Sharon Murder Case: ಬ್ರೇಕಪ್‌ಗೆ ಹಿಂಜರಿದ ಕಾರಣಕ್ಕೆ ನಡೆದ ಕೊಲೆ, ಕೊಲೆಗಾತಿಯ ತಾಯಿ, ಅಂಕಲ್‌ ಕೂಡ ಅರೆಸ್ಟ್‌!

Published : Nov 02, 2022, 12:25 PM IST
Sharon Murder Case: ಬ್ರೇಕಪ್‌ಗೆ ಹಿಂಜರಿದ ಕಾರಣಕ್ಕೆ ನಡೆದ ಕೊಲೆ, ಕೊಲೆಗಾತಿಯ ತಾಯಿ, ಅಂಕಲ್‌ ಕೂಡ ಅರೆಸ್ಟ್‌!

ಸಾರಾಂಶ

ಕೇರಳ ಪೊಲೀಸರು ಮಂಗಳವಾರ ಪಾರಸ್ಸಾಳ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗ್ರೀಷ್ಮಾ ಅವರ ತಾಯಿ ಸಿಂಧು ಮತ್ತು ಆಕೆಯ ಅಂಕಲ್‌ ನಿರ್ಮಲ್ ಕುಮಾರ್ ಅವರನ್ನು ಅಪರಾಧಕ್ಕೆ ಕುಮ್ಮಕ್ಕು ನೀಡಿ ಸಾಕ್ಷ್ಯ ನಾಶಪಡಿಸಿದ ಆರೋಪದಲ್ಲಿ ಬಂಧಿಸಿದ್ದಾರೆ. ಇನ್ನೊಂದೆಡೆ ಇಡೀ ಪ್ರಕರಣವನ್ನ ತಮಿಳುನಾಡಿಗೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.  

ತಿರುನನಂತಪುರ (ನ.2): ಶರೋನ್ ರಾಜ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪ್ರಕರಣವನ್ನು ತಮಿಳುನಾಡು ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ. ತಿರುವನಂತಪುರಂನ ಪ್ರಸ್ಸಾಲಾ ಮೂಲದ 23 ವರ್ಷದ ಯುವಕನಿಗೆ ತಮಿಳುನಾಡಿನ ಕನ್ಯಾಕುಮಾರಿಯ ರಾಮವರ್ಮನ್‌ ಚೀರೈನಲ್ಲಿರುವ ತನ್ನ ನಿವಾಸದಲ್ಲಿ ಆತನ ಗೆಳತಿ ಗ್ರೀಷ್ಮಾ ವಿಷವಿಟ್ಟಿದ್ದಳು. ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ ಆಗಿರುವ ಕಾರಣ ಕೇರಳ ಪೊಲೀಸ್‌ ಕ್ರೈಂ ಬ್ರ್ಯಾಂಚ್‌ ಪ್ರಕರಣವನ್ನು ತಮಿಳುನಾಡು ಪೊಲೀಸ್‌ಗೆ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಬ್ರೇಕಪ್‌ ಮಾಡಿಕೊಳ್ಳಲು ನಿರಾಕರಿಸಿದ ಎನ್ನುವ ಕಾರಣಕ್ಕಾಗಿ ಗ್ರೀಷ್ಮಾ, ಶರೋನ್‌ ರಾಜ್‌ಗೆ ವಿಷವಿಟ್ಟಿದ್ದಳು. ಅಂದಾಜು ಒಂದು ವಾರದ ಜೀವನ್ಮರಣದ ಹೋರಾಟದ ಬಳಿಕ ಅಕ್ಟೋಬರ್‌ 31 ರಂದು ಆತ ಸಾವು ಕಂಡಿದ್ದ. ಇದರ ನಡುವೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕ್ಷ್ಯನಾಶಕ್ಕೆ ಯತ್ನಿಸಿದ್ದ ಗ್ರೀಷ್ಮಾ ಅವರ ತಾಯಿ ಸಿಂಧು ಹಾಗೂ ಆಕೆಯ ಅಂಕಲ್‌ ನಿರ್ಮಲ್‌ ಕುಮಾರ್‌ ಅವರನ್ನು ಕೇರಳ ಪೊಲೀಸ್‌ ಮಂಗಳವಾರ ಬಂಧಿಸಿದ್ದಾರೆ. ಶರೋನ್‌ ಸಾವು ಕಂಡ ಬಳಿಕ ಸಾವಿನ ಕೊನೆಯ ಹೇಳಿಕೆಯಲ್ಲೂ ತನಗೆ ವಿಷವಿಟ್ಟಿದ್ದು ತನ್ನ ಗೆಳತಿ ಎಂದು ಹೇಳಲು ನಿರಾಕರಿಸಿದ್ದ, ಅನುಮಾನ ಬಂದು ಪೊಲೀಸರು ಗ್ರೀಷ್ಮಾರನ್ನು 8 ಗಂಟೆಯ ಕಾಲ ವಿಚಾರಣೆ ನಡೆಸಿದ ಬಳಿಕ ಆಕೆ ತಪ್ಪೊಪ್ಪಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯನ್ನು ಕೇರಳ ಪೊಲೀಸ್‌ ಪೂರ್ಣಗೊಳಿಸಲಿದ್ದು, ತಮಿಳುನಾಡು ಪೊಲೀಸರು ತನಿಖೆಯನ್ನು ವಹಿಸಿಕೊಳ್ಳಲಿದ್ದಾರೆ ಎಂದು ಕ್ರೈಂ ಬ್ರಾಂಚ್ ಮೂಲಗಳು ತಿಳಿಸಿವೆ. "ನಾವು ತನಿಖೆಯಲ್ಲಿ ಬಲವಾದ ಆರಂಭವನ್ನು ಮಾಡಿದ್ದೇವೆ. ತಮಿಳುನಾಡು ಪೊಲೀಸರು ನಂತರದ ಕ್ರಮವನ್ನು ಕೈಗೊಳ್ಳಬಹುದು. ಪ್ರಕರಣ ತಮಿಳುನಾಡು ಪೊಲೀಸ್‌ಗೆ ಸೇರಿದ ಬಳಿಕ, ಕೇರಳ ಕೋರ್ಟ್‌ ಬದಲಿಗೆ ತಮಿಳುನಾಡು ಕೋರ್ಟ್‌ನಲ್ಲಿ ಇದರ ವಿಚಾರಣೆ ಆಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಯಿ ಹಾಗೂ ಅಂಕಲ್‌ ಅರೆಸ್ಟ್‌: 23 ವರ್ಷದ ಶರೋನ್‌ ರಾಜ್‌ ಕೊಲೆ ಕೇಸ್‌ನಲ್ಲಿ 22 ವರ್ಷದ ಗ್ರೀಷ್ಮಾರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆಕೆಯ ಊರಾದ ಪರಸ್ಸಾಲಾದಲ್ಲಿ ಶರೋನ್‌ ರಾಜ್‌ಗೆ ವಿಷ ನೀಡಿದ್ದಳು. ಗ್ರೀಷ್ಮಾ ಅವರ ತಾಯಿ ಮತ್ತು ಅಂಕಲ್‌ ಆಕೆಯಿಂದ ಕೊಲೆಯ ಬಗ್ಗೆ ತಿಳಿದುಕೊಂಡರು ಮತ್ತು ನಂತರ ಅವಳನ್ನು ರಕ್ಷಿಸಲು ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಂಗಳವಾರ ಗ್ರೀಷ್ಮಾ ಅವರ ಮನೆಯ ಸುತ್ತ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಪೊದೆಗಳ ಸುತ್ತಲು ಕೀಟನಾಶಕದ ವಿಷದ ಬಾಟಲಿಯನ್ನು ಪತ್ತೆ ಮಾಡಿದ್ದಾರೆ. ಬಳಿಕ ಆಯುರ್ವೇದ ಔಷಧದ ಬಾಟಲಿ ಪತ್ತೆ ಕಾರ್ಯ ಕೂಡ ನಡೆದಿದೆ.

ತಿರುವನಂತಪುರಂನಲ್ಲಿ ಶರೋನ್ ನಿಗೂಢವಾಗಿ ಸಾವನ್ನಪ್ಪಿದ ಕೆಲ ದಿನಗಳ ನಂತರ ಆತನ ಗೆಳತಿ ಗ್ರೀಷ್ಮಾ ತಾನು ಕುಡಿಯಲು ಕೊಟ್ಟ ಕಷಾಯದಲ್ಲಿ (ಆಯುರ್ವೇದದ ಮಿಶ್ರಣ) ವಿಷ ಬೆರೆಸಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಗ್ರೀಷ್ಮಾ,  ಶರೋನ್ ರಾಜ್‌ನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲು ಬಯಸಿದ್ದಳು ಎಂದು ವರದಿಯಾಗಿದೆ, ಏಕೆಂದರೆ ಆಕೆಯ ಮದುವೆಯು ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಯವಾಗಿತ್ತು. ಆದರೆ, ಶರೋನ್‌ ರಾಜ್‌ ಮಾತ್ರ ಬ್ರೇಕಪ್‌ಗೆ ಸಿದ್ಧನಿರಲಿಲ್ಲ. ಹಾಗಾಗಿ ಆಕೆಯ ಆತನಿಗೆ ವಿಷವಿಟ್ಟು ಕೊಂದಿದ್ದಳು.

'ನಗುವ ಸದ್ದಿನಲ್ಲೇ ಹೃದಯ ಒಡೆದೆಯಾ...' ಮೋಸ ಮಾಡಿದ ಗರ್ಲ್‌ಫ್ರೆಂಡ್‌ ಹೆಸರು ಹೇಳದೆ ಉಸಿರುಬಿಟ್ಟ ಹುಡುಗ!

ವಿಷ ಹಾಕುವ ಬಗ್ಗೆ ಗೂಗಲ್‌ ಮಾಡಿದ್ದಳು: ಗ್ರೀಷ್ಮಾ ಈಗಾಗಲೇ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಮನೆಯಲ್ಲಿಯೇ ಇದ್ದ ಕೀಟನಾಶಕವನ್ನು ಆಯುರ್ವೇದದ ಕಷಾಯದೊಂದಿಗೆ ಬೆರೆಸಿ ಆತನಿಗೆ ನೀಡಿದ್ದಳು.  ಪೊಲೀಸರು ಕೊಲೆಗೆ ಬಳಸಿದ ಕಪಿಕ್ ಕೀಟನಾಶಕ ಬಾಟಲಿಯನ್ನು ವಶಪಡಿಸಿಕೊಂಡಿದ್ದಾರೆ. ಆಯುರ್ವೇದದ ಔಷಧಿಗೆ ಎಷ್ಟು ಪ್ರಮಾಣದ ವಿಷ ಪರಿಣಾಮಕಾರಿ ಎನ್ನುವ ಬಗ್ಗೆ ಆಕೆ ಗೂಗಲ್‌ನಲ್ಲಿ ಜಾಲಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅಬ್ಬಾ ಇವಳೆಂತಾ ಪಾಕಡಾ ಹುಡುಗಿ, ಬಾಯ್‌ಫ್ರೆಂಡ್‌ಗೆ ವಿಷ ಹಾಕಿ ಕೊಲೆಮಾಡಿ ಮಳ್ಳಿ ತರ ಇದ್ದವಳ ಬಂಧನ

ಅಕ್ಟೋಬರ್ 14 ರಂದು ಶರೋನ್, ಗ್ರೀಷ್ಮಾ ಅವರ ಮನೆಗೆ ಭೇಟಿ ನೀಡಿದ್ದರು. ನೋವು ನಿವಾರಣೆಗಾಗಿ ತಾನು ಯಾವಾಗಲೂ ಈ ಕಷಾಯವನ್ನು ಸೇವಿಸುತ್ತೇನೆ ಎಂದು ಹೇಳುವ ಮೂಲಕ ಶರೋನ್‌ಗೆ ಕಷಾಯ ನೀಡಿದ್ದಳು. ಆದರೆ, ಕಷಾಯ ಕಹಿಯಾಗಿತ್ತು. ಇದಕ್ಕಾಗಿ ಶರೋನ್‌ಗೆ ಮಾವಿನ ಹಣ್ಣಿನ ಜ್ಯೂಸ್‌ ಕೂಡ ನೀಡಿದ್ದಳು. ಶರೋನ್‌ ಜೊತೆಗಿದ್ದ ಸ್ನೇಹಿತನ ಪ್ರಕಾರ, ಆತ ಮನೆಗೆ ಬರುವ ತನಕವೂ ವಾಂತಿ ಮಾಡಿಕೊಳ್ಳುತ್ತಿದ್ದ. ಅದೇ ದಿನ ಪರಸ್ಸಾಲ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. , ಅಲ್ಲಿಂದ ಅವರನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ, ಆ ಸಮಯದಲ್ಲಿ ಅವರ ರಕ್ತ ಪರೀಕ್ಷೆಗಳು ಸಾಮಾನ್ಯವಾಗಿದ್ದ ಕಾರಣ, ಅವರನ್ನು ಮನೆಗೆ ಕಳುಹಿಸಲಾಗಿತ್ತು.

ಮರುದಿನದಿಂದ, ಶರೋನ್ ತೀವ್ರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಲು ಪ್ರಾರಂಭಿಸಿದರು, ಇದರಿಂದಾಗಿ ಅವರು ಕೆಲವು ಇತರ ಆಸ್ಪತ್ರೆಗಳನ್ನು ಸಂಪರ್ಕಿಸಿದರು. ಅಂತಿಮವಾಗಿ, ಅಕ್ಟೋಬರ್ 17 ರಂದು, ಅವರನ್ನು ಮತ್ತೊಮ್ಮೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರ ರಕ್ತ ಪರೀಕ್ಷೆಯ ಫಲಿತಾಂಶಗಳು ಈ ಬಾರಿ ಪ್ರಮುಖ ವ್ಯತ್ಯಾಸಗಳನ್ನು ತೋರಿಸಿದ್ದರಿಂದ, ಅವರನ್ನು ತಕ್ಷಣವೇ ಐಸಿಯುಗೆ ದಾಖಲಿಸಲಾಯಿತು, ಅಲ್ಲಿ ವೈದ್ಯರು ಅವರ ಆಂತರಿಕ ಅಂಗಗಳು ಹಾನಿಗೊಳಗಾಗಿರುವುದನ್ನು ಕಂಡುಕೊಂಡರು. ಕೆಲವು ದಿನಗಳ ನಂತರ, ಅಕ್ಟೋಬರ್ 25 ರಂದು, ಅಂಗಾಂಗ ವೈಫಲ್ಯದಿಂದ ಉಂಟಾದ ಹೃದಯ ಸ್ತಂಭನದಿಂದಾಗಿ ಶರೋನ್ ನಿಧನರಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?