ಹಾವೇರಿ: ನಿತ್ಯ 5 ಕಿಮೀ ನಡೆದು ಶಾಲೆ ತಲುಪುವ 300 ವಿದ್ಯಾರ್ಥಿಗಳು!

By Kannadaprabha NewsFirst Published Jul 9, 2023, 9:17 AM IST
Highlights

300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಳಿ, ಗಾಳಿ, ಬಿಸಿಲು ಎನ್ನದೆ ನಿತ್ಯ 5 ಕಿಲೋ ಮೀಟರ್‌ ಕ್ರಮಿಸಿಯೇ ಶಾಲೆ ತಲುಪಿ ಅಕ್ಷರಾಭ್ಯಾಸ ಮಾಡಿ ವಾಪಸ್‌ ಬರಬೇಕು. ಇಲ್ಲದಿದ್ದರೆ ಮನೆಯಲ್ಲಿಯೇ ಉಳಿದುಕೊಳ್ಳಬೇಕು!

ಶಿಗ್ಗಾಂವಿ (ಜು.9) : 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಳಿ, ಗಾಳಿ, ಬಿಸಿಲು ಎನ್ನದೆ ನಿತ್ಯ 5 ಕಿಲೋ ಮೀಟರ್‌ ಕ್ರಮಿಸಿಯೇ ಶಾಲೆ ತಲುಪಿ ಅಕ್ಷರಾಭ್ಯಾಸ ಮಾಡಿ ವಾಪಸ್‌ ಬರಬೇಕು. ಇಲ್ಲದಿದ್ದರೆ ಮನೆಯಲ್ಲಿಯೇ ಉಳಿದುಕೊಳ್ಳಬೇಕು!

ತಾಲೂಕಿನ ಕುನ್ನೂರಿನಲ್ಲಿ ಬಡ ಮಕ್ಕಳಿಗೆ ಅನುಕೂಲವಾಗಲಿ ಎಂದು ಮೌಲಾನಾ ಆಜಾದ್‌ ಮಾದರಿ ಶಾಲೆ(Maulana Azad Model School) ನಿರ್ಮಿಸಲಾಗಿದೆ. 6ರಿಂದ 10ನೇ ತರಗತಿಯಿದ್ದು ಕುನ್ನೂರು ಗ್ರಾಮದ ಸುತ್ತಲಿನ ಅಡವಿ ಸೋಮಾಪುರ, ತಡಸ, ದುಂಡಶಿ, ಶಿ. ಸೋಮಾಪುರ, ಹೊಸೂರು, ಯತ್ನಳ್ಳಿ ಸೇರಿದಂತೆ ಹಲವು ಗ್ರಾಮಗಳ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ.

ಇವರಿಗೆ ಗ್ರಾಮದ ಬಸ್‌ ನಿಲ್ದಾಣದ ವರೆಗೆ ಮಾತ್ರ ಬಸ್‌ ಸೌಲಭ್ಯವಿದೆ. ಇಲ್ಲಿಂದ ಶಾಲೆ 2.5 ಕಿಲೋ ಮೀಟರ್‌ ದೂರದಲ್ಲಿದೆ.

 

ಸೋರುವ ಶಾಲೆ: ಛತ್ರಿ ಹಿಡಿದೇ ಪಾಠ ಕೇಳುವ ವಿದ್ಯಾರ್ಥಿಗಳು!

ಶಿಕ್ಷಣ ಬಲು ದೂರ:

ಸರ್ಕಾರವೇನೋ ಸುಸಜ್ಜಿತವಾದ ಶಾಲಾ ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿದೆ. ಆದರೆ, ಶಾಲೆಗೆ ಮಕ್ಕಳು ಬರಲು ಪರದಾಡುತ್ತಿದ್ದಾರೆ. ಗ್ರಾಮದ ಮುಖ್ಯರಸ್ತೆಯಿಂದ ದೂರವಿರುವುದರಿಂದ ಯಾವುದೇ ಖಾಸಗಿ ವಾಹನಗಳು ಸಹ ಅಲ್ಲಿ ಸಂಚರಿಸುವುದಿಲ್ಲ. ಹೀಗಾಗಿ ಮಕ್ಕಳು ನಡೆದುಕೊಂಡು ಹೋಗಿಯೇ ಶಿಕ್ಷಣ ಪಡೆಯಬೇಕಾಗಿದೆ.

ವಿದ್ಯಾರ್ಥಿಗಳು ನಿತ್ಯ ನಡೆದುಕೊಂಡು ಬರುತ್ತಿರುವುದನ್ನು ನೋಡಿದ ಬಿಇಒ ಹಾಗೂ ಶಾಲೆಯ ಪ್ರಾಚಾರ್ಯರು ವಾಯವ್ಯ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಬೆಳಗ್ಗೆ ಹಾಗೂ ಸಂಜೆ ಶಾಲೆ ವರೆಗೆ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದಾರೆ. ಅಧಿಕಾರಿಗಳು ಸಹ ಮೇಲಾಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದು ಉತ್ತರ ನೀಡುತ್ತಿದ್ದಾರೆ ಹೊರತು ಕಾರ್ಯಗತ ಮಾಡುತ್ತಿಲ್ಲ. ಹಲವು ಬಾರಿ ಸಾರಿಗೆ ಅಧಿಕಾರಿಗಳು ಶಾಲೆಗೆ ಬಂದು ಹೋದರೂ ಬಸ್‌ ಬಿಡಲು ತಾಂತ್ರಿಕ ಕಾರಣ ನೀಡುತ್ತಿದ್ದಾರೆ.

ನೆನೆಯುವ ಮಕ್ಕಳು:

ನಾಲ್ಕೈದು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ನಿರಂತರವಾಗಿ ಸುರಿಯುವ ಮಳೆಯಲ್ಲಿಯೇ ಮಕ್ಕಳು ಶಾಲೆಗೆ ಬರುತ್ತಿದ್ದು ಮಳೆಯಲ್ಲಿ ನೆನೆದುಕೊಳ್ಳುತ್ತಿದ್ದಾರೆ. ಜತೆಗೆ ಖಾಸಗಿ ವಾಹನಗಳು ಹೋಗುವಾಗ ಅದರ ಕೆಸರು ಸಿಡಿದು ಮಕ್ಕಳ ಸಮವಸ್ತ್ರ ರಾಡಿಯಾಗುತ್ತಿದೆ.

ಶೀತ ವಾತಾವರಣವಿದ್ದು ಮಕ್ಕಳು ಹಸಿ ಬಟ್ಟೆಯಲ್ಲಿಯೇ ದಿನವೀಡಿ ಕೊಠಡಿಯಲ್ಲಿ ಕುಳಿತುಕೊಳ್ಳುತ್ತಿದ್ದಾರೆ. ಇದರಿಂದ ಅವರಿಗೆ ಶೀತ, ಜ್ವರ ಕಾಣಿಸಿಕೊಂಡು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ತಕ್ಷಣ ಸಾರಿಗೆ ಇಲಾಖೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಎಲ್ಲ ಪಾಲಕರು-ವಿದ್ಯಾರ್ಥಿಗಳು ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಕುನ್ನೂರಿನ ಅಂಜುಮನ್‌ ಸಮಿತಿಯ ಮಾಜಿ ಅಧ್ಯಕ್ಷ ಆಸ್ಪಕ್‌ಅಲಿ ಮತ್ತೆಖಾನ್‌ ಎಚ್ಚರಿಸಿದ್ದಾರೆ.

 

ಕುಡಿದ ಮತ್ತಿನಲ್ಲಿ ಯುವಕರ ಪುಂಡಾಟ; ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿಗಳ ಮೆಲೆ ಹಲ್ಲೆ!

ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟುಬಾರಿ ಶಾಲೆ ವರೆಗೆ ಬಸ್‌ ಬಿಡುವಂತೆ ಮನವಿ ಮಾಡಿದರೂ ಈ ವರೆಗೂ ಸ್ಪಂದಿಸಿಲ್ಲ. ಹೀಗಾಗಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.

ದಿನೇÍ,Ü ಪ್ರಾಚಾರ್ಯ ಮೋಲಾನಾ ಆಜಾದ್‌ ಮಾದರಿ ಶಾಲೆ

ಕಳೆದ ವಷÜರ್‍ ಸವಣೂರು ಡಿಪೋ ಮ್ಯಾನೇಜರ್‌ಗೆ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರಿಗೆ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗಿಹರಿಸಲಾಗುವುದು.

ಎಂ.ಬಿ. ಅಂಬಿಗೇರ ಬಿಇಒ

click me!