
ಬೆಂಗಳೂರು(ಮಾ.16): ಮದುವೆ ನಿರಾಕರಿಸಿದ್ದಕ್ಕೆ ರೊಚ್ಚಿಗೆದ್ದು ತನ್ನ ಪ್ರಿಯತಮೆ ಮೇಲೆ ಹಲ್ಲೆ ನಡೆಸಿ ಹತ್ಯೆಗೈದು ಬಳಿಕ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವಿನಾಯಕ ನಗರದ ನಿವಾಸಿ ಶಾಲಿನಿ (23) ಕೊಲೆಯಾದ ದುರ್ದೈವಿ. ಈ ಕೃತ್ಯ ಎಸಗಿದ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದ ಮೃತಳ ಪ್ರಿಯಕರ ಕೆ.ಪಿ.ಅಗ್ರಹಾರದ ಮನೋಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಪ್ರಿಯತಮೆಯ ಮನವೊಲಿಕೆಗೆ ಆಕೆಯ ಮನೆಗೆ ಮನೋಜ್ ಮಂಗಳವಾರ ಮಧ್ಯಾಹ್ನ ತೆರಳಿದ್ದ. ಆ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ಶಾಲಿನಿ ಕಪಾಳಕ್ಕೆ ಹೊಡೆದಿದ್ದಾನೆ. ಈ ಏಟಿಗೆ ಕೆಳಗೆ ಕುಸಿದ ಬಿದ್ದ ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಂದು ಮನೆಯಿಂದ ಹೊರಬಿದ್ದ ಮನೋಜ್, ತನ್ನ ಮನೆಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಗಗನಸಖಿ ಸಾವು ಆತ್ಮಹತ್ಯೆಯಲ್ಲ, ಅಪಾರ್ಟ್ಮೆಂಟ್ನಿಂದ ನೂಕಿ ಕೊಂದ ಪ್ರಿಯಕರ
ಆತ್ಮೀಯ ಮಾತುಕತೆ ಕೊನೆ ಎಂದಾಗ ಹೊಡೆದ ಪ್ರೇಮಿ
ತಮಿಳುನಾಡು ಮೂಲದ ಮನೋಜ್, ಹಲವು ವರ್ಷಗಳಿಂದ ಕೆ.ಪಿ.ಅಗ್ರಹಾರದಲ್ಲಿ ನೆಲೆಸಿದ್ದಾನೆ. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಆತನಿಗೆ ಶಾಲಿನಿ ಪರಿಚಯವಾಗಿದೆ. ಬಳಿಕ ಮೂರ್ನಾಲ್ಕು ವರ್ಷಗಳಿಂದ ಇಬ್ಬರು ಪ್ರೀತಿಯಲ್ಲಿದ್ದರು. ಆದರೆ ಇತ್ತೀಚೆಗೆ ಈ ಪ್ರೇಮದ ವಿಚಾರ ಗೊತ್ತಾಗಿ ಕೆರಳಿದ ಶಾಲಿನಿ ಪೋಷಕರು, ಮನೋಜ್ ಸ್ನೇಹ ಕಡಿದುಕೊಳ್ಳುವಂತೆ ಮಗಳಿಗೆ ತಾಕೀತು ಮಾಡಿದ್ದರು. ಈ ಒತ್ತಾಯಕ್ಕೆ ಮಣಿದ ಆಕೆ, ಪ್ರಿಯಕರನಿಂದ ದೂರವಾಗಿದ್ದಳು. ಆತನ ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ.
ದಿಢೀರ್ ಪ್ರಿಯತಮೆ ವರ್ತನೆ ಬದಲಾವಣೆಗೆ ಕನಲಿದ ಮನೋಜ್, ಕೊನೆಗೆ ಬೇಸತ್ತು ವಿನಾಯ ನಗರದಲ್ಲಿ ಇರುವ ಆಕೆಯ ಮನೆಗೆ ಭೇಟಿಯಾಗಲು ತೆರಳಿದ್ದಾನೆ. ಆ ವೇಳೆ ಶಾಲಿನಿ ಮನೆಯಲ್ಲಿ ಏಕಾಂಗಿಯಾಗಿದ್ದಳು. ಆಗ ಕೆಲ ಹೊತ್ತು ಇಬ್ಬರು ‘ಆತ್ಮೀಯ’ವಾಗಿ ಮಾತನಾಡಿದ್ದಾರೆ. ಇದಾದ ಬಳಿಕ ಮತ್ತೆಂದು ‘ನನ್ನನ್ನು ಕಾಣಲು ನೀನು ಬರಬೇಡ. ನಾನು ನನ್ನ ತಂದೆ-ತಾಯಿ ನಿಶ್ಚಿಯಿಸಿರುವ ಯುವಕನ ಜತೆ ಮದುವೆಯಾಗುವೆ’ ಎಂದಿದ್ದಾಳೆ. ಪ್ರಿಯತಮೆ ಮಾತಿಗೆ ರೊಚ್ಚಿಗೆದ್ದ ಮನೋಜ್, ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ. ಆಗ ಕೆಳಗೆ ಬಿದ್ದ ಮೇಲೆ ಆಕೆಯ ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದಾನೆ. ಈ ಕೃತ್ಯ ಎಸಗಿದ ಬಳಿಕ ಆತ ಆತ್ಮಹತ್ಯೆ ಯತ್ನಿಸಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.
ಬೆಂಗಳೂರು: 1.21 ಕೋಟಿಯ ಚಿನ್ನ ದೋಚಿದ್ದು ಪೊಲೀಸರೇ..!
ಹತ್ಯೆ ವೇಳೆ ಮನೆ ಬಳಿ ಬಂದಿದ್ದ ಭಾವಿ ಪತಿ
ಈ ಹತ್ಯೆ ವೇಳೆ ಶಾಲಿನಿ ಭಾವಿ ಪತಿ ಸಹ ಮನೆ ಬಳಿಗೆ ಬಂದಿದ್ದ. ತನ್ನ ಭಾವಿ ಪತ್ನಿಯನ್ನು ಭೇಟಿಯಾಗಲು ಬಂದಿದ್ದ ಆತ, ಮನೆ ಬಾಗಿಲು ಬಡಿದಾಗ ತೆರೆದಿಲ್ಲ. ಆಗ ಒಳಗೆ ಸ್ನಾನ ಮಾಡುತ್ತಿರಬಹುದು ಎಂದು ಭಾವಿಸಿ ಹೊರೆ ನಿಂತಿದ್ದ. ಅದೇ ವೇಳೆ ಮನೆಯೊಳಗೆ ಇದ್ದ ಶಾಲಿನಿ ಪ್ರಿಯಕರ, ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಭಾವಿ ಪತಿ ತೆರಳಿದ ಬಳಿಕ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಕೊಲೆಗೂ ಮುನ್ನ ಅತ್ಯಾಚಾರ?
ಶಾಲಿನಿ ಹತ್ಯೆಗೂ ಮುನ್ನ ಆಕೆ ಜತೆ ಆರೋಪಿ ಲೈಂಗಿಕ ಕ್ರಿಯೆ ನಡೆಸಿರುವುದು ವೈದ್ಯಕೀಯ ವರದಿಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ಇದೂ ಒಪ್ಪಿತ ಸೆಕ್ಸ್ ಅಥವಾ ಬಲಾತ್ಕಾರವೇ ಎಂಬುದನ್ನು ಖಚಿತಪಡಿಸುವಂತೆ ವೈದ್ಯರಿಗೆ ಸೂಚಿಸಿದ್ದೇವೆ. ವೈದ್ಯರ ವರದಿ ಬಳಿಕ ಅತ್ಯಾಚಾರ ಸಂಬಂಧ ಸ್ಪಷ್ಟತೆ ಸಿಗಲಿದೆ. ಆದರೆ ಸದ್ಯ ಕೊಲೆ (ಐಪಿಸಿ 302) ಜೊತೆಗೆ ಅತ್ಯಾಚಾರ (ಐಪಿಸಿ 376) ಆರೋಪದಡಿ ಕೂಡಾ ಪ್ರಕರಣ ದಾಖಲಿಸಿದ್ದೇವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ