
ಬೆಂಗಳೂರು(ಫೆ.18): ಸಾಲ ಕೊಟ್ಟ ಬಳಿಕ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಸಂಬಂಧಿಯನ್ನು ಹತ್ಯೆಗೈದು(Murder) ತಲೆಮರೆಸಿಕೊಂಡಿದ್ದ ದಂಪತಿ ಏಳು ವರ್ಷದ ಬಳಿಕ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರ(Police) ಬಲೆಗೆ ಬಿದ್ದಿದ್ದಾರೆ. ಆಂಧ್ರಪ್ರದೇಶದ(Andhra Pradesh) ಶೇಖ್ ಮೊಹಮದ್ ಗೌಸ್ ಹಾಗೂ ಕೌಸರ್ ಅಲಿಯಾಸ್ ಹೀನಾ ಬಂಧಿತರಾಗಿದ್ದಾರೆ(Arrest). ಕಾಮಾಕ್ಷಿಪಾಳ್ಯದ ವಜೀರ್ ಪಾಷಾ ಹತ್ಯೆಯಾದ ಸಂಬಂಧಿ.
ತಮಗೆ ಕೊಟ್ಟಿದ್ದ 1.5 ಲಕ್ಷ ಸಾಲಕ್ಕೆ(Loan) ಕೌಸರ್ ಜತೆ ವಜೀರ್ ಅಕ್ರಮ ಸಂಬಂಧ(Illicit Relationship) ಹೊಂದಿದ್ದ. ಆಗ ಆತನನ್ನು ಮನೆಗೆ ಕರೆಸಿಕೊಂಡು ದಂಪತಿ ಕೊಂದು ಬಳಿಕ ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು.
2012ರಲ್ಲಿ ಶೇಖ್ ಮತ್ತು ಕೌಸರ್ ವಿವಾಹವಾಗಿದ್ದು, ಮದುವೆ ಬಳಿಕ ನಗರಕ್ಕೆ ಬಂದು ಹೆಗ್ಗನಹಳ್ಳಿ ಹತ್ತಿರದ ಗಜಾನನ ನಗರದಲ್ಲಿ ನೆಲೆಸಿದ್ದರು. ಮನೆಯಲ್ಲಿ ಹೊಲಿಗೆ ಯಂತ್ರ ಇಟ್ಟುಕೊಂಡು ಗಾರ್ಮೆಂಟ್ಸ್ಗಳಿಗೆ ಬಿಡಿ ಕೆಲಸಗಳನ್ನು ದಂಪತಿ ಮಾಡಿಕೊಡುತ್ತಿದ್ದರು. ಅದೇ ರೀತಿ ಕಾಮಾಕ್ಷಿಪಾಳ್ಯದಲ್ಲಿ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳ ಜತೆ ನೆಲೆಸಿದ್ದ ವಜೀರ್, ಗಾರ್ಮೆಂಟ್ಸ್ಗಳಿಗೆ ಬಿಡಿ ಕೆಲಸಗಳನ್ನು ಮಾಡಿಕೊಡುತ್ತಿದ್ದ. ಹೀಗಿರುವಾಗ ವ್ಯವಹಾರದಲ್ಲಿ ಕೈಸುಟ್ಟುಗೊಂಡ ಶೇಖ್ ದಂಪತಿ, ಹೆಗ್ಗನಹಳ್ಳಿಯ ಮೌಲ್ವಿ ಬಳಿ ಸಾಲ ಪಡೆದಿದ್ದರು. ಆದರೆ ಸಕಾಲಕ್ಕೆ ಸಾಲ ಮರಳಿಸದೆ ಶೇಖ್, ಹೈದರಾಬಾದ್ಗೆ(Hyderabad) ಹೋಗಿದ್ದ. ಇತ್ತ ಮೌಲ್ವಿ ಮನೆಗೆ ಬಂದು ಗಲಾಟೆ ಮಾಡಿದ್ದರಿಂದ ಬೇಸತ್ತು ಕೌಸರ್, ತನ್ನ ಸಂಬಂಧಿ ವಜೀರ್ ಪಾಷಾ ಬಳಿ 1.50 ಲಕ್ಷ ಪಡೆದು ಮೌಲ್ವಿಗೆ ಕೊಟ್ಟಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಯೋಗ ಕ್ಲಾಸ್ನಲ್ಲಿ ಪರಪುರಷನ ಜತೆ ಸರಸ ಸಲ್ಲಾಪ, ಗಂಡನಿಗೆ ತಿಳಿಯುವ ಮುನ್ನವೇ ಘೋರ ದುರಂತ
ಏಕಾಂತದಲ್ಲಿದ್ದಾಗ ಹತ್ಯೆ:
ಸಾಲ ತೀರಿಸಲು ನೆರವಾದ ವಜೀರ್ ಜತೆ ಕೌಸರ್ಗೆ ಅನೈತಿಕ ಸಂಬಂಧ ಬೆಳೆಯಿತು. ಕೆಲ ದಿನಗಳ ಬಳಿಕ ಈ ವಿಚಾರ ತಿಳಿದ ಶೇಖ್, ಪತ್ನಿಗೆ ವಜೀರ್ ಸಂಪರ್ಕ ಕಡಿತಗೊಳ್ಳುವಂತೆ ಎಚ್ಚರಿಕೆ ನೀಡಿದ್ದ. ಈ ಬೆಳವಣಿಗೆಯಿಂದ ಕೆರಳಿದ ವಜೀರ್, ಸಾಲ ಮರಳಿಸುವಂತೆ ಶೇಖ್ಗೆ ತಾಕೀತು ಮಾಡಿದ್ದ. ಈ ರಗಳೆಯಿಂದ ಕೋಪಗೊಂಡ ಶೇಖ್ ದಂಪತಿ, ವಜೀರ್ ಹತ್ಯೆಗೆ ಯೋಚಿಸಿದ್ದರು. ಅಂತೆಯೇ 2015ರ ಮೇ 13ರ ಮಧ್ಯಾಹ್ನ 1.30ಕ್ಕೆ ವಜೀರ್ಗೆ ಕರೆ ಮಾಡಿ ಕೌಸರ್ ಮನೆಗೆ ಕರೆದಿದ್ದಳು. ಆಗ ಮನೆಗೆ ಬಂದ ವಜೀರ್ ಜತೆ ಕೌಸರ್ ಏಕಾಂತದಲ್ಲಿದ್ದಾಗ ಅದೇ ಮಂಚದಲ್ಲಿ ಕೆಳಗೆ ಶೇಖ್ ಅವಿತುಕೊಂಡಿದ್ದ. ಆಗ ವಜೀರ್ ಉನ್ಮಾದದಲ್ಲಿದ್ದಾಗ ಆತನ ಕುತ್ತಿಗೆಗೆ ಸೀರೆ ಸುತ್ತಿ ಒಂದು ತುದಿಯನ್ನು ಪತಿಗೆ ಕೊಟ್ಟ ಕೌಸರ್, ಮತ್ತೊಂದು ತುದಿಯನ್ನು ತಾನು ಹಿಡಿದು ಎಳೆದು ಉಸಿರುಗಟ್ಟಿಸಿ ಹತ್ಯೆಗೈದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಹತ್ಯೆ ಬಳಿಕ ಮೃತದೇಹವನ್ನು(Deadbody) ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ ದಂಪತಿ, ಬಳಿಕ ಮೃತನ ಸ್ಕೂಟರ್ನಲ್ಲೇ ಶವವನ್ನು ಇಟ್ಟುಕೊಂಡು ಆಂಧ್ರಪ್ರದೇಶದ ಹಿಂದೂಪುರಕ್ಕೆ ತೆಗೆದುಕೊಂಡು ಹೋಗಿ ಕಾವೇಟಿನಾಗೇಪಲ್ಲಿ ರಸ್ತೆಯ ಮೋರಿಗೆ ಎಸೆದು ಪರಾರಿಯಾಗಿದ್ದರು. ಇತ್ತ ವಜೀರ್ ನಿಗೂಢ ನಾಪತ್ತೆ ಬಗ್ಗೆ ಆತನ ಪತ್ನಿ ನೀಡಿದ ದೂರಿನ ಮೇರೆಗೆ ತನಿಖೆ ಕೈಗೆತ್ತಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಆರಂಭದಲ್ಲಿ ಹತ್ಯೆ ಕುರಿತು ಸುಳಿವು ಸಿಗಲಿಲ್ಲ. ಇತ್ತ ಮೂರು ತಿಂಗಳ ಬಳಿಕ 2015ರ ಮೇ 16ರಂದು ಅನಾಥ ಶವ ಸಿಕ್ಕಿರುವ ಬಗ್ಗೆ ಆನಂತಪುರ ಜಿಲ್ಲೆ ಸೋಮೇಂಡೆಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಜೀರ್ ಮೃತದೇಹದ ಅಂತ್ಯಕ್ರಿಯೆ(Funeral) ನೆರೆವೇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Mandya: ಗಂಡ ಇದ್ರೂ ಮತ್ತೊಬ್ಬನ ಸಂಗ: ಅಕ್ರಮ ಸಂಬಂಧಕ್ಕಾಗಿ ಒಬ್ಬಳೇ ಐದು ಜನರನ್ನು ಕೊಂದಳು!
ತಾತನ ಅಂತ್ಯಕ್ರಿಯೆಗೆ ಬಂದು ಸೆರೆ ಸಿಕ್ಕರು!
ವಜೀರ್ ನಾಪತ್ತೆಯಾದ ದಿನವೇ ಶೇಖ್ ದಂಪತಿ ಮೇಲೆ ಮೃತಳ ಪತ್ನಿ ಅನುಮಾನ ವ್ಯಕ್ತಪಡಿಸಿದ್ದಳು. ಅದೇ ವೇಳೆ ಶೇಖ್ ದಂಪತಿ ಸಹ ಮನೆ ಖಾಲಿ ಮಾಡಿದ್ದು ಗುಮಾನಿ ಹೆಚ್ಚಿಸಿತ್ತು. ವಜೀರ್ ಮೊಬೈಲ್ನಿಂದ ಕೊನೆ ಕರೆ ಕೌಸರ್ಗೆ ಹೋಗಿತ್ತು. ಆದರೆ ಮೊಬೈಲ್ ಅನ್ನು ಬೆಂಗಳೂರಿನಲ್ಲೇ ಬಿಟ್ಟು ಹೋಗಿದ್ದ ದಂಪತಿ, ವಜೀರ್ನ ಸ್ಕೂಟರ್ ಅನ್ನು ಸಂಪೂರ್ಣವಾಗಿ ಬಿಚ್ಚಿ ಅದರ ಬಿಡಿ ಭಾಗಗಳನ್ನು ಮಾರಿದ್ದರು. ಹತ್ಯೆ ನಂತರ ಬೆಂಗಳೂರಿನ ಯಾರೊಂದಿಗೂ ದಂಪತಿ ಸಂಪರ್ಕ ಹೊಂದಿರಲಿಲ್ಲ. ಆಂಧ್ರಪ್ರದೇಶದಲ್ಲಿ ನೆಲೆಸಿದ ಬಳಿಕ ಅವರಿಗೆ ಇಬ್ಬರು ಮಕ್ಕಳು ಹುಟ್ಟಿನಿರಾಂತಕವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಫೆ.11ರಂದು ತಮ್ಮ ತಾತನ ಸಾವಿನ ಸುದ್ದಿ ತಿಳಿದು ಶೇಖ್ ದಂಪತಿ ಅಂತ್ಯಕ್ರಿಯೆಗೆ ಬಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೂವರಲ್ಲಿ ಒಬ್ಬರು ಬದುಕಬೇಕು!
ವಜೀರ್ ಜತೆ ಪತ್ನಿ ಅನೈತಿಕ ಸಂಬಂಧ ವಿಚಾರ ತಿಳಿದ ಶೇಖ್, ನಮ್ಮ ಮೂವರಲ್ಲಿ ಒಬ್ಬರು ಸಾಯಬೇಕು. ನೀನೇ ನಿರ್ಧರಿಸು ಎಂದು ಪತ್ನಿಗೆ ಎಚ್ಚರಿಕೆ ಕೊಟ್ಟಿದ್ದ. ಆಗ ಜೀವ ಭಯದಿಂದ ಕೌಸರ್, ವಜೀರ್ ಹತ್ಯೆಗೆ ಪತಿಗೆ ಸಾಥ್ ಕೊಟ್ಟಿದ್ದಳು ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ