Udupi; ಪಿಟ್ಟಿ ನಾಗೇಶ್ ಕೊಲೆ ಪ್ರಕರಣ, ಐವರು ಆರೋಪಿಗಳು ಖುಲಾಸೆ

By Suvarna NewsFirst Published Sep 7, 2022, 3:49 PM IST
Highlights

 ಎಂಟು ವರ್ಷಗಳ ಹಿಂದೆ ನಡೆದ ರೌಡಿ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಐವರು ಆರೋಪಿ ಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ನೀಡಿದೆ.

ಉಡುಪಿ (ಸೆ.7): ಎಂಟು ವರ್ಷಗಳ ಹಿಂದೆ ನಡೆದ ರೌಡಿ ಪಿಟ್ಟಿ ನಾಗೇಶ್ ಕೊಲೆ ಪ್ರಕರಣದ ಐವರು ಆರೋಪಿ ಗಳನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಖುಲಾಸೆಗೊಳಿಸಿ ಆದೇಶ ನೀಡಿದೆ. ಸಂತೆಕಟ್ಟೆ ಪ್ರಗತಿನಗರದ ಐವನ್ ರಿಚರ್ಡ್ ಯಾನೆ ಮುನ್ನ (41), ಅಲೆವೂರು ಗುಡ್ಡೆಯಂಗಡಿಯ ಗುರುಪ್ರಸಾದ್ ಶೆಟ್ಟಿ (34), ಬೈಲೂರು ಹನುಮಾನ್ ಗ್ಯಾರೇಜ್ ಬಳಿಯ ಸಂತೋಷ ಪೂಜಾರಿ(40), ಕೊರಂಗ್ರ ಪಾಡಿಯ ವಿಶ್ವನಾಥ ಶೆಟ್ಟಿ (40), ಕುಕ್ಕಿಕಟ್ಟೆ ಕಲ್ಯಾಣ ನಗರದ ಜಾಕೀರ್ ಹುಸೈನ್(33) ಖುಲಾಸೆಗೊಂಡ ಆರೋಪಿಗಳು. 2011ರ ಜ.14ರಂದು ಹಿರಿಯಡ್ಕ ಜೈಲಿನಲ್ಲಿ ನಡೆದ ರೌಡಿ ವಿನೋದ್ ಶೆಟ್ಟಿಗಾರ್‌ನ ಕೊಲೆಗೆ ಪ್ರತೀಕಾರವಾಗಿ ಆತನ ಸಹಚರರು ಸೇರಿ 2004 ರ ಸೆ.11ರಂದು ಉದ್ಯಾವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಟೋಯೋಟಾ ಶೋರೂಮ್‌ನ ಎದುರು ಪಿಟ್ಟಿ ನಾಗೇಶ್‌ನನ್ನು ಹತ್ಯೆ ಮಾಡಿದ್ದರು. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಸೆ.12 ರಂದು ಆರೋಪಿಗಳನ್ನು ಬಂಧಿಸಿದ್ದರು. ತನಿಖೆ ನಡೆಸಿದ ಆಗಿನ ವೃತ್ತ ನಿರೀಕ್ಷಕ ಸುನೀಲ್ ವೈ.ನಾಯಕ್ ದೋಷಾ ರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಾಂತವೀರ ಶಿವಪ್ಪ, ಆರೋಪಿಗಳ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟು ಐವರು ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶ ನೀಡಿದರು. ಐವರು ಆರೋಪಿಗಳ ಪರವಾಗಿ ಹಿರಿಯ ನ್ಯಾಯವಾದಿ ಶಾಂತಾರಾಮ ಶೆಟ್ಟಿ ವಾದಿಸಿದ್ದರು. ಉಡುಪಿ ನಗರದ ಕುಕ್ಕಿಕಟ್ಟೆಯ ಇಂದಿರಾ ನಗರ ನಿವಾಸಿ ನಾಗೇಶ್ ದೇವಾಡಿಗ ಯಾನೆ ಪಿಟ್ಟಿ ನಾಗೇಶ್ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ನಾಲ್ಕು ಕೊಲೆ ಪ್ರಕರಣಗಳು ಸೇರಿದಂತೆ ಒಟ್ಟು 22 ಕೇಸುಗಳು ದಾಖಲಾಗಿತ್ತು.

ಪಿಟ್ಟಿಯ ಕೊಲೆ ನಡೆದಿದ್ದು ಯಾಕೆ? ಹೇಗೆ?
2011ರ ಜ.14ರಂದು ಹಿರಿಯಡ್ಕ ಜೈಲಿನಲ್ಲಿ ನಡೆದ ರೌಡಿ ವಿನೋದ್ ಶೆಟ್ಟಿಗಾರ್ ಕೊಲೆಗೆ ಪ್ರತೀಕಾರವಾಗಿಯೇ ಆತನ ಸಹಚರರು ಸೇರಿಕೊಂಡು ವ್ಯವಸ್ಥಿತವಾದ ಯೋಜನೆಯಿಂದ ಪಿಟ್ಟಿ ನಾಗೇಶ್ನನ್ನು  ಸೆ.11ರಂದು ರಾತ್ರಿ 7:30ರ ಸುಮಾರಿಗೆ ಉದ್ಯಾವರದ ರಾಷ್ಟ್ರೀಯ ಹೆದ್ದಾರಿ ಬಳಿಯ ಟೋಯೋಟಾ ಶೋರೂಮ್ನ ಎದುರು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

ಉಡುಪಿ ನಗರದ ಕುಕ್ಕಿಕಟ್ಟೆಯ ಇಂದಿರಾ ನಗರ ನಿವಾಸಿಯಾದ ಬಸವ ದೇವಾಡಿಗ ಎಂಬವರ ಮಗನಾದ ನಾಗೇಶ್ ದೇವಾಡಿಗ ಯಾನೆ ಪಿಟ್ಟಿ ನಾಗೇಶ್ (41) ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ನಾಲ್ಕು ಕೊಲೆಗೆ ಸಂಬಂಧಿಸಿದ ಪ್ರಕರಣವೂ ಸೇರಿದಂತೆ ಒಟ್ಟು 22 ಕೇಸುಗಳು ದಾಖಲಾಗಿತ್ತು. ಉಳಿದಂತೆ ಗುರುಪ್ರಸಾದ್ ಶೆಟ್ಟಿ ವಿರುದ್ಧ 7, ವಿಶ್ವನಾಥ್ ಶೆಟ್ಟಿ ವಿರುದ್ಧ 3, ಜಾಕೀರ್ ಹುಸೈನ್, ಸಂತೋಷ್ ಪೂಜಾರಿ ಹಾಗೂ ಐವನ್ ರಿಚರ್ಡ್ ವಿರುದ್ಧ ತಲಾ ಎರಡು ಕೇಸುಗಳು ದಾಖಲಾಗಿತ್ತು. ಕಾರ್ಯಾಚರಣೆಯ ವೇಳೆ ಎರಡು ತಲವಾರು, ಒಂದು ದೊಡ್ಡ ಗಾತ್ರದ ಚೂರಿ, ಮಾರುತಿ 800 ಕಾರು 1, ಪೋರ್ಡ್ ಪಿಸಾತಿ ಕಾರು 1 ಹಾಗೂ ಐದು ಮೊಬೈಲ್ ಹ್ಯಾಂಡ್ಸೆಟ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. 

ವಿನೋದ್ ಶೆಟ್ಟಿಗಾರ್ ಕೊಲೆಯ ಬಳಿಕ ಆತನ ಸಹಚರರು ಪಿಟ್ಟಿ ನಾಗೇಶ್ ಹತ್ಯೆಗೆ ಮೂರು ಬಾರಿ ಪ್ರಯತ್ನಗಳನ್ನು ನಡೆಸಿದ್ದರೂ, ಪ್ರತಿ ಬಾರಿ ಆತ ಪಾರಾಗಿ ಬಂದಿದ್ದ. 2010ರಲ್ಲಿ ಒಮ್ಮೆಯಂತೂ ಕಡಿದು, ಕೊಚ್ಚಿ ಪಿಟ್ಟಿ ಸತ್ತಿದ್ದಾನೆಂದೇ ಭಾವಿಸಿ ತೆರಳಿದ್ದರೂ, ಆತ ಬದುಕುಳಿದಿದ್ದ. ಆದರೆ ಇದೀಗ ನಾಲ್ಕನೇ ಪ್ರಯತ್ನದಲ್ಲಿ ಆತನನ್ನು ಮುಗಿಸುವಲ್ಲಿ ಈ ಸಹಚರರು ಯಶಸ್ವಿಯಾಗಿದ್ದರು. 

Praveen Nettaru Murder Case: ದ.ಕ.ದಲ್ಲಿ 32ಕ್ಕೂ ಹೆಚ್ಚು ಕಡೆ NIA ದಾಳಿ!

ಪಿಟ್ಟಿ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದವನು ಆತನ ಆತ್ಮೀಯನಾಗಿದ್ದು, ಒಳಗಿನಿಂದಲೇ ಕತ್ತಿ ಮಸೆಯುತಿದ್ದ ಐವನ್ ರಿಚರ್ಡ್ ಮಸ್ಕರೇನಸ್. ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಳಗಾವಿ ಜೈಲಿನಲ್ಲಿರುವ ಸಂತು ಕೈಯಲ್ಲಿ ಕೊಲೆಯಾದ ದೊಂಡೇರಗಂಡಿ ಯತೀಶ್ ಶೆಟ್ಟಿಯ ಸ್ನೇಹಿತನಾಗಿದ್ದ ಮುನ್ನ ಯಾನೆ ಐವನ್ ರಿಚರ್ಡ್, ಆತನಂತೆಯೇ ಮರದ ವ್ಯಾಪಾರಿಯಾಗಿದ್ದ. ಯತೀಶ್ ಕೊಲೆಯ ಹಿನ್ನೆಲೆಯಲ್ಲಿ ಪಿಟ್ಟಿ ಬಗ್ಗೆ ಐವನ್  ಸಿಟ್ಟಿತ್ತು. ಆದರೂ ಪಿಟ್ಟಿಯ ಆತ್ಮೀಯನಾಗಿಯೇ ಇದ್ದ ಐವನ್, ಇದೇ ಕಾರಣಕ್ಕೆ ವಿನೋದ್ ಗ್ಯಾಂಗ್ ನ ವಿಶ್ವನಾಥ್ ಶೆಟ್ಟಿಗೆ ನಿಕಟವಾಗಿದ್ದ. 

YADGIR: ಕೃಷಿ ಹೊಂಡದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

ಆತನಿಗೆ ಎಲ್ಲಾ ಮಾಹಿತಿಗಳನ್ನು ನೀಡುತಿದ್ದ. ಇದು ಪಿಟ್ಟಿಗೆ ತಿಳಿದಿರಲಿಲ್ಲ. ಪ್ರತೀಕಾರದ ಜ್ವಾಲೆ ಉಜ್ವಲವಾಗಲು ಕಾರಣ ಉಡುಪಿ ನ್ಯಾಯಾಲಯದಲ್ಲಿ ನಡೆದ ಒಂದು ಸಣ್ಣ ಘಟನೆ. ಅಂದು ಬೇರೆ ಬೇರೆ ಕೇಸುಗಳಲ್ಲಿ ನ್ಯಾಯಾಲಯದ ಮುಂದೆ ವಿಶ್ವನಾಥ ಶೆಟ್ಟಿ ಹಾಗೂ ಪಿಟ್ಟಿ ನಾಗೇಶ್ ಇಬ್ಬರು ಹಾಜರಾಗಿದ್ದರು. ಇಬ್ಬರು ಪರಸ್ಪರರನ್ನು ನೋಡಿದಾಗ ವಿಶ್ವನಾಥ ಶೆಟ್ಟಿ ಹಲ್ಲು ಮಸೆದಿದ್ದ. ಇದರಿಂದ ಸಿಟ್ಟಿಗೆದ್ದ ಪಿಟ್ಟಿ, ತನ್ನೊಂದಿಗಿದ್ದ ಮುನ್ನಾ ಬಳಿ ಆತನನ್ನು (ವಿಶ್ವ) ತೆಗೆದುಬಿಡಬೇಕಪ್ಪ ಎಂದು ಹೇಳಿದ್ದನಂತೆ.ಇದನ್ನು ಮುನ್ನಾ, ವಿಶ್ವನಾಥ ಶೆಟ್ಟಿಗೆ ತಿಳಿಸಿದ್ದ. ಇದರಿಂದ ಗಾಬರಿಗೊಂಡ ವಿಶ್ವನಾಥ ಶೆಟ್ಟಿ, ಆತ ನಮ್ಮ ಮೈಮುಟ್ಟುವ ಮೊದಲೇ ನಾವು ಆತನನ್ನು ಮುಗಿಸಿಬಿಡಬೇಕು ಎಂದು ಯೋಜನೆ ರೂಪಿಸಿದ. ಇದಕ್ಕೆ ಐವನ್ ರಿಚರ್ಡ್ ಕೈಜೋಡಿಸಿದ. ಅದರಂತೆ  ಪಿಟ್ಟಿಯನ್ನು ಮುನ್ನ ಬೆಳ್ಮಣ್ಗೆ ಕರೆದೊಯ್ಯಲಿದ್ದು, ಬರುವಾಗ ದಾರಿ ಮಧ್ಯೆ ಆತನನ್ನು ಮುಗಿಸುವ ಯೋಜನೆ ಹಾಕುತ್ತಾರೆ.

click me!