ಕೋರ್ಟ್ ಹಾಲ್‌ನಲ್ಲೇ ಪತ್ನಿ ಮೇಲೆ ಆ್ಯಸಿಡ್ ಎರಚಿದ ಪಾಪಿ ಪತಿ..!

By BK AshwinFirst Published Mar 23, 2023, 6:27 PM IST
Highlights

35 ವರ್ಷದ ಮಹಿಳೆಯ ಮೇಲೆ ಸೂಲೂರು ಸಮೀಪದ ಕನ್ನಂಪಾಳ್ಯಂನ ಮಹಾಲಕ್ಷ್ಮಿ ನಗರದ ನಿವಾಸಿ ಪಿ.ಶಿವ (40) ಆಸಿಡ್‌ ದಾಳಿ ನಡೆಸಿದ್ದಾನೆ ಎಂದು ಗುರುತಿಸಲಾಗಿದೆ. ಮೊದಲ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರೀಕ್ಷಣಾ ಪ್ರದೇಶದಲ್ಲಿ ಬೆಳಗ್ಗೆ 10:45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಯಮತ್ತೂರು (ಮಾರ್ಚ್‌ 23, 2023): ತಮಿಳುನಾಡಿನ ಕೊಯಮತ್ತೂರಿನ ಕಂಬೈನ್ಡ್ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ, ಮಾರ್ಚ್ 23, 2023 ರಂದು 40 ವರ್ಷದ ವ್ಯಕ್ತಿಯೊಬ್ಬ ತನ್ನ 35 ವರ್ಷದ ಪತ್ನಿ ಮೇಲೆ ಕೋರ್ಟ್ ಹಾಲ್‌ನ ವೇಟಿಂಗ್ ಏರಿಯಾದಲ್ಲಿ ಕುಳಿತಿದ್ದಾಗ ಆಸಿಡ್ ಎರಚಿರುವ ಘಟನೆ ವರದಿಯಾಗಿದೆ. ಈ ಹಿನ್ನೆಲೆ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಈ ಮಹಿಳೆಯನ್ನು ಚಿಕಿತ್ಸೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಹಾಗೂ, ಕೋರ್ಟ್‌ ಹಾಲ್‌ನಲ್ಲಿದ್ದ ಪೊಲೀಸರು ಮತ್ತು ವಕೀಲರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಇನ್ನು, ಆಸಿಡ್‌ ದಾಳಿ ವೇಳೆ ಮಹಿಳಾ ವಕೀಲರೊಬ್ಬರ ಡ್ರೆಸ್‌ ಮೇಲೂ ಆಸಿಡ್‌ಚೆಲ್ಲಿದ್ದು ಅವರನ್ನು ಸಹ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

35 ವರ್ಷದ ಮಹಿಳೆಯ ಮೇಲೆ ಸೂಲೂರು ಸಮೀಪದ ಕನ್ನಂಪಾಳ್ಯಂನ ಮಹಾಲಕ್ಷ್ಮಿ ನಗರದ ನಿವಾಸಿ ಪಿ.ಶಿವ (40) ಆಸಿಡ್‌ ದಾಳಿ ನಡೆಸಿದ್ದಾನೆ ಎಂದು ಗುರುತಿಸಲಾಗಿದೆ. ಮೊದಲ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನಿರೀಕ್ಷಣಾ ಪ್ರದೇಶದಲ್ಲಿ ಬೆಳಗ್ಗೆ 10:45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳ್ಳತನ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಈ ಮಹಿಳೆ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಬಂದಿದ್ದರು. ಪ್ರಕರಣದ ಸಾಕ್ಷಿದಾರರು ಬರದ ಕಾರಣ ಮಹಿಳೆಯನ್ನು ಕೋರ್ಟ್ ಹಾಲ್‌ನ ಹೊರಗೆ ಕಾಯುವಂತೆ ತಿಳಿಸಲಾಯಿತು. ಈ ವೇಳೆ, ನೀರಿನ ಬಾಟಲ್‌ನಲ್ಲಿ ಆ್ಯಸಿಡ್ ಹಾಕಿಕೊಂಡು ಬಂದ ಪತಿ, ಪತ್ನಿಯ ಮೇಲೆ ಆಸಿಡ್‌ ಎರಚಿದ್ದಾನೆ. 

ಇದನ್ನು ಓದಿ: ಅನೈತಿಕ ಸಂಬಂಧ ಶಂಕೆ: ವಿವಾಹಿತ ಸೋದರಿಯನ್ನೇ ಕೊಂದು ನದಿಗೆಸೆದ ಸೋದರರು!

ಆಸಿಡ್‌ ಮಹಿಳೆಯ ದೇಹದ ಮೇಲೆ, ಕುತ್ತಿಗೆಯ ಕೆಳಗೆ ಬಿದ್ದಿದ್ದರಿಂದ ಆಕೆ ನೋವಿನಿಂದ ಜೋರಾಗಿ ಅಳುತ್ತಿದ್ದಳು ಎಂದು ನ್ಯಾಯಾಲಯದ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, ಅವಳು ತನ್ನ ಗಂಡನಿಂದ ದೂರ ಓಡಿ ಎರಡನೇ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಬಾಗಿಲಿನ ಬಳಿ ಬಿದ್ದಳು. ಮಹಿಳೆಯ ಉಡುಪಿನ ಮೇಲಿನ ಭಾಗ ಭಾಗಶಃ ಸುಟ್ಟು ಹೋಗಿದ್ದರಿಂದ ವಕೀಲರೊಬ್ಬರು ಆಕೆಯನ್ನು ಗೌನ್‌ನಿಂದ ಮುಚ್ಚಿದ್ದರು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಬಳಿಕ, ತಪ್ಪಿಸಿಕೊಳ್ಳಲು ಯತ್ನಿಸಿದ ಶಿವನನ್ನು ಪೊಲೀಸರು ಮತ್ತು ವಕೀಲರು ಹಿಡಿದಿದ್ದಾರೆ. ಅವನು ಓಡಿಹೋಗುವುದನ್ನು ನಾನು ನೋಡಿದೆ. ನಾನು ಕೆಲವು ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಕೇಳಿದೆ ಮತ್ತು ಅವನು ತಪ್ಪಿಸಿಕೊಳ್ಳುವ ಮೊದಲು ಅವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ನ್ಯಾಯಾಲಯದ ಕರ್ತವ್ಯದಲ್ಲಿದ್ದ ಆನಮಲೈ ಪೊಲೀಸ್ ಠಾಣೆಗೆ ಲಗತ್ತಿಸಲಾದ ಹೆಡ್ ಕಾನ್‌ಸ್ಟೆಬಲ್ ಎಂ.ಇಂದುಮತಿ ಹೇಳಿದರು.

The Superintendent of Police Tr.V.Badrinarayanan IPS., appreciated and rewarded the head constable with cash, who chased and caught the acid attack accused at the combined court complex, coimbatore. pic.twitter.com/A8A89MR7MM

— Coimbatore District Police (@Cbe_Dist_Police)

ಇದನ್ನೂ ಓದಿ: ಅಯ್ಯೋ ಕಂದಮ್ಮ..! 4 ದಿನದ ಹಸುಗೂಸನ್ನು ತುಳಿದು ಸಾಯಿಸಿದ ಪೊಲೀಸರು: ತನಿಖೆಗೆ ಆದೇಶಿಸಿದ ಸಿಎಂ

ಪೊಲೀಸರ ತನಿಖೆಯಿಂದ ಶಿವ ಮತ್ತು ಆತನ ಪತ್ನಿಗೆ ಇಬ್ಬರು ಮಕ್ಕಳಿರುವುದು ಬೆಳಕಿಗೆ ಬಂದಿದೆ. ಎರಡು ಕಳ್ಳತನ ಪ್ರಕರಣಗಳನ್ನು ಎದುರಿಸುತ್ತಿರುವ ಮಹಿಳೆ ಒಂದು ವಾರದ ಹಿಂದೆ ಮನೆ ತೊರೆದು ತನ್ನ ಇನ್ಸ್ಟಾಗ್ರಾಮ್‌ ಸ್ನೇಹಿತ ಪ್ರಭು ಜೊತೆ ವಾಸಿಸಲು ಪ್ರಾರಂಭಿಸಿದಳು. ಉದ್ಯೋಗದಲ್ಲಿ ಲಾರಿ ಡ್ರೈವರ್ ಆಗಿರುವ ಶಿವ, ಅಂದಿನಿಂದ ತನ್ನ ಹೆಂಡತಿಗಾಗಿ ಹುಡುಕಾಟ ನಡೆಸುತ್ತಿದ್ದ.. ನಂತರ, ಗುರುವಾರ ತನ್ನ ಪತ್ನಿ ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ಶಿವನಿಗೆ ವಕೀಲರಿಂದ ಕರೆ ಬಂದಿತ್ತು, ಗುರುವಾರ ಪತ್ನಿ ನ್ಯಾಯಾಲಯಕ್ಕೆ ಬರುತ್ತಾರೆ ಎಂದು ತಿಳಿದಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಮಹಿಳೆಗೆ ಸುಮಾರು 80% ಸುಟ್ಟ ಗಾಯಗಳಾಗಿವೆ ಮತ್ತು ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿ ಹೇಳಿದರು. ಹಾಗೆ, ಕೊಯಮತ್ತೂರು ಬಾರ್ ಅಸೋಸಿಯೇಷನ್ ಮತ್ತು ನ್ಯಾಯಾಲಯದ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ನ್ಯಾಯಾಲಯದ ಆವರಣದಲ್ಲಿ ಇಂತಹ ಘಟನೆಗಳನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತ ವಿ.ಬಾಲಕೃಷ್ಣನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: Aishwarya Rajinikanth ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಭರಣ ದೋಚಿದ್ದ ಮನೆ ಕೆಲಸದಾಕೆ, ಡ್ರೈವರ್‌ ಅಂದರ್

click me!