
ಲಖನೌ(ಏ.15): ಪುತ್ರನ ಎನ್ಕೌಂಟರ್ ಬೆನ್ನಲ್ಲೇ ಉತ್ತರ ಪ್ರದೇಶದ ಕುಖ್ಯಾತ ಮಾಫಿಯಾ ಡಾನ್, ಮಾಜಿ ಸಂಸದ ಹಾಗೂ ಮಾಜಿ ಶಾಸಕ ಅತೀಕ್ ಅಹ್ಮದ್ನನ್ನು ಶನಿವಾರ ತಡರಾತ್ರಿ ಹತ್ಯೆ ಮಾಡಲಾಗಿದೆ. ಆತನ ಜತೆ ಸೋದರ ಅಶ್ರಫ್ ಅಹ್ಮದ್ನನ್ನೂ ಗುಂಡಿಕ್ಕಿ ಸಾಯಿಸಲಾಗಿದೆ. ಟಿವಿ ಕ್ಯಾಮರಾಗಳ ಎದುರೇ ಈ ಘಟನೆ ನಡೆದಿದ್ದು, ಕೃತ್ಯ ಎಸಗಿದ ಮೂವರನ್ನೂ ಬಂಧಿಸಲಾಗಿದೆ. ಇವರನ್ನು ಲವಲೇಶ್ ತಿವಾರಿ, ಸನ್ನಿ ಹಾಗೂ ಅರುಣ್ ಮೌರ್ಯ ಎಂದು ಗುರುತಿಸಲಾಗಿದೆ.
ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಹಾಗೂ ಈ ಪ್ರಕರಣದ ಸಾಕ್ಷಿ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್ ಆರೋಪಿಯಾಗಿದ್ದ. ಈ ಹಿನ್ನೆಲೆಯಲ್ಲಿ ಈತನ ವಿಚಾರಣೆ ನಡೆದಿತ್ತು. ಅತೀಕ್ನನ್ನು ವೈದ್ಯಕೀಯ ಪರೀಕ್ಷೆಗಾಗಿ ರಾತ್ರಿ 10.30ಕ್ಕೆ ಪ್ರಯಾಗ್ರಾಜ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಪತ್ರಕರ್ತರು ಅತೀಕ್ನ ಹೇಳಿಕೆ ಪಡೆಯುತ್ತಿದ್ದರು. ಈ ವೇಳೆ ಪತ್ರಕರ್ತರ ವೇಷದಲ್ಲಿ ಮೂವರು ಬಂದು ‘ಜೈ ಶ್ರೀರಾಂ’ ಎಂದು ಕೂಗಿದರು. ಆಗ ನೇರವಾಗಿ ಅತೀಕ್ ತಲೆಗೆ ಹಾಗೂ ಅಶ್ರಫ್ಗೆ ಪಿಸ್ತೂಲು ಇಟ್ಟು ಗುಂಡು ಹಾರಿಸಿದರು. ಕೂಡಲೇ ಇಬ್ಬರೂ ನೆಲಕ್ಕುರುಳಿದರು. ಆಗಲೂ ಅವರಿಗೆ ಗುಂಡಿಕ್ಕಿದರು. ತಕ್ಷಣ ಹಂತಕರನ್ನು ಪೊಲೀಸರು ಗಟ್ಟಿಯಾಗಿ ಹಿಡಿದುಕೊಂಡು ತಮ್ಮ ವಶಕ್ಕೆ ತೆಗೆದುಕೊಂಡರು.
ನಂತರ ಸ್ಥಳವನ್ನು ಸುತ್ತುವರಿದ ಪೊಲೀಸರು ಶವಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. 10 ಸುತ್ತುಗಳ ಗುಂಡು ಹಾರಾಟ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡುಗಿದ ಮಾಫಿಯಾ, ಗ್ಯಾಂಗ್ಸ್ಟರ್ ಅತೀಕ್ ಅಹಮ್ಮದ್ ಪುತ್ರನ ಎನ್ಕೌಂಟರ್!
ಮೊನ್ನೆಯಷ್ಟೇ ಮಗನ ಹತ್ಯೆ ಆಗಿತ್ತು:
ಶುಕ್ರವಾರವಷ್ಟೇ ಅತೀಕ್ನನ್ನು ಪೊಲೀಸರ ಬಂಧನದಿಂದ ಬಿಡಿಸಲು ಹೊಂಚು ಹಾಕಿದ್ದ ಮಗ ಅಸದ್ ಮತ್ತು ಆತನ ಸಹಚರನನ್ನು ಪೊಲೀಸರು ಎನ್ಕೌಂಟರ್ನಲ್ಲಿ ಝಾನ್ಸಿ ಸಮೀಪ ಹತ್ಯೆ ಮಾಡಿದ್ದರು. ಬೆಳಗ್ಗೆಯಷ್ಟೇ ಅತೀಕ್ ಪುತ್ರನ ಅಂತ್ಯಕ್ರಿಯೆ ನಡೆದಿತ್ತು. ಆದರೆ ಇದರಲ್ಲಿ ಪಾಲ್ಗೊಳ್ಳಲು ಆಗದೇ ಅತೀಕ್ ತೀವ್ರ ಬೇಸರ ವ್ಯಕ್ತಪಡಿಸಿದ್ದ.
ಉಮೇಶ್ ಪಾಲ್ ಹತ್ಯೆ ಮಾಡಿದದ್ದ ಆರೋಪಿ ಆಪ್ತನ ಮನೆ ಮೇಲೆ ಬುಲ್ಡೋಡರ್ ಹತ್ತಿಸಿದ ಯೋಗಿ ಸರ್ಕಾರ!
ಎನ್ಕೌಂಟರ್ ಭೀತಿ ವಕ್ತಪಡಿಸಿದ್ದ ಅತೀಕ್!
ಇತ್ತೀಚೆಗಷ್ಟೇ ಅತೀಕ್ ಎನ್ಕೌಂಟರ್ ಭೀತಿ ವ್ಯಕ್ತಪಡಿಸಿದ್ದ. ಪ್ರಕರಣವೊಂದರಲ್ಲಿ ಗುಜರಾತ್ನ ಸಾಬರಮತಿ ಜೈಲಲ್ಲಿದ್ದ ಅತೀಕ್ನನ್ನು ಇತ್ತೀಚೆಗೆ ಉತ್ತರ ಪ್ರದೇಶ ಪೊಲೀಸರು ಲಖನೌಗೆ ಕರೆತಂದಿದ್ದರು. ಆಗ ಆತ ‘ಕರೆತರುವ ವೇಳೆ ನನ್ನ ಎನ್ಕೌಂಟರ್ ಆಗಬಹುದು’ ಎಂದು ಭೀತಿ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. ಆದರೆ ಕೋರ್ಚ್ ಈತನ ಮನವಿ ತಿರಸ್ಕರಿಸಿದ ಬಳಿಕ ಪ್ರಯಾಗ್ರಾಜ್ ಜೈಲಿಗೆ ಬಂದಿದ್ದ. ಇತ್ತೀಚೆಗಷ್ಟೇ ಅಪಹರಣ ಕೇಸಿನಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ.
ಅಖಿಲೇಶ್ ಗರಂ
ಅತೀಕ್ ಅಹ್ಮದ್ ಹತ್ಯೆಗೆ ಸಮಾಜವಾದಿ ಪಾರ್ಟಿ ಮುಖ್ಯಸ್ಥ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ. ‘ಪೊಲೀಸ್ ಭದ್ರತೆ ಇದ್ದರೂ ಇಂಥ ಘಟನೆ ನಡೆಯುತ್ತವೆ ಎಂದರೆ ಜನಸಾಮಾನ್ಯರ ಪಾಡೇನು? ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸುವ ಯತ್ನ ನಡೆದಿದೆ’ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ