Rahul Kumar Das Neet: ಅಸ್ಸಾಂ ಚಹಾ ಮಾರಾಟಗಾರ ನೀಟ್ ಪಾಸ್ ಮಾಡಿದ್ದು ನಕಲಿ!

By Suvarna NewsFirst Published Feb 12, 2022, 1:18 PM IST
Highlights

ಅಸ್ಸಾಂನ ಚಹಾ ಮಾರಾಟಗಾರ ರಾಹುಲ್ ಕುಮಾರ್ ದಾಸ್ ನೀಟ್‌ ಪಾಸ್ ಮಾಡಿ ದೆಹಲಿಯ ಪ್ರತಿಷ್ಠಿತ ಏಮ್ಸ್ ನಲ್ಲಿ ಪ್ರವೇಶ ಮಾಡಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ. 24 ವರ್ಷದ ಈ ಯುವಕ ನಕಲಿ ಪ್ರವೇಶ ಪತ್ರ ಸಿದ್ಧಪಡಿಸಿದ್ದಾನೆ ಎಂಬುದು ಈಗ ಬಹಿರಂಗವಾಗಿದೆ. 

ಗುವಾಹಟಿ(ಫೆ.12): ಅಸ್ಸಾಂನ ಚಹಾ ಮಾರಾಟಗಾರ (Assam tea seller) ರಾಹುಲ್ ಕುಮಾರ್ ದಾಸ್ (Rahul Kumar Das) ಅವರು ಕಷ್ಟಪಟ್ಟು ಓದಿ ತಮ್ಮ ಮೊದಲ ಪ್ರಯತ್ನದಲ್ಲಿ ನೀಟ್‌ (NEET) ಪಾಸ್ ಮಾಡಿ ದೆಹಲಿಯ ಪ್ರತಿಷ್ಠಿತ ಏಮ್ಸ್ (AIIMS Delhi) ನಲ್ಲಿ ಪ್ರವೇಶ ಮಾಡಿದ್ದಾರೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ ನಂತರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದಾಸ್ ಅವರ ಶಿಕ್ಷಣದ ವೆಚ್ಚವನ್ನು ತಮ್ಮ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು. ಅಲ್ಲದೆ ಅವರ ಸಂಪುಟದ ಸಚಿವರೊಬ್ಬರು ದಾಸ್ ಮನೆಗೆ ಭೇಟಿ ನೀಡಿ ಸನ್ಮಾನಿಸಿದ್ದರು. 

ಆದರೆ, ಅಸ್ಸಾಂನ ಬಜಾಲಿ ಜಿಲ್ಲೆಯ 24 ವರ್ಷದ ಈ ಯುವಕ ನಕಲಿ ಪ್ರವೇಶ ಪತ್ರ ಸಿದ್ಧಪಡಿಸಿದ್ದಾನೆ ಎಂಬುದು ಈಗ ಬಹಿರಂಗವಾಗಿದೆ. ಈ ಸಂಬಂಧ ಯಾವುದೇ ದೂರು ಬಂದಿಲ್ಲ ಎಂದಿರುವ ಜಿಲ್ಲಾ ಪೊಲೀಸರು, ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Latest Videos

ನೀಟ್ ಪರೀಕ್ಷೆಗೆ ಹಾಜರಾಗಿದ್ದ ರಾಜ್ಯದ ವಿದ್ಯಾರ್ಥಿಗಳ ಗುಂಪೊಂದು ಮೊದಲು ರಾಹುಲ್ ಹೇಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಹಲವು ಮೂಲಗಳಿಂದ ಪರಿಶೀಲನೆ ನಡೆಸಿದಾಗ ದಾಸ್ ಹರಿಯಾಣದ ವಿದ್ಯಾರ್ಥಿಯೊಬ್ಬನ ದಾಖಲೆಗಳನ್ನು ನಕಲು ಮಾಡಿರುವುದು ಬೆಳಕಿಗೆ ಬಂದಿದೆ.

KEA Assistant Professor Exam Date 2022: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ

ರಾಹುಲ್ ಕುಮಾರ್ ದಾಸ್ ತನ್ನ ನೀಟ್ ಪ್ರವೇಶ ಕಾರ್ಡ್ ನಲ್ಲಿ ರೋಲ್ ನಂಬರ್ ಅನ್ನು 2303001114 ಎಂದು ತೋರಿಸಿದ್ದಾರೆ. ಆದರೆ ಪರಿಶೀಲನೆಯ ಸಮಯದಲ್ಲಿ ಇದು AIR 11656 ರ್ಯಾಂಕ್ ಪಡೆದ ಹರಿಯಾಣದ ಅಭ್ಯರ್ಥಿಯೆಂದು ತಿಳಿದು ಬಂದಿದೆ.

ಕೆಲವು ವರ್ಷಗಳ ಹಿಂದೆ ರಾಹುಲ್ ತನ್ನ ತಂದೆಯನ್ನು ಕಳೆದುಕೊಂಡಿದ್ದು, ಜೀವನೋಪಾಯಕ್ಕಾಗಿ ಅವರ ತಾಯಿ ಚಹಾ ಅಂಗಡಿ ನಡೆಸುತ್ತಿದ್ದರು. ರಾಹುಲ್ ಸಹ ತಾಯಿ ಜತೆ ಚಹಾ ಮಾರಾಟ ಮಾಡುತ್ತಿದ್ದರು.

ರಾಹುಲ್ ಕುಮಾರ್ ದಾಸ್ ನೀಟ್ ಫಲಿತಾಂಶ ನಕಲಿ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದ ನಂತರ ಜಮೀನು ಮಾಲೀಕರು ಸ್ಥಳ ಖಾಲಿ ಮಾಡುವಂತೆ ಅವರ ತಾಯಿಗೆ ಸೂಚಿಸಿದ್ದಾರೆ. ಹೀಗಾಗಿ ಅಂಗಡಿ ಖಾಲಿ ಮಾಡಿರುವ ರಾಹುಲ್, ಅವರ ತಾಯಿ ಮತ್ತು ಅವರ ಕಿರಿಯ ಸಹೋದರ ಈಗ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಕಾಲೇಜುಗಳಲ್ಲಿ ಮೊಬೈಲ್ ನಿಷೇಧ ಸುಳ್ಳು ಸುದ್ದಿ, ಉನ್ನತ ಶಿಕ್ಷಣ ಸಚಿವರ ಸ್ಪಷ್ಟನೆ

ನೀಟ್ ವಿಳಂಬ , ದಂಡ ರದ್ದು ಪಡಿಸಿದ ಕರ್ನಾಟಕ: ನೀಟ್ ಪರೀಕ್ಷೆಯಲ್ಲಿ (NEET Exam) ಆಗಿರುವ ವಿಳಂಬದಿಂದಾಗಿ, ಈಗಾಗಲೇ ಎಂಜಿನಿಯರಿಂಗ್ ಸೀಟು ಪಡೆದುಕೊಂಡು ಈಗ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ರದ್ದುಪಡಿಸಲಾಗಿದೆ. ಹಾಗೆಯೇ ಈ ವರ್ಷ ವಿದ್ಯಾರ್ಥಿಗಳಿಂದ ಸಂಗ್ರಹ ಮಾಡಿದ್ದ ಶುಲ್ಕವನ್ನೂ ಹಿಂದಿರುಗಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (Dr CN Ashwath Narayan) ತಿಳಿಸಿದ್ದಾರೆ. ಈ ವಿನಾಯಿತಿ ಈ ವರ್ಷಕ್ಕೆ ಮಾತ್ರ‌ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸೀಟು ಹಂಚಿಕೆ ಒಟ್ಟಿಗೇ ನಡೆಯುತ್ತಿತ್ತು. ಆದರೆ ಈ ವರ್ಷ ನೀಟ್ ಪರೀಕ್ಷಾ ವಿಚಾರ ಕೋರ್ಟ್ ಮೆಟ್ಟಿಲೇರಿದ್ದರಿಂದ ವೈದ್ಯಕೀಯ ಸೀಟು ಹಂಚಿಕೆ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ, ಅನಿಶ್ಚಿತ ಪರಿಸ್ಥಿತಿ ತಲೆದೋರಿದೆ. ಇದರಿಂದಾಗಿ, ಈಗಾಗಲೇ ಎಂಜಿನಿಯರಿಂಗ್ ಪ್ರವೇಶಾತಿ ಪಡೆದಿರುವವರಿಗೆ ಈಗ ವೈದ್ಯಕೀಯ ಸೀಟು ಸಿಕ್ಕಿದ್ದರೆ, ಆಸಕ್ತರು ಅಲ್ಲಿಗೆ ಹೋಗಬಹುದು. ಅದಕ್ಕೆ ಯಾವುದೇ ದಂಡ ವಸೂಲಿ ಮಾಡುವುದಿಲ್ಲ. ಹಾಗೆಯೇ ಈ ವರ್ಷ ಕಟ್ಟಿದ್ದ ಶುಲ್ಕವನ್ನೂ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ. ಬದಲಿಗೆ ವಿದ್ಯಾರ್ಥಿಗಳಿಗೆ ಹಿಂದಿರುಗಿಸಲಾಗುವುದು ಎಂದಿದ್ದಾರೆ.

ಒಂದು ಕೋರ್ಸ್‌ಗೆ ಪ್ರವೇಶ ಪಡೆದ ನಂತರ ಆ ವಿದ್ಯಾರ್ಥಿ ಆ ಕೋರ್ಸ್‌ನ್ನು ಬಿಟ್ಟು ಬೇರೆ ಕೋರ್ಸ್‌ಗೆ ಪ್ರವೇಶ ಪಡೆದರೆ ಶುಲ್ಕದ 5 ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇತ್ತು. ಹಾಗೆಯೇ ಈ ವರ್ಷ ಕಟ್ಟಿದ್ದ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿತ್ತು. ಈ ಬಾರಿ ಇದಕ್ಕೆಲ್ಲ ಸರಕಾರ ವಿನಾಯ್ತಿ ನೀಡಿದೆ.

click me!