
ಉಕ್ರೇನ್ ವಿರುದ್ಧ ಯುದ್ಧ ಮಾಡಲು ಸಿದ್ಧನಿಲ್ಲ ಎಂದು ಅದರಿಂದ ತಪ್ಪಿಸಿಕೊಳ್ಳಲು ರಷ್ಯಾದ ರ್ಯಾಪರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಉಕ್ರೇನ್ ವಿರುದ್ಧ ಯುದ್ಧ ಮಾಡಲು ಸೈನ್ಯದ ಜತೆಗೆ ಕೈಜೋಡಿಸಲು ಈ ರ್ಯಾಪರ್ ಹೆಸರು ಸಹ ಕರಡು ಪಟ್ಟಿಯಲ್ಲಿತ್ತು. ಈ ಹಿನ್ನೆಲೆ ತಾನು ಯಾವುದೇ ಆದರ್ಶಗಳಿಗೆ ಯಾರನ್ನೂ ಕೊಲ್ಲಲು ಸಿದ್ಧನಿಲ್ಲ ಎಂದು ಘೋಷಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಆತ್ಮಹತ್ಯೆ ಮಾಡಿಕೊಂಡ ರ್ಯಾಪ್ ಗಾಯಕನನ್ನು ಇವಾನ್ ವಿಟಾಲಿಎವಿಕ್ ಪೆಟ್ಯುನಿನ್ ಎಂದು ಗುರುತಿಸಲಾಗಿದ್ದು, ಈತ ಕ್ರಾಸ್ನೋಡರ್ನಲ್ಲಿ ಗಗನಚುಂಬಿ ಕಟ್ಟಡದಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಶವವಾಗಿ ಪತ್ತೆಯಾಗಿದ್ದಾನೆ ಎಂದು ರಷ್ಯಾದ ಸುದ್ದಿ ಪೋರ್ಟಲ್ವೊಂದು ವರದಿ ಮಾಡಿದ್ದು, ಬಳಿಕ ನ್ಯೂಯಾರ್ಕ್ ಪೋಸ್ಟ್ ಇದನ್ನು ವರದಿ ಮಾಡಿದೆ. ‘ವಾಕಿ’ ಎಂಬ ಹೆಸರಲ್ಲಿ ಇವಾನ್ ರ್ಯಾಪ್ ಹಾಡುಗಳನ್ನು ಹಾಡುತ್ತಿದ್ದ ಎಂದು ತಿಳಿದುಬಂದಿದೆ.
ರ್ಯಾಪರ್ ಸಾವಿಗೀಡಾಗಿರುವುದನ್ನು ಆತನ ಗರ್ಲ್ಫ್ರೆಂಡ್ ಹಾಗೂ ತಾಯಿ ಸ್ಪಷ್ಟಪಡಿಸಿದ್ದಾರೆ ಎಂದೂ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಗಗನಚುಂಬಿ ಕಟ್ಟಡದ 10ನೇ ಮಹಡಿಯಿಂದ ಆತ ಕೆಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಇನ್ನು, ರ್ಯಾಪರ್ ಸಾಯುವ ಮುನ್ನ ಟೆಲಿಗ್ರಾಮ್ನಲ್ಲಿ ಹೃದಯ ಸ್ಪರ್ಶಿ ಸಂದೇಶವೊಂದನ್ನು ಕಳಿಸಿದ್ದ ಎಂದೂ ನ್ಯೂಯಾರ್ಕ್ ಪೋಸ್ಟ್ ಸ್ಥಳೀಯ ಮಾದ್ಯಮವೊಂದರ ವರದಿಯನ್ನು ಉಲ್ಲೇಖಿಸಿದೆ.
ಇದನ್ನು ಓದಿ: Vladimir Putin ಬೆದರಿಕೆ ಬಳಿಕ ರಷ್ಯಾದಿಂದ ಜಾಗ ಖಾಲಿಮಾಡುತ್ತಿರುವ ಜನತೆ: Flight ಟಿಕೆಟ್ ಬೆಲೆ ಗಗನಕ್ಕೆ
ನೀವು ಈ ವಿಡಿಯೋವನ್ನು ನೋಡುತ್ತಿದ್ದರೆ, ನಾನು ಆ ವೇಳೆಗೆ ಜೀವಂತವಾಗಿರುವುದಿಲ್ಲ ಎಂದು ಮೃತ ಗಾಯಕ ರಷ್ಯಾ ಭಾಷೆಯಲ್ಲಿ ಮಾತನಾಡಿರುವ 2 ನಿಮಿಷ 16 ಸೆಕೆಂಡ್ಗಳ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೆ, ಕೊಲೆ ಮಾಡಿರುವ ಪಾಪವನ್ನು ನನ್ನ ಆತ್ಮದ ಮೇಲೆ ಹೊರಿಸಲು ನಾನು ಸಿದ್ಧನಿಲ್ಲ. ಹಾಗೂ, ಯಾವುದೇ ಆದರ್ಶಗಳಿಗಾಗಿ ಕೊಲೆ ಮಾಡಲು ನಾನು ಸಿದ್ಧನಿಲ್ಲ. ಯುದ್ಧದಲ್ಲಿ ಅಥವಾ ಬೇರೆಯ ಕಾರಣಗಳಿಗಾಗಲೂ ಇತರರನ್ನು ಕೊಲೆ ಮಾಡುವುದು ನನ್ನಿಂದಾಗಲ್ಲ ಎಂದೂ ರ್ಯಾಪರ್ ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಪುಟಿನ್ನನ್ನು ಹುಚ್ಚ ಎಂದ ರ್ಯಾಪರ್..!
ಪುಟಿನ್ ಅವರನ್ನು ಹುಚ್ಚ ಎಂದೂ ಆತ ಹೇಳಿದ್ದಾನೆ. ಹಾಗೂ, ನನ್ನ ಪ್ರಿಯರೇ ಕ್ಷಮಿಸಿಬಿಡಿ, ನಿಮ್ಮ ತತ್ವಗಳಿಗಾಗಿ ಒಮ್ಮೊಮ್ಮೆ ಸಾಯಬೇಕಾಗುತ್ತದೆ ಎಂದೂ ಮೃತ ರ್ಯಾಪರ್ ವಿಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದಾನೆ. ಈ ರ್ಯಾಪರ್ನ ನ್ಯೂರೋಟಾಕ್ಸಿನ್ ಹಾಡು 2 ಮಿಲಿಯನ್ಗೂ ಹೆಚ್ಚು ಬಾರಿ ಸ್ಟ್ರೀಮ್ ಆಗಿದೆ ಎಂದು ತಿಳಿದುಬಂದಿದೆ. ಇನ್ನು, ಆತನ ಬ್ಯಾಂಡ್ಕ್ಯಾಂಪ್ ಪೇಜ್ ಪ್ರಕಾರ 2013 ರಿಂದಲೂ ಆತ ಹಾಡುಗಳನ್ನು ರೆಕಾರ್ಡ್ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಪೆಟ್ಯುನಿನ್ ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಹಾಗೂ ಆತ ಮಾನಸಿಕ ತೊಂದರೆಗಳಿಗಾಗಿ ಚಿಕಿತ್ಸೆ ಪಡೆದುಕೊಂಡಿದ್ದ ಎಂದೂ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇನ್ನು, ಎಲ್ಲರನ್ನೂ ಯುದ್ಧ ಮಾಡಲು ಕಳಿಸಲಾಗುತ್ತದೆ ಎಂದು ಆತ ತನ್ನ ಗರ್ಲ್ ಫ್ರೆಂಡ್ಗೆ ಪತ್ರದ ಮೂಲಕ ತಿಳಿಸಿದ್ದ ಎಂದೂ ವರದಿಯಾಗಿದೆ. ಹಾಗೂ, ನನಗಿಂತ ಹೆಚ್ಚು ಮಾನಸಿಕ ತೊಂದರೆ ಇರುವವರಿಗೂ ಸಹ ಈಗಾಗಲೇ ಯುದ್ಧಕ್ಕೆ ಕಳಿಸಲಾಗಿದೆ ಎಂದೂ ಆತ ಹೇಳಿದ್ದಾನಂತೆ.
ಇದನ್ನೂ ಓದಿ: Russia ತಂಟೆಗೆ ಬಂದರೆ ಅಣುಬಾಂಬ್ ಹಾಕಲೂ ಸಿದ್ಧ ಎಂದ Putin: Ukraine ಬೆಂಬಲಕ್ಕೆ ನಿಂತ ದೇಶಗಳಿಗೆ ಬೆದರಿಕೆ
ರಷ್ಯಾ ಅಧ್ಯಕ್ಷ ಪುಟಿನ್ ಅವರ ಸೆಪ್ಟೆಂಬರ್ 21 ರಂದು ನೀಡಿದ ಆದೇಶದ ಬಳಿಕ ಸುಮಾರು 3 ಲಕ್ಷ ರಷ್ಯನ್ನರು ತಮ್ಮ ದೇಶ ಬಿಟ್ಟು ಹೋಗಿದ್ದಾರೆ. 3 ಲಕ್ಷ ಜನರನ್ನು ಯುದ್ಧಕ್ಕೆ ಹೋಗಲು ಮೀಸಲು ಪಟ್ಟಿ ಸಿದ್ಧವಾದ ಬಳಿಕ ಈ ಘಟನೆ ನಡೆದಿದೆ. ಈ ಪೈಕಿ ಸುಮಾರು 2 ಲಕ್ಷ ರಷ್ಯನ್ನರು ಜಾರ್ಜಿಯಾ, ಕಜಕಿಸ್ತಾನ ಹಾಗೂ ಫಿನ್ಲೆಂಡ್ನಲ್ಲಿ ವಾಸಿಸುತ್ತಿದ್ದಾರೆ ಎಂದೂ ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ