
ಹಾಸನ(ನ.11): ಪತಿ -ಪತ್ನಿ ಬಾಳಬಂಡಿಯ ಜೋಡಿಚಕ್ರಗಳಿದ್ದಂತೆ. ಆದ್ರೆ ಜೊತೆ 35 ವರ್ಷ ಸಂಸಾರ ಮಾಡಿದ್ದ ಪತಿಯೇ ಪತ್ನಯನ್ನು ಅಮಾನುಷವಾಗಿ ಕೊಂದಿದ್ದಾನೆ. ಮನೆಯೊಳಗೆ ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಲೆಗೈದು ಮೃತದೇಹ ಒಳಗೆ ಬಿಟ್ಟಿದ್ದನು. ಹೊರಗಿನಿಂದ ಬಾಗಿಲು ಬೀಗ ಹಾಕಿಕೊಂಡು ಎಸ್ಕೇಪ್ ಆಗಿದ್ದನು. ಮೂರು ದಿನಗಳ ನಂತರ ಕೊಲೆ ಪ್ರಕರಣ ಬೆಳಕಿದೆ ಬಂದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ತಂಬಲಿಗೆರೆ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ. ರತ್ಮಮ್ಮ ಕೊಲೆಯಾಗಿರುವ 58 ವರ್ಷದ ಮಹಿಳೆ. ಈ ರತ್ಮಮ್ಮಳ ಕೊಂದಿದ್ದು ಬೇರಾರು ಅಲ್ಲ, 35 ವರ್ಷ ಜೊತೆ ಬಾಳಿದ್ದ ಪತಿ ಪರಮೇಶ್. ಮಲಗಿದ್ದ ಪತ್ನಿಯನ್ನು ಪತಿಯೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದಾನೆ. ಮೂರು ದಿನಗಳ ಹಿಂದೆಯೇ ಕೊಂದಿದ್ದನು. ಲಗ್ನ ಪತ್ರಿಕೆ ಕೊಡಲು ಸಂಬಂಧಿಯೊಬ್ಬರು ಬಂದಿದ್ದಾಗ, ಮನೆ ಬಾಗಿಲು ಹಾಕಿದ್ದು, ಮನೆಯೊಳಗಿಂದ ವಾಸನೆ ಬರುತ್ತಿತ್ತು. ನಂತರ ರತ್ನಮ್ಮರ ಮಗನಿಗೆ ಪೋನ್ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಬೆಂಗಳೂರಿನಲ್ಲಿದ್ದ ಮಗ ಮನೆಗೆ ಬಂದು ಬೀಗ ಒಡೆದು ಒಳಗೆ ನೋಡಿದಾಗ ತಾಯಿ ಹೆಣವಾಗಿ ಬಿದ್ದಿದ್ದಳು. ನಂತರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಅಕ್ರಮ ಸಂಬಂಧ: ಜನ ಮಾತಾಡ್ಕೊಳ್ತಾರೆ, ಮನೆ ಕಡೆ ಬರಬೇಡ ಎಂದಿದಕ್ಕೆ ಮಹಿಳೆಗೆ ಚೂರಿ ಇರಿದ ಕಾಮುಕ
ರತ್ನಮ್ಮ-ಪರಮೇಶ್ ಮದುವೆಯಾಗಿ 35 ವರ್ಷ ಕಳೆದಿತ್ತು. ಒಬ್ಬ ಮಗಳು, ಮತ್ತೋರ್ವ ಮಗ ಈ ದಂಪತಿಯ ಮಕ್ಕಳು. ಮಗಳನ್ನು ಲಕ್ಕುಂದಕ್ಕೆ ಮದ್ವೆ ಮಾಡಿ ಕೊಟ್ಟಿದ್ದರು. ಮಗ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದ. ತಂಬಲಗೆರಿಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರು. 5 ಎಕ್ಕರೆ ಕಾಫಿ ತೋಟ ಇತ್ತು. ಇಬ್ಬರೂ ಶ್ರಮಜೀವಿಗಳು .ಆದ್ರೆ ಸಂಸಾರದಲ್ಲಿ ಸಣ್ಣಪುಟ್ಟ ವಿಷಯಕ್ಕೂ ಜಗಳ ನಡೆಯುತ್ತಿತ್ತು. ಪತಿ ಪರಮೇಶ್ 4 ವರ್ಷದ ಹಿಂದೆ ತಲೆಗೆ ಕಡಿದು ಕೊಲೆ ಮಾಡಲು ಯತ್ನಿಸಿದ್ದನು. ಆದ್ರೆ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದರು. 2 ವರ್ಷಗಳ ಹಿಂದೆ ಕೈ ಬೆರಳನ್ನೆ ಕಟ್ ಮಾಡಿದ್ದನು. ಗಲಾಟೆ ನಡೆದ ನಂತರ ಸಂಬಂಧಿಕರ ಮನೆಗೆ ಹೋಗಿ ಇದ್ದು ಬರುತ್ತಿದ್ದನು. ಅದಾದ ನಂತರ ರಾಜೀ ಪಂಚಾಯ್ತಿ ಮಾಡಿಸಿ ಇಬ್ಬರನ್ನು ಜೊತೆ ಬಾಳುವಂತೆ ಹಿರಿಯರು ಮಾಡುತ್ತಿದ್ದರು. ಆದ್ರೆ ಮೂರು ದಿನಗಳ ಹಿಂದೆ ಹಣಕಾಸಿನ ವಿಷಯಕ್ಕೆ ಜಗಳ ತೆಗೆದ ಪರಮೇಶ್ ಪತ್ನಿಯನ್ನು ಭೀಕರವಾಗಿ ಮನಸ್ಸೋ ಇಚ್ಚೆ ಕೊಚ್ಚಿ ಕೊಲೆ ಮಾಡಿದ್ದಾನೆ. ಪತ್ನಿ ಕೊಂದು ಹೆಣ ಒಳಗೆ ಬಿಟ್ಟು ನಂತರ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದನು. ಪರಮೇಶ್ ನ ವಿಕೃತ ಬುದ್ದಿಗೆ ಸಂಬಂಧಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಒಂದು ಹೊಸ ಮನೆ ಕಟ್ಟಬೇಕೆಂಬ ಬಯಕೆಯಿಂದ ರತ್ಮಮ್ಮ ಹೋರಾಟ ಮಾಡಿ ಮನೆ ಕಟ್ಟುತ್ತಿದ್ದರು. ಆ ಮನೆಗೆ ಗೃಹಪ್ರವೇಶ ಮಾಡುವ ಮುನ್ನವೇ ಪಾಪಿ ಪತಿ ತನ್ನ ಪತ್ನಿಯನ್ನು ಬಾರದ ಲೋಕಕ್ಕೆ ಕಳಿಸಿದ್ದಾನೆ. ಪತ್ನಿ ಕೊಂದ ಪಾಪಿ ಪರಮೇಶ್ ತಲೆಮರೆಸಿಕೊಂಡಿದ್ದು, ಆರೋಪಿ ಸೆರೆಗೆ ಯಸಳೂರು ಪೊಲೀಸರು ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ