ಅಧಿಕಾರಿ ಜತೆ ಸಂಬಂಧಕ್ಕೆ ಪತ್ನಿಗೆ ಸ್ಯಾಂಟ್ರೋ ಒತ್ತಡ..!

By Kannadaprabha NewsFirst Published Jan 26, 2023, 5:00 AM IST
Highlights

ತಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಪತಿ ರವಿ ಯತ್ನಿಸಿದ್ದ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೆ. ನಮ್ಮ ಮನೆಗೆ ಬರುತ್ತಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಜತೆ ಖಾಸಗಿ ಕ್ಷಣ ಕಳೆಯುವಂತೆ ಪತಿ ತಾಕೀತು ಮಾಡಿದ್ದರು. ನಾನು ಒಪ್ಪದೆ ಹೋದಾಗ ಕಾಟನ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಪ್ರವೀಣ್‌ ಬಳಸಿಕೊಂಡು ನನ್ನ ಮೇಲೆ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು ಎಂದು ರವಿ ಪತ್ನಿ ಹೇಳಿದ್ದಾರೆ.

ಬೆಂಗಳೂರು(ಜ.26): ‘ನಾನು ನಿವೃತ್ತ ಐಎಎಸ್‌ ಅಧಿಕಾರಿಯೊಬ್ಬರ ಜತೆ ಖಾಸಗಿ ಕ್ಷಣಗಳನ್ನು ಕಳೆಯುವಂತೆ ಪತಿ ಸ್ಯಾಂಟ್ರೋ ರವಿ ಸೂಚನೆಯನ್ನು ಪಾಲಿಸದ ಕಾರಣಕ್ಕೆ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು’ ಎಂದು ಸಿಸಿಬಿ ವಿಚಾರಣೆ ವೇಳೆ ಸ್ಯಾಂಟ್ರೋ ರವಿ ಪತ್ನಿ ಸ್ಫೋಟಕ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ. ಕಾಟನ್‌ಪೇಟೆ ಠಾಣೆಯಲ್ಲಿ ತಮ್ಮ ಮೇಲೆ ದಾಖಲಾಗಿದ್ದ ದರೋಡೆ ಪ್ರಕರಣ ಸಂಬಂಧ ನೋಟಿಸ್‌ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ವಿಚಾರಣೆಗೆ ಬುಧವಾರ ಹಾಜರಾಗಿದ್ದ ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಪತ್ನಿ, ಸುಮಾರು ಮೂರು ಗಂಟೆಗಳಿಗೂ ಅಧಿಕ ಹೊತ್ತು ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ ಹೊರ ಬಂದಿದ್ದಾರೆ.

‘ತಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಪತಿ ರವಿ ಯತ್ನಿಸಿದ್ದ. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿದ್ದೆ. ನಮ್ಮ ಮನೆಗೆ ಬರುತ್ತಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಜತೆ ಖಾಸಗಿ ಕ್ಷಣ ಕಳೆಯುವಂತೆ ಪತಿ ತಾಕೀತು ಮಾಡಿದ್ದರು. ನಾನು ಒಪ್ಪದೆ ಹೋದಾಗ ಕಾಟನ್‌ಪೇಟೆ ಠಾಣೆಯ ಇನ್‌ಸ್ಪೆಕ್ಟರ್‌ ಪ್ರವೀಣ್‌ ಬಳಸಿಕೊಂಡು ನನ್ನ ಮೇಲೆ ಸುಳ್ಳು ದರೋಡೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು’ ಎಂದು ರವಿ ಪತ್ನಿ ಹೇಳಿದ್ದಾರೆ.

ಸ್ಯಾಂಟ್ರೋ ರವಿ ಪ್ರಕರಣ: ಹಿರಿಯ ಅಧಿಕಾರಿಗಳ ಹೆಸರು ಬಹಿರಂಗ

ಅಲ್ಲದೆ ದರೋಡೆ ಕೃತ್ಯ ನಡೆದಿದೆ ಎಂದು ಹೇಳಲಾದ ದಿನ ತಾನು ಮೈಸೂರಿನಲ್ಲಿದ್ದೆ ಎಂಬುದಕ್ಕೆ ಆಕೆ ಪುರಾವೆ ಸಲ್ಲಿಸಿದ್ದಾರೆ. ಈ ವಿಚಾರಣೆ ಮುಗಿಸಿ ಹೊರ ಬಂದ ನಂತರ ಮಾಧ್ಯಮಗಳಿಗೆ ಕೂಡ ಹೆಸರು ಪ್ರಸ್ತಾಪಿಸಿ ಸಂತ್ರಸ್ತೆ ಆರೋಪ ಮಾಡಿದ್ದಾರೆ.

ಸಿಸಿಬಿ ವಿಚಾರಣೆ ಬಳಿ ಸುದ್ದಿಗಾರರ ಜತೆ ಮಾತನಾಡಿದ ಸ್ಯಾಂಟ್ರೋ ರವಿ ಪತ್ನಿ, ‘ಬೆಂಗಳೂರಿನ ನಮ್ಮ ಮನೆಗೆ ನಿವೃತ್ತ ಐಎಎಸ್‌ ಅಧಿಕಾರಿಯನ್ನು ಪತಿ ರವಿ ಕರೆದುಕೊಂಡು ಬಂದು ನನಗೆ ಪರಿಚಯಿಸಿದ್ದರು. ಆನಂತರ ನಾವು ಮೈಸೂರಿಗೆ ಮರಳಿದ ಬಳಿಕ ನಿವೃತ್ತ ಅಧಿಕಾರಿಯ ಮೊಬೈಲ್‌ ನಂಬರ್‌ನನ್ನು ನನಗೆ ನೀಡಿದ ರವಿ, ಅಧಿಕಾರಿ ಜತೆ ಸಲುಗೆಯಿಂದ ಮಾತನಾಡುವಂತೆ ಹಾಗೂ ಚಾಟ್‌ ಮಾಡುವಂತೆ ಸೂಚಿಸಿದ್ದ. ಕೆಲ ದಿನಗಳ ಬಳಿಕ ನನಗೆ ಅವರ ಜತೆ ಖಾಸಗಿ ಕ್ಷಣಗಳನ್ನು ಕಳೆಯುವಂತೆ ಸೂಚಿಸಲಾಯಿತು ಎಂದು ಆರೋಪಿಸಿದ್ದಾರೆ.

ನಾನು ಹೇಳಿದಂತೆ ನಿವೃತ್ತ ಅಧಿಕಾರಿ ಜತೆ ನೀನು ಸಲುಗೆ ಬೆಳೆಸಿಕೊಂಡರೆ ಸರ್ಕಾರದ ಮಟ್ಟದಲ್ಲಿ ಕೆಲಸಗಳಾಗುತ್ತವೆ ಎಂದು ರವಿ ತಾಕೀತು ಮಾಡಿದ್ದ. ಈ ಮಾತಿಗೆ ನಾನು ವಿರೋಧ ವ್ಯಕ್ತಪಡಿಸಿದೆ. ಆಗ ಕೋಪಗೊಂಡು ನನಗೆ ಬಾಯಿಗೆ ಬಂದಂತೆ ಬೈದು ಹಲ್ಲೆ ನಡೆಸಿದರು. ಆಗ ನನಗೆ ಪೊಲೀಸರು ಗೊತ್ತು. ನಿನಗೆ ಎಂದು ಗತಿ ಕಾಣಿಸುತ್ತೇನೆ ಎಂದು ಬೆದರಿಸಿದರು. ಇದಾದ ನಂತರ ಕಾಟನ್‌ಪೇಟೆ ಠಾಣೆಯಲ್ಲಿ ನನ್ನ ಮೇಲೆ ದರೋಡೆ ಪ್ರಕರಣ ದಾಖಲಾಯಿತು ಎಂದು ಹೇಳಿದ್ದಾರೆ.

‘ಎಸಿಪಿ ಮುಂದೆ ಬೇಡಿಕೊಂಡರೂ ಕೇಳಲಿಲ್ಲ’

ಮೈಸೂರಿನಿಂದ ಸುಳ್ಳು ದರೋಡೆ ಪ್ರಕರಣದಲ್ಲಿ ನನ್ನನ್ನು ಮಾತ್ರವಲ್ಲದೆ ತಂಗಿಯನ್ನು ಸಹ ಬಂಧಿಸಲಾಯಿತು. ಅಂದು ಮೈಸೂರಿನಿಂದ ನಮ್ಮನ್ನು ಕರೆತಂದ ಪೊಲೀಸರ ಮುಂದೆ ನಾವು ತಪ್ಪು ಮಾಡಿಲ್ಲ ಎಂದು ಹೇಳಿದರೂ ಕೇಳಲಿಲ್ಲ. ಆಗ ಠಾಣೆಗೆ ಬಂದ ಎಸಿಪಿ ಮುಂದೆ ಸಹ ಬೇಡಿಕೊಂಡರೂ ಕೇಳದೆ ನಮ್ಮನ್ನು ಜೈಲಿಗೆ ಕಳುಹಿಸಿದ್ದರು ಎಂದು ಸಂತ್ರಸ್ತೆ ದೂರಿದ್ದಾರೆ.

ಸ್ಯಾಂಟ್ರೋ ರವಿ ವಿಗ್‌ ಸೀಕ್ರೆಟ್‌ ಬಯಲು: ಪತಿಯ ಅಸಲಿ ವೇಷ ಕಂಡು ಎರಡನೇ ಪತ್ನಿ ತಬ್ಬಿಬ್ಬು

ಒಂದು ತಿಂಗಳ ಹಿಂದೆಯೇ ನನ್ನಿಂದ ಮೊಬೈಲ್‌ ಕಸಿದುಕೊಂಡು ಮನೆಯಿಂದ ರವಿ ಹೊರ ಹಾಕಿದ್ದ. ಆ ಮೊಬೈಲ್‌ ಬಳಸಿಕೊಂಡು ನಾನು ಬೆಂಗಳೂರಿನಲ್ಲೇ ಇರುವಂತೆ ಸಾಕ್ಷ್ಯ ಸೃಷ್ಟಿಸಿ ಪ್ರಕರಣದಲ್ಲಿ ಸಿಲುಕಿಸಲಾಯಿತು. ಘಟನೆ ನಡೆದ ದಿನ ನಾನು ಮೈಸೂರಿನಲ್ಲಿದ್ದ ಬಗ್ಗೆ ಪುರಾವೆಯನ್ನು ಸಿಸಿಬಿಗೆ ಸಲ್ಲಿಸಿದ್ದೇನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ನಾಳೆ ಇನ್‌ಸ್ಪೆಕ್ಟರ್‌ ಪ್ರವೀಣ್‌ ವಿಚಾರಣೆ

ಸ್ಯಾಂಟ್ರೋ ರವಿ ಪತ್ನಿ ವಿರುದ್ಧ ಸುಳ್ಳು ದರೋಡೆ ಪ್ರಕರಣ ದಾಖಲಿಸಿದ ಆರೋಪ ಸಂಬಂಧ ವಿಚಾರಣೆಗೆ ಶುಕ್ರವಾರ ಬರುವಂತೆ ಇನ್‌ಸ್ಪೆಕ್ಟರ್‌ ಪ್ರವೀಣ್‌ಗೆ ಸಿಸಿಬಿ ಪೊಲೀಸರು ನೋಟಿಸ್‌ ನೀಡಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ನಂತರ ಪ್ರವೀಣ್‌ ಅಮಾನತುಗೊಂಡಿದ್ದಾರೆ.

click me!