
ಮುಂಬೈ (ಜೂನ್ 10, 2023): ಆರೋಪಿ ಮನೋಜ್ ಸಾನೆ (56) ಹಾಗೂ ಕೊಲೆಯಾದ ಸರಸ್ವತಿ ವೈದ್ಯ (32) ವಿವಾಹವಾಗಿದ್ದರು. ಆದರೆ ಇಬ್ಬರ ನಡುವೆ ಭಾರೀ ವಯಸ್ಸಿನ ಅಂತರವಿದ್ದ ಕಾರಣ ಮದುವೆ ವಿಷಯವನ್ನು ಗುಟ್ಟಾಗಿರಿಸಿದ್ದರು ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ತನ್ನೊಂದಿಗೆ 9 ವರ್ಷಗಳಿಂದ ವಾಸಿಸುತ್ತಿದ್ದ ಸರಸ್ವತಿ ಎಂಬ ಮಹಿಳೆಯನ್ನು ಕೊಲೆಗೈದು ಆಕೆಯ ದೇಹವನ್ನು 20ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ ಬೇಯಿಸಿದ್ದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ ಸರಸ್ವತಿಯ 3 ಸೋದರಿಯರು ಹೇಳಿಕೆ ನೀಡಿ, ‘ಕೊಲೆಯಾದ ಸರಸ್ವತಿ ವೈದ್ಯ ಮತ್ತು ಆರೋಪಿ ಮನೋಜ್ ಸಾನೆ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಆದರೆ ನೋಂದಣಿ ಮಾಡಿಸಿಕೊಂಡಿರಲಿಲ್ಲ. ತಮ್ಮ ನಡುವಿನ ವಯಸ್ಸಿನ ಅಂತರದಿಂದ (24 ವರ್ಷ ಅಂತರ) ಅವರು ತಮ್ಮ ಮದುವೆಯನ್ನು ಇತರರಿಂದ ಮರೆಮಾಚಿದ್ದರು’ ಎಂದಿದ್ದಾರೆ ಎಂದು ಮೀರಾ-ಭಾಯಂದರ್ ಡಿಸಿಪಿ ಜಯಂತ್ ಬಜ್ಬಾಲೆ ಹೇಳಿದ್ದಾರೆ.
ಇದನ್ನು ಓದಿ: ಲಿವ್ ಇನ್ ಸಂಗಾತಿ ತುಂಡು ತುಂಡಾಗಿ ಕತ್ತರಿಸಿದ ಪಾಪಿಗೆ ಏಡ್ಸ್: ಆಕೆ ಮಗಳಿದ್ದಂತೆ, ಸೂಸೈಡ್ ಮಾಡ್ಕೊಂಡ್ಳು ಎಂದ!
ಮನೋಜ್ ‘ಕೆಂಪು ಕಣ್ಣಿಂದ’ ಸರಸ್ವತಿ ಕೊಲೆ ಬಯಲು!
ಮುಂಬೈನ ಮೀರಾ ರೋಡ್ ಅಪಾರ್ಟ್ಮೆಂಟ್ನಲ್ಲಿ ಲಿವ್ ಇನ್ ಸಂಗಾತಿ ಸರಸ್ವತಿ ವೈದ್ಯಳನ್ನು ಹಂತಕ ಮನೋಜ್ ಸಾನೆ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದ ಪ್ರಸಂಗದ ಬಗ್ಗೆ ಅಕ್ಕಪಕ್ಕದ ಮನೆಯವರು ಶುಕ್ರವಾರ ಮಾಧ್ಯಮಗಳ ಮುಂದೆ ಸವಿಸ್ತಾರ ವಿವರಣೆ ನೀಡಿದ್ದಾರೆ.
‘ಜೂನ್ 6ರಂದು ಅಪಾರ್ಟ್ಮೆಂಟ್ನಲ್ಲಿ ಇಲಿ ಸತ್ತ ವಾಸನೆ ಬರುತ್ತಿತ್ತು. ಇಡೀ ಅಪಾರ್ಟ್ಮೆಂಟ್ ಜಾಲಾಡಿದರೂ ಏನೂ ಸಿಗಲಿಲ್ಲ. ಮನೋಜ್ ಮನೆ ಬಾಗಿಲು ಹಾಕಿತ್ತು. ಹೀಗಾಗಿ ಅಲ್ಲಿ ಏನಾದರೂ ಆಗಿದೆಯಾ ಎಂದು ಕೇಳಲು ಹೊರಟಾಗ ಆತ ಬಾಗಿಲು ತೆಗೆಯಲಿಲ್ಲ. ಆದರೆ ಆತನ ಮನೆಯಲ್ಲಿ ರೂಂ ಫ್ರೆಶ್ನರ್ ಹಾಕುವ ಶಬ್ದ ಕೇಳಿತು. ವಾಸನೆಯೂ ಬಂತು’ ಎಂದು ಪಕ್ಕದ ಮನೆಯ ಅನು ಶ್ರೀವಾಸ್ತವ ಹಾಗೂ ನೀರಜ್ ಶ್ರೀವಾಸ್ತವ ಹೇಳಿದರು.
ಇದನ್ನೂ ಓದಿ: ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್ ಹಂತಕನೇ ಇವನಿಗೆ ಸ್ಪೂರ್ತಿ!
ಈ ನಡುವೆ. ‘ಒಮ್ಮೆ ಲಿಫ್ಟ್ನಲ್ಲಿ ಆತ ಸಿಕ್ಕಾಗ ಮಾಸ್ಕ್ ಧರಿಸಿದ್ದ, ಕಣ್ಣು ಕೆಂಪಗಾಗಿದ್ದವು, ನಡುಗುತ್ತಿದ್ದ. ಆಗ ನಮಗೆ ಆತನ ಮೇಲೆ ಸಂದೇಹ ಬಂತು. ಇದನ್ನು ಗಮನಿಸಿ ಪೊಲೀಸರಿಗೆ ಹೇಳಿದೆವು. ಪೊಲೀಸರು ಬಂದು ಬಾಗಿಲು ತೆರೆದಾಗ ಭೀಕರ ಕೊಲೆ ಬೆಳಕಿಗೆ ಬಂತು’ ಎಂದು ಅವರು ಹೇಳಿದ್ದಾರೆ.
ನಾನು ಎಚ್ಐವಿ ಪೀಡಿತ, ಅವಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿಲ್ಲ: ಆರೋಪಿ ಮನೋಜ್
‘ನಾನು ಎಚ್ಐವಿ ಸೋಂಕಿತನಾಗಿದ್ದೇನೆ. ಸರಸ್ವತಿಯೊಂದಿಗೆ ನಾನು ಎಂದಿಗೂ ದೈಹಿಕ ಸಂಪರ್ಕ ಬೆಳೆಸಿಲ್ಲ. ಅಕೆ ನನ್ನ ಮಗಳಿದ್ದಂತೆ’ ಎಂದು ತನ್ನೊಂದಿಗೆ ವಾಸವಿದ್ದ ಸರಸ್ವತಿ ವೈದ್ಯ (32) ಎಂಬಾಕೆಯನ್ನು ಕೊಲೆಗೈದಿರುವ ಆರೋಪಿ ಮನೋಜ್ ಸಾನೆ (56) ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಇದನ್ನೂ ಓದಿ: ಸಂಗಾತಿಯನ್ನು ಬರ್ಬರ ಹತ್ಯೆ ಮಾಡಿ 20ಕ್ಕೂ ಹೆಚ್ಚು ತುಂಡು ತುಂಡಾಗಿ ಕತ್ತರಿಸಿದ ಪಾಪಿ: ಬೆಚ್ಚಿಬಿದ್ದ ಮುಂಬೈ
ಒಂದೇ ಮನೆಯಲ್ಲಿ ತನ್ನೊಂದಿಗೆ ಸುಮಾರು 9 ವರ್ಷಗಳಿಂದ ವಾಸವಿದ್ದ ಸರಸ್ವತಿ ವೈದ್ಯ ಎಂಬಾಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ಮನೋಜ್ ಸಾನೆ, ಸರಸ್ವತಿ ದೇಹವನ್ನು 20 ತುಂಡುಗಳಾಗಿ ಕತ್ತರಿಸಿ ಕುಕ್ಕರ್ನಲ್ಲಿ ಬೇಯಿಸಿದ್ದ ಭೀಕರ ಘಟನೆ ಮುಂಬೈಯಲ್ಲಿ ನಡೆದಿತ್ತು. ಇವರಿಬ್ಬರು ಲಿವ್ ಇನ್ ಸಂಬಂಧದಲ್ಲಿದ್ದರು ಎನ್ನಲಾಗಿತ್ತು. ಆದರೆ ಪೊಲೀಸ್ ವಿಚಾರಣೆ ವೇಳೆ ಆರೋಪಿ ಮನೋಜ್ ಆಶ್ಚರ್ಯಕರವಾದ ಹೇಳಿಕೆ ನೀಡಿದ್ದಾನೆ.
‘ನನಗೆ ಎಚ್ಐವಿ ಪಾಸಿಟಿವ್ ಇರುವುದು 2008ರಲ್ಲಿ ಗೊತ್ತಾಯಿತು. ಅಂದಿನಿಂದ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುತ್ತಿದ್ದೇನೆ. ಬಹಳ ಹಿಂದೆ ನಾನು ಅಪಘಾತಕ್ಕೆ ಒಳಗಾದಾಗ ಚಿಕಿತ್ಸೆಗಾಗಿ ಎಚ್ಐವಿ ಸೋಂಕಿತ ರಕ್ತವನ್ನು ನನಗೆ ನೀಡಲಾಗಿತ್ತು. ಹೀಗಾಗಿ ನನಗೆ ಎಚ್ಐವಿ ಬಂದಿದೆ. ಸರಸ್ವತಿ ತುಂಬಾ ಸ್ವಾಮ್ಯ ಗುಣದವಳಾಗಿದ್ದಳು. ಮನೆಗೆ ತಡವಾಗಿ ಬಂದರೆ ನಾನು ಅವಳಿಗೆ ಮೋಸ ಮಾಡುತ್ತಿದ್ದೇನೆ ಎಂದು ಜಗಳವಾಡುತ್ತಿದ್ದಳು. 10ನೇ ತರಗತಿ ಪರೀಕ್ಷೆ ಬರೆಯಲು ಮುಂದಾಗಿದ್ದ ಅವಳಿಗೆ ನಾನು ಗಣಿತ ವಿಷಯವನ್ನು ಹೇಳಿಕೊಡುತ್ತಿದ್ದೆ’ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್: ತಾನು ನಿರಪರಾಧಿ, ವಿಚಾರಣೆ ಎದುರಿಸಲು ಸಿದ್ಧ ಎಂದ ಅಫ್ತಾಬ್ ಪೂನಾವಾಲ
ಮನೆ ಪ್ರವೇಶಿಸುತ್ತಿದ್ದಂತೆ ಬೆಚ್ಚಿದ ಪೊಲೀಸರು
ಸರಸ್ವತಿ ವೈದ್ಯ ಅವರ ಕೊಲೆ ತನಿಖೆಗೆಂದು ಶುಕ್ರವಾರ ಅವರ ಮನೆಗೆ ತೆರಳಿದ್ದ ಪೊಲೀಸರು ಬೆಚ್ಚಿಬಿದ್ದ ಘಟನೆ ನಡೆದಿದೆ. ಇಡೀ ಮನೆಯ ತುಂಬ ಮಾನವ ದೇಹದ ತುಂಡುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಲ್ಲದೇ ಅಡುಗೆ ಮನೆಯಲ್ಲಿ ಬೇಯಿಸಿದ ಮಾಂಸದ ತುಂಡುಗಳು ಬಿದ್ದಿದ್ದವು. ಕತ್ತರಿಸಲು ಸಾಧ್ಯವಾಗದ ಕಾಲುಗಳು ಹಾಗೇ ಇದ್ದವು. ಈ ದೃಶ್ಯಗಳನ್ನು ನೋಡಿದ ಪೊಲೀಸರು ಒಂದು ಕ್ಷಣ ಹೌಹಾರಿದ್ದಾರೆ. ಅಲ್ಲದೆ, ಕೆಲವರು ದುರ್ವಾಸನೆ ತಾಳದೆ ಮೂರ್ಛೆ ಹೋಗಿದ್ದಾರೆ.
ಇದನ್ನೂ ಓದಿ: ಅಫ್ತಾಬ್ ನನ್ನನ್ನು ಕೊಲ್ಲುತ್ತಾನೆ, ತುಂಡಾಗಿ ಕತ್ತರಿಸುತ್ತಾನೆಂದು 2 ವರ್ಷಗಳ ಹಿಂದೆಯೇ ದೂರು ನೀಡಿದ್ದ ಶ್ರದ್ಧಾ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ