ಕೋಲಾರದಲ್ಲಿ ಬೃಹದಾಕಾರದ​ ಮರದ ಕೊಂಬೆ ಬಿದ್ದು ಇಬ್ಬರು ಸಾವು

By Govindaraj SFirst Published Aug 21, 2022, 12:29 AM IST
Highlights

ಅದು ನೂರಾರು ವರ್ಷಗಳಿಂದ ಊರ ಮಧ್ಯದಲ್ಲಿ ನಿಂತು ಸಾವಿರಾರು ಜನರಿಗೆ ನೆರಳು ಕೊಟ್ಟಿದ್ದ ಮರ. ಆದರೆ ಇಂದು ಆ ಮರಕ್ಕೆ ಯಮನ ದೃಷ್ಟಿಯೇ ತಗುಲಿತ್ತೋ ಏನೋ ಗೊತ್ತಿಲ್ಲ ನೂರಾರು ವರ್ಷಗಳಿಂದ ಗಟ್ಟಿಯಾಗಿ ನಿಂತಿದ್ದ ಮರ ಏಕಾಏಕಿ ಮರದ ಕೊಂಬೆಯೊಂದು ಮುರಿದು ಬಿದ್ದು ಎರಡು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. 

ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಆ.21): ಅದು ನೂರಾರು ವರ್ಷಗಳಿಂದ ಊರ ಮಧ್ಯದಲ್ಲಿ ನಿಂತು ಸಾವಿರಾರು ಜನರಿಗೆ ನೆರಳು ಕೊಟ್ಟಿದ್ದ ಮರ. ಆದರೆ ಇಂದು ಆ ಮರಕ್ಕೆ ಯಮನ ದೃಷ್ಟಿಯೇ ತಗುಲಿತ್ತೋ ಏನೋ ಗೊತ್ತಿಲ್ಲ ನೂರಾರು ವರ್ಷಗಳಿಂದ ಗಟ್ಟಿಯಾಗಿ ನಿಂತಿದ್ದ ಮರ ಏಕಾಏಕಿ ಮರದ ಕೊಂಬೆಯೊಂದು ಮುರಿದು ಬಿದ್ದು ಎರಡು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಊರ ಮಧ್ಯದಲ್ಲೇ ನಿಂತಿರುವ ನೂರಾರು ವರ್ಷಗಳಷ್ಟು ಹಳೆಯದಾದ ಬೃಹತ್​ ಆಲದ ಮರ, ಅಲ್ಲೇ ಮುರಿದು ಬಿದ್ದಿರುವ ಆಲದ ಮರದ ಬೃಹತ್​ ಕೊಂಬೆ, ಕೊಂಬೆಯಡಿ ಸಿಲುಕಿ ಮೃತಪಟ್ಟಿರುವ ವ್ಯಕ್ತಿಗಳ ಶವಗಳನ್ನು ಸಾಗಿಸುತ್ತಿರುವ ಸ್ಥಳೀಯರು. 

ಜೊತೆಗೆ ಅಲ್ಲೇ ಮರದ ಪಕ್ಕದಲ್ಲೇ ಸಂತೆಯಲ್ಲಿ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರು. ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು, ಕೋಲಾರ ತಾಲ್ಲೂಕಿನ ಕ್ಯಾಲನೂರು ಗ್ರಾಮದಲ್ಲಿ. ಹೌದು! ಕ್ಯಾಲನೂರು ಗ್ರಾಮದಲ್ಲಿ ಮಧ್ಯಾಹ್ನ ಸುಮಾರಿಗೆ ನಡೆಯಬಾರದ ಘಟನೆಯೊಂದು ನಡೆದು ಎರಡು ಅಮಾಯಕ ಜೀವಗಳನ್ನು ಬಲಿತೆಗೆದುಕೊಂಡಿತ್ತು. ಅಷ್ಟಕ್ಕೂ ಆಗಿದ್ದೇನು ಎಂದು ನೋಡೋದಾದ್ರೆ ಊರ ಮಧ್ಯ ಭಾಗದಲ್ಲಿ ಕೆಇಬಿ ಕಚೇರಿ ಬಳಿ ಸುಮಾರು ನೂರಾರು ವರ್ಷಗಳಷ್ಟು ಹಳೆಯದಾದ ಬೃಹತ್​ ಆಲದ ಮರವಿತ್ತು, ಅಲ್ಲಿ ನಿತ್ಯ ಹತ್ತಾರು ಜನ ಹೋಗಿ ನೆರಳಿನಲ್ಲಿ ವಿಶ್ರಾಂತಿ ಪಡಯುತ್ತಿದ್ದರು.

Kolar: ಸಚಿವ ಮುನಿರತ್ನ ಕರೆದಿದ್ದ ಕೆಡಿಪಿ ಸಭೆಗೆ ಗೈರು ಹಾಜರಾದ ಶಾಸಕರು

ಗ್ರಾಮದ ಕೆಲವರು ವಯಸ್ಸಾದವರು ಹೋಗಿ ಸ್ವಲ್ಪಹೊತ್ತು ಅಲ್ಲಿ ಕುಳಿತು ಬರುತ್ತಿದ್ದರು, ಅಷ್ಟೇ ಅಲ್ಲ ವಿಶೇಷವಾಗಿ ಹಲವಾರು ವರ್ಷಗಳಿಂದ ಇದೇ ಮರದ ನೆರಳಿನಲ್ಲಿ ಪ್ರತಿ ಶನಿವಾರ ಗ್ರಾಮದ ಸಂತೆ ಕೂಡಾ ನಡೆಯುತ್ತಿತ್ತು, ಇವತ್ತು ಕೂಡಾ ಶನಿವಾರ ಸಂತೆ ಸೇರುತ್ತಿತ್ತು. ಅದೇ ಮರದ ಕೆಳಗೆ ವ್ಯಾಪಾರಿಯೊಬ್ಬ ಬಟ್ಟೆ ವ್ಯಾಪಾರ ಮಾಡಲು ಅಂಗಡಿಯನ್ನು ಹಾಕಿದ್ದ, ಬಟ್ಟೆ ವ್ಯಾಪಾರಕ್ಕೆ ಹಾಕಿದ್ದ ಬಟ್ಟೆ ವ್ಯಾಪಾರಿ ಅಲ್ಲೇ ಪಕ್ಕದಲ್ಲೇ ಇದ್ದ ಪರಿಚಯಸ್ಥರಾದ ನಾರಾಯಣಪ್ಪ ಎಂಬಾತನನ್ನು ಅಂಗಡಿ ನೋಡಿಕೊಳ್ಳಲು ಹೇಳಿ ಊಟ ಮಾಡಿಕೊಂಡು ಬರಲು ಹೋಗಿದ್ದಾನೆ, ಅದೇ ವೇಳೆ ಮತ್ತೊಬ್ಬ ಜಮ್​ಶೀರ್​ ಎಂಬಾತ ಸ್ಕೂಟರ್​ನಲ್ಲಿ ಬಂದು ಅದೇ ಮರದ ಕೆಳಗೆ ನಿಂತಿದ್ದಾನೆ. 

ಇದೇ ವೇಳೆ ಏನಾಯ್ತೋ ಆ ಬೃಹತ್​ ಆಲದ ಮರದ ಕೊಂಬೆಯೊಂದು ಏಕಾಏಕಿ ಮುರಿದು ಬಿದ್ದಿದೆ. ಈ ವೇಳೆ ಮರದ ಕೊಂಬೆಯ ಕೆಳಗಿದ್ದ ನಾರಾಯಣಪ್ಪ ಹಾಗೂ ಜಮ್​ಶೀರ್​ ಇಬ್ಬರು ಮರದ ಕೊಂಬೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಸದಾನಂದ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಅಲ್ಲಿದ್ದ ಸ್ಥಳೀಯರು ಓಡೋಡಿ ಬಂದು ಮರದ ಕೊಂಬೆಯ ಕೆಳಗೆ ಸಿಲುಕಿದ್ದ ನಾರಾಯಣಪ್ಪ ಹಾಗೂ ಜಮ್​ಶೀರ್​ ಇಬ್ಬರನ್ನು ಹೊರ ತೆಗೆಯುವ ಪ್ರಯತ್ನ ಮಾಡಿದಾರಾದರೂ, ಇಬ್ಬರು ಅಲ್ಲೇ ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಬ್ಬ ಸದಾನಂದ ಗಂಭೀರವಾಗಿ ಗಾಯಗೊಂಡಿದ್ದರು.ಅವರನ್ನು ಕೂಡಲೇ ಕೋಲಾರದ ಆಸ್ಪತ್ರೆಗೆ ಆಂಬ್ಯುಲೆನ್ಸ್ ಮೂಲಕ ರವಾನೆ ಮಾಡಲಾಗಿದೆ. 

ಇನ್ನು ಮನೆಯಿಂದ ಹೊರಗೆ ಹೋಗಿ ಬರ್ತೀನಿ ಎಂದು ಹೋಗಿದ್ದವರು ಮೃತಪಟ್ಟಿರುವ ವಿಷಯ ಕೇಳಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ನಿಜಕ್ಕೂ ಇವತ್ತು ದೊಡ್ಡ ಅನಾಹುತವೊಂದು ತಪ್ಪಿದೆ ಎಂದು ಹೇಳಿದರೆ ತಪ್ಪಾಗೋದಿಲ್ಲ ಅನ್ನೋದು ಸ್ಥಳಿಯರ ಮಾತು ಯಾಕಂದ್ರೆ ಇಂದು ಕ್ಯಾಲನೂರು ಸಂತೆ ಇತ್ತು, ಮದ್ಯಾಹ್ನದ ನಂತರ ಇದೇ ಪ್ರದೇಶದಲ್ಲಿ ನೂರಾರು ಜನರು ಸೇರಿರುತ್ತಿದ್ದರು. ಆಗ ಏನಾದ್ರು ಇದೇ ಮರದ ಕೊಂಬೆ ಮುರಿದು ಬಿದ್ದಿದರೆ ಹತ್ತಾರು ಜನ ಸಾವನ್ನಪ್ಪುತ್ತಿದ್ದರು ಅನ್ನೋದು ಸ್ಥಳೀಯರ ಮಾತು. ಅಲ್ಲದೆ ಕಳೆದ ಕೆಲವು ದಿನಗಳಿಂದ ಕೆಇಬಿ ಕಚೇರಿ ವ್ಯಾಪ್ತಿಯಲ್ಲಿದ್ದ ಈ ಆಲದ ಮರದ ಕೊಂಬೆಗಳು ಬೀಳುವ ಹಂತದಲ್ಲಿದ್ದವು. 

Kolar: ಕುಚಿಕು ಫ್ರೆಂಡ್ಸ್‌ಗಳಾದ ಕೋತಿ, ನಾಯಿ ಹಾಗೂ ಬೆಕ್ಕು!

ಆಗಲೇ ಕೆಲವು ಸ್ಥಳೀಯರು ಎಚ್ಚರಿಸಿದ್ದರು. ಆದರೆ ಅದನ್ನು ಯಾರೂ ಅಷ್ಟಾಗಿ ಗಮನಿಸದೆ ನಿರ್ಲಕ್ಷ್ಯ ಮಾಡಿದರ ಪರಿಣಾಮ ಇಂದು ಎರಡು ಜೀವಗಳು ಬಲಿಯಾಗಿವೆ, ಕೂಡಲೇ ಈ ಮುರಿಯುವ ಹಂತದಲ್ಲಿರುವ ಮರಗಳನ್ನು ತೆರವು ಮಾಡಿ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬೇಕು ಅನ್ನೋದು ಸ್ಥಳೀಯರ ಮಾತು. ಇನ್ನು ಘಟನೆ ಸಂಬಂದ ವೇಮಗಲ್​ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಘಟನೆ ಸಂಬಂದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ಮರ ತೆರವು ಮಾಡಲು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ. ಒಟ್ಟಾರೆ ನೂರಾರು ವರ್ಷಗಳಿಂದ ಹತ್ತಾರು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿ ನೆರಳು ನೀಡಿದ್ದ ಮರ ಏಕಾಏಕಿ ಬಿದ್ದು ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಮಾತ್ರ ದುರಂತವೇ ಸರಿ.

click me!