
ತಮಿಳುನಾಡಿನ ಸಾಮಾನ್ಯ ರೈತನ ಮನೆಯಲ್ಲಿ ಹುಟ್ಟಿ ಬೆಳೆದ ಕಥಿರ್ ಸೆಲ್ವಿ, ಇಂದಿಗೆ ಇಡೀ ರಾಜ್ಯ ಹೆಮ್ಮೆಪಡುವ ಹೆಸರು. 2024 ರ TNPSC ಗ್ರೂಪ್-1 ಪರೀಕ್ಷೆಯಲ್ಲಿ ರಾಜ್ಯದ ಮೊದಲ ಸ್ಥಾನ ಪಡೆದು, ಉಪ ಕಲೆಕ್ಟರ್ ಹುದ್ದೆಯನ್ನು ಗಿಟ್ಟಿಸಿಕೊಂಡಿರುವ ಈ 27 ವರ್ಷದ ಯುವತಿಯ ಹೋರಾಟ ಮತ್ತು ಸಾಧನೆಯ ಕಥೆ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗುತ್ತಿದೆ. ಕಥಿರ್ ಸೆಲ್ವಿ ತಮಿಳುನಾಡಿನ ಕಡಲೂರು ಜಿಲ್ಲೆಯ ವಜಕ್ಕೊಲೈ ಗ್ರಾಮದ ರೈತನ ಮಗಳು. ಆರ್ಥಿಕವಾಗಿ ಬಲವಾದ ಹಿನ್ನೆಲೆಯಿಲ್ಲದಿದ್ದರೂ, ಸರ್ಕಾರಿ ಸೇವೆಯ ಮೂಲಕ ಜನರಿಗೆ ನೆರವಾಗಬೇಕು ಎಂಬ ಕನಸು ಅವಳ ಮನಸ್ಸಿನಲ್ಲಿ ಮೂಡಿತ್ತು. 2019ರಲ್ಲಿ ಪದವಿ ಪೂರ್ಣಗೊಳಿಸಿದ ತಕ್ಷಣವೇ, ಆ ಕನಸನ್ನು ಸಾಕಾರಗೊಳಿಸಲು ಪೂರಕವಾದ ದಾರಿಯನ್ನು ಆರಿಸಿಕೊಂಡಳು.
ಆದರೆ ಆರಂಭದಲ್ಲಿ ಅಡೆತಡೆಗಳೇ ಹೆಚ್ಚು. ಮೊದಲ ಬಾರಿಗೆ TNPSC ಗ್ರೂಪ್-2 ಪರೀಕ್ಷೆ ಬರೆದಾಗ ಅವಳು ಅನುತ್ತೀರ್ಣಳಾದಳು. ಬಹುತೇಕರು ಇಲ್ಲಿ ಕೈಬಿಡುತ್ತಿದ್ದರು, ಆದರೆ ಕಥಿರ್ ಸೆಲ್ವಿ ಸೋಲನ್ನು ಪಾಠವನ್ನಾಗಿ ಮಾಡಿಕೊಂಡಳು. ಅಧ್ಯಯನ ಶೈಲಿಯನ್ನು ಬದಲಾಯಿಸಿ, ಸಮಯದ ಶಿಸ್ತನ್ನು ಬೆಳೆಸಿ, ಕ್ರಮಬದ್ಧವಾದ ಯೋಜನೆ ರೂಪಿಸಿ ಮತ್ತೆ ಸಿದ್ಧತೆಯತ್ತ ಮುಂದಾದಳು.
ಕಥಿರ್ ಸೆಲ್ವಿಯ ಹೋರಾಟದಲ್ಲಿ ಅವಳ ಪೋಷಕರು ಅವಳ ದೊಡ್ಡ ಬೆಂಬಲಿಗರು. ಕೃಷಿಯಿಂದ ಬಂದ ಆದಾಯವೇ ಮನೆಯ ಆದಾರವಾಗಿದ್ದರೂ, ಅದರಲ್ಲಿ ಭಾಗವೊಂದನ್ನು ಅವಳ ಶಿಕ್ಷಣಕ್ಕೆ ಮೀಸಲಿಟ್ಟು, ಯಾವತ್ತೂ ಅವಳ ಕನಸುಗಳಿಗೆ ಬೆಂಬಲ ನೀಡಿದರು. “ನನ್ನ ಯಶಸ್ಸಿನ ಹಿಂದೆ ನನ್ನ ಪೋಷಕರ ತ್ಯಾಗ ಮತ್ತು ಪ್ರೋತ್ಸಾಹವಿದೆ” ಎಂದು ಕಥಿರ್ ಸೆಲ್ವಿ ಹೆಮ್ಮೆಪಡುವರು.
2024ರ ಏಪ್ರಿಲ್ನಲ್ಲಿ ಫಲಿತಾಂಶ ಪ್ರಕಟವಾದಾಗ, ಕಥಿರ್ ಸೆಲ್ವಿ ಇಡೀ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. 1.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಅವಳ ಪರಿಶ್ರಮವೇ ಅವಳನ್ನು ರಾಜ್ಯದ ಟಾಪರ್ ಮಾಡಿತು. ಕೇವಲ ಉತ್ತೀರ್ಣರಾಗುವುದೇ ಸಾಧನೆ ಆಗಿದ್ದರೂ, ಮೊದಲ ಸ್ಥಾನ ಪಡೆದು ಎಲ್ಲರಿಗೂ ಮಾದರಿಯಾದಳು.
ಅವಳ ಜಯಕ್ಕೆ ಗ್ರಾಮದಲ್ಲೇ ಸಂಭ್ರಮದ ಮೆರವಣಿಗೆ ನಡೆಯಿತು. ಜನರು ಹಾರಗಳಿಂದ ಸ್ವಾಗತಿಸಿ, ಸಿಹಿ ಹಂಚಿಕೊಂಡರು. ಕೇವಲ ವಜಕ್ಕೊಲೈ ಗ್ರಾಮವಷ್ಟೇ ಅಲ್ಲ, ಇಡೀ ತಮಿಳುನಾಡು ಹೆಮ್ಮೆಪಡುವಂತಾಯಿತು.
ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿ ಅವರು ಕಥಿರ್ ಸೆಲ್ವಿಯನ್ನು ಉಪ ಕಲೆಕ್ಟರ್ ಆಗಿ ನೇಮಿಸಿದ್ದು, ಇದು ಅವಳ ಹೋರಾಟಕ್ಕೆ ನಿಜವಾದ ಮನ್ನಣೆ. ಇಂದಿನಿಂದ ಅವಳ ಸರ್ಕಾರಿ ಸೇವಾ ಪಯಣ ಪ್ರಾರಂಭವಾಗುತ್ತಿದೆ.