
ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು
ತುಮಕೂರು(ನ.21): ಅದು ಬರೊಬ್ಬರಿ 14 ವರ್ಷಗಳ ಹಿಂದೆ ನಡೆದಿದ್ದ ದಲಿತ ಮಹಿಳೆಯ ಭರ್ಬರ ಕೊಲೆ ಪ್ರಕರಣ. ರಕ್ತದ ಮಡುವಿನಲ್ಲಿ ನರಳಾಡಿ ಪ್ರಾಣಬಿಟ್ಟಿದ್ದ ಆಕೆಗೆ ಇಂದು ನ್ಯಾಯಾಲಯ ನೀಡಿದ ತೀರ್ಪಿನಿಂದ ಶಾಂತಿ ಸಿಕ್ಕಂತಾಗಿದೆ.
ಇಡೀ ರಾಜ್ಯಾದ್ಯಂತ ಸದ್ದು ಮಾಡಿದ್ದ ಡಾಬಾ ಹೊನ್ನಮ್ಮ ಕೊಲೆ ಪ್ರಕರಣ..!
ಯಸ್.. ಅದು 2010 ರ ಜೂನ್ 28 ರಂದು ಸಂಜೆ 7.30 ವೇಳೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಬಳಿಯ ಗೋಪಾಲಪುರ ಗ್ರಾಮದಲ್ಲಿ ನಡೆದಿದ್ದ ಡಾಬಾ ಹೊನ್ನಮ್ಮ ಕೊಲೆ. ಆ ಭೀಕರ ಕೊಲೆ ಪ್ರಕರಣ ಇಡೀ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಕೊಲೆ ಪ್ರಕರಣವನ್ನ ಖಂಡಿಸಿ ಇಡೀ ರಾಜ್ಯಾದ್ಯಂತ ದಲಿತ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ, ಹೋರಾಟಗಳನ್ನ ಮಾಡಿದ್ರು. ಸತತ 14 ವರ್ಷಗಳಿಂದ ಪ್ರಕರಣವನ್ನ ವಿಚಾರಣೆ ನಡೆಸಿದ ತುಮಕೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ಆದೇಶ ನೀಡಿ ಕೊಲೆಗೈದಿದ್ದ 21 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಕೊಪ್ಪಳ: ಅಸ್ಪೃಶ್ಯತೆ ಕೇಸ್, ಜೀವಾವಧಿಗೆ ಗುರಿಯಾದ 98 ಮಂದಿಗೆ ಸಿಕ್ತು ಬೇಲ್!
ಹೌದು, ಪ್ರಕರಣದ ಹಿನ್ನೆಲೆ ಬಗ್ಗೆ ಹೇಳೋದಾದ್ರೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಗೋಪಾಲಪುರ ನಿವಾಸಿಯಾಗಿದ್ದ ಡಾಬಾ ಹೊನ್ನಮ್ಮ ತಮ್ಮ ಮನೆಯ ಬಳಿ ಸಂಗ್ರಹವಾಗಿದ್ದ ಮರದ ತುಂಡುಗಳು ಕಳವು ಆಗುತ್ತಿದ್ದವು. ಕಳ್ಳತನ ವಿಚಾರಕ್ಕೆ ಸಂಬಂಧಿಸಿದಂತೆ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ದೂರು ನೀಡಿದ್ದ ಡಾಬಾ ಹೊನ್ನಮ್ಮ, ಅಲ್ಲದೇ ದಲಿತ ಸಮುದಾಯದ ಪ್ರಬಲ ಲೀಡರ್ ಆಗಿದ್ದ ಹೊನ್ನಮ್ಮ ಬಿಜೆಪಿ ಪಕ್ಷದಲ್ಲೂ ಗುರುತಿಸಿಕೊಂಡಿದ್ದರು. ಮರದ ತುಂಡುಗಳ ಕಳವು ವಿಚಾರದಲ್ಲಿ ಊರಿನವರಿಗೂ ಡಾಬಾ ಹೊನ್ನಮ್ಮಗೂ ಗಲಾಟೆ ನಡೆದಿತ್ತು.
ಈ ವೇಳೆ ಡಾಬಾ ಹೊನ್ನಮ್ಮನ ಅಣ್ಣತಮ್ಮಂದಿರನ್ನೇ ಎತ್ತಿಕಟ್ಟಿದ್ದ ಸವರ್ಣಿಯರು. ಬಳಿಕ ಡಾಬಾ ಹೊನ್ನಮ್ಮಳ ಹತ್ಯೆಗೆ ಪ್ರಿ ಪ್ಲಾನ್ ಮಾಡಿಕೊಂಡಿದ್ದರು. ಪ್ಲಾನ್ ನಂತೆ ಡಾಬಾ ಹೊನ್ನಮ್ಮಳನ್ನ ಹತ್ಯೆ ಮಾಡೋಕೆ ನಿರ್ಧಾರ ಮಾಡಿದ್ದರು. ಹೊನ್ನಮ್ಮ ನಡೆಸುತ್ತಿದ್ದ ಡಾಬಾ ಊರಿನಿಂದ ಹೊರಗೆ ಇತ್ತು. ಡಾಬಾದಿಂದ ಮನೆಗೆ ಬರುವ ವೇಳೆ ಹೊನ್ನಮ್ಮಳನ್ನ ಅಟ್ಯಾಕ್ ಮಾಡಿದ್ದರು. ಅಟ್ಟಾಡಿಸಿಕೊಂಡು ಚಪ್ಪಡಿ ಕಲ್ಲಿನಿಂದ ತಲೆಯನ್ನ ಜಜ್ಜಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು.
ಇನ್ನು ಪ್ರಕರಣ ಸಂಬಂಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂದಿನ ಡಿವೈಎಸ್ ಪಿ ಶಿವರುದ್ರಸ್ವಾಮಿ ನೇತೃತ್ವದಲ್ಲಿ ಆರೋಪಿಗಳನ್ನ ಬಂಧಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ರು. ಸತತ 14 ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಸಿದ ತುಮಕೂರಿನ 3 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾ. ನಾಗಿರೆಡ್ಡಿ ಇಂದು ಮಹತ್ವ ತೀರ್ಪು ನೀಡಿದ್ದಾರೆ. 27 ಆರೋಪಿಗಳ ಪೈಕಿ 6 ಜನ ಆರೋಪಿಗಳು ಸಾವನ್ನಪ್ಪಿದ್ದು, ಉಳಿದ 21 ಜನ ಆರೋಪಿಗಳ ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 13,500 ದಂಡ ಒಟ್ಟು 2 ಲಕ್ಷದ 83 ಸಾವಿರದ 500 ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿ ಆದೇಶ ನೀಡಿದೆ.
ಇನ್ನು 21 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಆಗಿದ್ದು, ಈ ಮಹತ್ವದ ತೀರ್ಪಿನಿಂದ ಕೊಲೆಯಾದ ಡಾಬಾ ಹೊನ್ನಮ್ಮ ಆತ್ಮಕ್ಕೆ ಶಾಂತಿ ಸಿಕ್ಕಂತಾಗಿದೆ.
Koppal: ಮರಕುಂಬಿ ದಲಿತರ ಮೇಲೆ ದೌರ್ಜನ್ಯ ಕೇಸ್: 98 ಸವರ್ಣಿಯರಿಗೆ ಜೀವಾವಧಿ ಶಿಕ್ಷೆ
ಜೀವಾವಧಿ ಶಿಕ್ಷೆಗೆ ಒಳಗಾದ 21 ಅಪರಾಧಿಗಳು
ಎ 1 ಅಪರಾಧಿ ರಂಗನಾಥ, ಮಂಜುಳ, ತಿಮ್ಮರಾಜು, ರಾಜು (ದೇವರಾಜು), ಶ್ರೀನಿವಾಸ್, ಆನಂದ (ಆನಂದಸ್ವಾಮಿ), ವೆಂಕಟಸ್ವಾಮಿ, ವೆಂಕಟೇಶ್, ನಾಗರಾಜು, ರಾಜಪ್ಪ, ಮೀಸೆ ಹನುಮಂತಯ್ಯ, ಗಂಗಾಧರ (ಗಂಗಣ್ಣ), ನಂಜುಂಡಯ್ಯ (ಪರಿಶಿಷ್ಟ ಜಾತಿ), ಸತ್ಯಪ್ಪ– ಸತೀಶ (ಪರಿಶಿಷ್ಟ ಜಾತಿ), ಚಂದ್ರಶೇಖರ (ಚಂದ್ರಯ್ಯ), ರಂಗಯ್ಯ (ರಾಮಯ್ಯ), ಉಮೇಶ್, ಚನ್ನಮ್ಮ, ಮಂಜಣ್ಣ, ಮಂಜು, ಸ್ವಾಮಿ (ಮೋಹನ್ ಕುಮಾರ್) ಅಪರಾಧಿಗಳು.
ಈಗಾಗಲೇ ಮೃತಪಟ್ಟಿರುವ ಆರೋಪಿಗಳು
ಹನುಮಂತಯ್ಯ (ಪರಿಶಿಷ್ಟ ಜಾತಿ), ವೆಂಕಟೇಶ್, ರಾಮಯ್ಯ, ರಾಮಯ್ಯ, ದಾಸಪ್ಪ, ಬುಳ್ಳೆ ಹನುಮಂತಯ್ಯ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ