
ಮಂಡ್ಯ (ಜೂ.21): ಮೈಸೂರು - ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಕ್ಯಾಂಟರ್ ಗೆ ಸ್ಕೂಟಿ ಡಿಕ್ಕಿ ಹೊಡೆದು ಓರ್ವ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿ, ಬಾಲಕಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಮಂಡ್ಯದ ಮದ್ದೂರು ಬಳಿಯ ಮೈ-ಬೆಂ ದಶಪಥ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳೆಯನ್ನು ಚನ್ನಪಟ್ಟಣ ಮೂಲದ ವರಲಕ್ಷ್ಮಿ(60) ಎಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿ ನೋಡಲು ವರಲಕ್ಷ್ಮಿ, ಪುತ್ರ ಸುಧಾಕರ್, ಮೊಮ್ಮಗಳು ಗೌತಮಿ ಬಂದಿದ್ದರು. ಹೋಂಡಾ ಆಕ್ಟೀವ್ ಬೈಕ್ ನಲ್ಲಿ ಬಂದಿದ್ದ ಮೂವರು ಸಂಬಂಧಿಕರ ಆರೋಗ್ಯ ವಿಚಾರಿಸಿ ವಾಪಸ್ಸು ಚನ್ನಪಟ್ಟಣಕ್ಕೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಕ್ಯಾಂಟರ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು, ಬಳಿಕ ಹೆದ್ದಾರಿ ಎಕ್ಸ್ ಪ್ರೆಸ್ ವೇ ನಿಂದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ವರಲಕ್ಷ್ಮಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಯ ಗಾಯಗೊಂಡ ಪುತ್ರ ಹಾಗೂ ಮೊಮ್ಮಗಳನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸರಣಿ ಹಂತಕ ಉಮೇಶ್ ರೆಡ್ಡಿ ಹಿಂಡಲಗಾ ಜೈಲಿನಿಂದ ಬೆಂಗಳೂರು ಕೇಂದ್ರ ಜೈಲಿಗೆ ಶಿಫ್ಟ್
ನಿನ್ನೆಯಷ್ಟೇ ಉತ್ತರಪ್ರದೇಶ ಮೂಲದ ದಂಪತಿಯನ್ನು ಬಲಿಪಡೆದಿದ್ದ ಹೆದ್ದಾರಿ
ನಿನ್ನೆಯಷ್ಟೇ ಬೆಂ - ಮೈಸೂರು ಹೆದ್ದಾರಿಯಲ್ಲಿ ಮಂಡ್ಯದ ಗೆಜ್ಜಲಗೆರೆ ಬಳಿ ಭೀಕರ ಅಪಘಾತ ಸಂಭವಿಸಿ ಉತ್ತರಪ್ರದೇಶ ಮೂಲದ ದಂಪತಿ, ಮಂಡ್ಯದ ಕಾರು ಚಾಲಕ ಸಾವನ್ನಪಿದ ಘಟನೆ ನಡೆದಿತ್ತು. ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಉತ್ತರ ಪ್ರದೇಶದ ಮೂಲಕ ದಂಪತಿ ಹಾಗೂ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು ದಂಪತಿಗಳ ಪುತ್ರ ಗಾಯಗೊಂಡಿದ್ದರು.
ಉತ್ತರ ಪ್ರದೇಶ ಲಕ್ನೋ ತರಬೇತಿ ಮತ್ತು ನೇಮಕಾತಿ ವಿಭಾಗದ ಹೆಚ್ಚುವರಿ ನಿರ್ದೇಶಕ ನೀರಜ್ಕುಮಾರ್(55), ಪತ್ನಿ ಸೈಲ್ವಿ(50) ಹಾಗೂ ಕಾರು ಚಾಲಕ ಮಂಡ್ಯ ಗಾಂಧಿನಗರ ನಿವಾಸಿ ನಿರಂಜನ್ಕುಮಾರ್(30) ಮೃತಪಟ್ಟವರು. ಕಾರಿನಲ್ಲಿದ್ದ ನೀರಜ್ಕುಮಾರ್ ಪುತ್ರ ಸಾಗರ್ ಶ್ರೀ ವಾಸ್ತವ ತಲೆಗೆ ಬಿದ್ದ ತೀವ್ರ ಪೆಟ್ಟು ಮದ್ದೂರು, ಮಂಡ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ಗೆ ದಾಖಲು ಮಾಡಲಾಗಿದೆ.
2022 ರಿಂದ ಉತ್ತರ ಪ್ರದೇಶ ಸರ್ಕಾರದ ಲಕ್ನೋದ ತರಬೇತಿ, ನೇಮಕಾತಿ ವಿಭಾಗದ ಹೆಚ್ಚುವರಿ ನಿರ್ದೇಶಕರಾಗಿದ್ದ ನೀರಜ್ಕುಮಾರ್ ಲಕ್ನೋದಿಂದ ಬೆಂಗಳೂರಿಗೆ ಬಂದು ಕ್ಯಾಬ್ ಬುಕ್ ಮಾಡಿಕೊಂಡು ಪತ್ನಿ ಸೈಲ್ವಿ, ಪುತ್ರ ಸಾಗರ್ ಶ್ರೀವಾಸ್ತವ್ ಜೊತೆ ಮಡಿಕೇರಿ ಪ್ರವಾಸ ತೆರಳುತ್ತಿದ್ದರು.
Vijayapura: ಸರ್ಕಾರಿ ಬಸ್ -ಲಾರಿ ಭೀಕರ ಅಪಘಾತ, ಇಬ್ಬರು ಸಾವು
ರಾಷ್ಟ್ರೀಯ ಹೆದ್ದಾರಿಯ ಗೆಜ್ಜಲಗೆರೆ ಕಾಲೋನಿಯ ಕಿಟ್ಟಿಡಾಬಾ ಬಳಿ ಬೆಳಗ್ಗೆ 10.30ರ ಸುಮಾರಿಗೆ ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಎಕ್ಸಾ ಕಾರು ಮಳೆಯಿಂದ ಸ್ಕಿಡ್ ಆಗಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಮೈಸೂರು ಮಾರ್ಗದ ರಸ್ತೆಗೆ ನುಗ್ಗಿ ನೀರಜ್ಕುಮಾರ್ ಪ್ರಯಾಣಿಸುತ್ತಿದ್ದ ಮಾರುತಿ ಸ್ವಿಪ್್ಟಡಿಸೈರ್ಗೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.
ನೀರಜ್ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಟಾಟಾ ಎಕ್ಸಾ ಕಾರಿನಲ್ಲಿದ್ದ ವಿನಯ್ ಮತ್ತು ಆತನ ಪತ್ನಿ ಸಣ್ಣಪುಟ್ಟಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿತ್ತು.
ಸುದ್ಧಿ ತಿಳಿದು ಸ್ಥಳಕ್ಕೆ ಧಾವಿಸಿದ ಇನ್ಸ್ ಪೆಕ್ಟರ್ ಸಂತೋಷ್, ಸಂಚಾರಿ ಠಾಣೆ ಪಿಎಸ್ಐ ಐ.ಎನ್.ಗೌಡ ಹಾಗೂ ಸಿಬ್ಬಂದಿಗಳು ಅಪಘಾತಕ್ಕೊಳಗಾದ ಎರಡು ಕಾರುಗಳನ್ನು ರಸ್ತೆ ಬದಿಗೆ ಸರಿಸಿ ಮೃತದೇಹಗಳನ್ನು ಹೊರ ತೆಗೆದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ