
'ಆಸ್ಟ್ರೇಲಿಯಾಗೆ ಹೋಗಿದ್ದಾರೆ' ಎಂದಿದ್ದ ಪತ್ನಿ; ಎರಡು ವರ್ಷಗಳ ಬಳಿಕ ಬಯಲಾಯ್ತು ಭೀಕರ ಸತ್ಯ!
ಗುಜರಾತ್ನ ಜಾಮ್ನಗರದಲ್ಲಿ ನಡೆದ ಕೊಲೆ ಪ್ರಕರಣವೊಂದು ದೇಶದ ಗಮನ ಸೆಳೆದಿದೆ. ಸುಮಾರು ಎರಡು ವರ್ಷಗಳ ಕಾಲ ತನ್ನ ಪತಿ ಆಸ್ಟ್ರೇಲಿಯಾದಲ್ಲಿ ಉದ್ಯೋಗ ಮಾಡುತ್ತಿದ್ದಾರೆ ಎಂದು ಕುಟುಂಬದವರನ್ನು ನಂಬಿಸಿದ್ದ ಮಹಿಳೆಯೊಬ್ಬಳ ವಿರುದ್ಧ ಈಗ ಪತಿಯ ಕೊಲೆ ಆರೋಪ ಕೇಳಿಬಂದಿದೆ. ತನಿಖೆಯ ವೇಳೆ ಕಾರ್ಖಾನೆಯ ಆವರಣದಲ್ಲಿ ಕಾಂಕ್ರೀಟ್ ನೆಲದಡಿ 12 ಅಡಿ ಆಳದಲ್ಲಿ ಮಾನವ ಅವಶೇಷಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಕುಟುಂಬದ ಅನುಮಾನದಿಂದ ಬಯಲಾಯ್ತು ಸತ್ಯ!
ಪ್ರಾಥಮಿಕ ಮಾಹಿತಿಯ ಪ್ರಕಾರ, ಜಿಗ್ನೇಶ್ ಮಾವಾಡಿಯಾ ಆಸ್ಟ್ರೇಲಿಯಾಗೆ ತೆರಳಿದ್ದಾರೆ ಎಂದು ಅವರ ಪತ್ನಿ ಪೃಥ್ವಿ ಅಲಿಯಾಸ್ ಭೂಮಿಬೆನ್ ಕುಟುಂಬದವರಿಗೆ ತಿಳಿಸುತ್ತಿದ್ದರು. ಉದ್ಯೋಗದ ಕಾರಣದಿಂದ ಫೋನ್ ಸಂಪರ್ಕ ಸಾಧ್ಯವಿಲ್ಲ ಎಂಬ ಕಾರಣವನ್ನೂ ನೀಡುತ್ತಿದ್ದರು. ಆದರೆ ಆಸ್ಟ್ರೇಲಿಯಾಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಸಂಬಂಧಿಯೊಬ್ಬರು ಜಿಗ್ನೇಶ್ ಅವರ ವಿಳಾಸ ಮತ್ತು ಸಂಪರ್ಕ ವಿವರ ಕೇಳಿದಾಗ ಪತ್ನಿ ಸ್ಪಷ್ಟ ಉತ್ತರ ನೀಡಲಿಲ್ಲ. ಇದರಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದರು.
ವಿಷ ನೀಡಿ ಕೊಲೆ ಮಾಡಿದ ಆರೋಪ..!
ಪೊಲೀಸರ ತನಿಖೆಯ ಪ್ರಕಾರ, ಪೃಥ್ವಿ ತನ್ನ ಮಾಜಿ ಪ್ರೇಮಿ ನೀಲೇಶ್ ಕಚಟಿಯಾ ಮತ್ತು ಮತ್ತೊಬ್ಬ ಸಹಚರನೊಂದಿಗೆ ಸೇರಿ 2024ರ ಮೇ 31ರಂದು ಜಿಗ್ನೇಶ್ ಅವರನ್ನು ಕಾರ್ಖಾನೆಯ ಶೆಡ್ಗೆ ಕರೆಸಿಕೊಂಡು, ಸೈನೈಡ್ ಬೆರೆಸಿದ ಮದ್ಯ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಬಳಿಕ ಮೃತದೇಹವನ್ನು 12 ಅಡಿ ಆಳದಲ್ಲಿ ಹೂತು, ಮೇಲ್ಭಾಗಕ್ಕೆ ಕಾಂಕ್ರೀಟ್ ಹಾಕಿ ಸಾಕ್ಷ್ಯವನ್ನು ಮರೆಮಾಚಲು ಯತ್ನಿಸಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಮೂವರು ಆರೋಪಿಗಳು ಬಂಧನ..!
ಪ್ರಕರಣ ಸಂಬಂಧ ಪೃಥ್ವಿ, ನೀಲೇಶ್ ಕಚಟಿಯಾ ಹಾಗೂ ಬಲ್ವೀರ್ ವರ್ಮಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪತ್ತೆಯಾದ ಅಸ್ಥಿಪಂಜರದ ಅವಶೇಷಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಲೆ, ಸಾಕ್ಷ್ಯ ನಾಶ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ಮುಂದುವರಿದಿದ್ದು, ವಿಧಿವಿಜ್ಞಾನ ವರದಿ ಹಾಗೂ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಸೂಚನೆ: ಪ್ರಕರಣದ ವಿವರಗಳು ಪೊಲೀಸ್ ತನಿಖೆ ಮತ್ತು ಪ್ರಾಥಮಿಕ ವರದಿಗಳ ಆಧಾರಿತವಾಗಿವೆ. ಆರೋಪಗಳು ಇನ್ನೂ ನ್ಯಾಯಾಲಯದಲ್ಲಿ ಸಾಬೀತಾಗಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ