Ramanagara: ಶುಕ್ರವಾರ ದಿನದಂದೇ ವೃದ್ದೆಯರ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧನ

By Govindaraj SFirst Published Nov 25, 2022, 8:39 PM IST
Highlights

ಅದೊಂದು ಖತರ್ನಾಕ್ ಗ್ಯಾಂಗ್. ಇಡೀ ರಾಮನಗರ ಜಿಲ್ಲೆಯ ಜನರ ನಿದ್ರೆ ಗೆಡಿಸಿತ್ತು. ಅದರಲ್ಲೂ ವಯಸ್ಸಾದ ವೃದ್ದೆಯರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದರು. ಪೊಲೀಸರಂತು ನಿದ್ರೆ ಮಾಡದೇ ಅದೊಂದು ಗ್ಯಾಂಗ್ ಅನ್ನ ಹೆಡೆಮುರಿ ಕಟ್ಟಲು ಹಗಲು-ರಾತ್ರಿ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಸಂಚಾರಿಸಿದ್ರು.

ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ

ರಾಮನಗರ (ನ.25): ಅದೊಂದು ಖತರ್ನಾಕ್ ಗ್ಯಾಂಗ್. ಇಡೀ ರಾಮನಗರ ಜಿಲ್ಲೆಯ ಜನರ ನಿದ್ರೆ ಗೆಡಿಸಿತ್ತು. ಅದರಲ್ಲೂ ವಯಸ್ಸಾದ ವೃದ್ದೆಯರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದರು. ಪೊಲೀಸರಂತು ನಿದ್ರೆ ಮಾಡದೇ ಅದೊಂದು ಗ್ಯಾಂಗ್ ಅನ್ನ ಹೆಡೆಮುರಿ ಕಟ್ಟಲು ಹಗಲು-ರಾತ್ರಿ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಸಂಚಾರಿಸಿದ್ರು. ಸಿಕ್ಕ ಸಿಕ್ಕ ವೃದ್ದೆಯರ ಮಾಂಗಲ್ಯ ಸರ ಕಸಿದು ಪರಾರಿಯಾಗೋದು, ಎದುರಿಗೆ ಬಂದವರ ಹೆದರಿಸಿ ರಾಬರಿ ಮಾಡೊದು ಅವರ ಕಾಯಕವಾಗಿತ್ತು. ಆದರೆ ಕೊನೆಗೂ ಆ ಖತರ್ನಾಕ್ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದಾರೆ. 

ಹೌದು! ರಾಮನಗರ ಜಿಲ್ಲೆಯ ಜನರ ನಿದ್ರೆಗೆಡಿಸಿದ್ದ ಖತರ್ನಾಕ್ ಗ್ಯಾಂಗ್ ಅನ್ನ ಕೊನೆಗೂ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ರಾಮನಗರ ತಾಲೂಕಿನ ಅಚ್ಚಲುದೊಡ್ಡಿ ಗ್ರಾಮದ ಮದನ್, ಶಿವಕುಮಾರ್, ರಾಮನಗರ ನಿವಾಸಿ ಮನು, ಬೆಂಗಳೂರು ಆರ್ ಆರ್ ನಗರದ ನಿವಾಸಿ ತೇಜಸ್ ಹಾಗೂ ಲೋಕೇಶ್ ಬಂಧಿತ ಆರೋಪಿಗಳು. ಅಂದಹಾಗೆ ಇವರು ಅಂತಿಂತಾ ಖತರ್ನಾಕ್ ಗಳಲ್ಲ. ಗ್ರಾಮೀಣ ಭಾಗದಲ್ಲಿ ಸಿಗುವ ವಯೋವೃದ್ದರ ಮಾಂಗಲ್ಯ ಸರ ಕಸಿದು ಪರಾರಿಯಾಗೋದು, ಒಂಟಿಯಾಗಿ ಸಿಗುವವರನ್ನ ಬೆದರಿಸಿ ರಾಬರಿ ಮಾಡೋದೆ ಇವರ ಕಾಯಕ. ಅಂದಹಾಗೆ ಈ ಗ್ಯಾಂಗ್ ಹತ್ತು ದಿನಗಳಲ್ಲಿ ನಾಲ್ಕು ಚೈನ್ ಸ್ನಾಚಿಂಗ್, ಒಂದು ರಾಬರಿ ಮಾಡಿದ್ರು. 

ವಿಧಾನಸೌಧದ ಮುಂಭಾಗದಲ್ಲೂ ಕೆಂಪೇಗೌಡರ ಪ್ರತಿಮೆ ನಿರ್ಮಾಣ: ಸಚಿವ ಅಶ್ವತ್ಥ ನಾರಾ​ಯಣ

ಅಂದಹಾಗೆ ಮದನ್ ಹಾಗೂ ಶಿವಕುಮಾರ್ ಒಬ್ಬರು ಒಂದೇ ಗ್ರಾಮದವರು, ಆಪ್ತ ಸ್ನೇಹಿತರು. ಇಬ್ಬರು ಬೆಳಗ್ಗೆ ಗ್ರಾಮದಿಂದ ಹೆಲ್ಮೆಟ್ ಧರಿಸಿ, ಜರ್ಕಿನ್ ಹಾಕಿಕೊಂಡು ಬೈಕ್‌ನಲ್ಲಿ ಹೊರಡುತ್ತಿದ್ರು. ಗ್ರಾಮದವರು ಸಹಾ ಏನೊ ಕೆಲಸ ಮಾಡೋಕೆ ಹೋಗುತ್ತಾರೆ ಅಂದು ಕೊಂಡಿದ್ರು. ಆದರೆ ಸ್ವಲ್ಪ ದೂರ ಹೋಗುತ್ತಿದ್ದಂತೆ ನಂಬರ್ ಪ್ಲೇಟ್ ತೆಗೆದು ಚೈನ್ ಸ್ನಾಚಿಂಗ್ ಮಾಡೋಕೆ ಶುರು ಮಾಡುತ್ತಿದ್ದರು. ಅದೇ ರೀತಿ ಇದೇ ತಿಂಗಳಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ರಾಂಪುರ ಗ್ರಾಮದಲ್ಲಿ 65 ವರ್ಷದ ಸಾವಿತ್ರಮ್ಮ ಎಂಬ ಮಹಿಳೆಗೆ ಅಡ್ರೆಸ್  ಕೇಳುವ ನೆಪದಲ್ಲಿ ಮುಖಕ್ಕೆ ಮುವ್ ಸ್ಪ್ರೇ ಹೊಡೆದು 32 ಗ್ರಾಂ ಮಾಂಗ್ಯಲ ಸರ ಕಸಿದು ಪರಾರಿಯಾಗಿದ್ರು. 

ಅಷ್ಟೇ ಅಲ್ಲದೇ ವಯೋವೃದ್ದೆ ಎಂಬುದನ್ನ ಕನಿಕರ ತೋರದೆ ದರದರ ಎಂದು ಎಳೆದುಕೊಂಡು ಹೋಗಿದ್ರು. ಅದೇ ರೀತಿ ರಾಮನಗರ ತಾಲೂಕಿನ ಜೈಪುರ ಗ್ರಾಮದಲ್ಲಿ 50 ವರ್ಷದ ಲಕ್ಷಿಬಾಯಿಯ 17 ಗ್ರಾಂ, ಪಾದರಹಳ್ಳಿ ಗ್ರಾಮದ 50 ವರ್ಷದ ಸುಧಾ ಎಂಬ ಮಹಿಳೆಯ ಬಳಿ 47 ಗ್ರಾಂ ಮಾಂಗ್ಯಲಸರ ಕಸಿದು ಪರಾರಿಯಾಗಿದ್ರು. ಅಲ್ಲದೆ ರಾಮನಗರ ತಾಲೂಕಿನ ಬಸವನಪುರ ಗ್ರಾಮದ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಮಂಡ್ಯ ಮೂಲದ ವ್ಯಕ್ತಿಗೆ ಬೆದರಿಸಿ ಎರಡು ಲಕ್ಷ ರಾಬರಿ ಮಾಡಿದ್ರು. ಈ ಗ್ಯಾಂಗ್ ಅನ್ನ ಎಡೆಮೂರಿ ಕಟ್ಟಲು ಪೊಲೀಸರು ಸಹಾ ಹಗಲು ರಾತ್ರಿ ಹುಡುಕಾಟ ನಡೆಸುತ್ತಿದ್ದರು. ಅದೇ ರೀತಿ ನೆನ್ನೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಬರಿ ಮಾಡಲು ಹೊಂಚು ಹಾಕಿ ಕುಳಿತಾಗ ರಾಮನಗರ ಗ್ರಾಮಾಂತರ ಠಾಣೆ  ಪೊಲೀಸರ ಕೈಗೆ ಆರೋಪಿಗಳು ತಗಾಲಾಕಿಕೊಂಡಿದ್ದಾರೆ.
  
ಅಂದಹಾಗೆ ರಾಮನಗರ ತಾಲೂಕಿನ ಮದನ್ ಹಾಗೂ ಶಿವಕುಮಾರ್‌ಗೆ ಸಾಕಷ್ಟು ಜೂಟಾಟದ ಹುಚ್ಚು. ಮಹದೇವ್ ಬುಕ್ ಎಂಬ ಆನ್ ಲೈನ್ ಆಪ್ ಮೂಲಕ ಜೂಟಾಟ ಆಡಿ ಮದನ್ 30 ಲಕ್ಷ ರೂ ಹಣವನ್ನ ಕಳೆದುಕೊಂಡಿದ್ದ. ಅಲ್ಲದೆ ಶಿವಕುಮಾರ್ ಸಹಾ 3 ಲಕ್ಷ ರೂ ಹಣವನ್ನ ಕಳೆದುಕೊಂಡಿದ್ದ. ಇದಕ್ಕಾಗಿ ಸಾಲವನ್ನು ಸಹಾ ಮಾಡಿದ್ರು. ಸಾಲಗಾರರ ಕಾಟ ಹೆಚ್ಚಾದ ಹಿನ್ನೆಲೆಯಲ್ಲಿಮಹಿಳೆಯರ ಮಾಂಗಲ್ಯ ಸರ ಕಸಿದು ಮಾರಾಟ ಮಾಡಲು ಪ್ಲಾನ್ ಮಾಡುತ್ತಾರೆ. ಅದೇ ರೀತಿ ಈಗಾಗಲೇ ರಾಮನಗರ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳ ಬಗ್ಗೆ ಸಾಕಷ್ಟು ಪರಿಚಯವಿತ್ತು. ಅಲ್ಲದೆ ಗ್ರಾಮೀಣ ಭಾಗದಲ್ಲಿ ಸಿಸಿ ಕ್ಯಾಮರಾ ಇರೊಲ್ಲ. ಅಲ್ಲದೆ ಅಷ್ಟಾಗಿ ಜನರು ಕೂಡ ಇರಲ್ಲ ಅಂತಾ ಪ್ಲಾನ್ ಮಾಡಿ ಮಾಂಗಲ್ಯ ಸರ ಕಸಿದು ಪರಾರಿಯಾಗುತ್ತಿದ್ರು. ಇನ್ನು ಶುಕ್ರುವಾರದ ದಿನ ಸಾಮಾನ್ಯವಾಗಿ ಮಹಿಳೆಯರು ಚಿನ್ನದ ಮಾಂಗಲ್ಯ ಸರ ತೆಗೆಯುವುದಿಲ್ಲ. 

ಸುಳ್ಳಿನ ಫ್ಯಾಕ್ಟರಿ ತಯಾರಿಸುತ್ತಿರುವ ಜೆಡಿಎಸ್‌: ಡಿ.ಕೆ. ಸುರೇಶ್‌ ವ್ಯಂಗ್ಯ

ಮೈ ಮೇಲೆ ಧರಿಸಿರುತ್ತಾರೆ ಎಂದು ಅದೇ ದಿನಗಳಲ್ಲಿ ಮಹಿಳೆಯರ ಮಾಂಗಲ್ಯ ಸರ ಎಗರಿಸುತ್ತಿದ್ದರು. ಆನಂತರ ಅದನ್ನ ಮನು ಹಾಗೂ ತೇಜಸ್ ಎಂಬುವವರಿಗೆ ತಂದು ಕೊಡುತ್ತಿದ್ದರು. ಅವರು ಅದನ್ನ ಮಾರಾಟ ಮಾಡಿ, ತಾವು ಹಣವನ್ನ ಇಟ್ಟುಕೊಂಡು ಉಳಿದ ಹಣವನ್ನ ಮದನ್ ಹಾಗೂ ಶಿವಕುಮಾರ್‌ಗೆ ಕೊಡುತ್ತಿದ್ದರು. ಇದೇ ರೀತಿ ಮುಂದೆ ಸಾಕಷ್ಟು ಕ್ರೈಂಗಳನ್ನ ಮಾಡಲು ಕೂಡ ಪ್ಲಾನ್ ಮಾಡಿಕೊಂಡಿದ್ರು. ಇನ್ನು ಪೊಲೀಸರ ಕಾರ್ಯಕ್ಕೆ ಮಾಂಗಲ್ಯ ಸರ ಪತ್ತೆಯಾದ ಮಹಿಳೆಯರು ಅಭಿನಂದನೆ ಸಲ್ಲಿಸಿದ್ದಾರೆ. ಒಟ್ಟಾರೆ ಮಾಡಿದ ಸಾಲವನ್ನ ತೀರಿಸಲು ಅಡ್ಡದಾರಿ ಹಿಡಿದ್ದಿದ್ದ ಖತರ್ನಾಕ್‌ಗಳು ಕೊನೆಗೂ ಪೊಲೀಸರ ಕೈಗೆ ತಗಾಲಾಕಿಕೊಂಡು ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಈ ಮೂಲಕ ಜನರು ನಿಟ್ಟುಸಿರು ಬಿಟ್ಟರೆ, ಪೊಲೀಸರು ಸಹಾ ಸಮಾಧಾನಪಟ್ಟುಕೊಂಡಿದ್ದಾರೆ.

click me!