Love Jihad: ಬುರ್ಖಾ ಧರಿಸಲು ನಿರಾಕರಿಸಿದ ರೂಪಾಲಿ, ಪತ್ನಿಯನ್ನು ಕತ್ತು ಸೀಳಿ ಕೊಂದ ಪತಿ!

By Santosh NaikFirst Published Sep 27, 2022, 2:21 PM IST
Highlights

ಪೊಲೀಸರ ಮಾಹಿತಿಯ ಪ್ರಕಾರ, ಪತಿ ಇಕ್ಬಾಲ್‌ ಶೇಖ್‌ ಸೋಮವಾರ ರಾತ್ರಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಮುಂಬೈನ ಚೆಂಬೂರ್‌ನಲ್ಲಿ ಈ ಘಟನೆ ನಡೆಸಿದೆ. ಆರೋಪಿ ಇಕ್ಬಾಲ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ (ಸೆ. 27): ಬುರ್ಖಾ ಮತ್ತು ಹಿಜಾಬ್ ಬಗ್ಗೆ ಅನೇಕ ದೇಶಗಳಲ್ಲಿ ಹೆಚ್ಚುತ್ತಿರುವ ಗದ್ದಲದ ನಡುವೆ, ಮುಂಬೈನಿಂದ ಆಘಾತಕಾರಿ ಸುದ್ದಿ ಬಂದಿದೆ. ಇಕ್ಬಾಲ್ ಮೊಹಮದ್‌ ಶೇಖ್ ಎಂಬ ವ್ಯಕ್ತಿ ತನ್ನ ಪತ್ನಿ ರೂಪಾಲಿ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸುತ್ತಿಲ್ಲ ಮತ್ತು ಬುರ್ಖಾ ಧರಿಸಿಲ್ಲ ಎಂಬ ಕಾರಣಕ್ಕೆ ಆಕೆಯ ಕತ್ತು ಸೀಳಿ ಕೊಂದಿದ್ದಾನೆ. ರೂಪಾಲಿ, ಇಕ್ಬಾಲ್‌ನೊಂದಿಗೆ ಅಂತರ್‌ಧರ್ಮೀಯ ವಿವಾಹವಾಗಿದ್ದಳು, ಆದರೆ ಅವಳು ಇಕ್ಬಾಲ್‌ನ ಬಲವಂತದಿಂದ ಬೇಸತ್ತು ಕೆಲ ತಿಂಗಳಿನಿಂದ ವಿಚ್ಛೇದನಕ್ಕೆ ಪ್ರಯತ್ನಿಸುತ್ತಿದ್ದಳು. ವಿಚ್ಛೇದನಕ್ಕೂ ಮುನ್ನವೇ ಆರೋಪಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಪೊಲೀಸರ ಪ್ರಕಾರ, ಆರೋಪಿ ಇಕ್ಬಾಲ್ ಶೇಖ್ ಸೋಮವಾರ ರಾತ್ರಿ ತನ್ನ ಪತ್ನಿ ರೂಪಾಲಿಯ ಕತ್ತನ್ನು ಚಾಕುವಿನಿಂದ ಸೀಳಿ ಕೊಲೆ ಮಾಡಿದ್ದಾರೆ. ಮುಂಬೈನ ಚೆಂಬೂರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ಇಕ್ಬಾಲ್ ನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ರೂಪಾಲಿ ಹಾಗೂ ಇಕ್ಬಾಲ್‌ ಶೇಖ್‌ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಮೂರು ವರ್ಷಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. ಅದಾದ ಬಳಿಕ, ರೂಪಾಲಿ ಚೆಂಬೂರ್‌ ಪ್ರದೇಶದಲ್ಲಿದ್ದ ಇಕ್ಬಾಲ್‌ನ ಮನೆಯಲ್ಲಿಯೇ ವಾಸ ಮಾಡುತ್ತಿದ್ದರು.

ಪ್ರತಿದಿನ ಚಿತ್ರಹಿಂಸೆ: ರೂಪಾಲಿ ಹಿಂದು ಆಗಿದ್ದ ಕಾರಣಕ್ಕೆ ಮದುವೆಯ ನಂತರ ಮುಸ್ಲಿಂ ಸಂಪ್ರದಾಯವನ್ನು (Love Jihaad) ಅನುಕರಣೆ ಮಾಡುತ್ತಿರಲಿಲ್ಲ. ಇದಕ್ಕಾಗಿ ಇಕ್ಬಾಲ್‌ ಹಾಗೂ ಅವರ ಕುಟುಂಬ ರೂಪಾಲಿಗೆ ಪ್ರತಿ ದಿನವೂ ಚಿತ್ರಹಿಂಸೆ ನೀಡುತ್ತಿದ್ದರು. ಅದಲ್ಲದೆ, ರೂಪಾಲಿಗೆ ಬುರ್ಖಾ(burqa) ಧರಿಸುವಂತೆ ಇಕ್ಬಾಲ್‌ ಹಾಗೂ ಆತನ ಕುಟುಂಬ ಪ್ರತಿನಿತ್ಯ (Islamic tradition) ಒತ್ತಾಯ ಮಾಡುತ್ತಿತ್ತು. ಆದರೆ, ರೂಪಾಲಿ ಮಾತ್ರ ಇದಕ್ಕೆ ವಿರೋಧಿಸಿದ್ದರು. ಈ ಕುರಿತಾಗಿಯೇ ಅವರಿಬ್ಬರ ನಡುವೆ ಅಸಮಾಧಾನ ತಲೆದೋರಿತ್ತು. ಇದಾದ ನಂತರ ರೂಪಾಲಿ (Rupali Chandanshive) ಮತ್ತು ಇಕ್ಬಾಲ್  (Iqbal Mohammad Sheikh)ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದರು. ದಂಪತಿಗೆ ಒಬ್ಬ ಮಗನೂ ಇದ್ದಾನೆ.

6 ತಿಂಗಳಿಂದ ಬೇರೆ ಬೇರೆ ವಾಸ: ಕಳೆದ ಆರು ತಿಂಗಳಿನಿಂದ ಇಬ್ಬರೂ ಬೇರೆ ಬೇರೆ ವಾಸ ಮಾಡುತ್ತಿದ್ದರೂ, ಫೋನ್‌ನಲ್ಲಿ ಮಾತ್ರ ಮಾತನಾಡುವುದು ನಡೆಯುತ್ತಿತ್ತು. ಆದರೆ,  ಈ ಸಮಯದಲ್ಲಿಯೂ ಮುಸ್ಲಿಂ ಸಂಪ್ರದಾಯಗಳನ್ನು ಅನುಸರಿಸುವಂತೆ ಇಕ್ಬಾಲ್ ಅವರಿಗೆ ಒತ್ತಡ ಹೇರುತ್ತಿದ್ದರು. ರೂಪಾಲಿ, ಇಕ್ಬಾಲ್ ಅವರ ಎರಡನೇ ಪತ್ನಿ. ಮೊದಲ ಪತ್ನಿಗೆ ಮಕ್ಕಳಿಲ್ಲದ ಕಾರಣ ಆಕೆಗೆ ವಿಚ್ಛೇದನ ನೀಡಿದ್ದರು.

Shobha Karandlaje ಲವ್‌ ಜಿಹಾದ್‌ ನಿಷೇಧ ಕಾನೂನು ಬೇಕು, ಶೋಭಾ ಆಗ್ರಹ!

ಕುತ್ತಿಗೆಗೆ ಚಾಕು ಇರಿತ: ಆರೋಪಿ ಇಕ್ಬಾಲ್ ಶೇಖ್ ಸೋಮವಾರ ಸಂಜೆ ಚೆಂಬೂರ್ (Chembur) ಪ್ರದೇಶದ ಪಿಎಲ್ ಲೋಖಂಡೆ ಮಾರ್ಗದಲ್ಲಿರುವ ನಾಗೇವಾಡಿಯಲ್ಲಿ ತನ್ನನ್ನು ಭೇಟಿಯಾಗಲು ರೂಪಾಲಿಗೆ ಕರೆ ಮಾಡಿದ್ದ. ಈ ವೇಳೆ ಬುರ್ಖಾ ಮತ್ತಿತರ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿದೆ. ಈ ಬಗ್ಗೆ ರೂಪಾಲಿ ವಿಚ್ಛೇದನದ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ವಾಗ್ವಾದ ಮತ್ತು ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಇಕ್ಬಾಲ್ ತನ್ನ ಜೇಬಿನಿಂದ ಚಾಕು ತೆಗೆದು ರೂಪಾಲಿ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ. ರೂಪಾಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

Love Jihad ಹಿಂದೂ ಹುಡುಗಿ ಪ್ರೀತಿಸಿ ಕಿಡ್ನಾಪ್ ಆರೋಪ, ಎರಡು ಮುಸ್ಲಿಮ್ ಮನೆಗೆ ಬೆಂಕಿ!

ಭಾನುವಾರ ಸಂತ್ರಸ್ತೆಯ ಕುಟುಂಬದ ಸದಸ್ಯರ ಎಫ್‌ಐಆರ್ ಆಧರಿಸಿ, ತಿಲಕ್ ನಗರ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ, ರೂಪಾಲಿಯನ್ನು ಮರಳಿ ಮನೆಗೆ ಕರೆತರುವ ನಿಟ್ಟಿನಲ್ಲಿ ಆಕೆಯ ಮನವೊಲಿಸಯವ ಸಲುವಾಗಿ ಇಕ್ಬಾಲ್‌ ನಾಗೇವಾಡಿಯಲ್ಲಿ ಭೇಟಿಯಾಗುವಂತೆ ಹೇಳಿಲ್ಲ. ಆದರೆ, ರೂಪಾಲಿ ಮಾತ್ರ ತನಗೆ ವಿಚ್ಛೇದನ ಬೇಕೇ ಬೇಕು ಎಂದು ಹಠ ಮಾಡಿದ್ದರು. ಇದರಿಂದ ಕುಪಿತಗೊಂಡ ವ್ಯಕ್ತಿ ತನ್ನ ಪತ್ನಿಯನ್ನು ಸಮೀಪದ ಲೇನ್‌ಗೆ ಎಳೆದೊಯ್ದು ಆಕೆಯ ಕತ್ತು ಸೀಳಿ ಆಕೆಯ ಕೈಗಳನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಕೃತ್ಯ ಎಸಗಿದ ಬಳಿಕ ಇಕ್ಬಾಲ್ ಸ್ಥಳದಿಂದ ಪರಾರಿಯಾಗಿದ್ದಾನೆ.

click me!