
ಪಾಂಡವಪುರ (ಜೂ.14): ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರದಲ್ಲಿ ನಡೆದಿದೆ. ಗ್ರಾಮದ ಸುಷ್ಮಾ ಮತ್ತು ಹರೀಶ್ ದಂಪತಿ ಪುತ್ರ ವಿನೀಶ್ (ವಿನು) (2) ಮೃತ ಬಾಲಕ.
ಮೃತ ಮಗುವಿನ ಪಾಲಕರು ಗ್ರಾಮದಲ್ಲಿ ಚಿಲ್ಲರೆ (ದಿನಸಿ) ಅಂಗಡಿ ನಡೆಸುತ್ತಿದ್ದರು. ಘಟನೆಗೂ ಮುನ್ನ ಮಗುವಿನ ತಂದೆ ಹರೀಶ್ ಕೆಲಸ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದಾರೆ. ತಾಯಿ ಮನೆಗೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಮನೆಯಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿದ್ದಾಗ ಚೆಂಡು ಆಕಸ್ಮಿಕವಾಗಿ ಸಂಪಿಗೆ ಉರುಳಿದೆ.
ಚೆಂಡನ್ನು ಹಿಂಬಾಲಿಸುತ್ತಾ ಹೋದ ಮಗು ಆಕಸ್ಮಿಕವಾಗಿ ಸಂಪಿಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮಗುವಿನ ಅಜ್ಜಿ ಮತ್ತು ತಾಯಿ ಮಗುವನ್ನು ತಂದೆ ಹೊರಗೆ ಕರೆದುಕೊಂಡು ಹೋಗಿರಬೇಕು ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಹರೀಶ್ ಮನೆಗೆ ಹಿಂದಿರುಗಿದಾಗ ಮಗು ಕಾಣದಿರುವುದಕ್ಕೆ ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಮಗು ಸಂಪಿನಲ್ಲಿ ಕಂಡು ಬಂದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಮಗು ಸಾವನ್ನಪ್ಪಿರುವುದನ್ನು ವೈದ್ಯರು ಧೃಡ ಪಡಿಸಿದ್ದಾರೆ. ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಎರಡು ವರ್ಷದ ಮಗು ಸಂಪಿಗೆ ಬಿದ್ದು ಸಾವನ್ನಪ್ಪಿದ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಜನರು ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ವಿಧಿಯ ಆಟಕ್ಕೆ ಶಪಿಸಿದರು. ಗ್ರಾಮಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ