ಆಸ್ತಿಗಾಗಿ 5 ತಿಂಗಳ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಕುಡಿಸಿದ ಮಲತಾಯಿ: ಕಂದಮ್ಮ ದಾರುಣ ಸಾವು

By Sathish Kumar KHFirst Published Sep 1, 2023, 11:28 AM IST
Highlights

ಆಸ್ತಿಗಾಗಿ ಮಲತಾಯಿಯೊಬ್ಬಳು ಜಗತ್ತಿನ ಅರಿವೇ ಇಲ್ಲದ 5 ತಿಂಗಳ ಮಗುವಿಗೆ ಹಾಲಿಗೆ ವಿಷವನ್ನು ಬೆರೆಸಿ ಕುಡಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ (ಸೆ.01): ಆಸ್ತಿ, ಹಣ, ಅಂತಸ್ತು ಹಾಗೂ ಸಂಪತ್ತಿಗಾಗಿ ಯುದ್ಧಗಳನ್ನು ಮಾಡಿರುವುದನ್ನು ನೋಡಿದ್ದೇವೆ. ಒಡಹುಟ್ಟಿದವರೇ ದಾಯಾದಿಗಳಾಗಿ ಕಾದಾಡಿದ್ದನ್ನೂ ಕಂಡಿದ್ದೇವೆ. ಆದರೆ, ಆಸ್ತಿಗಾಗಿ ಜಗತ್ತಿನ ಬಗ್ಗೆ ಅರಿವೇ ಇಲ್ಲದ ಹಸುಗೂಸನ್ನು ಕೊಲೆ ಮಾಡಿರುವ ಪೈಶಾಚಿಕ ಕೃತ್ಯವನ್ನು ಕಥೆ, ಕಾದಂಬರಿಗಳಲ್ಲಿ ಬಿಟ್ಟರೆ ನೈಜವಾಗಿ ಎಲ್ಲೂ ಕಂಡು, ಕೇಳಿರಲಿಕ್ಕಿಲ್ಲ. ಆದರೆ, ಯಾದಗಿರಿ ಜಿಲ್ಲೆಯಲ್ಲೊಬ್ಬ ಮಲತಾಯಿ ತನ್ನ ಗಂಡನ ಆಸ್ತಿ ತನ್ನ ಮಕ್ಕಳಿಗೆ ಸೇರದೇ ಗಂಡನ ಇನ್ನೊಬ್ಬ ಹೆಂಡತಿಯ ಪುತ್ರನಿಗೆ ಸೇರಿತ್ತದೆ ಎಂದು 5 ತಿಂಗಳ ಹಸುಗೂಸಿಗೆ ಕುಡಿಸುವ ಹಾಲಿಗೆ ವಿಷ ಬೆರೆಸಿ ಕುಡಿಸಿದ್ದಾಳೆ. ವಿಷದ ಹಾಲನ್ನು ಕುಡಿದು ಮಗು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಹೌದು, ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ ಐದು ತಿಂಗಳ ಹಸುಗೂಸನ್ನೇ ಮಲತಾಯಿ ಕೊಂದಿದ್ದಾಳೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಘಟ‌ನೆ ನಡೆದಿದೆ. ಮೃತ ಮಗು ಸಂಗೀತಾ (5 ತಿಂಗಳು) ಆಗಿದೆ. ಮಗುವನ್ನು ಅವಳ ಮಲತಾಯಿ ದೇವಮ್ಮ ಚೆಟ್ಟಿಗೇರಿ ಹಸುಗೂಸಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ್ದಾಳೆ. ಸಾವನ್ನಪ್ಪಿದ 5 ತಿಂಗಳ ಹಸುಗೂಸಿನ ತಾಯಿ ಶ್ರೀದೇವಿ ಚೆಟ್ಟಿಗೇರಿ ಆಗಿದ್ದಾಳೆ. ಮಗುವಿನ ತಾಯಿ ಶ್ರೀದೇವಿ ಮನೆಯಲ್ಲಿ ಮಗುವಿಗೆ ಹಾಲು ಕುಡಿಸುವಾಗ, ನಾನು ಮಗುವಿಗೆ ಹಾಲುಣಿಸುತ್ತೇನೆ ಎಂದು ದೇವಮ್ಮ ರೂಮಿಗೆ ಕರೆದುಕೊಮಡು ಹೋಗಿದ್ದಾಳೆ. 

ದೇವರು ಒಂದು ಅವಕಾಶ ಕೊಟ್ಟಿದ್ದರೂ ಸ್ಪಂದನಾ ಸಾವು ಗೆದ್ದು ಬಿಡುತ್ತಿದ್ದಳು: ವಿಜಯ್‌ ರಾಘವೇಂದ್ರ

ಬಾಯಲ್ಲಿ ನೊರೆ ಬಂದು ಸಾವನ್ನಪ್ಪಿದ ಮಗು: ಮಗುವನ್ನು ರೂಮಿಗೆ ರೂಮಿಗೆ ಕರೆದೋಯ್ದು ಬಾಗಿಲು ಮುಚ್ಚಿ, ಮಗುವಿಗೆ ಕುಡಿಸುತ್ತಿದ್ದ ಹಾಲಿನ ಬಾಟಲಿನಲ್ಲಿ ವಿಷ ಬೆರೆಸಿ ಕುಡಿಸಿದ್ದಾಳೆ. ವಿಷಬೆರೆತ ಹಾಲು ಕುಡಿದ ನಂತರ ಮಗು ವಾಂತಿ ಮಾಡಿಕೊಳ್ಳಲು ಆರಂಭಿಸಿದೆ. ಇನ್ನು ಮಗುವಿಗೆ ಹಾಲು ಡೈಜೆಸ್ಟ್‌ ಆಗಿಲ್ಲವೆಂದು ಬಾಯಿ ಒರೆಸಿ ತಾಯಿ ಸಮಾಧಾನ ಮಾಡಲು ಮುಂದಾಗಿದ್ದಾಳೆ. ಆದರೆ, ಮಗು ಒಂದೇ ಸಮನೇ ಅಳುತ್ತಿತ್ತು. ಹಾಲುಣಿಸಿ 3 ಗಂಟೆಯ ನಂತರ ಮಗುವಿನ ಬಾಯಲ್ಲಿ ನೊರೆ ಬರಲು ಆರಂಭವಾಗಿದೆ. ಅದಾಗಲೇ ಮಗುವಿನ ಇಡೀ ದೇಹಕ್ಕೆ ವಿಷ ಆವರಿಸಿತ್ತು. ನಂತರ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮಗು ಸಂಗೀತಾ ಸಾವನ್ನಪ್ಪಿದೆ.

ಸಿದ್ದಪ್ಪನಿಗೆ ಇಬ್ಬರು ಹೆಂಡತಿಯರು: ಇನ್ನು ಈ ಘಟನೆ ಕಳೆದ ಎರಡು ದಿನಗಳ ಹಿಂದೆ (ಆ.30) ಬಬಲಾದ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಬಲಾದ ಗ್ರಾಮದ ಸಿದ್ದಪ್ಪ ಚೆಟ್ಟಿಗೇರಿ ಎಂಬಾತ ಎರಡು ಮದುವೆಯಾಗಿದ್ದನು. ಈತ ಕಳೆದ 11 ವರ್ಷಗಳ ಹಿಂದೆ ಶ್ರೀದೇವಿಯನ್ನ ಮೊದಲ ಮದುವೆ ಆಗಿದ್ದನು. ಈಕೆಗೆ ಮಕ್ಕಳಾಗದ ಹಿನ್ನೆಲೆಯಲ್ಲಿ 7 ವರ್ಷದ ಹಿಂದೆ ದೇವಮ್ಮಳನ್ನು ಮದುವೆಯಾಗಿದ್ದನು. ಇನ್ನು ದೇವಮ್ಮಳನ್ನು ಮದುವೆಯಾದ್ಮೇಲೆ ಮೊದಲ ಪತ್ನಿ ಶ್ರೀದೇವು ಗಂಡನ ಮನೆ ಬಿಟ್ಟು ಚಾಮನಳ್ಳಿಯ ತನ್ನ ತವರು ಮನೆ ಸೇರಿಕೊಂಡಿದ್ದಳು.

ರಾಜಿ ಸಂಧಾನದ ಮೂಲಕ ವಾಪಸ್‌ ಬಂದಿದ್ದ ಮೊದಲ ಪತ್ನಿ: ಇನ್ನು ವಯಸ್ಸಾಗುತ್ತಾ ಹೆಣ್ಣಿಗೆ ಗಂಡನೇ ಆಸರೆ ಎಂದು ಬುದ್ಧಿವಾದ ಹೇಳಿದ ಶ್ರೀದೇವಿ ಅವರ ಪೋಷಕರು, ರಾಜಿ ಸಂಧಾನದ ಮೂಲಕ ಸಿದ್ದಪ್ಪ ಹಾಗೂ ಆತನ ಮೊದಲ ಪತ್ನಿ ಶ್ರೀದೇವಿಯನ್ನು ಮೂರು ವರ್ಷಗಳ ಹಿಂದೆ ಒಂದುಗೂಡಿಸಿ ಗಂಡನ ಮನೆಗೆ ಕಳುಹಿಸಿದ್ದಾರೆ. ಒಂದೇ ಮನೆಯಲ್ಲಿ ಸಿದ್ದಪ್ಪನ ಇಬ್ಬರು ಹೆಂಡತಿಯರು ಇದ್ದರು. ಆದರೆ, ಬಬಲಾದ ಗ್ರಾಮದ ಗಂಡನ ಮನೆಗೆ ಬಂದಿದ್ದ ಶ್ರೀದೇವಿ ಮೇಲೆ ಎರಡನೇ ಹೆಂಡತಿ ದೇವಮ್ಮ ಹಿತ ಶತ್ರುವಂತೆ ಕಾಡುತ್ತಿದ್ದಳು. ಇನ್ನು ಶ್ರೀದೇವಿಗೆ ಕಳೆದ 5 ತಿಂಗಳ ಹಿಂದೆ ಮಗು ಜನಿಸಿದ್ದು, ತವರು ಮನೆಯಿಂದ ಬಾಣಂತನ ಮುಗಿಸಿಕೊಂಡು ವಾಪಸ್‌ ಬಂದಿದ್ದಳು. ಈಗ ಆಸ್ತಿ ಮೊದಲ ಪತ್ನಿಯ ಮಗುವಿಗೆ ಹೋಗುತ್ತದೆ ಎಂದು ಮಗುವಿಗೆ ವಿಷವುಣಿಸಿ ಕೊಲೆ ಮಾಡಿದ್ದಾರೆ.

ಮೊನ್ನೆ ಕನಸಲ್ಲಿ ಬಂದಿದ್ದ ಸ್ಪಂದನಾ, ಮಗನ ಹೋಮ್‌ವರ್ಕ್‌ ಬಗ್ಗೆ ಕೇಳಿದ್ಲು: ವಿಜಯ್‌ ರಾಘವೇಂದ್ರ

ಮೊದಲ ಪತ್ನಿ ಮಕ್ಕಳಿಗೆ ಮಾತ್ರ ಆಸ್ತಿ ಸಿಗುತ್ತದೆಂಬ ತಿಳುವಳಿಕೆಯಿಂದ ಕೊಲೆ:  ಸಿದ್ದಪ್ಪನ ಎರಡನೇ ಹೆಂಡತಿಯಾದ ಆರೋಪಿ ದೇವಮ್ಮಗೆ ಒಟ್ಟು ನಾಲ್ವರು ಮಕ್ಕಳಿದ್ದಾರೆ. ನಾನು ಎರಡನೇ ಹೆಂಡತಿ ಆಗಿದ್ದರಿಂದ ಕಾನೂನು ಪ್ರಕಾರ ನನ್ನ ಮಕ್ಕಳಿಗೆ ಗಂಡನ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ಎಂದು ಹೇಳಿಕೆಯ ಮಾತನ್ನು ಕೇಳಿದ್ದಾಳೆ. ಹೀಗಾಗಿ, ಮೊದಲ ಹೆಂಡತಿಯ ಮಗುವನ್ನು ಕೊಲೆ ಮಾಡಿದರೆ ಎಲ್ಲ ಆಸ್ತಿಯೂ ತನ್ನ ಮಕ್ಕಳಿಗೆ ಬರುತ್ತದೆ ಎಂದು ಕುತಂತ್ರ ಮಾಡಿದ್ದಾಳೆ. ಇನ್ನು ತನ್ನ ವಾರಗಿತ್ತಿ (ಸವತಿ) ಶ್ರೀದೇವಿಯ ಐದು ತಿಂಗಳ ಮಗುವಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಳೆ ಎಂದು ಯಾದಗಿರಿ ಜಿಲ್ಲೆಯ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

click me!