Honeymoon Disaster: ಹನಿಮೂನ್​ಗೆ ಹೋದ ದಂಪತಿಯ ನಿಗೂಢ ಅಂತ್ಯ: ಕಣಿವೆಯಲ್ಲಿ ಪತಿಯ ಶವ- ಪತ್ನಿ ಕಿಡ್​ನ್ಯಾಪ್​?

Published : Jun 08, 2025, 05:04 PM IST
Honeymoon turns into disaster

ಸಾರಾಂಶ

ಹನಿಮೂನ್​ಗೆಂದು ಮೇಘಾಲಯಕ್ಕೆ ಹೋದ ದಂಪತಿಯ ದುರಂತ ಅಂತ್ಯವಾಗಿದೆ. ಪತಿಯ ಶವ ಕಣಿವೆಯಲ್ಲಿ ಪತ್ತೆಯಾಗಿದ್ದರೆ, ಪತ್ನಿ ಕಾಣೆಯಾಗಿದ್ದು, ಬಾಂಗ್ಲಾದೇಶಕ್ಕೆ ಅಪಹರಣಮಾಡಿರುವ ಶಂಕೆ ವ್ಯಕ್ತವಾಗಿದೆ. ಏನಿದು ಪ್ರಕರಣ?

ಹನಿಮೂನ್​ಗೆ ಹೋದ ದಂಪತಿಯ ದುರಂತ ಅಂತ್ಯವಾಗಿದ್ದು, ಪತಿಯನ್ನು ಕೊಲೆ ಮಾಡಿ ಕಣಿವೆಯಲ್ಲಿ ಬೀಸಾಡಿದ್ದರೆ, ಪತ್ನಿ ಅಪಹರಣಕ್ಕೆ ಒಳಗಾಗಿ ಬಾಂಗ್ಲಾದೇಶಕ್ಕೆ ಕೊಂಡೊಯ್ದಿರುವ ಶಂಕೆ ಇದೆ! ಮಧ್ಯಪ್ರದೇಶದ ಇಂದೋರ್‌ನ ದಂಪತಿ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಅವರು ಮೇಘಾಲಯಕ್ಕೆ ಹನಿಮೂನ್​ಗೆ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಲ್ಲಿ ತಿರುಗಾಡಲು ದಂಪತಿ ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸಿಕ್ಕಿದ್ದು, ತೀವ್ರ ಹುಡುಕಾಟದ ಬಳಿಕ, ಪತಿಯ ಶವ ಕಣಿವೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

 

ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ದಂಪತಿ, ಮೇ 21 ರಂದು ಶಿಲ್ಲಾಂಗ್ ತಲುಪಿದ್ದರು. ಅಂದು ಸಂಜೆ 6 ಗಂಟೆ ಸುಮಾರಿಗೆ ಅವರು ಬಲಾಡಿ ಅತಿಥಿ ಗೃಹವನ್ನು ತಲುಪಿದರು. ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ ನಂತರ, ಅವರು ವಿಶ್ರಾಂತಿ ಪಡೆದರು ಮತ್ತು ಮರುದಿನ ಬೆಳಿಗ್ಗೆ ಕೀಟಿಂಗ್ ರಸ್ತೆಯನ್ನು ತಲುಪಿದರು. ಇಲ್ಲಿಂದ ಅವರು ಸ್ಕೂಟಿಯನ್ನು ಬಾಡಿಗೆಗೆ ಪಡೆದು ಅತಿಥಿ ಗೃಹಕ್ಕೆ ಮರಳಿದರು. ಬಳಿಕ ಹೋಟೆಲ್​ನಿಂದ ಚೆಕ್ ಔಟ್ ಮಾಡಿದರು. ರಾಜಾ ಅವರು, ಹೋಟೆಲ್ ಮ್ಯಾನೇಜರ್‌ಗೆ 3 ದಿನಗಳ ನಂತರ ಹಿಂತಿರುಗುತ್ತೇವೆ ಮತ್ತು ಕೊಠಡಿ ಅಗತ್ಯವಿದ್ದರೆ ಕರೆ ಮಾಡಿ ತಿಳಿಸುತ್ತೇವೆ ಎಂದು ಹೇಳಿ ಹೋಗಿದ್ದರು. ಶಿಲ್ಲಾಂಗ್‌ನಿಂದ ಹೊರಟ ನಂತರ, ದಂಪತಿ ಪೂರ್ವ ಖಾಸಿ ಬೆಟ್ಟಗಳಲ್ಲಿರುವ ಮಾವ್ಲಾಖಿಯಾತ್ ಗ್ರಾಮ ತಲುಪಿದರು. ಅಲ್ಲಿ ಅವರು ಸ್ಕೂಟಿಯನ್ನು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದರು. ಅವರು ಶಿಪಾರಾ ಹೋಂಸ್ಟೇಗೆ ಹೋಗಬೇಕಾಗಿತ್ತು, ಅದರ ಮಾರ್ಗವನ್ನು ಟ್ರೆಕ್ಕಿಂಗ್ ಮೂಲಕ ಪೂರ್ಣಗೊಳಿಸಬೇಕಾಗಿತ್ತು. ಆದ್ದರಿಂದ ಅವರು ಸ್ಥಳೀಯರನ್ನು ಮಾರ್ಗದರ್ಶಿಯಾಗಿ ಕರೆದೊಯ್ದರು.

ಶಿಪಾರಾ ಹೋಂಸ್ಟೇ ತಲುಪಿದ ನಂತರ, ದಂಪತಿ ಅಲ್ಲಿಯೇ ರಾತ್ರಿ ಕಳೆದರು ಮತ್ತು ಮರುದಿನ ಬೆಳಿಗ್ಗೆ ಅಂದರೆ ಮೇ 23 ರಂದು ಮಾರ್ಗದರ್ಶಿ ಇಲ್ಲದೆ ಮಾವ್ಲಾಖಿಯಾತ್‌ಗೆ ಮರಳಿದರು. ಅದೇ ಕೊನೆ. ಅಂದಿನಿಂದ, ಅವರ ಸುಳಿವು ಸಿಗಲಿಲ್ಲ. ಕುಟುಂಬಸ್ಥರು ಕರೆ ಮಾಡಿದರೂ ಕರೆ ಸ್ವೀಕರಿಸದ್ದರಿಂದ ಸಂದೇಹ ಪಟ್ಟು ಅವರು ಪೊಲೀಸರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಆದರೆ ಅದಾಗಲೇ ಕೆಲವು ದಿನಗಳು ಕಳೆದು ಹೋಗಿವೆ. ಮೇ 24 ರಂದು, ಸೊಹ್ರಾರಿಮ್ ಗ್ರಾಮದಲ್ಲಿ ನಿಲ್ಲಿಸಲಾಗಿದ್ದ ಕೈಬಿಟ್ಟ ಸ್ಕೂಟಿಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತು, ತನಿಖೆಯ ನಂತರ ಸೋನಮ್ ಮತ್ತು ರಾಜಾ ಅದನ್ನು ಬಾಡಿಗೆಗೆ ಪಡೆದಿರುವುದು ಕಂಡುಬಂದಿದೆ. ಮೇ 25 ರ ನಂತರ, ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಆದರೆ ಏನೂ ಕಂಡುಬಂದಿಲ್ಲ.

ಈ ಕೆಲಸದಲ್ಲಿ ಪೊಲೀಸರು ಡ್ರೋನ್‌ಗಳನ್ನು ಸಹ ಬಳಸಲು ಪ್ರಾರಂಭಿಸಿದರು. ಜೂನ್ 2 ರಂದು, ವೀ ಸೊಡಾಂಗ್ ಜಲಪಾತದ ಕೆಳಗಿನ ಕಣಿವೆಯಲ್ಲಿ ಶವ ಪತ್ತೆಯಾಗಿತ್ತು. ಶವ ಬಹುತೇಕ ಕೊಳೆತಿತ್ತು. ಪೊಲೀಸ್ ತನಿಖೆಯಲ್ಲಿ ಅದು ರಾಜಾ ರಘುವಂಶಿ ಅವರ ಶವ ಎಂದು ತಿಳಿದುಬಂದಿದೆ. ಇದಾದ ನಂತರ, ಸೋನಮ್ ರಘುವಂಶಿಗಾಗಿ ಹುಡುಕಾಟ ತೀವ್ರಗೊಂಡಿತು. ಇಂದು, ಜೂನ್ 8 ರವರೆಗೆ, ಸೋನಮ್ ರಘುವಂಶಿಯ ಯಾವುದೇ ಕುರುಹು ಕಂಡುಬಂದಿಲ್ಲ. ಸೋನಮ್ ರಘುವಂಶಿಯನ್ನು ಅಪಹರಿಸಿ ಬಾಂಗ್ಲಾದೇಶಕ್ಕೆ ಕರೆದೊಯ್ಯಲಾಗಿದೆ ಎಂದು ಶಂಕಿಸಲಾಗಿದೆ. ವಾಸ್ತವವಾಗಿ, ಮೇಘಾಲಯ ಮತ್ತು ಬಾಂಗ್ಲಾದೇಶದ ನಡುವೆ ಗಡಿ ಇದೆ, ಅಲ್ಲಿ ಬೇಲಿ ಇಲ್ಲ. ಪೊಲೀಸರು ಪ್ರಕರಣವನ್ನು ಪ್ರತಿಯೊಂದು ಕೋನದಿಂದಲೂ ತನಿಖೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!