ದೆಹಲಿ: ಸುಸ್ಥಿರ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು, ಮಕ್ಕಳ ತಪ್ಪುಗಳನ್ನು ತಿದ್ದಿ ಅವರಿಗೆ ಸರಿ ದಾರಿ ತೋರಿಸುವ ಶಿಕ್ಷಕರ ಬಗ್ಗೆ ಸಮಾಜದಲ್ಲಿ ಉತ್ತಮ ಗೌರವವಿದೆ. ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕಿಗೆ ದೇವರ ಸ್ಥಾನಮಾನ ನೀಡಿದ್ದಾರೆ. ಗುರುವಿನ ಮಹತ್ವ ಸಾರುವ ಶ್ಲೋಕವೇ ಇದೆ. ಹೀಗಿರುವಾಗ ಶಿಕ್ಷಕಿಯೊಬ್ಬರು ವಿದ್ಯಾರ್ಥಿನಿಯನ್ನು ಶಿಕ್ಷಿಸಲು ಹೋಗಿ ಆಕೆಯನ್ನು ಸಾವಿನಂಚಿಗೆ ತಳ್ಳಿದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
5ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಶಿಕ್ಷಕಿ ಮೊದಲು ಕತ್ತರಿಯಿಂದ (scissors) ಹಲ್ಲೆ ಮಾಡಿ ನಂತರ ಆಕೆಯನ್ನು ಮೊದಲನೇ ಮಹಡಿಯಿಂದ ಕೆಳಗೆ ಎಸೆದಿದ್ದಾಳೆ.
ಮೊದಲ ಮಹಡಿಯಿಂದ ಕೆಳಗೆ ಬಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ದೆಹಲಿಯ ನಗರ ನಿಗಮದ ಬಾಲಿಕ ವಿದ್ಯಾಲಯದಲ್ಲಿ (Delhi Nagar Nigam Balika Vidyalaya) ಬೆಳಗ್ಗೆ 11.15ರ ಸುಮಾರಿಗೆ ಈ ಆಘಾತಕಾರಿ ಘಟನೆ ನಡೆದಿದೆ. ಹೀಗೆ ಶಿಕ್ಷಕಿಯಿಂದ ಹಲ್ಲೆಗೊಳಗಾದ ಬಾಲಕಿಯನ್ನು 5ನೇ ತರಗತಿಯ ವಂದನಾ (Vandana) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ ಗೀತಾ ದೇಶ್ವಾಲ್ ( Gita Deshwal) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ಕತ್ತರಿಗಳಿಂದ ಶಿಕ್ಷಕಿ ಗೀತಾ ಬಾಲಕಿ ವಂದನಾ (Vandana) ಮೇಲೆ ಹಲ್ಲೆ ಮಾಡಿದ್ದಾಳೆ ಅಲ್ಲದೇ ಆಕೆಯನ್ನು ಮೊದಲ ಮಹಡಿಯಿಂದ ಕೆಳಗೆ ತಳ್ಳಿದ್ದಾಳೆ. ಈ ವೇಳೆ ಸಹ ಶಿಕ್ಷಕಿ ರಿಯಾ ಮಧ್ಯಪ್ರವೇಶಿಸಿ ಶಿಕ್ಷಕಿಯನ್ನು ತಡೆಯಲು ಯತ್ನಿಸಿದ್ದರಾದರೂ ಅಷ್ಟರಲ್ಲಾಗಲೇ ಶಿಕ್ಷಕಿ ಆಕೆಯನ್ನು ಮಹಡಿಯಿಂದ ಕೆಳಗೆ ಎಸೆದಾಗಿತ್ತು. ಬಾಲಕಿ ಕೆಳಗೆ ಬಿದ್ದಿದ್ದನ್ನು ನೋಡಿದ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದು, ಜೊತೆಗೆ ಬಾಲಕಿಯನ್ನು ಸಮೀಪದ ಬರ ಹಿಂದೂ ರಾವ್ (Bara Hindu Rao hospital) ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆಯಲ್ಲಿ ಬಾಲಕಿಗೆ ಗಾಯಗಳಾಗಿದ್ದು, ಬಾಲಕಿಗೆ ಸಿಟಿ ಸ್ಕ್ಯಾನ್ (CT scan) ಮಾಡಲಾಗಿದೆ. ಬಾಲಕಿ ಜೀವಾಪಾಯದಿಂದ ಪಾರಾಗಿದ್ದು, ಸ್ಥಿತಿ ಸ್ಥಿರವಾಗಿದ್ದಾಳೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ (investigation) ನಡೆಯುತ್ತಿದೆ ಎಂದು ದೆಹಲಿ ನಗರ ಪಾಲಿಕೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಆಕೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ಭಾರತೀಯ ದಂಡ ಸಂಹಿತೆಯ (Indian Penal Code) ಸೆಕ್ಷನ್ 307 ರ ಅಡಿ ಶಿಕ್ಷಕಿಯ ವಿರುದ್ಧ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮೀಷನರ್ (ಕೇಂದ್ರ) ಶ್ವೇತಾ ಚೌಹಾಣ್ (Shweta Chauhan) ತಿಳಿಸಿದ್ದಾರೆ. ಮಕ್ಕಳನ್ನು ಶಿಕ್ಷಿಸುವ ಅವಕಾಶ ಶಿಕ್ಷಕರಿಗಿದೆ. ತಪ್ಪಾದಾಗ ತಿದ್ದಿ ಬುದ್ದಿ ಹೇಳುವುದು ಶಿಕ್ಷಕರ ಹೊಣೆ ಆದರೆ ಜೀವ ತೆಗೆಯುವ ಹಕ್ಕು ಶಿಕ್ಷಕರಿಗಿಲ್ಲ ಆದರೆ ಇಲ್ಲಿ ಶಿಕ್ಷಕಿ ವಿದ್ಯಾರ್ಥಿನಿ ಮೇಲೆ ಮಾರಕವಾಗಿ ದಾಳಿ ಮಾಡಿದ್ದು ಭಯ ಮೂಡಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ