
ಬೆಂಗಳೂರು(ಸೆ.01): ಕುಡಿದ ಅಮಲಿನಲ್ಲಿ ಮನೆಯ ಕಟ್ಟಡದ 4ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ನಸುಕಿನಲ್ಲಿ ನಡೆದಿದೆ.
ಮಲ್ಲತ್ತಹಳ್ಳಿಯ ಎಂಪಿಎಂ ಲೇಔಟ್ ನಿವಾಸಿ ಮುನಾಂಜಿನಪ್ಪ (63) ಮೃತ ವ್ಯಕ್ತಿ. ಮನೆಯ ನಾಲ್ಕನೇ ಹಂತದ ಮಹಡಿಗೆ ನಸುಕಿನ 3 ಗಂಟೆ ಸುಮಾರಿಗೆ ಅಂಜಿನಪ್ಪ ತೆರಳಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ನಸುಕಿನಲ್ಲಿ ಮಹಡಿಯಲ್ಲಿ ವಾಕಿಂಗ್:
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಅಂಜಿನಪ್ಪ ಅವರು ಮೂರು ಮದುವೆಯಾಗಿದ್ದು, ಬಾಗಲಗುಂಟೆಯಲ್ಲಿ ತಮ್ಮ ಮೊದಲ ಪತ್ನಿ ಉಮಾದೇವಿ ಜತೆ ನೆಲೆಸಿದ್ದರು. ಕಳೆದ ಏಳೆಂಟು ವರ್ಷಗಳಿಂದ ಗೀತಾ ಜತೆ ಮೂರನೇ ವಿವಾಹವಾದ ಅವರು, ಆಕೆಯೊಟ್ಟಿಗೆ ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದರು. ಪ್ರತಿ ದಿನ ನಡುರಾತ್ರಿವರೆಗೆ ಮದ್ಯ ಸೇವಿಸಿ ಬಳಿಕ ನಸುಕಿನ 2 ಅಥವಾ 3 ಗಂಟೆಗೆ ಮಹಡಿಗೆ ತೆರಳಿ ಅಂಜಿನಪ್ಪ ವಾಕಿಂಗ್ ಮಾಡುತ್ತಿದ್ದರು. ಅಂತೆಯೇ ಬುಧವಾರ ರಾತ್ರಿ ಸಹ ಮದ್ಯ ಸೇವಿಸಿದ ಅಂಜಿನಪ್ಪ, ನಂತರ ನಸುಕಿನಲ್ಲಿ 4ನೇ ಮಹಡಿಗೆ ತೆರಳಿದ್ದರು. ಆ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದರು. ಕೂಡಲೇ ಅವರನ್ನು ಗೀತಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ಅಂಜಿನಪ್ಪ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕರೆಂಟ್ ಕಂಬವೇರಿದ್ದ ಎಲೆಕ್ಟ್ರಿಶಿಯನ್ ಸಾವು, ರುಂಡ -ಮುಂಡ ಬೇರ್ಪಟ್ಟು ಘೋರ ದುರಂತ: ಕುಟುಂಬಸ್ಥರ ಅಕ್ರಂದನ
ಗಂಡನನ್ನು ಹೊಡೆದು ಹತ್ಯೆ: ಮೊದಲ ಪತ್ನಿ
ತನ್ನ ಗಂಡ ಅಂಜಿನಪ್ಪ ಅವರನ್ನು ಹೊಡೆದು ಗೀತಾ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಮೃತರ ಮೊದಲ ಪತ್ನಿ ಉಮಾದೇವಿ ದೂರು ನೀಡಿದ್ದಾರೆ. ಅದರನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದಿಂದ ಕೆಳಗೆ ಬಿದ್ದು ಅಂಜಿನಪ್ಪ ಮೃತಪಟ್ಟಿದ್ದಾರೆ. ಮೃತದೇಹ ಮೇಲೆ ಹಲ್ಲೆ ನಡೆಸಿದ ಗಾಯದ ಗುರುತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದು ಕೊಲೆಯಲ್ಲ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ. ಹೀಗಿದ್ದರೂ ಮೃತರ ಮೊದಲ ಪತ್ನಿ ದೂರಿನನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮೀನ್ದಾರನಾಗಿದ್ದ ಮುನಾಂಜಿನಪ್ಪ ಅವರು, ಬಾಗಲಗುಂಟೆ ಹಾಗೂ ಮಲ್ಲತ್ತಹಳ್ಳಿ ಸೇರಿದಂತೆ ಇತರೆಡೆ ಕೋಟ್ಯಂತರ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು. ಈ ಆಸ್ತಿ ವಿಚಾರವಾಗಿ ಅವರ ಪತ್ನಿಯರ ಮಧ್ಯೆ ಮನಸ್ತಾಪ ಬೆಳೆದಿತ್ತು. ಮೊದಲ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. ಎರಡನೇ ಪತ್ನಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಇನ್ನು ಏಳು ವರ್ಷಗಳ ಹಿಂದೆ ವಿವಾಹಿತ ಗೀತಾ ಜತೆ ಅಂಜಿನಪ್ಪ ಮೂರನೇ ವಿವಾಹವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ