡಿಗೇರ, ತಾಲೂಕು ಬಿಜೆಪಿ ಯುವ ಮೋರ್ಚಾಧ್ಯಕ್ಷ ಗಣೇಶ ಶಿರಾಲಿ, ಜಿಲ್ಲಾ ಬಿಜೆಪಿ ಎಸ್ಟಿಮೋರ್ಚಾಧ್ಯಕ್ಷ ಸಂತೋಷ ತಳವಾರ, ಸಂಗೊಳ್ಳಿ ರಾಯಣ್ಣ ಸಂಸ್ಥೆ ಮುಖ್ಯಸ್ಥ ಅಯ್ಯಪ್ಪ ಭಜಂತ್ರಿ, ಶ್ರೀರಾಮಸೇನಾ ಅಧ್ಯಕ್ಷ ಮಂಜುನಾಥ ಹರಿಜನ, ವಿಶ್ವನಾಥ ನಾಯರ, ಪಾಲಕರಾದ ಪದ್ಮಶ್ರೀ ಶೇಟ್‌, ಮಂಗೇಶ ಲಮಾಣಿ, ಆನಂದ ಲಮಾಣಿ, ಸುನೀಲ ಲಮಾಣಿ, ಶಂಕರ ಲಮಾಣಿ, ಮಂಜುನಾಥ ಲಮಾಣಿ, ಶ್ರೀಕಾಂತ, ರವಿ ಉಪಸ್ಥಿತರಿದ್ದರು.

click me!