ರೋಹಿತ್ ಚಕ್ರತೀರ್ಥ ಶೈಕ್ಷಣಿಕ ಅರ್ಹತೆ ಬಹಿರಂಗ, ಸಚಿವ ನಾಗೇಶ್ ಸುಳ್ಳು ಹೇಳಿದ್ರಾ?

By Suvarna NewsFirst Published May 26, 2022, 9:08 PM IST
Highlights

* ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ
* ರೋಹಿತ್ ಚಕ್ರತೀರ್ಥರವರ  ಶೈಕ್ಷಣಿಕ ಅರ್ಹತೆ ಬಹಿರಂಗ
* ಶಿಕ್ಷಣ ಸಚಿವ ಬಿಸಿ ನಾಗೇಶ್ ಸುಳ್ಳು ಹೇಳಿದ್ರಾ?

ಬೆಂಗಳೂರು, (ಮೇ.26): ಕರ್ನಾಟಕದಲ್ಲಿ ಪಠ್ಯ ಪರಿಷ್ಕರಣೆ ವಿವಾದ ತಾರಕಕ್ಕೇರಿದೆ. ಇದರ ಮಧ್ಯೆ ಪಠ್ಯ ಪರಿಷ್ಕರಣೆ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಬಿಸಿ-ಬಿಸಿ ಚರ್ಚೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ಅವರು ತಮ್ಮ ಶೈಕ್ಷಣಿಕ ಅರ್ಹತೆಯನ್ನು ಬಹಿರಂಗಪಡಿಸಿದ್ದು, ನಾನು ಐಐಟಿ, ಸಿಇಟಿಗೆ ಪ್ರೊಫೆಸರ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗಾದ್ರೆ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್ ಸುಳ್ಳು ಹೇಳಿದ್ರಾ ಎನ್ನುವ ಅನುಮಾನಗಳು ಸಹಜವಾಗಿಯೇ ಉದ್ಭವಿಸಿವೆ.

ರೋಹಿತ್ ಚಕ್ರತೀರ್ಥರ ಅರ್ಹತೆ ಇಲ್ಲಿದೆ
ರೋಹಿತ್ ಚಕ್ರತೀರ್ಥರವರ ಅರ್ಹತೆ ಬಗ್ಗೆ ವಿವಾದ ಎದ್ದಿರುವ ಹಿನ್ನೆಲೆಯಲ್ಲಿ ಅವರು ತಮ್ಮ ವಿದ್ಯಾರ್ಹತೆಯ ಕುರಿತು ಟಿಪ್ಪಣಿಯೊಂದನ್ನು ಬಿಡುಗಡೆ ಮಾಡಿದ್ದು, ಅವರು ತಮ್ಮ ಸಾಧನೆ, ಪಡೆದ ಪದವಿ, ಶೈಕ್ಷಣಿಕ ಅರ್ಹತೆಯನ್ನು (Education Qualification) ಹೇಳಿಕೊಂಡಿದ್ದಾರೆ.

ಪಠ್ಯ ಪರಿಷ್ಕರಣೆಗೆ ಸಾಹಿತಿಗಳ ವಿರೋಧ, ಹಿಂದಿನ ಪಠ್ಯವನ್ನೇ ಮುಂದುವರೆಸಲು ಆಗ್ರಹ

ರೋಹಿತ್ ಚಕ್ರತೀರ್ಥ ಅವರು ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ 4 ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿದ್ದಾರೆ. ಹಲವು ಪತ್ರಿಕೆಗಳಲ್ಲಿ ಈಗಾಗಲೇ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಈವರೆಗೆ 35 ಪುಸ್ತಕಗಳು ಪ್ರಕಟಣೆಗೊಂಡಿವೆ.

ಬರವಣಿಗೆಯಿಂದ ಬಿಡುವು ಸಿಕ್ಕಾಗ ಪ್ರವಾಸಕ್ಕೆ ತೆರಳುವ ಹವ್ಯಾಸ ರೂಢಿಸಿಕೊಂಡಿರುವ ರೋಹಿತ್ ಚಕ್ರತೀರ್ಥ, ಐಐಟಿ, ಸಿಇಟಿ, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುತ್ತಾರೆ. ಹಲವು ಕಾಲೇಜುಗಳಲ್ಲಿ ಗಣಿತ ವಿಷಯ ಬೋಧಿಸಿದ್ದಾರೆ. ಸೂತ್ರ ಎಂಬ ವಿಜ್ಞಾನ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ರೋಹಿತ್ ಚಕ್ರತೀರ್ಥ, ಐಐಟಿ, ಸಿಇಟಿ ಪ್ರೊಫೆಸರ್ ಎಂದು ಸಚಿವರು ಮಾತನಾಡುವ ಬರದಲ್ಲಿ ಹೇಳಿರಬಹುದು. ನಾನು ಐಐಟಿ ಹಾಗು ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ತಯಾರು ಮಾಡಿದ್ದೇನೆ. ನಾನು ಐಐಟಿ ಹಾಗೂ ಸಿಇಟಿ ಪ್ರೋಪೆಷರ್ ಎಂಬುದನ್ನ ನಿರಾಕರಣೆ ಮಾಡುತ್ತೀನಿ. ಐಐಟಿ ಹಾಗೂ ಸಿಇಟಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುತ್ತಿದ್ದೇನೆ ಎಂದು ತಿಳಿಸಿದರು.

Rohith Chakrathirtha: ಮಕ್ಕಳ ಪಠ್ಯಪುಸ್ತಕದಲ್ಲಿ ಕೇಸರಿ ಕಲರ್​? ಪರಿಷ್ಕರಣೆ ಮಾಡಿದವರೇ ಪಶ್ನೆಗೆ ಉತ್ತರಿಸ್ತಾರೆ!

ರಾಷ್ಟ್ರಗೀತೆಗೆ ಬಗ್ಗೆ ಪ್ರತಿಕ್ರಿಯೆ
ರಾಷ್ಟ್ರಗೀತೆಗೆ ಅವಮಾನ ಆಗಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, “ಅದು ಹಳೆಯ ವಿವಾದ ಮತ್ತು ಮುಗಿದ ವಿವಾದ. ಅದು ನನ್ನ ಬರಹವಲ್ಲ. ಯಾರೊ ಬರೆದಿದ್ದನ್ನು ಫೇಸ್‌ಬುಕ್‌ಗೆ ಹಾಕಿದ್ದೆ. ನಾನು ಮಾಡಿದ ತಪ್ಪಿಗೆ ಸಮರ್ಥನೆ ಮಾಡಿಕೊಂಡಿಲ್ಲ. ತಪ್ಪಾಗಿರಬಹುದು. ಕುವೆಂಪುರವರಿಗೆ ಅವಮಾನ ಮಾಡುವ ಉದ್ದೇಶ ನನಗಿಲ್ಲ ಎಂದು ರೋಹಿತ್ ಚಕ್ರತೀರ್ಥ ಹೇಳಿದ್ದಾರೆ.

ಕರವೇ ನಾರಾಯಣ ಗೌಡ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ರೋಹಿತ್ ಚಕ್ರತೀರ್ಥ, ಸಮಿತಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿದ್ದೇನೆ ಹೊರತು, ನಾನು ವಯಕ್ತಿಕವಾಗಿ ಕೆಲಸ ಮಾಡಿಲ್ಲ. ನನ್ನ ಆಲೋಚನೆಗಳು ಕೊಳಕಾಗಿದೆತೋ, ಇಲ್ಲವೋ ಅಂತ ಜನರಿಗೆ ಗೊತ್ತು. ಬರಹಗಳ ಮೂಲಕ ಹೇಳಿರುವ ವಿಚಾರ ಜನರಿಗೆ ತಿಳಿದಿದೆ. ನನ್ನ ಮಾತಿನಲ್ಲಿ, ಬರಹದಲ್ಲಿ ದೋಷಗಳಿದ್ದರೆ ಪರಸ್ಪರ ಚರ್ಚೆಗೆ ನಾನು ಸಿದ್ಧ. ತಪ್ಪು ಕಲ್ಪನೆಗಳು ಬರುವುದು ಸಹಜ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ನಾನು ಅನೇಕ ಕನ್ನಡದ ಕೆಲಸಗಳನ್ನು ಮಾಡಿದ್ದೇನೆ. ನನಗೆ ವೈಯಕ್ತಿಕವಾಗಿ ಅವರ ಜತೆ ಏನು ಶತ್ರು ತತ್ವ ಇಲ್ಲ. ನನಗೆ ಅವರ ಹೋರಾಟದ ಬಗ್ಗೆ ಆಕ್ಷೇಪ ಇದೆ. ಹೋರಾಟದ ರೀತಿಯ ದಾಟಿಯ ಬಗ್ಗೆ ನನ್ನ ವಿರೋಧ ಇದೆ ಎಂದರು.

ಸಚಿವ ನಾಗೇಶ್ ಹೇಳಿದ್ದೇನು?
ಪಠ್ಯ ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಲು ರೋಹಿತ್ ಚಕ್ರತೀರ್ಥರಿಗಿರುವ ಅರ್ಹತೆಯೇನು ಎಂಬ ಪ್ರಶ್ನೆಗೆ ಶಿಕ್ಷಣ ಸಚಿವ ನಾಗೇಶ್‌ರವರು ಶಿಕ್ಷಣ ತಜ್ಞ ಎನ್ನುವುದಕ್ಕೆ ಎಲ್ಲಿಯಾದರೂ ಪ್ರಮಾಣ ಪತ್ರ ಇದೆಯಾ? ರೋಹಿತ್ ಚಕ್ರತೀರ್ಥ ಅವರ ಹಿನ್ನೆಲೆಯನ್ನು ಪ್ರಶ್ನೆ ಮಾಡುತ್ತಿರುವವರು ಅವರ ಹಿನ್ನೆಲೆ ಹೇಳಲಿ ನೋಡೋಣ. ಚಕ್ರತೀರ್ಥ ಈ ಹಿಂದೆ ಐಐಟಿ ಮತ್ತು ಸಿಇಟಿ ಪ್ರೊಫೆಸರ್ ಎಂಬುದನ್ನು ಮರೆಯಬಾರದು ಎಂದು ರೋಹಿತ್‌ ಚಕ್ರತೀರ್ಥ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು.
 

click me!