Bengaluru crime: ಎಸ್‌ಟಿಪಿ ಘಟಕದಲ್ಲಿ 2 ಕಾರ್ಮಿಕರ ನಿಗೂಢ ಸಾವು

By Kannadaprabha NewsFirst Published Feb 6, 2023, 7:25 AM IST
Highlights

ಖಾಸಗಿ ಅಪಾರ್ಚ್‌ಮೆಂಟ್‌ನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ) ಕೆಲಸ ಮಾಡುವಾಗ ಇಬ್ಬರು ಕಾರ್ಮಿಕರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಫೆ.6) : ಖಾಸಗಿ ಅಪಾರ್ಚ್‌ಮೆಂಟ್‌ನ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ (ಎಸ್‌ಟಿಪಿ) ಕೆಲಸ ಮಾಡುವಾಗ ಇಬ್ಬರು ಕಾರ್ಮಿಕರು ನಿಗೂಢವಾಗಿ ಮೃತಪಟ್ಟಿರುವ ಘಟನೆ ಕೋಣನಕುಂಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತುಮಕೂರಿನ ಕೊರಟಗೆರೆ ತಾಲ್ಲೂಕಿನ ಗೊಲ್ಲರಹಟ್ಟಿನಿವಾಸಿ ರವಿಕುಮಾರ್‌ (29) ಮತ್ತು ಒಡಿಶಾದ ದಿಲೀಪ್‌ ಕುಮಾರ್‌ ಜನಾ (25) ಮೃತ ಕಾರ್ಮಿಕರು. ಕೋಣನಕುಂಟೆ ಕ್ರಾಸ್‌ ಬಳಿಯ ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ಅಪಾರ್ಚ್‌ಮೆಂಟ್‌ನಲ್ಲಿ ಶನಿವಾರ ಸಂಜೆ ಈ ದುರ್ಘಟನೆ ನಡೆದಿದೆ.

Crime News: ದೊಡ್ಡವರ ಪಾರ್ಟಿಯಲ್ಲಿ ನಿಗೂಢ ಸಾವು: ಹೊಸ ವರ್ಷದ ಸಂಭ್ರಮದಲ್ಲಿ ಬಿದ್ದವು ಎರಡು ಹೆಣ

ಬಯೋ ಸೆಂಟರ್‌ ಇಂಡಿಯಾ(Bio Center India)ದ (ಐಎನ್‌ಎ) ಕಂಪೆನಿಯ ನೌಕರರಾಗಿದ್ದ ಈ ಇಬ್ಬರನ್ನು ಕಂಪೆನಿ ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ಅಪಾರ್ಚ್‌ಮೆಂಟ್‌ನ ತ್ಯಾಜ್ಯ ನೀರು ಸಂಸ್ಕರಣ ಘಟಕದ ಕೆಲಸಕ್ಕೆ ನಿಯೋಜಿಸಿತ್ತು. ಶನಿವಾರ ಮಧ್ಯಾಹ್ನ 2 ಗಂಟೆಗೆ ಇಬ್ಬರು ಕಾರ್ಮಿಕರು ಎಸ್‌ಟಿಪಿ ಬಳಿ ಬಂದು ಕೆಲಸ ಮಾಡುತ್ತಿದ್ದರು. ಸಂಜೆ 5 ಗಂಟೆ ಸುಮಾರಿಗೆ ಮೇಲ್ವಿಚಾರಕ ರಮೇಶ್‌ ಬಂದು ಕಾರ್ಮಿಕರನ್ನು ಮಾತನಾಡಿಸಿಕೊಂಡು ತೆರಳಿದ್ದರು.

ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ : ರಾತ್ರಿ 7.30ರ ಸುಮಾರಿಗೆ ಮೇಲ್ವಿಚಾರಕ ರಮೇಶ್‌ ಕಾರ್ಮಿಕರಿಗೆ ಕರೆ ಮಾಡಿದ್ದಾಗ ಇಬ್ಬರೂ ಸ್ವೀಕರಿಸಿಲ್ಲ. ನಾಲ್ಕೈದು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ಅಪಾರ್ಚ್‌ಮೆಂಟ್‌ನ ಸೆಕ್ಯೂರಿ ಗಾರ್ಡ್‌ಗೆ ಕರೆ ಮಾಡಿ ಎಸ್‌ಟಿಪಿ ಬಳಿ ತೆರಳಿ ನೋಡುವಂತೆ ಸೂಚಿಸಿದ್ದರು. ಅದರಂತೆ ಸೆಕ್ಯೂರಿಗಾರ್ಡ್‌ ಎಸ್‌ಟಿಪಿ ಬಳಿ ತೆರಳಿ ಪರಿಶೀಲಿಸಿದಾಗ ರವಿಕುಮಾರ್‌ ಮತ್ತು ದಿಲೀಪ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಈ ವಿಚಾರವನ್ನು ಕೂಡಲೇ ಮೇಲ್ವಿಚಾರಕ ರಮೇಶ್‌ಗೆ ತಿಳಿಸಿದ್ದಾನೆ. ಅಷ್ಟರಲ್ಲಾಗಲೇ ಕಾರ್ಮಿಕರಿಬ್ಬರೂ ಕೊನೆಯುಸಿರೆಳೆದಿದ್ದಾರೆ. ಬಳಿಕ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ ನಡೆಸಿ ಎರಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಮರಣೋತ್ತರ ವರದಿ : ಇಬ್ಬರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆಲಸದ ವೇಳೆ ಎಸ್‌ಟಿಪಿ ಘಟಕದಲ್ಲಿ ವಿಷಾನಿಲ ಸೇವಿಸಿ ಮೃತಪಟ್ಟಿರಬಹುದು ಅಥವಾ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಈ ಇದಕ್ಕೆ ಪೂರಕವಾದ ಯಾವುದೇ ಕುರುಹುಗಳು ಸಿಕ್ಕಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.

 

Ballari News: ನಿಗೂಢವಾಗಿಯೇ ಉಳಿದ ವಿಮ್ಸ್‌ ಸಾವು ಪ್ರಕರಣ!

ಐಎನ್‌ಸಿ ಮಾಲೀಕ ಸೇರಿ, ಐವರ ವಿರುದ್ಧ ಎಫ್‌ಐಆರ್‌

ಘಟನೆ ಸಂಬಂಧ ಮೃತ ರವಿಕುಮಾರ್‌ ಪತ್ನಿ ಶಶಿಕಲಾ ನೀಡಿದ ದೂರಿನ ಮೇರೆಗೆ ಐಎನ್‌ಸಿ ಕಂಪನಿಯ ಮಾಲೀಕ ಮುಕ್ತಿಯಾರ್‌ ಅಹಮದ್‌, ಎಲೆಕ್ಟ್ರಿಕಲ್‌ ಇನ್‌ಚಾಜ್‌ರ್‍ ಪ್ರಭು, ಮೇಲ್ವಿಚಾರಕ ರಮೇಶ್‌, ಪ್ರೆಸ್ಟೀಜ್‌ ಫಾಲ್ಕನ್‌ ಸಿಟಿ ಅಪಾರ್ಚ್‌ಮೆಂಟ್‌ ವ್ಯವಸ್ಥಾಪಕ ಮತ್ತು ಮಾಲೀಕನ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಕಾರ್ಮಿಕರಿಗೆ ಸಮರ್ಪಕ ತರಬೇತಿ ನೀಡದೆ, ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ರಕ್ಷಣಾ ಸಾಮಗ್ರಿ ನೀಡದೆ ನಿರ್ಲಕ್ಷ್ಯ ವಹಿಸಿದ ಆರೋಪದಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!