ಬಾಗಲಕೋಟೆ: ನೋಡ ಬನ್ನಿ ಹಳಿಂಗಳಿ ಸರ್ಕಾರಿ ಶಾಲೆ..!

By Kannadaprabha NewsFirst Published Jul 7, 2023, 9:30 PM IST
Highlights

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದುವುದರ ಜತೆಗೆ ಉತ್ತಮ ಸಾಧನೆ ಮಾಡುತ್ತ ಸಾಗಿದೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ರಬಕವಿ-ಬನಹಟ್ಟಿ(ಜು.07):  ಎಲ್ಲಿಯೂ ಸಲ್ಲದವರು ಸರ್ಕಾರಿ ಶಾಲೆಗಳಿಗೆ ಸಲ್ಲುತ್ತಾರೆಂಬ ಅಲಿಖಿತ ಜನಾಭಿಪ್ರಾಯವಿದೆ. ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವವರ ಸಂಖ್ಯೆಯೇ ಹೆಚ್ಚು. ಆದರೆ ಸರ್ಕಾರಿ ಶಾಲೆ ಎಂದರೆ ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಪ್ರತಿವರ್ಷ ಪ್ರಗತಿ ಸಾಧಿಸುತ್ತಿದೆ ಹಳಿಂಗಳಿ ಗ್ರಾಮದ ಸರ್ಕಾರಿ ಶಾಲೆ. ಹೌದು, ತಾಲೂಕಿನ ಹಳಿಂಗಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದುವುದರ ಜತೆಗೆ ಉತ್ತಮ ಸಾಧನೆ ಮಾಡುತ್ತ ಸಾಗಿದೆ.

ಎಲ್‌ಕೆಜೆ, ಯುಕೆಜಿ :

ಖಾಸಗಿ ಶಾಲೆಗಳ ದರ್ಬಾರ್‌ದಿಂದ ಸರ್ಕಾರಿ ಶಾಲೆಗಳು ನಿರೀಕ್ಷಿತ ಮಕ್ಕಳ ಸಂಖ್ಯೆ ಇಲ್ಲದೇ ಸೊರಗುತ್ತಿವೆ ಎಂದರೆ ತಪ್ಪಾಗಲಾರದು. ಇದಕ್ಕೆ ಪ್ರತಿಯಾಗಿ ಹಳಿಂಗಳಿ ಗ್ರಾಮದ ಸರ್ಕಾರಿ ಎಚ್‌ಪಿಎಸ್‌ ಶಾಲೆಯಲ್ಲಿ 2021-22ನೇ ಸಾಲಿನಿಂದ ಎಲ್‌ಕೆಜಿ ಹಾಗೂ ಯುಕೆಜಿ ಪ್ರಾರಂಭಿಸಲಾಗಿದೆ. ಇದರಿಂದ 1ನೇ ತರಗತಿಗೆ ಮಕ್ಕಳ ದಾಖಲಾತಿಗೆ ಸಹಕಾರಿಯಾಗಿದ್ದು, ಪ್ರಸಕ್ತ ಸಾಲಿಗೆ ಒಂದನೇ ತರಗತಿಗೆ 31 ಮಕ್ಕಳ ದಾಖಲಾತಿ ಆಗಿದೆ. ಎಲ್‌ಕೆಜಿ ಯುಕೆಜಿ ಹೇಳುವ ಅದೇ ಗ್ರಾಮದ ಶಿಕ್ಷಕಕಿಗೆ ಶಾಲೆಯ ಮುಖ್ಯಗುರು ಪಿ.ಎಂ. ಪತ್ತಾರ ಅವರೇ ಸ್ವಂತ ವೇತನ ನೀಡುತ್ತಿದ್ದಾರೆ. ಜತೆಗೆ ಅವರಿಗೆ ಎಸ್ಡಿಎಂಸಿ ಅವರ ಸಹಕಾರವೂ ಇದೆ. ಸಧ್ಯಕ್ಕೆ 1 ರಿಂದ 7ನೇ ತರಗತಿಗೆ 168 ವಿದ್ಯಾರ್ಥಿಗಳಿದ್ದು, 6 ಜನ ಶಿಕ್ಷಕರಿದ್ದಾರೆ.

Karnataka Budget 2023: ಕಾಂಗ್ರೆಸ್‌ನಿಂದ ಹೊಸ ಶಿಕ್ಷಣ ನೀತಿ, ನೇಮಕಾತಿಯಲ್ಲಿ ಡಿಜಿಲಾಕರ್ ಅಂಕಪಟ್ಟಿ ಕಡ್ಡಾಯ

16 ಕೊಠಡಿ, 16 ಕ್ಯಾಮರಾ:

ಶಾಲೆಯಲ್ಲಿ ಒಟ್ಟು 16 ಕೊಠಡಿಗಳಿದ್ದು, 16 ಕೊಠಡಿಗಳಲ್ಲಿಯೂ ಸಿಸಿ ಟಿವಿ ಅಳವಡಿಸಲಾಗಿದೆ. ಶಾಲೆಯ ಆವರಣ ತುಂಬೆಲ್ಲ ಸಸಿಗಳನ್ನು ಹಚ್ಚಲಾಗಿದ್ದು, ಅಕ್ಷರ ದಾಸೋಹದ ಬಿಸಿಯೂಟಕ್ಕಾಗಿ ಬೇಕಾಗುವ ತರಕಾರಿಗಾಗಿ ಕೈತೋಟ ಮಾಡಲಾಗಿದೆ. ಇನ್ನೂ ಶಾಲೆಯ ಆವರಣದಲ್ಲಿ ಇನ್ಪೋಸಿಸ್‌ ಅಧ್ಯಕ್ಷೆ ಸುಧಾಮೂರ್ತಿ ಅವರ ಭಾವಚಿತ್ರದ ನುಡಿಮುತ್ತಗಳ ಫಲಕಗಳನ್ನು ಹಾಕಿದ್ದು, ಇವು ಮಕ್ಕಳಿಗೆ ಪ್ರೇರಣೆ ನೀಡುತ್ತಿವೆ.

ಹಳೆ ವಿದ್ಯಾರ್ಥಿಗ ಸೇವೆ ಶ್ಲಾಘನೀಯ:

ಹಳಿಂಗಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಲಿತ ಬಹುತೇಕ ವಿದ್ಯಾರ್ಥಿಗಳು ಜವಾಬ್ದಾರಿಯುತ ಹುದ್ದೆಗಳನ್ನು ಹೊಂದಿದ್ದಾರೆ. ಅಲ್ಲದೇ ಈಗಿರುವ ಮುಖ್ಯಗುರು ಪಾಂಡು ಪತ್ತಾರ ಅವರ ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಸಾಕಷ್ಟುಇದ್ದಾರೆ. ಆ ಎಲ್ಲ ವಿದ್ಯಾರ್ಥಿಗಳು ತಮ್ಮೂರಿನ ಶಾಲೆ ಅಭಿವೃದ್ಧಿಗೆ ಕೈಜೋಡಿಸುತ್ತ ಬರುತ್ತಿದ್ದಾರೆ. ಅಚ್ಚರಿ ಎಂದರೆ ಈಗಿರುವ ಎಸ್ಡಿಎಂಸಿ ಅಧ್ಯಕ್ಷ ಸುಕಮಾರ ದಡ್ಡಿ ಕೂಡ ಪತ್ತಾರ ಅವರ ಕೈಯಲ್ಲಿ ಕಲಿತ ವಿದ್ಯಾರ್ಥಿ ಆಗಿದ್ದಾರೆ. ಅದೇ ರೀತಿ ಗ್ರಾಪಂ ಮತ್ತು ಗ್ರಾಮದ ಮುಖಂಡರು ಕೂಡ ತಮ್ಮೂರಿನ ಶಾಲೆ ಅಭಿವೃದ್ಧಿಗಾಗಿ ಸಾಕಷ್ಟುಮುಂದೆ ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮಕ್ಕಳ ಸಂಖ್ಯೆ ಇಲ್ಲದೆ ಸರ್ಕಾರಿ ಸಾಲೆಗಳು ಸದ್ದಿಲ್ಲದೇ ಮುಚ್ಚುತ್ತಿರುವ ಇಂದಿನ ಬೆಳವಣಿಗೆ ನಡುವೆ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳ ಮುಂದೆ ತನ್ನ ಗುಣಮಟ್ಟದಿಂದ ಘನತೆಯಿಂದ ತಲೆ ಎತ್ತಿ ನಿಂತಿರುವುರ ಕಾರ‍್ಯಕ್ಕೆ ಪ್ರಶಂಸಿಲೇಬೇಕು.

1.2 ಲಕ್ಷದಲ್ಲಿ ಪ್ರಯೋಗಾಲಯ

ಮಕ್ಕಳಿಗಾಗಿ ಹೈಟೆಕ್‌ ವಿಜ್ಞಾನ ಪ್ರಯೋಗಾಲಯ ನಿರ್ಮಿಸಿದ್ದು, ಇದಕ್ಕೆ ಆರ್ಯಭಟ ಎಂದು ಹೆಸರು ಇಡಲಾಗಿದೆ. ಪ್ರಯೋಗಾಲಕ್ಕೆ ಅಂದಾಜು .1.2 ಲಕ್ಷ ಹಣ ಖರ್ಚಾಗಿದ್ದು, ಇದನ್ನು ಕೂಡ ಶಾಲೆ ಮುಖ್ಯಗುರು ಪಾಂಡು ಪತ್ತಾರ, ಸಹ ಶಿಕ್ಷಕ ಅಸ್ಪಾಕ ನಾಯಕವಾಡಿ ಸ್ವಂತ ಹಣ ಹಾಕಿದ್ದಾರೆ. ವಿದ್ಯಾರ್ಥಿಗಳು ಪ್ರತಿದಿನ ಪ್ರಯೋಗಾಲಯದಲ್ಲಿ ಏನಾದರು ಹೊಸತನ ಮಾಡಲು ಮುಂದಾಗುತ್ತಾರೆ. ಪ್ರತಿ ತರಗತಿಯಲ್ಲಿ ವೈಟ್‌ ಬೋರ್ಡ್‌ ಅಳವಡಿಸಿದ್ದು, ಹೈಟೆಕ್‌ ಗ್ರಂಥಾಲಯ ಕೂಡ ಹೊಂದಿದೆ.

ರಾಯಚೂರು ಜಿಲ್ಲೆಯಲ್ಲಿ ಅವನತಿಯಲ್ಲಿದೆ ಪಿಯು ಶಿಕ್ಷಣ: ಕಂಗಾಲಾದ ಮಕ್ಕಳು..!

ಸೈಕ್ಲಿಂಗ್‌ ಶಾಲೆಗೆ ಆಯ್ಕೆ :

ಶಾಲೆಯಲ್ಲಿ ಹಾಳು ಬಿದ್ದಿದ್ದ ಸೈಕಲ್‌ಗಳನ್ನು ಮುಖ್ಯಗುರು ದುರಸ್ತಿ ಮಾಡಿಸಿ ವಿದ್ಯಾರ್ಥಿಗಳನ್ನು ಪ್ರತಿದಿನ 5 ಕಿಮೀ ಸೈಕ್ಲಿಂಗ್‌ಗೆ ಕರೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ. ಪಿ.ಎಂ. ಪತ್ತಾರ ಕೂಡ ಕ್ರೀಡಾಪಟು ಆಗಿದ್ದರಿಂದ ಯುವಜನ ಸೇವಾ ಕ್ರೀಡಾ ಜತೆಗೆ ಸತತ ಸಂಪರ್ಕ ಹೊಂದಿ ಅಗತ್ಯ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಇದರ ಪರಿಣಾಮ ಈ ವರ್ಷ 6 ವಿದ್ಯಾರ್ಥಿಗಳು ವಿಜಯಪುರ ಬಾಗಲಕೋಟೆ ಹಾಗೂ ಬೆಳಗಾವಿ ಸೈಕ್ಲಿಂಗ್‌ ವಸತಿ ಶಾಲೆಗಳಿಗೆ ಆಯ್ಕೆಗೊಂಡಿದ್ದು ಸರ್ಕಾರಿ ಶಾಲೆಗೆ ಹಾಗೂ ಹಳಿಂಗಳಿ ಗ್ರಾಮದ ಕೀರ್ತಿ ಹೆಚ್ಚಿಸಿದೆ.

ನಾನು 1989ರಲ್ಲಿ ಶಿಕ್ಷಕ ವೃತ್ತಿಗೆ ನೇಮಕಾತಿ ಹೊಂದಿ ಹಳಿಂಗಳಿ ಗ್ರಾಮದ ಶಾಲೆಗೆ ಬಂದೆ. ನಂತರ ಬೇರೆ ಗ್ರಾಮಗಳ ಶಾಲೆಯಲ್ಲಿ ಕೆಲಸ ಮಾಡಿ ಈಗ ಮತ್ತೆ ಹಳಿಂಗಳಿ ಶಾಲೆಯಲ್ಲಿ ಕಾರ‍್ಯ ನಿರ್ವಹಿಸುತ್ತಿದ್ದೇನೆ. ಶಾಲೆಯ ಅಭಿವೃದ್ಧಿ ಬರೀ ಇಲಾಖೆಯಿಂದ ಮಾತ್ರ ಸಾಧ್ಯ ಆಗುವುದಿಲ್ಲ. ಅದಕ್ಕೆ ಎಸ್ಡಿಎಂಸಿ, ಗ್ರಾಪಂ ಹಾಗೂ ಶಿಕ್ಷಣ ಪ್ರೇಮಿಗಳ ಸಹಕಾರವೂ ಮುಖ್ಯವಾಗಿದೆ. ಆ ದಿಸೆಯಲ್ಲಿ ಸರ್ಕಾರಿ ಶಾಲೆ ಬಗ್ಗೆ ಹಳಿಂಗಳಿ ಗ್ರಾಮಸ್ಥರ ಕಾಳಜಿ ಶ್ಲಾಘನೀಯವಾಗಿದೆ. ನಾವು ಶಿಕ್ಷಕರು ಕೂಡ ಸಾಧ್ಯ ಆದಷ್ಟು ಮಕ್ಕಳಿಗೆ ಹೊಸತನವನ್ನು ಹುಟ್ಟು ಹಾಕುವ ಮೂಲಕ ಅವರನ್ನು ಪ್ರೇರೆಪಿಸುವ ಕೆಲಸ ಮಾಡುತ್ತಿದ್ದೇವೆ ಅಂತ ಹಳಿಂಗಳಿ ಸರಕಾರಿ ಎಚ್‌ಪಿಎಸ್‌ ಶಾಲೆ ಮುಖ್ಯಗುರು ಪಾಂಡು ಪತ್ತಾರ ತಿಳಿಸಿದ್ದಾರೆ. 

click me!