Ballari News: ಉದ್ಘಾಟನೆ ಕಾಣದ ವಿದ್ಯಾರ್ಥಿನಿಯರ ವಸತಿ ನಿಲಯ

By Kannadaprabha NewsFirst Published Dec 3, 2022, 1:05 PM IST
Highlights

ನಿರ್ಮಾಣಗೊಂಡು 10 ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯ ಇದ್ದೂ ಇಲ್ಲದಂತಾಗಿದೆ.

ಬಿ.ಎಚ್‌.ಎಂ. ಅಮರನಾಥಶಾಸ್ತ್ರಿ

 ಕಂಪ್ಲಿ (ಡಿ.3) : ನಿರ್ಮಾಣಗೊಂಡು 10 ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿನಿಯರ ವಸತಿ ನಿಲಯ ಇದ್ದೂ ಇಲ್ಲದಂತಾಗಿದೆ. ತಾಲೂಕಿನ ನಂ. ಮುದ್ದಾಪುರ ಗ್ರಾಮದ ಬಳಿ 2017-18ನೇ ಸಾಲಿನಲ್ಲಿ ಸುಮಾರು .2 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣವಾಗಿದೆ. ಇದನ್ನು ಫೆ. 3, 2022ರಂದು ಕಾಲೇಜಿನ ಅಧೀನಕ್ಕೆ ನೀಡಲಾಗಿದ್ದು, ಇಂದಿಗೆ ಕಟ್ಟಡ ನಿರ್ಮಾಣಗೊಂಡು 10 ತಿಂಗಳು ಕಳೆದಿವೆ. ಇದು 20 ಸುಸರ್ಜಿತ ಕೋಣೆಗಳನ್ನು ಹೊಂದಿದ್ದು, ಅವೆಲ್ಲ ಧೂಳು ಹಿಡಿವೆ. ಒಂದು ಕಿಟಕಿಯನ್ನು ಕಿಡಗೇಡಿಗಳು ಒಡೆದು ಹಾಕಿದ್ದಾರೆ. ಆವರಣವೆಲ್ಲ ಗಬ್ಬುನಾರುತ್ತಿದೆ.

ಚಿತ್ರದುರ್ಗದ ಕ್ರೀಡಾ ವಸತಿ ನಿಲಯದಲ್ಲಿ ವಾರ್ಡನ್ ಅಕ್ರಮ : ಮಕ್ಕಳಿಗೆ ಕಿರುಕುಳ ಆರೋಪ

ಪರಿವರ್ತಿಸಿ:

ಈ ಕಾಲೇಜಿನಲ್ಲಿ ಒಟ್ಟಾರೆ 428 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಇದರಲ್ಲಿ 60 ವಿದ್ಯಾರ್ಥಿನಿಯರಿದ್ದಾರೆ. ಕಾಲೇಜಿಗೆ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ರಕ್ಷಣಾ ಗೋಡೆ ಇಲ್ಲದಿರುವುರಿಂದ ವಿದ್ಯಾರ್ಥಿನಿಯರ ನಿಲಯವು ಉದ್ಘಾಟನೆಗೊಂಡರು ನೋಂದಣಿ ಸಿಗುವುದು ಕಡಿಮೆ. ಆದ ಕಾರಣ ಇದನ್ನು ಪುರುಷರ (ವಿದ್ಯಾರ್ಥಿಗಳ) ವಸತಿ ನಿಲಯವನ್ನಾಗಿಸಿದರೆ ಹೊರ ತಾಲೂಕು, ಜಿಲ್ಲೆಗಳಿಂದ ಕಾಲೇಜಿಗೆ ಆಗಮಿಸುವಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಬಸ್‌ ನಿಲುಗಡೆಗಾಗಿ ಮನವಿ:

ಪಟ್ಟಣದಿಂದ ಕಾಲೇಜಿಗೆ 4 ಕಿಮೀ ದೂರವಾಗುತ್ತದೆ. ಸಿರುಗುಪ್ಪ, ಸಂಡೂರು, ಬಳ್ಳಾರಿ, ಕುರುಗೋಡು ಸೇರಿದಂತೆ ಇತರೆಡೆಗಳಿಂದ ಆಗಮಿಸುವಂತಹ ವಿದ್ಯಾಥಿಗಳು ಆಟೋ ವೆಚ್ಚ ಭರಿಸಲಾಗದೇ ಬಸ್‌ ನಿಲ್ದಾಣದಿಂದ ಕಾಲೇಜಿಗೆ ನಿತ್ಯ ನಡೆದುಕೊಂಡೇ ಹೋಗುತ್ತಿದ್ದೇವೆ. ಅಲ್ಲದೇ ಸರಿಯಾದ ಸಮಯಕ್ಕೆ ನಮಗೆ ಕಾಲೇಜಿಗೆ ತಲುಪಲಾಗದೇ ನಾವು ತರಗತಿಗಳಿಗೆ ಹಾಜರಾಗಲು ಸಮಸ್ಯೆಯಾಗಿದೆ. ನಿತ್ಯ ಪ್ರತ್ಯೇಕವಾಗಿ ಮುದ್ದಾಪುರ ಮಾರ್ಗವಾಗಿ ಕಣ್ವಿತಿಮ್ಮಲ್ಲಾಪುರಕ್ಕೆ ತೆರಳುವ ಬಸ್‌ ಯಲ್ಲಮ್ಮ ಕ್ಯಾಂಪ್‌ ಮಾರ್ಗವಾಗಿ ಹೊಸಪೇಟೆಯ ಮುಖ್ಯ ರಸ್ತೆಯಿಂದ ತೆರಳಿದರೆ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ ಕಾಲೇಜು ಮುಂಭಾಗದಿಂದ ನಿತ್ಯ ನೂರಾರು ಬಸ್‌ಗಳು ಹೊಸಪೇಟೆಗೆ ಓಡಾಡುತ್ತಿದ್ದು, ಕಾಲೇಜು ಬಳಿ ಸ್ಟಾಪ್‌ ನೀಡಿದರೆ ಅನುಕೂಲವಾಗಲಿದೆ. ಈ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ.

Raichur: ಹಾಸ್ಟೆಲ್‌ಗಳಿಗೆ ಫ್ರೀ ವೈಫೈ ಸೌಲಭ್ಯ: ಬಡ ವಿದ್ಯಾರ್ಥಿಗಳ ನೆರವಿಗೆ ಬಂದ RDA

ವೆಲ್‌ಫೇರ್‌ ಅಥವಾ ಬಿಸಿಎಂ ಆಫೀಸ್‌ಗೆ ವಿದ್ಯಾರ್ಥಿನಿಯರ ವಸತಿ ನಿಲಯ ವರ್ಗಾವಣೆ ಮಾಡಿ ಉದ್ಘಾಟನೆಗೊಳಿಸುವಂತೆ ಮೇಲಾಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಲಾಗಿದೆ. ಅಲ್ಲದೇ ಬಸ್‌ ನಿಲುಗಡೆಗೊಳಿಸುವ ವಿಚಾರವಾಗಿ ಹಲವು ಬಾರಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಅಮರೇಶ ಎಂ., ಪ್ರಾಚಾರ್ಯರು ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು

click me!