ಶೇ.15ಕ್ಕಿಂತ ಶುಲ್ಕ ಹೆಚ್ಚಿಸುವ ಖಾಸಗಿ ಶಾಲೆ ವಿರುದ್ಧ ಕ್ರಮ: ಸಂಘಟನೆಗಳ ನಿರ್ಧಾರ

By Kannadaprabha NewsFirst Published Apr 7, 2023, 9:28 AM IST
Highlights

ರಾಜ್ಯದ ಯಾವುದೇ ಖಾಸಗಿ ಶಾಲೆಗಳು ಪ್ರವೇಶ ಶುಲ್ಕವನ್ನು ಗರಿಷ್ಠ ಶೇ.15ಕ್ಕೂ ಮೀರಿ ಹೆಚ್ಚಿಸಿದರೆ ಪೋಷಕರು ದನಿ ಎತ್ತಬಹುದು. ಮನಸ್ಸೋ ಇಚ್ಛೆ ಶುಲ್ಕ ಹೆಚ್ಚಳದ ಬಗ್ಗೆ ಪುರಾವೆಗಳನ್ನು ಪೋಷಕರು ನೀಡಿದರೆ ನಾವೇ ಅಂತಹ ಶಾಲೆಗಳ ವಿರುದ್ಧ ದೂರು ದಾಖಲಿಸುತ್ತೇವೆ.

ಬೆಂಗಳೂರು (ಏ.07): ‘ರಾಜ್ಯದ ಯಾವುದೇ ಖಾಸಗಿ ಶಾಲೆಗಳು ಪ್ರವೇಶ ಶುಲ್ಕವನ್ನು ಗರಿಷ್ಠ ಶೇ.15ಕ್ಕೂ ಮೀರಿ ಹೆಚ್ಚಿಸಿದರೆ ಪೋಷಕರು ದನಿ ಎತ್ತಬಹುದು. ಮನಸ್ಸೋ ಇಚ್ಛೆ ಶುಲ್ಕ ಹೆಚ್ಚಳದ ಬಗ್ಗೆ ಪುರಾವೆಗಳನ್ನು ಪೋಷಕರು ನೀಡಿದರೆ ನಾವೇ ಅಂತಹ ಶಾಲೆಗಳ ವಿರುದ್ಧ ದೂರು ದಾಖಲಿಸುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಶಿಕ್ಷಣ ಇಲಾಖೆ ಆ ಶಾಲೆಗಳ ವಿರುದ್ಧ ಮುಲಾಜಿಲ್ಲದೆ ಕಾನೂನಾತ್ಮಕ ಕ್ರಮ ಜರುಗಿಸಬೇಕು’ ಎಂದು ವಿವಿಧ ಖಾಸಗಿ ಶಾಲಾ ಸಂಘಟನೆಗಳು ಆಗ್ರಹಿಸಿವೆ.

ಶುಲ್ಕ ಹೆಚ್ಚಳಕ್ಕೆ ಇರುವ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಮನಬಂದಂತೆ ಶುಲ್ಕ ಹೆಚ್ಚಿಸಿ ಪೋಷಕರಿಗೆ ಹೊರೆಯಾಗುತ್ತಿರುವ ಕೆಲ ಖಾಸಗಿ ಶಾಲೆಗಳ ವಿರುದ್ಧ ರಾಜ್ಯದ ಪ್ರಮುಖ ಅನುದಾನರಹಿತ ಖಾಸಗಿ ಶಾಲಾ ಸಂಘಟನೆಗಳಾದ ‘ಕ್ಯಾಮ್ಸ್‌’, ‘ಕುಸ್ಮಾ’, ‘ಮಿಸ್ಕಾ’ ಮತ್ತು ‘ಮಾಸ್‌’ ಸೇರಿದಂತೆ ಇನ್ನಿತರೆ 12 ಸಂಘಟನೆಗಳು ಒಮ್ಮತದಿಂದ ಈ ನಿರ್ಧಾರ ಕೈಗೊಂಡಿವೆ. ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ, ಬೋಧಕ, ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿಯಡಿ (ಕೆಪಿಎಂಟಿಸಿಸಿ) ಸಂಘಟನೆಗಳ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ಹಂಚಿಕೆ: ಸಿಎಂ ಬೊಮ್ಮಾಯಿ

ಸಭೆಯ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿಯೂ ಆದ ಕೆಪಿಎಂಟಿಸಿಸಿ ಸಂಯೋಜಕ ಡಿ.ಶಶಿಕುಮಾರ್‌, ಉಪಾಧ್ಯಕ್ಷ ಎಂ.ಶ್ರೀನಿವಾಸ್‌, ಕುಸ್ಮಾ ಅಧ್ಯಕ್ಷ ಹಾಗೂ ಪದಾಧಿಕಾರಿಗಳಾದ ಸತ್ಯಮೂರ್ತಿ, ಸುಪ್ರಿತ್‌, ಗಾಯತ್ರಿ ರೆಡ್ಡಿ ಮತ್ತಿತರರು, ಖಾಸಗಿ ಶಾಲೆಗಳು ವಿವಿಧ ಮಾನದಂಡಗಳ ಮೇಲೆ ವರ್ಷದಿಂದ ವರ್ಷಕ್ಕೆ ಶೇ.10ರಿಂದ 15ರಷ್ಟುಶುಲ್ಕ ಹೆಚ್ಚಳ ಮಾಡುವುದು ಸಮಂಜಸವಾಗಿದೆ. ಆದರೆ, ಕೆಲ ಖಾಸಗಿ ಶಾಲೆಗಳು ಶೇ.40, 50ರಷ್ಟುಶುಲ್ಕ ಹೆಚ್ಚಳ ಮಾಡಿವೆ. ಇಂತಹ ಶಾಲೆಗಳ ಸಂಖ್ಯೆ ಕಡಿಮೆ ಇದ್ದರೂ ಇದರಿಂದ ಇಡೀ ಖಾಸಗಿ ಶಾಲೆಗಳ ಸಮೂಹಕ್ಕೆ ಕೆಟ್ಟಹೆಸರು ಬರುತ್ತಿದೆ.

ಹಾಗಾಗಿ ಇಂತಹ ಶಾಲೆಗಳಿಗೆ ಪೋಷಕರಿಗೆ ಹೊರೆಯಾಗದಂತೆ ಕನಿಷ್ಠ ಶೇ.10ರಿಂದ ಗರಿಷ್ಠ ಶೇ.15ರಷ್ಟುಮಾತ್ರ ಶುಲ್ಕ ಹೆಚ್ಚಿಸಿಕೊಳ್ಳುವಂತೆ ಮನವಿ ಮಾಡುತ್ತೇವೆ ಎಂದರು. ಒಂದು ವೇಳೆ ಯಾವುದೇ ಶಾಲೆಗಳು ಶೇ.15ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸಿದರೆ ಆ ಶಾಲೆಯ ಪೋಷಕರು ನಮ್ಮ ಸಂಘಟನೆಗಳಿಗೆ ಪುರಾವೆಗಳ ಸಹಿತ ದೂರು ನೀಡಬಹುದು. ಅವರು ನೀಡಿದ ಮಾಹಿತಿ ಆಧರಿಸಿ ಶಿಕ್ಷಣ ಇಲಾಖೆಗೆ ನಮ್ಮ ಸಂಘಟನೆಗಳ ಮೂಲಕವೇ ಆ ಶಾಲೆಗಳ ವಿರುದ್ಧ ದೂರು ದಾಖಲಿಸುತ್ತೇವೆ. ಆ ದೂರುಗಳನ್ನು ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಾನೂನಾತ್ಮಕವಾಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸಲಿ ಎಂದು ಹೇಳಿದರು.

ಗೋವಿಂದನ ನಾಮಸ್ಮರಣೆಯೊಂದಿಗೆ ಕರಗ ವೈಭವ: ಭಕ್ತರ ಸಮ್ಮುಖದಲ್ಲಿ ಶಕ್ತ್ಯುತ್ಸವ ಸಂಭ್ರಮ

ಪ್ರವೇಶ ಶುಲ್ಕ ಮಾತ್ರವಲ್ಲ, ಹೊಸ ದಾಖಲಾತಿ ಹೊರತುಪಡಿಸಿ ಪ್ರತಿ ವರ್ಷ ಡೊನೇಷನ್‌, ಕ್ಯಾಪಿಟೇಷನ್‌ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆಯುವಂತಿಲ್ಲ. ಇದಕ್ಕೆ ವಿರುದ್ಧವಾಗಿ ಶುಲ್ಕ ವಿಧಿಸುತ್ತಿದ್ದರೂ ನಾವು ಅದನ್ನು ಖಂಡಿಸುತ್ತೇವೆ. ಅಂತಹ ಶಾಲೆಗಳ ವಿರುದ್ದವೂ ಪೋಷಕರು ಸಾಕ್ಷಿ ನೀಡಿದರೆ ದೂರು ದಾಖಲಿಸಿ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು. ಅಲ್ಲದೆ, ಇದೇ ವೇಳೆ 2023-24ನೇ ಶೈಕ್ಷಣಿಕ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸುವ ಮುನ್ನ ಸರ್ಕಾರ ಅನಧಿಕೃತ ಖಾಸಗಿ ಶಾಲೆಗಳ ಪಟ್ಟಿಯನ್ನು ಪ್ರಕಟಿಸಬೇಕು. ಪೋಷಕರು ಕೂಡ ಅಂತಹ ಶಾಲೆಗಳ ಮಾಹಿತಿ ಪಡೆದು ಮಕ್ಕಳನ್ನು ಮಾನ್ಯತೆ ಇರುವ ಶಾಲೆಗಳಿಗೆ ಮಾತ್ರ ದಾಖಸಬೇಕು ಎಂದು ಮನವಿ ಮಾಡಿದರು.

click me!