ದರ್ಶನ್ ಸಮರ್ಥಿಸಿಕೊಳ್ಳುತ್ತಿರೋ ಅಭಿಮಾನಿಗಳದ್ದು ರಾಕ್ಷಸಿ ಗುಣ; ರೇಣುಕಾಸ್ವಾಮಿ ತಾಯಿ ಆಕ್ರೋಶ

By Mahmad RafikFirst Published Jun 12, 2024, 12:01 PM IST
Highlights

ಇಂದು ನನ್ನ ಮಗನಿಗೆ ಆದ ಗತಿ, ನಾಳೆ ಅವರ ಮನೆಯಲ್ಲಿ ಆದ್ರೆ ಅಂದು ಅವರಿಗೆ ಪೆಟ್ಟು ಬೀಳುತ್ತದೆ. ಆವಾಗ ಈತನ ಮುಖ ಕಳಚುತ್ತದೆ. ಈ ನಟನ ಒಳಗೆ ಎಂತಹ ರಾಕ್ಷಸ ಗುಣ ಇದೆ ಅನ್ನೋದು ಆತನ ಅಭಿಮಾನಿಗಳಿಗೆ ಗೊತ್ತಾಗಬೇಕು.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ನಟ ದರ್ಶನ್, ಎರಡನೇ ಪತ್ನಿ ಪವಿತ್ರಾ ಗೌಡ (Darshan And Pavithra Gowda) ಸೇರಿದಂತೆ 13 ಜನರ ಬಂಧನವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ರೇಣುಕಾಸ್ವಾಮಿ ತಾಯಿ ರತ್ನಾಪ್ರಭಾ, ದರ್ಶನ್ ಪರವಾಗಿ ನಿಂತಿರುವ ಆತನ ಅಭಿಮಾನಿಗಳ (Darshan Fans) ವಿರುದ್ಧ ಆಕ್ರೋಶ ಹೊರಹಾಕಿದರು. ಇರೋ ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ. ಮದುವೆಯಾಗಿ ಒಂದು ವರ್ಷ ಆಗಿತ್ತು, ಸೊಸೆ ಗರ್ಭಿಣಿಯಾಗಿದ್ದು, ಆಕೆಯ ಮುಂದಿನ ಭವಿಷ್ಯ ಏನು ಎಂದು ಹೇಳಿ ಭಾವುಕರಾದರು. 

ನಾವು ಬೆಂಗಳೂರಿಗೆ ಹೋದಾಗ ಮಗನ ಕೊಲೆ ಆಗಿದೆ ಅನ್ನೋ ವಿಚಾರ ಗೊತ್ತಾಯ್ತು. ತುಂಬಾ ಹೇಯವಾಗಿ ಹೊಡೆದು ಮಗನ ಕೊಲೆ ಮಾಡಲಾಗಿತ್ತು. ತಲೆ, ಎದೆ, ಕಾಲು, ಮರ್ಮಾಂಗಕ್ಕೂ ಹೊಡೆದಿದ್ದಾರೆ. ಈ ರೀತಿಯ ಭೀಕರ ಕೃತ್ಯವನ್ನು ನಾನು ನೋಡಿರಲಿಲ್ಲ. ದರ್ಶನ್ ಒಬ್ಬ ದೊಡ್ಡ ನಟ. ತಪ್ಪು ಮಾಡಿದ್ರೆ ಕರೆದು ಕೇಳಬಹುದಿತ್ತು. ಈ ರೀತಿಯಾಗಿ ಗ್ಯಾಂಗ್ ಕರೆಸಿ ಕೊಲೆ ಮಾಡಿದ್ದು ತಪ್ಪು. ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಶಿಕ್ಷೆ ಆಗಬೇಕು. ಸರ್ಕಾರ ನನ್ನ ಸೊಸೆಗೆ ಪರಿಹಾರ ನೀಡಬೇಕು ಎಂದು ರತ್ನಪ್ರಭಾ ಆಗ್ರಹಿಸಿದರು.

Latest Videos

'ಹೆಂಡ್ತಿಗೆ ಹೊಡೆದ್ರೂ ಜೈ, ಕೊಲೆ ಮಾಡಿದ್ರೂ ಸೈ..' ದರ್ಶನ್‌ ಫ್ಯಾನ್ಸ್‌ಗೆ ಬುದ್ದಿ ಹೇಳೋರು ಯಾರು?

ಮಗ ದರ್ಶನ್ ಅಭಿಮಾನಿ ಅಲ್ಲ

ಮಗ ಅಪೋಲೋ ಫಾರ್ಮಸಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಶನಿವಾರ ಮಧ್ಯಾಹ್ನ ಫೋನ್ ಮಾಡಿ ಸ್ನೇಹಿತರ ಜೊತೆ ಊಟಕ್ಕೆ ಹೋಗೋದಾಗಿ ಹೇಳಿದ್ದನು. ನಾನು ರಾತ್ರಿ ಏಳೂವರೆಗೆ ಫೋನ್ ಮಾಡಿದಾಗ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಭಾನುವಾರ ಮಧ್ಯಾಹ್ನ ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಲಾಯ್ತು. ನನ್ನ ಮಗ ದರ್ಶನ್ ಅಭಿಮಾನಿಯೂ ಆಗಿರಲಿಲ್ಲ. ಮನೆಯಲ್ಲಿ ಕ್ರಿಕೆಟ್ ಮಾತ್ರ ನೋಡುತ್ತಿದ್ದನು. ಮನೆಯಲ್ಲಿ ಸಿನಿಮಾದವರ ಬಗ್ಗೆಯೂ ಮಾತನಾಡುತ್ತಿರಲಿಲ್ಲ. 

ಮೇರುನಟ ಅಲ್ಲ, ಅವನು ಖಳನಟ

ಪವಿತ್ರಾ ಗೌಡ ಒಬ್ಬಳು ಸಿನಿಮಾ ನಟಿ. ಸೋಶಿಯಲ್ ಮೀಡಿಯಾದಲ್ಲಿ ಎಷ್ಟೋ ಜನ ಚಾಟ್ ಮಾಡ್ತಿರುತ್ತಾರೆ. ಆದರೆ ನನ್ನ ಮಗನೇ ಚಾಟ್ ಮಾಡಿದ್ದ ಅಂತ ಹೇಗೆ ಗೊತ್ತಾಯ್ತು. ಕೊಲೆ ಮಾಡಿಸಿದ ಆಕೆ ಒಂದು ಹೆಣ್ಣಾ ಎಂದು ಕಿಡಿಕಾರಿದರು. ಇವರು ಮೇಲ್ನೋಟಕ್ಕೆ ಮೇರುನಟ ಆಗಿರಬಹುದು. ಆದ್ರೆ ಖಳನಟ ಅನ್ನೋದು ಎಲ್ಲರಿಗೂ ಗೊತ್ತು. ಸೊಸೆ ಐದು ತಿಂಗಳ ಗರ್ಭಿಣಿ, ಗಂಡ ಇವತ್ತು, ನಾಳೆ ಬರ್ತಾನೆ ಅಂತ ಕಾಯುತ್ತಿದ್ದಾಳೆ. ಒಂದು ಕಮೆಂಟ್‌, ಮೆಸೇಜ್‌ಗೆ ಕೊಲೆ ಆಗಿದೆ ಅಂದ್ರೆ ನಂಬಲು ಆಗುತ್ತಿಲ್ಲ ಎಂದು ಕಣ್ಣೀರು ಹಾಕಿದರು. 

ದರ್ಶನ್​ ಬಂಧನ ಬೆನ್ನಲ್ಲೇ ಇನ್​ಸ್ಟಾದಲ್ಲಿ ಪತಿಯನ್ನು ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ವಿಜಯಲಕ್ಷ್ಮಿ!

ಸಮರ್ಥನೆ ಮಾಡಿಕೊಳ್ಳೋದು ರಾಕ್ಷಿಸಿ ಗುಣ

ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ನಟ ದರ್ಶನ್‌ನನ್ನು ಸಮರ್ಥಸಿಕೊಳ್ಳುತ್ತಿರುವ ಅಭಿಮಾನಿಗಳ ವಿರುದ್ಧ ವಾಗ್ದಾಳಿ ನಡೆಸಿದ ರತ್ನಪ್ರಭಾ, ಸಮರ್ಥಿಸಿಕೊಳ್ಳೋರು ಮನುಷ್ಯರಾದವರು ಏನು ಘಟನೆ ನಡೆದಿದೆ ಅನ್ನೋದು ತಿಳಿದುಕೊಂಡು ಮಾತನಾಡಬೇಕು. ಇಂದು ನನ್ನ ಮಗನಿಗೆ ಆದ ಗತಿ, ನಾಳೆ ಅವರ ಮನೆಯಲ್ಲಿ ಆದ್ರೆ ಅಂದು ಅವರಿಗೆ ಪೆಟ್ಟು ಬೀಳುತ್ತದೆ. ಆವಾಗ ಈತನ ಮುಖ ಕಳಚುತ್ತದೆ. ಈ ನಟನ ಒಳಗೆ ಎಂತಹ ರಾಕ್ಷಸ ಗುಣ ಇದೆ ಅನ್ನೋದು ಆತನ ಅಭಿಮಾನಿಗಳಿಗೆ ಗೊತ್ತಾಗಬೇಕು. ಸಮರ್ಥಿಸಿಕೊಳ್ಳುವ ಅಭಿಮಾನಿಗಳು ಹತ್ಯೆಯಾಗಿರುವ ಮಗನ ಫೋಟೋ ನೋಡಿ. ಸಮರ್ಥನೆ ಮಾಡಿಕೊಳ್ಳೋದು ರಾಕ್ಷಸಿ ಗುಣ ಎಂದು ವಾಗ್ದಾಳಿ ನಡೆಸಿದರು. 

click me!