
ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್
ವಿಜಯನಗರ (ಫೆ.15): ಸಿದ್ದರಾಮಯ್ಯ ಮತ್ತೊಮ್ಮೆ ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿ ಬಾದಾಮಿಯಿಂದ ಬೆಂಗಳೂರಿಗೆ ತೆರಳಿದ್ದ ಅಭಿಮಾನಿಗಳ ಟ್ರಾಕ್ಸ್ ವಾಪಸ್ ಬರೋವಾಗ ಅಪಘಾತಕ್ಕಿಡಾಗಿದೆ. ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿ ನಿಲ್ಲಿಸಿದ್ದ ಟೆಂಪೋಗೆ ಅಪರಿಚಿತ ಲಾರಿಯೊಂದು ಗುದ್ದಿ ಹೋಗಿದ್ದು, ಈ ಅಪಘಾತದಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿಂತಿದ್ದ ಟ್ರಾಕ್ಸ್ ಗೆ ಗುದ್ದಿದ ಲಾರಿ:
ವಿಲ್ ಜಾಮ್ ಆಗಿ ನಿಂತಿದ್ದ ಟ್ರಾಕ್ಸ್ ನ ಹಿಂಬದಿಗೆ ಲಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಟ್ರಾಕ್ಸ್ ನಲ್ಲಿದ್ದ 17 ಜನರ ಪೈಕಿ ಮೂವರಿಗೆ ಗಾಯಗಳಾಗಿವೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ - ಇಮಡಾಪುರ ಮದ್ಯದ ಐನಾಪೂರಿ ಡಾಬಾದ ಹತ್ತಿರದ ಬೆಳಗಿನ ಜಾವ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ ತಿಮ್ಮಣ್ಣ ಬೂದಪ್ಪ ವಡ್ಡರ್ (59), ಭೀಮಸೇನಾ ಶಿವಪ್ಪ ಪತ್ತಾರ್ (52), ಹನುಮಂತಪ್ಪ ಕಟಗೇರಿ (50) ಗಾಯಗೊಂಡಿದ್ದಾರೆ. ತಕ್ಷಣ ಇವರನ್ನು ಹೈವೇ ಅಂಬ್ಯಲೆನ್ಸ್ ನಲ್ಲಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಾದಾಮಿ ಜನರಿಗೆ ದಯವಿಟ್ಟು ನನ್ನ ಕ್ಷಮಿಸಿ ಎಂದ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಸಿದ್ದು ಭೇಟಿ ಮಾಡಿದ್ದ ಅಭಿಮಾನಿಗಳು: ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಮರಳಿ ಸ್ಪರ್ದಿಸಬೇಕೆಂದು ಆಗ್ರಹಿಸಿ ಸಿದ್ದರಾಮಯ್ಯರನ್ನ ನಿನ್ನೆ ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ಅಭಿಮಾನಿಗಳು ಮರಳಿ ಬೇಲೂರು ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಟ್ರಾಕ್ಸ್ ಗೆ ಲಾರಿ ಡಿಕ್ಕಿಯಾಗಿದೆ. 17 ಜನರು ಪ್ರಯಾಣಿಸುತ್ತಿದ್ದ ಟ್ರಾಕ್ಸ್ ಕೂಡ್ಲಿಗಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ನಸುಕಿನ ಜಾವ ಹೋಗುತ್ತಿರುವಾಗ ಹೊಸಹಳ್ಳಿ - ಇಮಡಾಪುರ ಮದ್ಯದಲ್ಲಿ ವಿಲ್ ಜಾಮ್ ಆಗಿದೆ. ಐನಾಪೂರಿ ಡಾಬಾ ಹತ್ತಿರ ಟಾಕ್ಸ್ ನಿಲ್ಲಿಸಿಕೊಂಡು ಸರಿಪಡಿಸಲಾಗುತ್ತಿತ್ತು. ಈ ವೇಳೆ ಟ್ರಾಕ್ಸ್ ನಲ್ಲಿದ್ದ 14ಜನ ಕೆಳಗಿಳಿದಿದ್ದು ಉಳಿದ ಮೂವರು ಅದರಲ್ಲಿದ್ದರು.
ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು : ಕರ್ನಾಟಕ ಮೂಲದ ಕ್ಯಾಂಟರ್ ಲಾರಿಯೊಂದು ನಿಂತಿದ್ದ ಟ್ರಾಕ್ಸ್ ಬಲಭಾಗದ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಟ್ರಾಕ್ಸ್ ನಲ್ಲಿದ್ದ ಮೂವರಿಗೆ ಗಾಯವಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಡಿಕ್ಕಿ ರಭಸಕ್ಕೆ ಟ್ರಾಕ್ಸ್ ನ ಬಲಭಾಗ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ತಾಲೂಕಿನ ಖಾನಾ ಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ರಾಜ್ಯಪಾಲರಿಂದ ತೌಡು ಕುಟ್ಟಿದ ಭಾಷಣ, ಭತ್ತ ಕುಟ್ಟಿದ್ದರೆ ಅಕ್ಕಿ ಆದರೂ ಬರುತ್ತಿತ್ತು: ಸಿದ್ದರಾಮಯ್ಯ
ಬೆಂಗಳೂರು (ಫೆ.15): ಕ್ಷೇತ್ರದ ಆಯ್ಕೆ ಬಗ್ಗೆ ಗೊಂದಲದಲ್ಲಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಹಾಗೂ ಬಾದಾಮಿ ಹಾಲಿ ಶಾಸಕ ಸಿದ್ದರಾಮಯ್ಯ ಅವರಿಗೆ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಒತ್ತಡ ಹೆಚ್ಚಾಗಿದ್ದು, ಸತತ ಮೂರನೇ ಬಾರಿಗೆ ಮಂಗಳವಾರ ಬಾದಾಮಿ ಕ್ಷೇತ್ರದಿಂದ ಆಗಮಿಸಿದ ನೂರಾರು ಮುಖಂಡರು ಸಿದ್ದರಾಮಯ್ಯ ಮೇಲೆ ಒತ್ತಡ ಹೇರಿದ್ದಾರೆ.
ದಯವಿಟ್ಟು ಕ್ಷಮಿಸಿ: ಅಭಿಮಾನಿಗಳ ಪ್ರೀತಿಗೆ ಸ್ಪಂದಿಸಿ ಮಾತನಾಡಿರುವ ಸಿದ್ದರಾಮಯ್ಯ, ದಯವಿಟ್ಟು ನನ್ನನ್ನು ಕ್ಷಮಿಸಬೇಕು. ಮೈಸೂರಿನಿಂದ ಬಂದ ನನ್ನನ್ನು ಪ್ರೀತಿಯಿಂದ ಗೆಲ್ಲಿಸಿದ್ದೀರಿ. ಆದರೆ ನಿಮ್ಮ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದರೂ ನಿತ್ಯ ನಿಮ್ಮ ಕಷ್ಟಸುಖ ಆಲಿಸಲು ಆಗುತ್ತಿಲ್ಲ. ನನ್ನ ಗೆಲ್ಲಿಸಿದ ನಿಮ್ಮ ಋುಣ ತೀರಿಸಲು ಆಗುವುದಿಲ್ಲ. ನನಗೆ 76 ವರ್ಷ ವಯಸ್ಸಾಗಿದೆ. ದೂರದ ಬಾದಾಮಿಗೆ ನಿರಂತರವಾಗಿ ಪ್ರಯಾಣಿಸಲು ಆಗುವುದಿಲ್ಲ ಎಂಬ ಕಾರಣಕ್ಕೆ ಮಾತ್ರವೇ ಬಾದಾಮಿಯಿಂದ ಸ್ಪರ್ಧಿಸಲು ಹಿಂಜರಿಯುತ್ತಿದ್ದೇನೆ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಮನವೊಲಿಸುವ ಪ್ರಯತ್ನ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ