
ಬೆಂಗಳೂರು(ಮೇ.30): ಕಳೆದ ಯುಗಾದಿ ಹಬ್ಬದ ವೇಳೆ ಜೂಜಾಟದಲ್ಲಿ ಗೆದ್ದ ಹಣದ ವಿಚಾರವಾಗಿ ದ್ವೇಷ ಸಾಧಿಸಿ ಇತ್ತೀಚೆಗೆ ಕಾರು ಚಾಲಕನೊಬ್ಬನನ್ನು ಮಾರಕಾಸ್ತ್ರಗಳಿಂದ ಹಲ್ಲೆಗೈದು ತಲೆ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಬರ್ಬರ ಕೊಲೆ ಪ್ರಕರಣ ಸಂಬಂಧ ಏಳು ಮಂದಿ ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಗ್ಗೆರೆಯ ಪ್ರೇಮನಗರ ನಿವಾಸಿ ಮಂಜುನಾಥ ಅಲಿಯಾಸ್ ಮಂಜು (42), ಚೌಡೇಶ್ವರಿ ನಗರದ ನಾಗರಾಜ ಅಲಿಯಾಸ್ ಸ್ಪಾಟ್ ನಾಗ (38), ಅನ್ನಪೂರ್ಣೇಶ್ವರಿ ನಗರದ ಗೋಪಾಲ್ ಅಲಿಯಾಸ್ ಗೋಪಿ (35), ಕಿರಣ್ ಕುಮಾರ್ (29), ಮಣಿಕಂದನ್ ಅಲಿಯಾಸ್ ಮಣಿ (23), ಕಾರ್ತಿಕ್ (34), ಬಾಬು ಅಲಿಯಾಸ್ ಹಾಸಿಗೆ ಬಾಬು (32) ಬಂಧಿತರು.
ಪುಟ್ಟ ತಂಗಿಯ ದೇಹ ತುಂಡು ತುಂಡಾಗಿ ಕತ್ತರಿಸಿ, ಆಸಿಡ್ನಿಂದ ಸುಟ್ಟು ಹಿತ್ತಿಲಿಗೆ ಎಸೆದ ಅಕ್ಕ!
ಆರೋಪಿಗಳು ಮೇ 24ರಂದು ಸಂಜೆ 7.45ರ ಸುಮಾರಿಗೆ ಲಗ್ಗೆರೆಯ ಚೌಡೇಶ್ವರಿನಗರದ ನಿವಾಸಿ ಕಾರು ಚಾಲಕ ರವಿ ಅಲಿಯಾಸ್ ಮತ್ತಿ ರವಿ (38) ಎಂಬುವವನನ್ನು ಚೌಡೇಶ್ವರಿನಗರದ ಹಳ್ಳಿ ರುಚಿ ಹೋಟೆಲ್ ಬಳಿಗೆ ಕರೆಸಿಕೊಂಡು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲೆಯಾದ ರವಿ ಮೇ 24ರಂದು ಚೌಡೇಶ್ವರಿನಗರದಲ್ಲಿ ಸ್ನೇಹಿತ ಕೃಷ್ಣಮೂರ್ತಿ ಎಂಬುವವರ ಹುಟ್ಟುಹಬ್ಬದ ಪಾರ್ಟಿಗೆ ಹೋಗಿ ಮನೆಗೆ ವಾಪಾಸ್ ಬಂದಿದ್ದರು. ಬಳಿಕ ಆರೋಪಿ ಮಂಜುನಾಥ ಪದೇ ಪದೇ ರವಿಗೆ ಕರೆ ಮಾಡಿದ್ದು, ಹಳ್ಳಿ ರುಚಿ ಹೋಟೆಲ್ ಬಳಿ ಬರುವಂತೆ ಹೇಳಿದ್ದಾನೆ. ಅದರಂತೆ ರವಿ 10 ನಿಮಿಷದಲ್ಲಿ ವಾಪಾಸ್ ಬರುವುದಾಗಿ ಮನೆಯಲ್ಲಿ ಹೇಳಿ ಹೊರಗೆ ಬಂದಿದ್ದಾನೆ. ಹಳ್ಳಿ ರುಚಿ ಹೋಟೆಲ್ ಬಳಿ ಬರುತ್ತಿದ್ದಂತೆ ಆರೋಪಿ ಗಳು ಏಕಾಏಕಿ ಮಾರಕಾಸ್ತ್ರಗಳಿಂದ ರವಿ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಓಡಿದ ರವಿಯನ್ನು ಬೆನ್ನಟ್ಟಿಹಲ್ಲೆಗೈದು ಬಳಿಕ ತಲೆ ಮೇಲೆ ಸೈಜುಗಲ್ಲು ಎತ್ತಿಹಾಕಿ ಕೊಲೆ ಮಾಡಿ ಪರಾರಿಯಾಗಿ ದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.
ಗೆದ್ದ ಹಣ ಬಲವಂತವಾಗಿ ಪಡೆದದ್ದಕ್ಕೆ ಹಗೆ
ಕೊಲೆಯಾದ ರವಿ ಹಾಗೂ ಆರೋಪಿಗಳು ಹಲವು ವರ್ಷಗಳಿಂದ ಪರಿಚಿತರು. ಕಳೆದ ಯುಗಾದಿ ಹಬ್ಬದ ಸಂದರ್ಭದಲ್ಲಿ ರವಿ ಹಾಗೂ ಆರೋಪಿಗಳು ಜೂಜಾಡುವಾಗ ರವಿ ಗೆಲುವು ಸಾಧಿಸಿದ್ದ. ಆರೋಪಿಗಳಾದ ಮಂಜು ನಾಥ ಮತ್ತು ನಾಗರಾಜ ಸೋತು ಹಣ ಕಳೆದುಕೊಂಡಿದ್ದರು. ಬಳಿಕ ಗೆದ್ದಿರುವ ಹಣವನ್ನು ವಾಪಾಸ್ ಕೊಡುವಂತೆ ರವಿಯನ್ನು ಕೇಳಿದ್ದಾರೆ. ಈ ವೇಳೆ ರವಿ ಹಣ ನೀಡಲು ನಿರಾಕರಿಸಿದ್ದಾನೆ. ಕೆಲ ದಿನಗಳ ಬಳಿಕ ಬಲವಂತ ವಾಗಿ ರವಿ ಬಳಿ 10 ಸಾವಿರ ರು. ಹಣ ಪಡೆದುಕೊಂಡಿದ್ದಾರೆ. ಇದಾದ ಕೆಲ ದಿನಗಳ ಬಳಿಕ ರವಿ ಆ 10 ಸಾವಿರ ರು. ವಾಪಾಸ್ ಕೊಡುವಂತೆ ಪದೇ ಪದೇ ಕೇಳುತ್ತಿದ್ದ. ಇದರಿಂದ ಕಿರಿಕಿರಿ ಅನುಭವಿಸಿದ್ದ ಮಂಜುನಾಥ ಮತ್ತು ನಾಗರಾಜು. ರವಿ ಮೇಲೆ ದ್ವೇಷ ಸಾಧಿಸಲು ಶುರು ಮಾಡಿದ್ದರು. ಕೊನೆಗೆ ರವಿಯನ್ನೇ ಕೊಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಅಂದು ಕರೆ ಮಾಡಿ ಮನೆಯಿಂದ ಹೊರಗೆ ಕರೆಸಿಕೊಂಡು ಬರ್ಬರವಾಗಿ ಕೊಲೆ ಗೈದಿದ್ದರು ಎಂಬುದು ಆರೋಪಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ