ಕಲಬುರಗಿ: ತಂಗಿ ಎಂಗೇಜ್‌ಮೆಂಟ್‌ಗೆ ತರಕಾರಿ ತರಲು ಹೋಗಿದ್ದ ಅಣ್ಣನ ಬರ್ಬರ ಕೊಲೆ

By Suvarna NewsFirst Published Jun 6, 2021, 12:52 PM IST
Highlights

* ಕಲಬುರಗಿ ನಗರದ ತರಕಾರಿ ಮಾರ್ಕೆಟ್‌ನಲ್ಲಿ ನಡೆದ ಕೊಲೆ
* ಸಾವಿರಾರು ಜನರ ಸಮ್ಮುಖದಲ್ಲೇ ಯುವಕನ ಬರ್ಬರ ಹತ್ಯೆ
* ಈ ಸಂಬಂಧ ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಕಲಬುರಗಿ(ಜೂ.06):  ತಂಗಿಯ ಎಂಗೇಜ್‌ಮೆಂಟ್‌ಗೆ ತರಕಾರಿ ತರಲು ಹೋಗಿದ್ದ ಅಣ್ಣ ಭೀಕರವಾಗಿ ಕೊಲೆಯಾದ ಘಟನೆ ನಗರದ ಹೊರವಲಯದ ಕೋಟನೂರ ಬಳಿಯ ತರಕಾರಿ ಮಾರ್ಕೆಟ್‌ನಲ್ಲಿ ಇಂದು(ಭಾನುವಾರ) ನಡೆದಿದೆ. ನಿಖಿಲ್ (24) ಕೊಲೆಯಾದ ದುರ್ದೈವಿಯಾಗಿದ್ದಾನೆ.

ನಿಖಿಲ್ ತಂಗಿ ಪ್ರೀತಿಸುತ್ತಿದ್ದ ಯುವಕನ ಹಾಗೂ ಆತನ ಸ್ನೇಹಿತರು ಸೇರಿ ನಿಖಿಲ್‌ನನ್ನ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಕೊಲೆಯಾದ ನಿಖಿಲ್‌ ತಂಗಿಯ ಎಂಗೇಜ್‌ಮೆಂಟ್ ಬೇರೊಬ್ಬ ಯುವಕನ ಜೊತೆ ನಾಳೆ(ಸೋಮವಾರ) ನಡೆಯಬೇಕಿತ್ತು. ಹೀಗಾಗಿ ಎಂಗೇಜ್‌ಮೆಂಟ್ ಕಾರ್ಯಕ್ರಮಕ್ಕಾಗಿ ತಾಯಿ ಮತ್ತು ಅಣ್ಣನೊಂದಿಗೆ ತರಕಾರಿ ಖರೀದಿಗಾಗಿ ನಿಖಿಲ್ ತೆರಳಿದ್ದನು ಎಂದು ತಿಳಿದು ಬಂದಿದೆ. 

ಅನಾರೋಗ್ಯದ ಮನೆಯಲ್ಲಿ ಶಾಪದಂಥ ಮಗ...ಮನೆಯೇ ನರಕ!

ತರಕಾರಿ ಖರೀದಿ ವೇಳೆ ಕಾರ್‌ನಲ್ಲಿ ಬಂದ ವಿಶಾಲ್‌ ಮತ್ತು ತಂಡದಿಂದ ನಿಖಿಲ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ನಿಖಿಲ್ ಸ್ಥಳದಲ್ಲೇ ಸಾವನ್ನಪ್ಪಿದರೆ ಆತನ ತಾಯಿ, ಅಣ್ಣ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿರಾರು ಜನರ ಸಮ್ಮುಖದಲ್ಲೇ ಯುವಕನ ಬರ್ಬರ ಹತ್ಯೆಯಾಗಿದೆ. ಇದರಿಂದ ಕಲಬುರಗಿ ಜನ ಭಯಭೀತರಾಗಿದ್ದಾರೆ. 

ಗಾಯಾಳುಗಳನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಕಲಬುರಗಿಯ ವಿವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!