
ರಾಮನಗರ (ಆ.10): ರೇಷ್ಮೆನಾಡು ರಾಮನಗರದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ತನ್ನ ಇಬ್ಬರು ಮಕ್ಕಳಿಗೆ ಜಾಮೂನಿನಲ್ಲಿ ವಿಷ ಬೆರೆಸಿ ತಿನ್ನಿಸಿದ್ದು, ತಾನೂ ವಿಷ ಕುಡಿದು ಆತ್ಮಹತ್ಯಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಇನ್ನು ಮಕ್ಕಳು ಒದ್ದಾಡುವುದನ್ನು ಕಂಡ ಮನೆಯವರು ಕೂಡಲೇ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮೂವರ ಸ್ಥಿತಿಯೂ ಚಿಂತಾಜನಕವಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ರೇಷ್ಮೆನಾಡು ರಾಮನಗರ ಜಿಲ್ಲೆಯ ಜನರಿಗೆ ದುಡಿಮೆಗೇನೂ ಕೊರತೆಯಿಲ್ಲ. ಪ್ರತಿನಿತ್ಯ ಸಾವಿರಾರು ಜನರು ಬೆಂಗಳೂರಿಗರ ಬಂದು ಕೆಲಸ ಮಾಡಿ ವಾಪಸ್ ಹೋಗುತ್ತಾ ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿಯೂ ಉದ್ಯೋಗಕ್ಕೂ ಕೊರತೆಯಿಲ್ಲ. ಆದರೆ, ಕೌಟುಂಬಿಕ ಕಲಹಗಳಿಂದಾಗಿ ಆಗಿಂದಾಗ್ಗೆ ಸಾವಿನ ಪ್ರಕರಣಗಳು ವರದಿ ಆಗುತ್ತಲೇ ಇವೆ. ಅದೇ ರೀತಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೇ ತನ್ನಿಬ್ಬರು ಮಕ್ಕಳಿಗೆ ಜಾಮೂನಿನಲ್ಲಿ ವಿಷ ಬೆರೆಸಿಕೊಟ್ಟು ಕೊಲೆ ಮಾಡಲು ಯತ್ನಿಸಿದ್ದಾನೆ. ನಂತರ ತಾನೂ ಕೂಡ ವಿಷ ಬೆರೆಸಿದ ಜಾಮೂನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದಾನೆ. ಇನ್ನು ಮೂವರು ಸಂಕಟದಿಂದ ಒದ್ದಾಡುವಾಗ ಮನೆಯವರು ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೇಡವೆಂದು ಬೇಡಿಕೊಂಡರೂ ಬಿಡದೇ ಹೆತ್ತ ಮಕ್ಕಳನ್ನೇ ಬಾವಿಗೆ ತಳ್ಳಿದ ತಾಯಿ, ತಾನೂ ಹಾರಿ ಸಾವು
ವಿಷ ಸೇವಿಸಿದ ಮೂವರ ಸ್ಥಿತಿ ಗಂಭೀರ: ರಾಮನಗರ ತಾಲ್ಲೂಕಿನ ಕ್ಯಾಸಾಪುರ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಕುಮಾರ್ (35) ವಿಷ ಸೇವಿಸಿದ್ದಾನೆ. ನಂತರ ಮಕ್ಕಳಿಗೆ ವಿಷ ಕುಡಿಸಲು ಮುಂದಾದಾಗ ಕಹಿಯಾಗಿದೆ ಎಂದು ಕುಡಿಯಲು ನಿರಾಕರಣೆ ಮಾಡಿದ್ದಾರೆ. ನಂತರ, ಮನೆಯಲ್ಲಿದ್ದ ಜಾಮೂನು ತೆಗೆದುಕೊಂಡು ಅದಕ್ಕೆ ವಿಷ ಬೆರೆಸಿದ್ದಾನೆ. ನಂತರ ತನ್ನ ಇಬ್ಬರು ಮಕ್ಕಳಾದ ವಂದನಾ(4) ಹಾಗೂ ತನುಶ್ರೀ (3)ಗೆ ಜಾಮೂನು ತಿನ್ನಿಸಿದ್ದಾನೆ. ಘಟನೆಯ ಬೆನ್ನಲ್ಲೇ ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಿದರೂ, ಅವರ ಸ್ಥಿತಿ ಚಿಂತಾಜನಕವಾಗಿದೆ. ರಾಮನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮೂವರನ್ನೂ ರವಾನಿಸಲಾಗಿದೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮಾಹಿತಿ ಪಡೆಯಲಿದ್ದಾರೆ.
ಹೆತ್ತ ಮಕ್ಕಳನ್ನೇ ಬಾವಿಗೆ ತಳ್ಳಿ ಸಾಯಿಸಿದ ತಾಯಿ: ರಾಯಚೂರು (ಆ.10): ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮನನೊಂದು ತಾಯಿಯೊಬ್ಬಳು ತಾನು ಹೆತ್ತ ಮಕ್ಕಳನ್ನೇ ಬಾವಿಗೆ ನೂಕಿ ಕೊಲೆ ಮಾಡಿದ್ದಾಳೆ. ಕೊನೆಗೆ ತಾನೂ ಬಾವಿಗೆ ಹಾರಿ ಸಾವನ್ನಪ್ಪಿರುವ ದುರ್ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆ ಲಿಂಗಸೂಗೂರು ತಾ.ಮುದಗಲ್ ಪಟ್ಟಣದಲ್ಲಿ ಘಟನೆ ನಡೆದಿದೆ. ಮುದಗಲ್ ಪಟ್ಟಣದ ಮೇಗಳಪೇಟೆ ನಿವಾಸಿ ಚೌಡಮ್ಮ (34) ಹಾಗೂ ಆಕೆಯ ಮಕ್ಕಳಾದ ರಾಮಣ್ಣ (4) ಮುತ್ತಣ್ಣ(3) ಮೃತರಾಗಿದ್ದಾರೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಬೇಸತ್ತಿದ್ದ ಮಹಿಳೆ ಮನೆಯಲ್ಲಿ, ಜಗಳ ಮಾಡಿಕೊಂಡು ಮಕ್ಕಳನ್ನು ಕರೆದುಕೊಂಡು ಹೊಲದತ್ತ ಹೋಗಿದ್ದಾಳೆ. ಇನ್ನು ಸಿಟ್ಟಿನಲ್ಲಿ ಹೋಗಿದ್ದ ಹೆಂಡತಿ ಮನೆಗೆ ವಾಪಸ್ ಬರುತ್ತಾಳೆ ಎಂದು ಗಂಡನೂ ಸುಮ್ಮನಾಗಿದ್ದಾನೆ. ಆದರೆ, ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋದ ಮಹಿಳೆ ಊರಿನ ಹೊರಭಾಗದಲ್ಲಿದ್ದ ಬಾವಿಯ ಬಳಿ ಕರೆದುಕೊಂಡು ಹೋಗಿದ್ದಾಳೆ.
Bengaluru: ಬಿಬಿಎಂಪಿ ಮಾಜಿ ಕಾಪೋರೇಟರ್ ಪುತ್ರ ನೇಣಿಗೆ ಶರಣು: ಸಾವಿನ ಸತ್ಯ ಬಿಚ್ಚಿಟ್ಟ ತಂದೆ
ಮಕ್ಕಳು ಬೇಡವೆಂದರೂ ಬಾವಿಗೆ ತಳ್ಳಿದಳು: ಇನ್ನು ಬಾವಿಯ ಪಕ್ಕದಲ್ಲಿದ್ದ ಬೇವಿನ ಮರದ ಬಳಿ ಮಕ್ಕಳನ್ನು ಕೂರಿಸಿಕೊಂಡು ಅತ್ತಿದ್ದಾಳೆ. ನಂತರ, ಮನೆಯವರ ಕಾಟ ಸಹಿಸೋಕೆ ಆಗುತ್ತಿಲ್ಲ ನಾವು ಎಲ್ಲರೂ ಸತ್ತುಹೋಗೋಣ ಎಂದು ಮಕ್ಕಳಿಗೆ ಹೇಳಿದ್ದಾರೆ. ಸಾವು ಎಂಬುದರ ಅರಿವೇ ಇಲ್ಲದ ಚಿಕ್ಕ ಮಗು ಹೂಂ ಎಂದು ತಲೆ ಆಡಿಸಿದೆ. ಆದರೆ, ಹಿರಿಯ ಮಗ ರಾಮಣ್ಣ ಬೇಡ ಎಂದು ಹೇಳಿದ್ದಾನೆ. ಆದರೂ, ತಾಯಿ ತನ್ನ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಲು ಕರೆದುಕೊಂಡು ಹೋದಾಗ ಎರಡೂ ಮಕ್ಕಳು ಅಳುತ್ತಾ ಬೇಡ ಬೇಡ ಎಂದು ಬೇಡಿಕೊಂಡಿವೆ. ಆದರೂ, ನಿಷ್ಕರುಣೆ ತಾಯಿ ಇಬ್ಬರು ಮಕ್ಕಳನ್ನು ಒದಲು ಬಾವಿಗೆ ತಳ್ಳಿ ಸಾಯಿಸಿದ್ದಾಳೆ. ಮಕ್ಕಳು ನೀರಿನಲ್ಲಿ ಮುಳುಗಿದ ನಂತರ ತಾನೂ ಬಾವಿಗೆ ಹಾರಿ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ