ಅರಣ್ಯ ಶಿಬಿರ ಕಟ್ಟಡದಲ್ಲಿ ವ್ಯಕ್ತಿ ನಿಗೂಢ ಸಾವು; ಕೊಲೆಯೋ, ಹೃದಯಾಘಾತವೋ?

By Kannadaprabha NewsFirst Published Oct 21, 2022, 7:45 AM IST
Highlights
  • ಶ್ರೀಗಂಧ ಕದಿಯಲು ಬಂದಿದ್ದ ಐವರಲ್ಲಿ ಮೂವರು ಎಸ್ಕೇಪ್‌, ವಶವಾದ ಇಬ್ಬರಲ್ಲಿ ಓರ್ವ ಸಾವು
  •  ವಶಕ್ಕೆ ಪಡೆದ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆಂದು ಸ್ಥಳೀಯರ ಆರೋಪ
  • ವ್ಯಕ್ತಿ ಶೌಚಾಲಯಕ್ಕೆ ಹೋಗಿದ್ದ ಸಂದರ್ಭ ಹೃದಯಾಘಾತದಿಂದ ಸಾವು ಎನ್ನುತ್ತಿರುವ ಅರಣ್ಯ ಸಿಬ್ಬಂದಿ

ಚಿಕ್ಕಮಗಳೂರು (ಅ.21) : ಶ್ರೀಗಂಧ ಕಳವು ಮಾಡಲು ಐವರ ಗ್ಯಾಂಗ್‌ ಶಿವಮೊಗ್ಗದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಅರಣ್ಯ ಪ್ರದೇಶಕ್ಕೆ ಬಂದಿತ್ತು. ರಾತ್ರಿವೇಳೆಯಲ್ಲಿ ಅರಣ್ಯ ಇಲಾಖೆಯವರು ಬೆನ್ನಟಿದಾಗ ಮೂವರು ಎಸ್ಕೇಪ್‌ ಆಗಿದ್ದು, ಇಬ್ಬರು ಕೈಗೆ ಸಿಕ್ಕಿದ್ದಾರೆ, ಇವರಲ್ಲಿ ಓರ್ವರು ಮೃತಪಟ್ಟಿದ್ದಾರೆ. ಈ ಘಟನೆ ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದ್ದು, ಗುರುವಾರ ಇಡೀ ದಿನ ಪೊಲೀಸ್‌ ಮತ್ತು ಅರಣ್ಯ ಇಲಾಖೆಗಳ ನಿದ್ದೆಗೆಡಿಸಿದೆ.

ತಮಿಳುನಾಡು ಬಾಲಕಿ ನಿಗೂಢ ಸಾವು: ನ್ಯಾಯಕ್ಕಾಗಿ ಆಗ್ರಹಿಸಿ ಹಿಂಸಾಚಾರ

Latest Videos

ವಶಕ್ಕೆ ಪಡೆದುಕೊಂಡ ವ್ಯಕ್ತಿ ಬೇರೆಲ್ಲೋ ಮೃತಪಟ್ಟಿದ್ದರೆ, ಈ ವಿಷಯ ಅಷ್ಟುಗಂಭೀರತೆ ಪಡೆಯುತ್ತಿರಲಿಲ್ಲ. ಅರಣ್ಯ ಇಲಾಖೆಗೆ ಸೇರಿರುವ ಆನೆ ಹಿಮ್ಮೆಟ್ಟಿಸುವ ಶಿಬಿರದ ಕಟ್ಟಡದಲ್ಲಿರುವ ಶೌಚಾಲಯದಲ್ಲಿ ಮೃತದೇಹ ಪತ್ತೆ ಆಗಿದ್ದರಿಂದ ಈಗ ಗಂಭೀರತೆ ಪಡೆದುಕೊಂಡಿದೆ.

ಅರಣ್ಯ ಇಲಾಖೆಯವರು ವಶದಲ್ಲಿರುವ ವ್ಯಕ್ತಿಯನ್ನು ಹೊಡೆದು ಸಾಯಿಸಿದ್ದಾರೆಂದು ಸ್ಥಳೀಯರ ಆರೋಪ. ಆದರೆ, ಅರಣ್ಯ ಇಲಾಖೆ ಇದನ್ನು ತಳ್ಳಿಹಾಕಿದೆ. ವಶದಲ್ಲಿರುವ ವ್ಯಕ್ತಿ ಶೌಚಾಲಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಇಲಾಖೆಯವರು ಹೇಳುತ್ತಿದ್ದಾರೆ.

ಆಗಿದ್ದೇನು?:

ಶಿವಮೊಗ್ಗದಿಂದ ಐವರು ತಾಲೂಕಿನ ಹೊಸಪೇಟೆ ಅರಣ್ಯ ಪ್ರದೇಶಕ್ಕೆ ಶ್ರೀಗಂಧ ಕಳುವು ಮಾಡಲು ಬಂದಿದ್ದು, ಬುಧವಾರ ರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿ ಬೆನ್ನಟ್ಟಿದಾಗ ಮೂವರು ತಪ್ಪಿಸಿಕೊಂಡು ಹೋಗಿದ್ದಾರೆ. ಶಿವಮೊಗ್ಗದ ವೆಂಕಟೇಶ ನಗರದ ನಿವಾಸಿ ರವಿ ಸೇರಿದಂತೆ ಇಬ್ಬರನ್ನು ಅರಣ್ಯ ಇಲಾಖೆಯವರು ವಶಕ್ಕೆ ತೆಗೆದುಕೊಂಡಿದ್ದಾರೆ. ವಶಕ್ಕೆ ಪಡೆದ ಇಬ್ಬರಲ್ಲಿ ಕಲ್ಲೇಹೊಳೆ ಕೋಟೆಯ ಆನೆ ಹಿಮ್ಮೆಟ್ಟಿಸುವ ಶಿಬಿರದಲ್ಲಿರುವ ಶೌಚಾಲಯದಲ್ಲಿ ಓರ್ವರ ಮೃತದೇಹ ಪತ್ತೆಯಾಗಿದೆ.

ರವಿ ಮೃತಪಟ್ಟಿರುವುದು ಗುರುವಾರ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಆಂಬ್ಯುಲೆನ್ಸ್‌ ವಾಹನ ಬರುತ್ತಿದ್ದಂತೆ ಸ್ಥಳೀಯರ ಗಮನಕ್ಕೆ ಈ ವಿಷಯ ಬಂದಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಕೋಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಆ ವ್ಯಕ್ತಿ ಹೇಗೆ ಮೃತಪಟ್ಟ, ವಶಕ್ಕೆ ಪಡೆದ ಇನ್ನೋರ್ವ ವ್ಯಕ್ತಿ ಎಲ್ಲಿದ್ದಾನೆ ಹೀಗೆ ಪ್ರಶ್ನೆಗಳ ಸುರಿ ಮಳೆ ಸುರಿಸಿದರು.

ನೈಟ್‌ಕ್ಲಬ್‌ಗೆ ತೆರಳಿದ 17 ಜನರ ನಿಗೂಢ ಸಾವು

ಪರಿಸ್ಥಿತಿಯನ್ನು ತಿಳಿಗೊಳಿಸಲು ಕೂಡಲೇ ಡಿವೈಎಸ್ಪಿ, ವೃತ್ತ ನಿರೀಕ್ಷಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜನೆ ಮಾಡಲಾಯಿತು. ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್‌, ಚಿಕ್ಕಮಗಳೂರು ಡಿಎಫ್‌ಓ ಕ್ರಾಂತಿ ಭೇಟಿ ನೀಡಿದ್ದರು. ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತಪಟ್ಟಿರೋ ವ್ಯಕ್ತಿ ಶಿವಮೊಗ್ಗ ಮೂಲದ ರವಿ ಎಂಬಾತ. ಈತ ಸೇರಿದಂತೆ 5 ಮಂದಿ ಶ್ರೀಗಂಧ ಕಳವಿಗೆ ಅರಣ್ಯಕ್ಕೆ ಬಂದಿದ್ದರು. ಸಿಬ್ಬಂದಿ ಅವರನ್ನು ವಶಕ್ಕೆ ಪಡೆದಿದ್ದಾರೆ, ಸ್ಥಳೀಯರ ಆರೋಪದ ಕುರಿತು ತನಿಖೆ ನಡೆಸಲಾಗುವುದು

- ಕ್ರಾಂತಿ, ಡಿಎಫ್‌ಓ

click me!