ಬಿರಿಯಾನಿಯಲ್ಲಿ ಪಾಲು ಕೇಳಿದ್ದಕ್ಕೆ ಬೆಂಕಿ ಹಚ್ಚಿದ ಪತಿ: ಪತ್ನಿ ಜತೆ ಗಂಡನೂ ಬಲಿ..!

By BK AshwinFirst Published Nov 10, 2022, 7:04 PM IST
Highlights

ಪದ್ಮಾವತಿ ಸಾಯುವ ಕೆಲವು ಗಂಟೆಗಳ ಮೊದಲು ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣಗಳನ್ನು ತಿಳಿಸಿದ ನಂತರ ಘಟನೆ ಬಹಿರಂಗವಾಗಿದೆ. 

ಬಿರಿಯಾನಿ (Biryani) ಅಂದ್ರೆ ಸಾಕು ಹಲವರ ಬಾಯಲ್ಲಿ ನೀರೂರತ್ತೆ. ಇನ್ನು, ಅದರ ವಾಸನೆ, ಬಿರಿಯಾನಿಯನ್ನು ನೋಡಿದ್ರಂತೂ ಹಲವರಿಗೆ ಹೊಟ್ಟೆ ಹಸಿವಾಗೋದು ಗ್ಯಾರಂಟಿ. ಅದೇ ರೀತಿ, ಅದನ್ನು ತಿನ್ನುತ್ತಿದ್ದರೆ ಬೇರೆಯವರಿಗೆ ಕೊಡಬೇಕು ಅಂತ ಅನ್ಸೋದೇ ಇಲ್ಲ..! ತಮಿಳುನಾಡಿನಲ್ಲಿ (Tamil Nadu) ಬಿರಿಯಾನಿ ವಿಷಯಕ್ಕೆ 2 ಜೀವಗಳು ಹೋಗಿವೆ ನೋಡಿ. ಅದೂ ಗಂಡ (Husband) - ಹೆಂಡತಿಯದ್ದು..! (Wife) ಹೌದು, 74 ವರ್ಷದ ನಿವೃತ್ತ ರೈಲ್ವೇ ಉದ್ಯೋಗಿಯೊಬ್ಬರು ಸೋಮವಾರ ರಾತ್ರಿ ಅಯನವರಂನಲ್ಲಿರುವ (Ayanavaram) ತಮ್ಮ ನಿವಾಸದಲ್ಲಿ ಬಿರಿಯಾನಿ ಪ್ಯಾಕೆಟ್ ಹಂಚಿಕೊಳ್ಳುವ ವಿಚಾರದಲ್ಲಿ ಜಗಳವಾಗಿ ಹೆಂಡತಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಗಂಡ - ಹೆಂಡತಿ ಇಬ್ಬರೂ ಬಲಿಯಾಗಿದ್ದಾರೆ. ಇನ್ನು, ಗಂಡ ಹೇಗೆ ಬಲಿಯಾದ ಅನ್ನೋ ಯೋಚನೆ ನಿಮಗೆ ಬಂದಿರಬೇಕಲ್ವಾ..? ಮುಂದೆ ಓದಿ..

ಬಿರಿಯಾನಿ ಹಂಚಿಕೊಳ್ಳುವ ವಿವಾದದಲ್ಲಿ ಗಂಡ ಪತ್ನಿಗೆ ಬೆಂಕಿ ಹಚ್ಚಿದ್ದು, ನಂತರ ಪತ್ನಿ ಪತಿಯನ್ನು ತಬ್ಬಿಕೊಂಡ ಕಾರಣ ವೃದ್ಧನಿಗೂ ಬೆಂಕಿ ಹೊತ್ತಿಕೊಂಡಿದ್ದು, ಈ ಕಾರಣಕ್ಕೆ ಇಬ್ಬರಿಗೂ ಸುಟ್ಟ ಗಾಯಗಳಾಗಿದೆ. ಈ ಹಿನ್ನೆಲೆ ಪದ್ಮಾವತಿ (70) ಮಂಗಳವಾರ ನಿಧನರಾದರೆ, 74 ವರ್ಷದ ಕರುಣಾಕರನ್ ಬುಧವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಇದನ್ನು ಓದಿ: 'ಬಿರಿಯಾನಿ ಮಸಾಲೆಯಲ್ಲಿ ಪುರುಷತ್ವ ಕುಂಠಿತವಾಗುವ ಅಂಶ' ಬಂಗಾಳದಲ್ಲಿ ಶಾಪ್‌ ಬಂದ್‌ ಮಾಡಿಸಿದ ಟಿಎಂಸಿ ನಾಯಕ!

ಪೊಲೀಸರು ಆರಂಭದಲ್ಲಿ ಇದು ಆತ್ಮಹತ್ಯೆ ಎಂದು ಶಂಕಿಸಿದ್ದು, ಆದರೆ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಕೆಎಂಸಿಎಚ್) ಪದ್ಮಾವತಿ ಸಾಯುವ ಕೆಲವು ಗಂಟೆಗಳ ಮೊದಲು ಬೆಂಕಿ ಹೊತ್ತಿಕೊಂಡಿದ್ದಕ್ಕೆ ಕಾರಣಗಳನ್ನು ತಿಳಿಸಿದ ನಂತರ ಘಟನೆ ಬಹಿರಂಗವಾಗಿದೆ. 

ಕರುಣಾಕರನ್ ಮತ್ತು ಪದ್ಮಾವತಿ ಅವರು ತಮಿಳುನಾಡಿನ ಅಯನವರಂನ ಟ್ಯಾಗೋರ್ ನಗರದ ಮೂರನೇ ಬೀದಿಯಲ್ಲಿರುವ ನಿವಾಸದಲ್ಲಿ ವಾಸಿಸುತ್ತಿದ್ದರು. ಹಾಗೂ, ಅವರ 4 ಮಕ್ಕಳು ತಮ್ಮ ಕುಟುಂಬ ಸದಸ್ಯರೊಂದಿಗೆ ನಗರದ ವಿವಿಧ ಸ್ಥಳಗಳಲ್ಲಿ ವಾಸಿಸುತ್ತಿದ್ದರು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಪೊಲೀಸರು ನಡೆಸಿದ ತನಿಖೆಗಳು ಮತ್ತು ಅವರ ನೆರೆಹೊರೆಯವರಲ್ಲಿ ಕೆಲವರನ್ನು ವಿಚಾರಣೆಗೆ ಒಳಪಡಿಸಿದಾಗ, ವಯಸ್ಸಾದ ದಂಪತಿಗಳು ಖಿನ್ನತೆಗೆ ಒಳಗಾಗಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: AIMIM ಸದಸ್ಯತ್ವ ಹೆಚ್ಚಿಸಿಕೊಳ್ಳಲು Owaisi ಪಕ್ಷದಿಂದ Biryani ಆಫರ್‌!

ವೃದ್ಧ ದಂಪತಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅವರ ಮಕ್ಕಳು ಸಾಂದರ್ಭಿಕವಾಗಿ ಅವರನ್ನು ಭೇಟಿ ಮಾಡುತ್ತಿದ್ದರು ಮತ್ತು ಅವರು ಆಗಾಗ್ಗೆ ಪರಸ್ಪರ ಜಗಳವಾಡುತ್ತಿದ್ದರು ಎಂದೂ ಮೃತಪಟ್ಟವರ ಬಗ್ಗೆ ಪೊಲೀಸರು ತಿಳಿಸಿದ್ದಾರೆ. ಇನ್ನು, ದಂಪತಿಯ ಮನೆಯಿಂದ ಸೋಮವಾರ ರಾತ್ರಿ ಜೋರಾಗಿ ಕಿರುಚಾಟ ಕೇಳಿಬಂದಿದೆ. ಹಲವಾರು ಜನರು ಅಲ್ಲಿಗೆ ಧಾವಿಸಿದರು ಮತ್ತು ಇಬ್ಬರೂ ತೀವ್ರ ಸುಟ್ಟ ಗಾಯಗಳೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡರು. 

ತಕ್ಷಣವೇ ಅವರನ್ನು ಕೆಎಂಸಿಎಚ್‌ಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಲಾಯಿತು. ಕರುಣಾಕರನ್‌ಗೆ ಶೇ.50ರಷ್ಟು ಸುಟ್ಟ ಗಾಯಗಳಾಗಿದ್ದರೆ, ಅವರ ಪತ್ನಿಗೆ ಶೇ.65ರಷ್ಟು ಸುಟ್ಟ ಗಾಯಗಳಾಗಿತ್ತು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. 

ಇದನ್ನೂ ಓದಿ: ಗಡಿಯಲ್ಲಿ BSF ಯೋಧರು ಬಿರಿಯಾನಿ ತಿಂದು ಮಲಗಿದ್ದಾರಾ? ಬಾಂಗ್ಲಾ ನುಸುಳುವಿಕೆ ಆರೋಪಕ್ಕೆ ಒವೈಸ್ ಕೆಂಡ!

ನಂತರ, ಮಾಹಿತಿ ಪಡೆದ ಪೊಲೀಸರು ಮನೆಗೆ ಧಾವಿಸಿ ನಂತರ ಆಸ್ಪತ್ರೆಗೆ ತೆರಳಿದರು. ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ತನ್ನ ಪತಿ ರೆಸ್ಟೊರೆಂಟ್‌ನಿಂದ ಬಿರಿಯಾನಿ ಖರೀದಿಸಿದ್ದು, ಅದನ್ನು ಏಕಾಂಗಿಯಾಗಿ ತಿನ್ನುವುದನ್ನು ಕಂಡೆ ಎಂದು ಪದ್ಮಾವತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ತನಗೆ ಆಹಾರವನ್ನು ಏಕೆ ಖರೀದಿಸಿಲ್ಲ ಎಂದು ತಾನು ಕೇಳಿದಾಗ ಮತ್ತು ಅದನ್ನು ಹಂಚಿಕೊಳ್ಳಲು ಮನವಿ ಮಾಡಿದ್ದಕ್ಕೆ ತನ್ನ ಪತಿ ತನ್ನೊಂದಿಗೆ ವಾಗ್ವಾದಕ್ಕೆ ಇಳಿದರು. ನಂತರ ತನ್ನ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ಸಾಯುವ ಮುನ್ನ ವೃದ್ಧೆ ಹೇಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

click me!