ಕಲಬುರಗಿ: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಗ್ರಾಪಂ ಸದಸ್ಯ ಆತ್ಮಹತ್ಯೆ

By Kannadaprabha NewsFirst Published Feb 7, 2024, 9:11 PM IST
Highlights

ಸಾಲಗಾರರು ನಿತ್ಯ ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿರುವುದರಿಂದ ತಮ್ಮ ಜಮೀನಿಗೆ ಹೋಗಿ ಬರುತ್ತೇನೆ ಎಂದು ಹೋಗಿ ವಿಷ ಸೇವಿಸಿದ್ದಾರೆ. ವಿಷಯ ತಿಳಿದ ಪತ್ನಿ ಹಾಗೂ ಸಹೋದರ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾರೆ.

ಚವಡಾಪುರ(ಫೆ.07): ಸಾಲಗಾರರ ಕಿರುಕುಳಕ್ಕೆ ಬೇಸತ್ತು ಅಫಜಲ್ಪುರ ತಾಲೂಕಿನ ಗೌರ(ಬಿ) ಗ್ರಾ.ಪಂ. ವ್ಯಾಪ್ತಿಯ ಬಳೂಂಡಗಿ ಗ್ರಾಮದ ಗ್ರಾ.ಪಂ. ಸದಸ್ಯ ಹಾಗೂ ರೈತ ಮಲ್ಲಪ್ಪ ಹೋರಿ (48) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

ಮೂಲತಃ ರೈತರಾಗಿರುವ ಮಲ್ಲಪ್ಪ ಅವರು ಗ್ರಾಮಸ್ಥರ ಒತ್ತಾಯದ ಮೇರೆಗೆ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಇವರ ಗುಣಸ್ವಭಾವ ಕಂಡ ಗ್ರಾಮದವರು ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಿದ್ದರು. ಆದರೆ ಮಕ್ಕಳ ಮದುವೆಗಾಗಿ ಮಾಡಿಕೊಂಡ ಸಾಲದ ಜೊತೆಗೆ ಕೃಷಿಗಾಗಿ ಮಾಡಿದ ಸಾಲ, ಮಳೆ ಕೊರತೆಯಿಂದ ಬೆಳೆ ಹಾಳಾಗಿ ಲಾಭ ಬರಲೇ ಇಲ್ಲ. ಹೀಗಾಗಿ ಖಾಸಗಿ ಜನರ ಬಳಿ ತೆಗೆದುಕೊಂಡಿದ್ದ ₹20ರಿಂದ ₹25 ಲಕ್ಷದಷ್ಟು ಸಾಲ ತೀರಿಸಲು ಸಾದ್ಯವಾಗದೆ ಇದ್ದ ಸಂದರ್ಭದ ಎದುರಾಗಿ ಸಾಲಗಾರರು ನಿತ್ಯ ಸಾಲ ಮರುಪಾವತಿಗೆ ಕಿರುಕುಳ ನೀಡುತ್ತಿರುವುದರಿಂದ ಸೋಮವಾರ ತಮ್ಮ ಜಮೀನಿಗೆ ಹೋಗಿ ಬರುತ್ತೇನೆ ಎಂದು ಹೋಗಿ ವಿಷ ಸೇವಿಸಿದ್ದಾರೆ. ವಿಷಯ ತಿಳಿದ ಪತ್ನಿ ಹಾಗೂ ಸಹೋದರ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಿಸದೆ ಮಂಗಳವಾರ ಮದ್ಯಾಹ್ನ ಮೃತ ಪಟ್ಟಿದ್ದಾರೆ. ಮೃತರಿಗೆ ಓರ್ವ ಪುತ್ರ, ನಾಲ್ವರು ಪುತ್ರಿಯಿದ್ದಾರೆ.

ಕನಕಪುರ: ತಾಲೂಕು ಕಚೇರಿಯಲ್ಲೇ ಚುನಾವಣಾ ಶಾಖಾ ಸಿಬ್ಬಂದಿ ನೇಣು ಬಿಗಿದು ಆತ್ಮಹತ್ಯೆ!

ಗ್ರಾ.ಪಂ ಸದಸ್ಯ ಮಲ್ಲಪ್ಪ ಹೋರಿ ಸಾವಿನ ಸುದ್ದಿ ತಿಳಿದು ಕೆಪಿಸಿಸಿ ಸದಸ್ಯ ಅರುಣಕುಮಾರ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದು, ಮಲ್ಲಪ್ಪ ಹೋರಿ ಅವರ ಸಾವಿನ ಸುದ್ದಿ ನಮಗೆಲ್ಲ ಆಘಾತ ತಂದಿದೆ. ರೈತರಾಗಿದ್ದರಲ್ಲದೆ ಗ್ರಾ.ಪಂ ಸದಸ್ಯರಾಗಿ ಉತ್ತಮ ಕೆಲಸಗಳನ್ನು ಕೂಡ ಮಾಡಿದ್ದಾರೆ, ಅವರ ಕುಟುಂಬಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

click me!