ವಸತಿ ಶಾಲೆ ಪ್ರವೇಶಕ್ಕೆ ಮೇ 15ರೊಳಗೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚನೆ

By Kannadaprabha NewsFirst Published Apr 28, 2024, 11:32 AM IST
Highlights

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕೆಅರ್ಜಿ ಆಹ್ವಾನಿಸಲಾಗಿದ್ದು ಮೇ 15ರೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ.

ಬೆಂಗಳೂರು (ಏ.28): ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಆರನೇ ತರಗತಿ ಪ್ರವೇಶಕ್ಕೆಅರ್ಜಿ ಆಹ್ವಾನಿಸಲಾಗಿದ್ದು ಮೇ 15ರೊಳಗೆ ಅರ್ಜಿ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ.

2024-25ನೇ ಸಾಲಿಗಾಗಿ ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಪ್ರತಿ ಶಾಲೆಯಲ್ಲಿ ದಾಖಲಾತಿಗೆ 60 ಸೀಟುಗಳು ಮಾತ್ರ ಇದ್ದು, ಮೇ 15 ರೊಳಗೆ ಅರ್ಜಿ ಸಲ್ಲಿಸಬೇಕು. ಅಲ್ಪಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆ, ಸರ್ದಾರಗಲ್ಲಿ, ಕೊಪ್ಪಳ, ದಿಡ್ಡಿಕೇರಾ ಓಣಿ, ಕೊಪ್ಪಳ, ಮುನಿರಾಬಾದ್, ಲಕ್ಷ್ಮಿ ಕ್ಯಾಂಪ್, ಗಂಗಾವತಿ , ಕನಕಗಿರಿ, ಕಾರಟಗಿ, ತಾವರಗೇರಾ, ಯಲಬುರ್ಗಾ, ಕುಕನೂರು, ಶ್ರೀರಾಮನಗರ ಶಾಲೆಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

2025-26 ರಿಂದ ವರ್ಷಕ್ಕೆ ಎರಡು CBSE ಬೋರ್ಡ್ ಪರೀಕ್ಷೆ, ಪರಿಶೀಲಿಸಲು ಸೂಚನೆ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಶೇ.75 ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮತ್ತು ಶೇ.25 ಇತರೆ ವರ್ಗದವರಿಗೆ ಮೀಸಲಿಡಲಾಗಿದೆ. ಅಲ್ಪಸಂಖ್ಯಾತ ಹಾಗೂ ಪ್ರವರ್ಗ-1, ಹಿಂದುಳಿದ ವರ್ಗಗಳ 2ಎ, 3ಎ ಮತ್ತು 3ಬಿ ಮತ್ತು ಎಸ್ಸಿ, ಎಸ್ಟಿ ಅಭ್ಯರ್ಥಿಗಳ ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರು. ಮಿತಿಯೊಳಗಿರಬೇಕು. ಅಂಗವಿಕಲ ವಿದ್ಯಾರ್ಥಿಗಳಿಗೆ ಶೇ.05, ಮಾಜಿ ಸೈನಿಕರಿಗೆ ಶೇ. 04 ಕಾಯ್ದಿರಿಸಲಾಗಿದೆ. ವಿಶೇಷ ದುರ್ಬಲ ವರ್ಗ ಶೇ.05, ಸಫಾಯಿ ಕರ್ಮಚಾರಿ ವಿದ್ಯಾರ್ಥಿಗಳಿಗೆ ಶೇ. 05 ಕಾಯ್ದಿರಿಸಲಾಗಿದೆ.

ವಿದ್ಯಾರ್ಥಿಗಳು 5ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ ಮತ್ತು ಆದಾಯ ದೃಢೀಕರಣ, ವಾಸಸ್ಥಳ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ ವಿದ್ಯಾರ್ಥಿ ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ 4 ಭಾವಚಿತ್ರಗಳೊಂದಿಗೆ ಮತ್ತು ನಿಗದಿ ಪಡಿಸಿದ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಅಪೂರ್ಣ, ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

ಮೇ 4 ರಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-2 ಮುಂದೂಡಿಕೆ, ಡೀಟೆಲ್ಸ್ ಇಲ್ಲಿದೆ

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹತ್ತಿರದ ಶಾಲೆ ಅಥವಾ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಅಥವಾ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೊಪ್ಪಳ ದೂ.ಸಂ: 08539-225070 ಗೆ ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಾಂಡೇಲಿಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ ಮತ್ತು ಮುಂಡಗೋಡ, ಹಳಿಯಾಳ ಹಾಗೂ ಕುಮಟಾ ಬೆಟ್ಕುಳಿಯ ಮೌಲಾನಾ ಆಜಾದ್‌ ಮಾದರಿ ಶಾಲೆ (ಆಂಗ್ಲ ಮಾಧ್ಯಮ)ಗೆ 6ನೇ ತರಗತಿ ಪ್ರವೇಶಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅವಧಿಯನ್ನು ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗೆ ಏ. 30 ಮತ್ತು ಮೌಲಾನಾ ಆಜಾದ್‌ ಮಾದರಿ ಶಾಲೆಗೆ ಮೇ 15ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿಯನ್ನು ವೆಬ್‌ಸೈಟ್ ಮೂಲಕ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲರು, ಮೌಲಾನಾ ಆಜಾದ್‌ ಮಾದರಿ ವಸತಿ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಅಥವಾ ಹತ್ತಿರದ ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

- ರಾಜ್ಯದ ವಿವಿಧ ವಸತಿ ಶಾಲೆಗಳಲ್ಲಿ ಆರನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಆರಂಭ

- ಮೇ 15ರೊಳಗೆ ಅರ್ಜಿ ಸಲ್ಲಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೂಚನೆ

- ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ

- ಕೊಪ್ಪಳ ಜಿಲ್ಲೆಯ ಪ್ರತಿ ವಸತಿ ಶಾಲೆಯಲ್ಲಿ ದಾಖಲಾತಿಗೆ 60 ಸೀಟುಗಳು ಮಾತ್ರ ಲಭ್ಯ

click me!