ತರಕಾರಿಗಳ ಮಧ್ಯೆ ಡಗ್ಸ್‌ ಇಟ್ಟು ಸಾಗಾಟ!

By Kannadaprabha NewsFirst Published Dec 30, 2020, 7:22 AM IST
Highlights

3 ಲಕ್ಷ ರು. ಮೌಲ್ಯದ ಮಾದಕವಸ್ತುಗಳ ವಶ | ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರು ಅಂತಾರಾಜ್ಯ ಪೆಡ್ಲರ್‌ಗಳ ಬಂಧನ

ಬೆಂಗಳೂರು(ಡಿ.30): ಪ್ರತ್ಯೇಕ ಪ್ರಕರಣದಲ್ಲಿ ತರಕಾರಿ ಮಧ್ಯೆ ಮಾದಕ ವಸ್ತುಗಳನ್ನಿಟ್ಟು ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಪೆಡ್ಲರ್‌ಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿ, ಸುಮಾರು .73 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ.

ದಕ್ಷಿಣ ಕನ್ನದ ಮೂಲದ ಕೆ.ಪ್ರೀತಿಪಾಲ್‌ (48), ಕೆ.ಖಲಂದರ್‌ (31), ಉತ್ತರ ಪ್ರದೇಶ ಮೂಲದ ಅಮಿತ್‌ ಕುಮಾರ್‌ (31), ಸೂರಜ್‌ (32) ಎಂಬುವರನ್ನು ಬಂಧಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್‌ ಜೋಶಿ ತಿಳಿಸಿದ್ದಾರೆ.

ಆರೋಪಿಗಳಾದ ಕೆ.ಪ್ರೀತಿಪಾಲ್‌ ಮತ್ತು ಕೆ.ಖಲಂದರ್‌ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿರುವ ಗುಡ್ಡಗಾಡು ಪ್ರದೇಶದಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿ ಸ್ವರಾಜ್‌ ಮಜ್ದಾ ವಾಹನದಲ್ಲಿ ಬೆಂಗಳೂರಿಗೆ ತರುತ್ತಿದ್ದರು. ಯಾರಿಗೂ ಅನುಮಾನ ಬಾರದಂತೆ ವಾಹನದಲ್ಲಿ ತರಕಾರಿಗಳನ್ನು ತುಂಬಿದ ಕ್ರೇಟ್‌ ಇಟ್ಟು ಅದರ ಮಧ್ಯೆ ಗಾಂಜಾ ತುಂಬುತ್ತಿದ್ದರು.

ರೂಪಾಂತರಿ ವೈರಸ್ ನಿಂದ ಬಚಾವಾಗುವ ಪ್ಲಾನ್ ಹೇಳಿದ ICMR

ಚೆಕ್‌ ಪೋಸ್ಟ್‌ಗಳಲ್ಲಿ ತರಕಾರಿ ವಾಹನ ಎಂದು ಭಾವಿಸಿ ಪೊಲೀಸರು ವಾಹನವನ್ನು ಬಿಡುತ್ತಿದ್ದರು. ಹೀಗಾಗಿ ಸಿಕ್ಕಿ ಬಿದ್ದಿರಲಿಲ್ಲ. ಕಳೆದ ಒಂದು ವರ್ಷದಿಂದ ದಂಧೆ ನಡೆಸುತ್ತಿದ್ದಾರೆ. ಬೆಂಗಳೂರಿಗೆ ಬಂದ ಬಳಿಕ ಮಂಗಳೂರು ಹಾಗೂ ಕಾಸರಗೋಡಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದರು. ಬೆಂಗಳೂರು, ಮಂಗಳೂರು ಹಾಗೂ ಕಾಸರಗೋಡು ಇವರ ದಂಧೆಯ ಪ್ರಮುಖ ಸ್ಥಳಗಳಾಗಿದ್ದವು. ಕಾಲೇಜು ವಿದ್ಯಾರ್ಥಿಗಳು, ಸಾಫ್ಟ್‌ವೇರ್‌ ಕಂಪನಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಮೋಜಿನ ಜೀವನಕ್ಕಾಗಿ ಡ್ರಗ್ಸ್‌ ದಂಧೆ:

ಸುದ್ದಗುಂಟೆಪಾಳ್ಯದ ಬಿ.ಜಿ. ರಸ್ತೆ ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಮೈಕೋ ಲೇಔಟ್‌ ಉಪ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಸುಧೀರ್‌ ಎಂ. ಹೆಗಡೆ ಹಾಗೂ ಇನ್ಸ್‌ಪೆಕ್ಟರ್‌ ಎಲ್‌.ಕೆ.ರಮೇಶ್‌ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ . 65 ಲಕ್ಷ ಮೌಲ್ಯದ 214 ಕೆ.ಜಿ. 500 ಗ್ರಾಂ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ಮೋಜಿನ ಜೀವನಕ್ಕಾಗಿ ಮಾದಕ ವಸ್ತು ಮಾರಾಟದ ದಂಧೆಯಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

click me!