
ಬೆಂಗಳೂರು(ಜ.14): ಇತ್ತೀಚೆಗೆ ಸಾಮಾಜಿಕ ಜಾಲತಾಣದ(Social Media) ‘ಬೆತ್ತಲೆ ಗ್ಯಾಂಗ್’ ಬಲೆಗೆ ಸಿಲುಕಿ ವೈದ್ಯರೊಬ್ಬರು(Doctor) ಬಲಿಯಾಗಿರುವ(Death) ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದೆ ಕೆಂಗೇರಿ ಬಳಿ ರೈಲಿಗೆ ಸಿಲುಕಿ ವೈದ್ಯ ಆತ್ಮಹತ್ಯೆ(Suicide) ಮಾಡಿಕೊಂಡಿದ್ದು, ಈ ಬಗ್ಗೆ ರೈಲ್ವೆ ಪೊಲೀಸರು(Raliway Police) ತನಿಖೆ ನಡೆಸಿದಾಗ ‘ಬೆತ್ತಲೆ ಗ್ಯಾಂಗ್’ನ ಬೆದರಿಕೆಗೆ ಹೆದರಿ ವೈದ್ಯ ಆತ್ಮಹತ್ಯೆ ಮಾಡಿಕೊಂಡ ಸಂಗತಿ ಬಯಲಾಗಿದೆ. ಈ ಸಂಬಂಧ ಮಧ್ಯಪ್ರದೇಶದ ಭೂಪಾಲ್ನಲ್ಲಿ ಒಬ್ಬನನ್ನು ರೈಲ್ವೆ ಪೊಲೀಸರು ವಶಕ್ಕೆ(Arrest) ಪಡೆದಿದ್ದಾರೆ.
ಡೇಟಿಂಗ್ ಆ್ಯಪ್ನಲ್ಲಿ ವೈದ್ಯನಿಗೆ ಬಲೆ:
ಕೆಲ ದಿನಗಳ ಹಿಂದೆ ಡೇಟಿಂಗ್ ಆ್ಯಪ್ನಲ್ಲಿ(Dating App) ವೈದ್ಯನಿಗೆ ಯುವತಿ ಸೋಗಿನಲ್ಲಿ ಆರೋಪಿ ಪರಿಚಯವಾಗಿದ್ದಾನೆ. ಬಳಿಕ ನಾಜೂಕಿನ ಮಾತಿನ ಮೂಲಕ ತನ್ನ ವಂಚನೆ ಬಲೆಗೆ ಬೀಳಿಸಿಕೊಂಡ ಆತ, ಬಳಿಕ ವೈದ್ಯನೊಟ್ಟಿಗೆ ‘ಮುಕ್ತ’ ಸಂಭಾಷಣೆಯಲ್ಲಿ ತೊಡಗಿದ್ದಾನೆ. ಮೋಸ ಅರಿಯದ ವೈದ್ಯ, ಡೇಟಿಂಗ್ ಆ್ಯಪ್ನಲ್ಲಿ ಮಾತುಕತೆ ಮುಂದುವರೆಸಿದ್ದಾನೆ. ಆಗ ವೈದ್ಯನನ್ನು ಮಾತನಾಡಿಸುತ್ತಲೇ ಆತನಿಗೆ ನಗ್ನವಾಗುವಂತೆ ಆರೋಪಿ ಪ್ರಚೋದಿಸಿದ್ದಾನೆ. ಅಂತೆಯೇ ನಗ್ನನಾದ ವೈದ್ಯನ ವಿಡಿಯೋವನ್ನು ಆರೋಪಿ ಸೆರೆ ಹಿಡಿದಿದ್ದಾನೆ. ಈ ಬೆತ್ತಲೆ ವಿಡಿಯೋ ಮುಂದಿಟ್ಟು ವೈದ್ಯನಿಗೆ ಹಣಕ್ಕಾಗಿ ಕಿಡಿಗೇಡಿ ಬ್ಲ್ಯಾಕ್ಮೇಲ್(Blackmail) ಮಾಡಿದ್ದಾನೆ.
Love Sex Dhokha: ಸುತ್ತಿಗೆಯಿಂದ ಹೊಡೆದು ಗೆಳತಿಯ ಕೊಂದ ಪಾಗಲ್ ಪ್ರೇಮಿ
ಬೆದರಿಕೆ ಹೆದರಿದ ವೈದ್ಯ, ಒಂದು ಬಾರಿ .67 ಸಾವಿರ ಆರೋಪಿ(Accused) ಖಾತೆಗೆ ಆನ್ಲೈನ್ ಮೂಲಕ ಜಮೆ ಮಾಡಿದ್ದ. ಇದಾದ ಬಳಿಕ ಮತ್ತೆ ಮತ್ತೆ ಹಣಕ್ಕೆ ಆತ ಪೀಡಿಸಲು ಶುರು ಮಾಡಿದ್ದ. ಇದರಿಂದ ಬೇಸರಗೊಂಡ ವೈದ್ಯ, ಮರ್ಯಾದೆಗೆ ಅಂಜಿ ಕೊನೆಗೆ ಕೆಂಗೇರಿ ಸಮೀಪ ರೈಲಿಗೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಕೆಂಗೇರಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮರಣ ಪತ್ರದಲ್ಲಿ ‘ಸತ್ಯ’:
ಆತ್ಮಹತ್ಯೆಗೂ ಮುನ್ನ ವೈದ್ಯ ಮರಣ ಪತ್ರ(Deathnote)ಬರೆದಿಟ್ಟಿದ್ದು, ಅದರಲ್ಲಿ ತನ್ನ ಸಾವಿಗೆ ಡೇಟಿಂಗ್ ಆ್ಯಪ್ನ ಗೆಳತಿ ಕಾರಣವಾಗಿದ್ದಾಳೆ ಎಂದು ಉಲ್ಲೇಖಿಸಿದ್ದ ಎನ್ನಲಾಗಿದೆ. ಈ ಮಾಹಿತಿ ಮೇರೆಗೆ ತನಿಖೆ(Investigation) ನಡೆಸಿದ ರೈಲ್ವೆ ಪೊಲೀಸರು, ಮಧ್ಯಪ್ರದೇಶದ ಬೆತ್ತಲೆ ಗ್ಯಾಂಗ್ನ ವ್ಯಕ್ತಿಯೊಬ್ಬನನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಬೆತ್ತಲೆ ಗ್ಯಾಂಗ್ಗೆ ಎರಡನೇ ಬಲಿ
ನಗರದಲ್ಲಿ ‘ಬೆತ್ತಲೆ ಗ್ಯಾಂಗ್’ ಹಾವಳಿಗೆ ಬಲಿಯಾದ ಎರಡನೇ ಪ್ರಕರಣ ಇದಾಗಿದೆ. ಇದಕ್ಕೂ ಮುನ್ನ ಕೆ.ಆರ್.ಪುರದಲ್ಲಿ ಯುವಕನೊಬ್ಬ ಮರ್ಯಾದೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ರಾಜಸ್ಥಾನ ಮೂಲದ ಮೂವರನ್ನು ಕೆ.ಆರ್.ಪುರ ಠಾಣೆ ಪೊಲೀಸರು ಬಂಧಿಸಿದ್ದರು. ಈ ಘಟನೆ ಮರೆಯುವ ಮುನ್ನವೇ ಕೆಂಗೇರಿ ಸಮೀಪ ವೈದ್ಯ ಆತ್ಮಹತ್ಯೆ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ರೀತಿಯ ವಂಚನೆ ಪ್ರಕರಣಗಳು ನಗರದ ವಿವಿಧ ಠಾಣೆಗಳಲ್ಲಿ ವರದಿಯಾಗಿವೆ.
Loan App Crime: ಲೋನ್ ಆ್ಯಪ್ ಕಿರುಕುಳಕ್ಕೆ ಮಂಗ್ಳೂರಲ್ಲಿ ಮೊದಲ ಬಲಿ
ಸುಂದರ ಯುವತಿಯರ ಫೋಟೋ ತೋರಿಸಿ ಗಾಳ
ಫೇಸ್ಬುಕ್(Facebook), ಇನ್ಸ್ಟಾಗ್ರಾಮ್(Instagram) ಹಾಗೂ ಡೇಟಿಂಗ್ ಆ್ಯಪ್ಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಂದರ ಯುವತಿಯರ ಫೋಟೋಗಳನ್ನು ಪ್ರೊಫೈಲ್ಗೆ ಬಳಸಿ ಯುವಕರಿಗೆ ಕಿಡಿಗೇಡಿಗಳು ಗಾಳ ಹಾಕುತ್ತಾರೆ. ಬಳಿಕ ತಮ್ಮ ಗಾಳಕ್ಕೆ ಸಿಲುಕಿದವರ ಜತೆ ಚಾಟಿಂಗ್ ನಡೆಸಿ ಸಲುಗೆ ಬೆಳೆಸಿಕೊಳ್ಳುತ್ತಾರೆ. ಆನಂತರ ವೈಯಾರದ ಮಾತಿನ ಮೂಲಕ ಪ್ರಚೋದಿಸಿ ನಗ್ನರಾಗುವಂತೆ ಮಾಡುತ್ತಾರೆ. ತಾವು ಯುವತಿಯೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಭಾವಿಸಿ ಸಂತ್ರಸ್ತರು ನಗ್ನರಾಗುತ್ತಾರೆ. ಬಳಿಕ ಈ ಬೆತ್ತಲೆ ವಿಡಿಯೋ ಮುಂದಿಟ್ಟು ಬ್ಲ್ಯಾಕ್ಮೇಲ್ ಮೂಲಕ ಹಣ ಸುಲಿಗೆ ಮಾಡುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೈಬರ್ ಬ್ಲ್ಯಾಕ್ಮೇಲ್ಗೆ ಯುವ ವೈದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಆರೋಪಿಯನ್ನು ಪತ್ತೆ ಹಚ್ಚಿದ್ದೇವೆ. ಒಬ್ಬನೇ ಮಗನನ್ನು ಕಳೆದುಕೊಂಡ ಆ ಕುಟುಂಬದ ದುಃಖ ಹೇಳಲಾಗದು. ಯುವಕರೇ ಜೀವನ ಅತ್ಯಮೂಲ್ಯ. ಸೈಬರ್ ಸ್ನೇಹಿತರ ಮೇಲೆ ವಿಶ್ವಾಸವಿಡುವ ಮುನ್ನ ಜಾಗ್ರತೆವಹಿಸಿ ಅಂತ ರಾಜ್ಯ ರೈಲ್ವೆ ಪೊಲೀಸ್ ಇಲಾಖೆ ಎಡಿಜಿಪಿ ಎಸ್.ಭಾಸ್ಕರ್ ರಾವ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ