Bengaluru Drug Bust: ಜೈಲು ಪಾಲಾದ ಲೀಡರ್‌ಗೆ ಬೇಲ್‌ ಕೊಡಿಸಲು ಶಿಷ್ಯರಿಂದ ಡ್ರಗ್ಸ್‌ ದಂಧೆ

By Kannadaprabha NewsFirst Published Jan 20, 2022, 6:28 AM IST
Highlights

*   ಸ್ಟಾರ್‌ ರಾಹುಲ್‌ನ ನಾಲ್ವರು ಸಹಚರರ ಬಂಧನ
*   20 ಕೇಜಿ ಗಾಂಜಾ ವಶ
*   ವೃತ್ತಿಪರ ಕ್ರಿಮಿನಲ್‌ಗಳಾಗಿದ್ದ ಬಂಧಿತ ಆರೋಪಿಗಳು 
 

ಬೆಂಗಳೂರು(ಜ.20):  ಇತ್ತೀಚಿಗೆ ಪೊಲೀಸರಿಂದ(Police) ಗುಂಡೇಟು ತಿಂದು ಜೈಲು ಸೇರಿದ ತಮ್ಮ ಗುರು ರಾಹುಲ್‌ ಅಲಿಯಾಸ್‌ ಸ್ಟಾರ್‌ ರಾಹುಲ್‌ನ ಬಿಡುಗಡೆಗೆ ಅಗತ್ಯವಾದ ಹಣಕ್ಕಾಗಿ ಗಾಂಜಾ(Marijuana) ಮಾರಾಟಕ್ಕೆ ಯತ್ನಿಸಿದ್ದ ರಾಹುಲ್‌ನ ನಾಲ್ವರು ಸಹಚರರು ವಿ.ವಿ.ಪುರ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ನ್ಯೂ ಟಿಂಬರ್‌ ಯಾರ್ಡ್‌ನ ರಾಘವ ನಗರದ ಎನ್‌.ಪುರುಷೋತ್ತಮ್‌ ಅಲಿಯಾಸ್‌ ಮಂಜು, ರಾಘವೇಂದ್ರ ಬ್ಲಾಕ್‌ನ ಕಿರಣ್‌, ಮಂಡ್ಯ ಜಿಲ್ಲೆ ಮದ್ದೂರಿನ ಕಾರ್ತಿಕ್‌ ಹಾಗೂ ಜಯನಗರದ ಎಲ್‌.ರಾಹುಲ್‌ ಅಲಿಯಾಸ್‌ ತೊಡೆ ಬಂಧಿತರು(Arrest). ಆರೋಪಿಗಳಿಂದ ಆರು ಲಕ್ಷ ರು. ಮೌಲ್ಯದ 20.2 ಕೆ.ಜಿ. ಗಾಂಜಾ, ಕಾರು ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

Drug Mafia: ರಾಜ್ಯದಲ್ಲಿ ಗಾಂಜಾ ಸಾಗಾಟ ಧಂದೆಗೆ ಪೊಲೀಸರೇ ಕಿಂಗ್‌ ಪಿನ್!‌

ವಿ.ವಿ.ಪುರ ಠಾಣಾ ವ್ಯಾಪ್ತಿಯ ಹಳೇ ಕೋಟೆ ಮೈದಾನದ ಸಮೀಪ ಮಂಗಳವಾರ ಕಾರಿನಲ್ಲಿ ಆರೋಪಿಗಳು ಗಾಂಜಾ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ(Raid) ನಡೆಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಬಂಧಿತರು ಸಹ ವೃತ್ತಿಪರ ಕ್ರಿಮಿನಲ್‌ಗಳಾಗಿದ್ದು, ಅವರ ವಿರುದ್ಧ ಕೊಲೆ(Murder), ಕೊಲೆ ಯತ್ನ, ದರೋಡೆ(Robbery), ಸುಲಿಗೆ ಸೇರಿದಂತೆ ಇನ್ನಿತರೆ ಆರೋಪಗಳಡಿ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ನಾಲ್ವರು ಕುಖ್ಯಾತ ಪಾತಕಿ ರಿಜ್ವಾನ್‌ ಅಲಿಯಾಸ ಕುಳ್ಳ ರಿಜ್ವಾನ್‌ ಹಾಗೂ ರಾಹುಲ್‌ ಅಲಿಯಾಸ್‌ ಸ್ಟಾರ್‌ ರಾಹುಲ್‌ನ ಸಹಚರರಾಗಿದ್ದಾರೆ.

ಕೆಲ ದಿನಗಳ ಹಿಂದೆ ಪೊಲೀಸರಿಗೆ ಇನ್‌ಸ್ಟಾಗ್ರಾಂ ಲೈವ್‌ನಲ್ಲಿ(Instagram Live) ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಸ್ಟಾರ್‌ ರಾಹುಲ್‌ಗೆ ಹನುಮಂತನಗರ ಠಾಣೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದರು. ಖಾಕಿ ಬಲೆಗೆ ಬಿದ್ದ ತಮ್ಮ ಗುರು ರಕ್ಷಣೆಗೆ ಅಗತ್ಯವಾದ ಹಣಕಾಸು ಹೊಂದಿಸಲು ಆತನ ಸಹಚರರು ಗಾಂಜಾ ದಂಧೆಗಿಳಿದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳೇ ಕೋಟೆ ಮೈದಾನ ಸಮೀಪ ಕೆ.ಆರ್‌.ರಸ್ತೆಯಲ್ಲಿ ತಮ್ಮ ಸ್ನೇಹಿತ ಭರತ್‌ನ ಕಾರಿನಲ್ಲಿ ಆರೋಪಿಗಳು ಗಾಂಜಾ ಇಟ್ಟುಕೊಂಡು, ಕುಳ್ಳ ರಿಜ್ವಾನ್‌, ವಿಜಿ ಹಾಗೂ ಭರತ್‌ಗೆ ವಿಲೇವಾರಿ ಮಾಡಲು ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ವಿ.ವಿ.ಪುರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಿದೇಶಿ ಸಹೋದರರ ಡ್ರಗ್ಸ್‌ ಫ್ಯಾಕ್ಟರಿ ರಾಜಧಾನಿಯಲ್ಲಿ ಪತ್ತೆ..!

ಬೆಂಗಳೂರು: ತಮ್ಮ ಮನೆಯಲ್ಲೇ ಡ್ರಗ್ಸ್‌(Drugs) ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಚಾಲಾಕಿ ವಿದೇಶಿ ಸೋದರರ ಪೈಕಿ ಕಿರಿಯ ಸೋದರ ಸಿಸಿಬಿ(CCB) ಬಲೆಗೆ ಬಿದ್ದ ಘಟನೆ ಜ.11 ರಂದು ನಡೆದಿತ್ತು. 
ಸೋಲದೇವನಹಳ್ಳಿ ಸಮೀಪದ ತರಬನಹಳ್ಳಿ ನಿವಾಸಿ ರಿಚರ್ಡ್‌ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) 50 ಲಕ್ಷ ಮೌಲ್ಯದ 900 ಗ್ರಾಂ ಕೊಕೇನ್‌, 50 ಗ್ರಾಂ ಎಂಡಿಎಂ ಕ್ರಿಸ್ಟೆಲ್‌ ಹಾಗೂ ಎಂಡಿಎಂಎ ತಯಾರು ಮಾಡಲು ಬಳಸುತ್ತಿದ್ದ ರಾಸಾಯನಿಕ ವಸ್ತುಗಳು ಹಾಗೂ 10 ಲೀಟರ್‌ ಕುಕ್ಕರ್‌ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಮನೆಯಲ್ಲಿ ಡ್ರಗ್ಸ್‌ ತಯಾರಿಕೆ ಬಗ್ಗೆ ಬಾತ್ಮೀದಾರರಿಂದ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕ ವಸ್ತು ನಿಗ್ರಹ ದಳದ ಇನ್‌ಸ್ಪೆಕ್ಟರ್‌ ವಿರೂಪಾಕ್ಷಿ ನೇತೃತ್ವದ ತಂಡ ದಾಳಿ ನಡೆಸಿದೆ.

Drug Bust News: ಬೆಂಗ್ಳೂರಲ್ಲಿ ಬೈಕ್‌ನಲ್ಲಿ ಡ್ರಗ್ಸ್‌ ಮಾರಾಟಕ್ಕೆ ಯತ್ನ: ಐದು ಪೆಡ್ಲರ್‌ಗಳ ಬಂಧನ

ಅಣ್ತಮ್ಮಂದಿರ ಕಮಾಲ್‌:

ನೈಜೀರಿಯಾ(Nigeria) ಮೂಲದ ರಿಚರ್ಡ್‌ ಹಾಗೂ ಆತನ ಹಿರಿಯ ಸೋದರರು 2019ರಲ್ಲಿ ಬಿಸಿನೆಸ್‌ ವೀಸಾದಲ್ಲಿ(Business Visa)  ದೆಹಲಿಗೆ ಬಂದಿದ್ದರು. ಅನಂತರ 6 ತಿಂಗಳ ಹಿಂದೆ ಬೆಂಗಳೂರಿಗೆ(Bengaluru) ಬಂದ ಸೋದರರು, ಮೊದಲು ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು. ತರುವಾಯ ಎರಡು ತಿಂಗಳ ಹಿಂದೆ ಸೋಲದೇವನಹಳ್ಳಿ ವ್ಯಾಪ್ತಿಗೆ ಅವರು ವಾಸ್ತವ್ಯ ಬದಲಾಯಿಸಿದ್ದರು. ತರಬನಹಳ್ಳಿಯಲ್ಲಿ ಮನೆ ಬಾಡಿಗೆ ಪಡೆದ ಸೋದರರು, ಮಾಲಿಕರಿಗೆ ಗೊತ್ತಾಗದಂತೆ ಮನೆಯಲ್ಲೇ ಡ್ರಗ್ಸ್‌ ತಯಾರಿಸಿ ಮಾರಾಟ ಮಾಡುತ್ತಿದ್ದರು ಎಂದು ಸಿಸಿಬಿ ಹೇಳಿದೆ.

ತಮ್ಮ ಮನೆಯಲ್ಲೇ ಮೀಥೈಲ್ಸಲೋನಿಲ್ಮೆಥೇನ್‌ ಹಾಗೂ ಸೋಡಿಯಂ ಹೈಡ್ರಾಕ್ಸೆಡ್‌ ಕ್ರೈಸ್ಟೆಲ್‌ ಬಳಸಿ ಎಂಡಿಎಂಎ ಕ್ರಿಸ್ಟೆಲ್‌ ಡ್ರಗ್ಸ್‌ ತಯಾರಿಸುತ್ತಿದ್ದರು. ಬೆಂಗಳೂರು ಸೇರಿದಂತೆ ಇತರೆಡೆ ತಮ್ಮ ಸಂಪರ್ಕ ಜಾಲದ ಮೂಲಕ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುತ್ತಿದ್ದರು. ಆರೋಪಿ ಮನೆಯಲ್ಲಿ ಮೀಥೈಲ್ಸಲೋನಿಲ್ಮೆಥೇನ್‌ 930 ಗ್ರಾಂ, ಸೋಡಿಯಂ ಹೈಡ್ರಾಕ್ಸೆಡ್‌ ಕ್ರೈಸ್ಟೆಲ್‌ 580 ಗ್ರಾಂ ಹಾಗೂ ಆ್ಯಸಿಡ್‌ 5 ಲೀ. ಅಳವಡಿಸಿದ್ದ ಪೈಪು ಪತ್ತೆಯಾಗಿದೆ. ಈ ದಾಳಿ ವೇಳೆ ರಿಚರ್ಡ್‌ ಸಿಕ್ಕಿಬಿದ್ದಿದ್ದು, ದೆಹಲಿಯಲ್ಲಿ ತಲೆಮರೆಸಿಕೊಂಡಿರುವ ಆತನ ಅಣ್ಣನ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
 

click me!